ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಅಭಿವೃದ್ಧಿಗೆ 1953ರಿಂದಲೂ ಆರ್ಯವೈಶ್ಯ ಸಮಾಜ ಅಪಾರ ಕೊಡುಗೆ ನೀಡುತ್ತಾ ಬಂದಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಕೂಡ್ಲಿಗಿ ಸರ್ಕಲ್ಗೆ ‘ವಾಸವಿ ವೃತ್ತ’ ಎಂದು ನಾಮಕರಣ ಮಾಡಬೇಕು ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಆಗ್ರಹಿಸಿದರು.
ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ ಸದಸ್ಯರೊಂದಿಗೆ ಶಾಸಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಬಂಡಿಹಳ್ಳಿ ಗುಡ್ಡದ ತಿಮ್ಮಪ್ಪನ ತೇರು ಹಾಗೂ ದೇವಸ್ಥಾನ, ಪುರಸಭೆಯ ಉದ್ಯಾನವನ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು ಹಾಗೂ ಎಲ್ಆ್ಯಂಡ್ಟಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಆರ್ಯವೈಶ್ಯ ಸಮಾಜ ಸ್ಥಳದಾನ ಹಾಗೂ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.
ಪಟ್ಟಣದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಅಭಿವೃದ್ಧಿಯಲ್ಲಿ ಆರ್ಯವೈಶ್ಯ ಸಮಾಜದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಪ್ರಸ್ತುತ ಕೂಡ್ಲಿಗಿ ಸರ್ಕಲ್ ಎಂದು ಕರೆಯಲಾಗುತ್ತಿರುವ ವೃತ್ತಕ್ಕೆ ವಾಸವಿ ವೃತ್ತ ಎಂದು ನಾಮಕರಣ ಮಾಡುವ ಮೂಲಕ ಸಮಾಜದ ಕೊಡುಗೆಯನ್ನು ಗೌರವಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಶಾಸಕ ನೇಮಿರಾಜ್ ನಾಯಕ್ ಮಾತನಾಡಿ, ಆರ್ಯವೈಶ್ಯ ಸಮಾಜವು ತಾಲೂಕು ಹಾಗೂ ಪಟ್ಟಣದ ಅಭಿವೃದ್ಧಿಗೆ ನೀಡಿರುವ ಗಣನೀಯ ಕೊಡುಗೆ ಶ್ಲಾಘನೀಯವಾಗಿದೆ. ಸಮಾಜದ ಮನವಿಗೆ ಸ್ಪಂದಿಸಿ ಶೀಘ್ರದಲ್ಲಿಯೇ ಕೂಡ್ಲಿಗಿ ವೃತ್ತಕ್ಕೆ ‘ವಾಸವಿ ವೃತ್ತ’ ಎಂದು ನಾಮಕರಣ ಮಾಡಿ, ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷ ಭರತ್ ಗಂಗಾವತಿ, ಆರ್ಯವೈಶ್ಯ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಘವೇಂದ್ರ, ಮಂಜುನಾಥ ಶ್ರೇಷ್ಠಿ, ಸುದರ್ಶನ ಶ್ರೇಷ್ಠಿ, ಲಕ್ಷ್ಮೀಪತಿ, ಬೆಲ್ಲಂಕೊಂಡಿ ರಮೇಶ್, ಗೋಪಾಲ, ವೆಂಕಟಾಚಲಪತಿ ವೇಣುಗೋಪಾಲ, ಕುಮಾರ್ ಇಂಜಿನಿಯರ್, ಪ್ರಭಾಕರ ಶ್ರೇಷ್ಠಿ, ಬೇಳೂರು ಮಾರುತಿ ಶ್ರೇಷ್ಠಿ, ಕುಪ್ಪಾ ಶಿವಕುಮಾರ, ಕುಪ್ಪಾ ಲಕ್ಷ್ಮೀಪತಿ, ಬಾಲಾಜಿ, ಪ್ರವೀಣ್, ಪ್ರಕಾಶ್, ಬಸಾಪುರ ರಾಘವೇಂದ್ರ, ಹನುಮಂತ ಶ್ರೇಷ್ಠಿ, ನಾನ್ಯಾಪೂರ ಕೃಷ್ಣಮೂರ್ತಿ, ರಾಜೇಂದ್ರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

