ಮಂಗಳೂರು: ಕಾವೂರು ಪ್ರದೇಶದಲ್ಲಿ ನಡೆದಿರುವ ವಿಚಿತ್ರ ಘಟನೆ ಕರಾವಳಿ ಜನರನ್ನು ಬೆಚ್ಚಿಬೀಳಿಸಿದೆ. ಮೂರು ಮನೆಗಳ ಬಾವಿಗಳಲ್ಲಿ ಡೀಸೆಲ್ ಮಿಶ್ರಿತ ನೀರು ಕಾಣಿಸಿಕೊಂಡಿದ್ದು, ಲ್ಯಾಬ್ ಪರೀಕ್ಷೆಯಲ್ಲಿ ನೀರಿನಲ್ಲಿ ಶೇ.28 ರಷ್ಟು ಡೀಸೆಲ್ ಅಂಶ ಇರುವುದು ದೃಢಪಟ್ಟಿದೆ. ಬಾವಿಯಿಂದ ತೆಗೆದ ನೀರಿಗೆ ಕಾಗದ ಮುಳುಗಿಸಿ ಬೆಂಕಿ ಹಚ್ಚಿದರೆ ಅದು ಹೊತ್ತಿ ಉರಿಯುತ್ತಿರುವುದು ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾವಿಯ ನೀರಿನಲ್ಲಿ ತೀವ್ರ ಡೀಸೆಲ್ ವಾಸನೆ ಬರುತ್ತಿತ್ತು. ನಂತರ ಪರಿಶೀಲನೆ ನಡೆಸಿದಾಗ ನೀರಿನ ಮೇಲ್ಮೈಯಲ್ಲಿ ದಪ್ಪ ಎಣ್ಣೆ ಪದರ ತೇಲುತ್ತಿರುವುದು ಕಂಡುಬಂದಿದೆ. ಮೋಟಾರ್ ಮೂಲಕ ನೀರನ್ನು ಸಂಪೂರ್ಣ ಖಾಲಿ ಮಾಡಿದರೂ, ಮತ್ತೆ ಡೀಸೆಲ್ ಮಿಶ್ರಿತ ನೀರು ಜಿನುಗುತ್ತಿದೆ.
ಸಂತ್ರಸ್ತ ಸದಾಶಿವ ಮಾತನಾಡಿ, “ನಮಗೆ ಈಗ ಬಾವಿ ನೀರು ಸಂಪೂರ್ಣ ಅಯೋಗ್ಯವಾಗಿದೆ. ಕುಡಿಯುವುದಕ್ಕೆ ಮಾತ್ರವಲ್ಲ, ಪಾತ್ರೆ ತೊಳೆಯಲು ಸಹ ಬಳಸಲು ಸಾಧ್ಯವಿಲ್ಲ. ಟ್ಯಾಂಕರ್ ನೀರು ತರಿಸಿಕೊಂಡೇ ಬದುಕುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದ್ದಾರೆ.
ಈ ಪ್ರದೇಶದ ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್ನ ಅಂಡರ್ಗ್ರೌಂಡ್ ಟ್ಯಾಂಕ್ನಿಂದ ಡೀಸೆಲ್ ಸೋರಿಕೆಯಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಬಂಕ್ ಮಾಲೀಕರು ಇದನ್ನು ತಳ್ಳಿಹಾಕಿದ್ದು, “ಸ್ಟಾಕ್ನಲ್ಲಿ ವ್ಯತ್ಯಾಸ ಇಲ್ಲ. ನಮ್ಮಿಂದ ಸೋರಿಕೆ ಆಗಿಲ್ಲ” ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಬಾವಿ ನೀರನ್ನು ಪರೀಕ್ಷೆಗೆ ಕೊಂಡೊಯ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಇದುವರೆಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಂತರ್ಜಲ ಸಂಪೂರ್ಣ ಕಲುಷಿತಗೊಳ್ಳುವ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಸಮಗ್ರ ತನಿಖೆ ನಡೆಸಿ, ಸೋರಿಕೆಯ ಮೂಲ ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.



