HomeGadag Newsಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸಿ: ಗಜಾನನೋತ್ಸವ ಮಹಾಮಂಡಳಿ ಆಗ್ರಹ

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸಿ: ಗಜಾನನೋತ್ಸವ ಮಹಾಮಂಡಳಿ ಆಗ್ರಹ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪ್ರತಿವರ್ಷ ತಾತ್ಕಾಲಿಕ ಹೊಂಡ ನಿರ್ಮಿಸುವ ಬದಲು ಪಟ್ಟಣದಲ್ಲಿ 2ರಿಂದ 3 ಕಡೆ ಶಾಶ್ವತ, ಬೃಹತ್ ಹಾಗೂ ವೈಜ್ಞಾನಿಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಮುಖಂಡರಾದ ಮಂಜುನಾಥ ಮಾಗಡಿ, ಗಂಗಾಧರ ಮೆಣಸಿನಕಾಯಿ ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.

ಪ್ರತಿವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಮಣ್ಣಿನ ಹೊಂಡ ನಿರ್ಮಿಸಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಉತ್ಸವ ಮುಗಿದ ಬಳಿಕ ಹೊಂಡ ಮುಚ್ಚಲಾಗುತ್ತಿದ್ದು, ಮುಂದಿನ ವರ್ಷ ಮತ್ತೆ ಹೊಸದಾಗಿ ಹೊಂಡ ನಿರ್ಮಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೂ ನೋವುಂಟಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸೂಕ್ತ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ವಿಸರ್ಜನಾ ಹೊಂಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ 18ರಿಂದ 20 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಹೆಚ್ಚಿನ ಜನಸಂದಣಿ ಉಂಟಾಗುವುದರಿಂದ ಅಗತ್ಯ ಸುರಕ್ಷತಾ ಕ್ರಮ ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು. ವಿಸರ್ಜನಾ ಹೊಂಡಗಳ ಸುತ್ತಮುತ್ತ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ಮಾರ್ಗ ಸರಿಪಡಿಸಿ

ಗಣೇಶ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಮಾರ್ಗದಲ್ಲಿರುವ ವಿದ್ಯುತ್ ತಂತಿ, ಕೇಬಲ್‌ಗಳು ಹಾಗೂ ಇತರ ಅಡೆತಡೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತೆರವುಗೊಳಿಸಬೇಕು. ಉತ್ಸವದ ವೇಳೆ ಯಾವುದೇ ತೊಂದರೆಯಾಗದಂತೆ ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಜಯ ಕುಂಬಾರ, ಪ್ರವೀಣ ಬೋಮಲೆ, ನವೀನ ಹಿರೇಮಠ, ಅಮಿತ ಗುಡಗೇರಿ, ಅಭಿಷೇಕ ಉಮಚಗಿ, ಪ್ರಶಾಂತ ಗಾಂಜಿ, ಶರಣು ಗಾಂಜಿ, ಗಂಗಾಧರ ಸವಣೂರ, ಹನುಮಂತಪ್ಪ ಶೆರಸೂರಿ, ಸಂತೋಷ ಅಳಗುಂಡಿ, ಆದೇಶ ಸವಣೂರ, ವಿನಾಯಕ ಸಪಡ್ಲ, ಸಾಗರ ಮೆಹರವಾಡೆ, ಅಕ್ಷಯ ಅಚಲಕರ, ಯಶವಂತ ಶಿರಹಟ್ಟಿ, ಗುದ್ನೇಪ್ಪ ಸೊಪ್ಪಿನ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img