ಮಡಿಕೇರಿ: ಕೊಡಗಿನ ಕಾಫಿ ಬೆಳೆಗಾರರನ್ನು ಬೆಚ್ಚಿಬೀಳಿಸುವ ಘಟನೆ ಪೊನ್ನಂಪೇಟೆ ತಾಲೂಕಿನ ಕಳಕೂರು ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳು ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಸುಮಾರು 2000 ಕಾಫಿ ಗಿಡಗಳು ಮತ್ತು 250ಕ್ಕೂ ಹೆಚ್ಚು ಕರಿಮೆಣಸು ಬಳ್ಳಿಗಳನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.
ಗೌತಮ್ ಎಂಬುವರಿಗೆ ಸೇರಿದ 3.5 ಎಕರೆ ತೋಟದಲ್ಲಿ ಬೆಳೆದು ನಿಂತಿದ್ದ ಏಳೆಂಟು ವರ್ಷದ ಕಾಫಿ ಗಿಡಗಳೇ ದುಷ್ಕರ್ಮಿಗಳ ಟಾರ್ಗೆಟ್ ಆಗಿವೆ. ಫಸಲು ಕೈಗೆ ಬರುವ ಹೊತ್ತಿನಲ್ಲಿ ನಡೆದ ಈ ಕೃತ್ಯ ಬೆಳೆಗಾರ ಕುಟುಂಬವನ್ನು ಕಂಗಾಲಾಗಿಸಿದೆ.
ಘಟನೆಯ ವೇಳೆ ತೋಟದ ಮಾಲೀಕರು ಮೈಸೂರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರೆಂದು ತಿಳಿದುಬಂದಿದೆ. ಈ ಮಾಹಿತಿ ತಿಳಿದೇ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತೋಟದಲ್ಲಿದ್ದ ಎರಡು ಸಿಸಿ ಕ್ಯಾಮೆರಾಗಳನ್ನೂ ಕಿತ್ತುಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಶ್ವಾನದಳದ ಸಹಾಯದಿಂದ ತನಿಖೆ ಮುಂದುವರಿಸಿದ್ದಾರೆ. “ಕಾಫಿ ಗಿಡಗಳನ್ನು ಮಕ್ಕಳಂತೆ ಸಾಕಿದ್ದೇವೆ. ಈ ರೀತಿ ನಾಶ ಮಾಡಿರುವುದು ಹೃದಯ ಕಲುಕುವ ಸಂಗತಿ” ಎಂದು ಸ್ಥಳೀಯ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



