ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ (ಬಿವಿವಿ) ಶಾಲೆಯ 41ನೇ ಸಂಸ್ಥಾಪನಾ ದಿನಾಚರಣೆಯನ್ನು ಕೃತಜ್ಞತಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಸಂಸ್ಥಾಪಕರಾದ ದಿವಂಗತ ಎಂ. ಸೆಲ್ವರಾಜ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯಲ್ಲಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಮತಿ ಸರಸ್ವತಿ ರಾಥೋಡ್, ಶ್ರೀಮತಿ ಸಿಂಧೂ ಸಾಂಬ್ರಾಣಿ ಹಾಗೂ ಶ್ರೀ ಮೆಹತಾಬ್ ಮುಲ್ಲಾ ಅವರಿಗೆ ‘ಬಿವಿವಿ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ವಾಹನ ಚಾಲಕ ಮುಕ್ತಾರಾಲಿ ಗಡಾದ ಅವರು 10 ವರ್ಷಗಳ ಸತತ ಸೇವೆ ಸಲ್ಲಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸರಸ್ವತಿ ರಾಥೋಡ್ ಹಾಗೂ ಸಿಂಧೂ ಸಾಂಬ್ರಾಣಿ, ಬಿವಿವಿಯಲ್ಲಿ ಕಳೆದ ಒಂದು ದಶಕದ ಸೇವಾ ಅವಧಿಯನ್ನು ಮೆಲುಕು ಹಾಕಿ, ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬದವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಹೋದ್ಯೋಗಿಗಳು ಒಂದೇ ಕುಟುಂಬದ ಸದಸ್ಯರಂತೆ ಪ್ರೀತಿ, ವಾತ್ಸಲ್ಯದಿಂದ ಬೆಂಬಲಿಸಿದ್ದರಿಂದಲೇ ಈ ಹಂತ ತಲುಪಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಶಾಲೆಯ ಚೇರ್ಮನ್ ಎಸ್. ರವಿ ಹಾಗೂ ನಿರ್ದೇಶಕ ವಿನಾಯಕ ಆರ್. ಅವರು ದಶಕದಿಂದ ಸಂಸ್ಥೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಅಭಿನಂದಿಸಿದರು.
ಇನ್ಮುಂದೆ ‘ಕೃತಜ್ಞತಾ ದಿನ’
ಶಾಲೆಯ ಸಂಸ್ಥಾಪನಾ ದಿನವನ್ನು ಇನ್ನು ಮುಂದೆ ಪ್ರತಿವರ್ಷ ‘ಕೃತಜ್ಞತಾ ದಿನ’ವಾಗಿ ಆಚರಿಸಲಾಗುವುದು ಎಂದು ನಿರ್ದೇಶಕ ವಿನಾಯಕ ಆರ್. ಘೋಷಿಸಿದರು. ಪ್ರಾಚಾರ್ಯರಿಂದ ಹಿಡಿದು ಸಹಾಯಕ ಸಿಬ್ಬಂದಿವರೆಗೆ ಶಾಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿ ಚೇರ್ಮನ್ ಎಸ್. ರವಿ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳೂ ತಮ್ಮ ಕುಟುಂಬದವರು, ಶಿಕ್ಷಕರು, ಸಹಾಯಕ ಸಿಬ್ಬಂದಿ ಹಾಗೂ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಇ.ಎಲ್.ಸಿ. ಮುಖ್ಯಸ್ಥೆ ಮಲ್ಲಿಕಾ ಆರ್., ಪ್ಲೇ ಹೋಮ್ ಮುಖ್ಯಸ್ಥೆ ಗಂಗಾ, ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸನ್ಮಾನಿತರ ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಆಧ್ಯಾ ಮಸಗಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಜಿಯಾ ನಮಾಜಿ ಹಾಗೂ ಅತ್ತೀರಾ ಸವದತ್ತಿ ನಿರೂಪಿಸಿದರು. ಶಿಕ್ಷಕಿ ಶೈಲಜಾ ಬಾದಾಮಿ ಸನ್ಮಾನಿತರ ಪರಿಚಯ ಮಾಡಿದರು. ಐಂದ್ರಿತಾ ಹುಲಗೂರು ಸ್ವಾಗತಿಸಿದರು. ಸಿಂಧು ಪವಾರ್ ವಂದಿಸಿದರು. ಅಭಿನವ ಕುಂದಗೋಳ ಹಾಗೂ ಸಂಗಡಿಗರು ನೃತ್ಯ ಪ್ರದರ್ಶಿಸಿದರು.



