ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಟ್ಟಣದ ಹಳ್ಳದಕೇರಿ ಓಣಿಯ ಭಕ್ತರು ಧರ್ಮಾಪೂರ ಬಸವಣ್ಣನಿಗೆ ವಿಶೇಷ ಪೂಜೆ ಹಾಗೂ ಪರವು ನಡೆಸಿ ಮಳೆಗಾಗಿ ಪ್ರಾರ್ಥಿಸಿದರು.
ಮಳೆ ಕೊರತೆಯ ಸಂದರ್ಭದಲ್ಲಿ ಧರ್ಮಾಪೂರ ಬಸವಣ್ಣನಿಗೆ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿ ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ಹಳ್ಳದಕೇರಿ ಓಣಿಯ ಸಣ್ಣ ದ್ಯಾಮವ್ವ ದೇವಸ್ಥಾನದಿಂದ ಧರ್ಮಾಪೂರ ಬಸವಣ್ಣನ ಭಾವಚಿತ್ರವನ್ನು ಬಂಡಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಹತ್ತಾರು ಜೋಡೆತ್ತುಗಳು, ಭಜನಾ ಮಂಡಳಿಗಳು, ಡೊಳ್ಳು-ವಾದ್ಯಗಳು ಹಾಗೂ ನೂರಾರು ಮಹಿಳೆಯರು ಆರತಿ ಮತ್ತು ಪೂರ್ಣಕುಂಭಗಳೊಂದಿಗೆ ಭಾಗವಹಿಸಿ ಧಾರ್ಮಿಕ ಸಂಭ್ರಮ ಹೆಚ್ಚಿಸಿದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯಾದ್ಯಂತ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರೂ ಮಳೆ ಅಭಾವದಿಂದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಮತ್ತು ಸಾರ್ವಜನಿಕರು ಭಗವಂತನ ಮೊರೆ ಹೋಗಿದ್ದು, ಮಳೆರಾಯ ಕೃಪೆ ತೋರಿ ಉತ್ತಮ ಮಳೆಯಾಗಲಿ ಎಂದು ಆಶಿಸಿದರು.
ಹಳ್ಳದಕೇರಿ ಭಕ್ತವೃಂದವು ಹಲವು ವರ್ಷಗಳಿಂದ ಧರ್ಮಾಪೂರ ಬಸವಣ್ಣನಿಗೆ ಪರವು ನಡೆಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ಜನರ ಪ್ರಾರ್ಥನೆ ಫಲಿಸಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ದೊರೆಯಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಾಪೂರ ಬಸವಣ್ಣ ಪರವು ಸಮಿತಿ ಸದಸ್ಯರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
“ಮಳೆ ಇಲ್ಲದ ಸಂದರ್ಭದಲ್ಲಿ ಧರ್ಮಾಪೂರ ಬಸವಣ್ಣನಿಗೆ ಪರವು ನಡೆಸುವ ಸಂಪ್ರದಾಯ ಜನರ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ. ರೈತರ ಪ್ರಾರ್ಥನೆಗೆ ಮಳೆರಾಯ ಶೀಘ್ರ ಸ್ಪಂದಿಸಲಿ.”
ಡಾ. ಚಂದ್ರು ಲಮಾಣಿ, ಶಾಸಕ

