ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಜನರಿಗೆ ಕಿಮ್ಸ್ ಸಂಸ್ಥೆಯು ಉತ್ತಮ ಚಿಕಿತ್ಸೆ ನೀಡುತ್ತಿದೆ. ಈ ಸಂಸ್ಥೆಯ ವೈದ್ಯರ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ನ ಅಧ್ಯಕ್ಷ ಜಿ.ಎಸ್. ಪಾಟೀಲ್ ಹೇಳಿದರು.
ಗುರುವಾರ ಹುಬ್ಬಳ್ಳಿಯ ಕಿಮ್ಸ್ನ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವತಿಯಿಂದ ಸಿ.ಎಸ್.ಆರ್. ನಿಧಿಯಡಿ ರೂ.1.75 ಕೋಟಿ ರೂ ವೆಚ್ಚದ ವೈದ್ಯಕೀಯ ಉಪಕರಣಗಳಾದ ನ್ಯೂಯೋನಟಲ್, ಇನ್ಕುಬೇಟರ್ಸ್ ಮತ್ತು ಆಪರೇಟಿಂಗ್ ಲ್ಯಾಪ್ರೋಸ್ಕೋಪಿ ಖರೀದಿಗಾಗಿ ಕಿಮ್ಸ್ಗೆ ಚೆಕ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1957ರಲ್ಲಿ ಕಿಮ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕಿಮ್ಸ್ ಇಂದು ಹೆಮ್ಮರವಾಗಿ ಬೆಳೆದಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ನನ್ನ ತಂದೆ-ತಾಯಿಯವರು ಸಹ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ರೋಗಿಗಳು ಇಲ್ಲಿ ದಾಖಲಾಗುತ್ತಾರೆ. ಸಾವಿರಕ್ಕೂ ಅಧಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಅನೇಕರು ಗುಣಮುಖರಾಗಿದ್ದಾರೆ. ದೇಶದಲ್ಲಿ 100 ಗರ್ಭಿಣಿಯರಲ್ಲಿ 97 ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಅಸುನೀಗುತ್ತಿದ್ದಾರೆ ಎಂದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಕಿಮ್ಸ್ ಸಂಸ್ಥೆ ಸಂಜೀವಿನಿಯಾಗಿದೆ. ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಸೇವೆ ದೊರೆಯುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ನಾನು ಸಹ ಇಲ್ಲಿ ದಾಖಲಾಗಿದ್ದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ವೈದ್ಯರು ಮಾಡಿದರು. ವೈದ್ಯರು ಮಾನವೀಯತೆ, ಮನುಷ್ಯತ್ವವನ್ನು ಹೊಂದಬೇಕಾಗಿದೆ. ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ವಿವಿಧ ರೋಗಗಳ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಕಿಮ್ಸ್ಗೆ ಹೆಚ್ಚಿನ ಅನುದಾನವನ್ನು ತರುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡದರು.
ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ನ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ಕಿಮ್ಸ್ ಸಂಸ್ಥೆ ಅತಿ ಶ್ರೇಷ್ಠ ಸಂಸ್ಥೆಯಾಗಿದೆ. ಸಿ.ಎಸ್.ಆರ್. ನಿಧಿಯ ಸದ್ಬಳಕೆಯಾಗಬೇಕು. ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯು ದೊರೆಯುವಂತಾಗಬೇಕಿದೆ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಎ.ಎಂ. ಕುಲಕರ್ಣಿ, ಬಿ.ಜಿ. ವಸ್ತçದ, ಡಾ. ಸಿ.ಎಸ್. ಪಾಟೀಲ, ಐ.ಎಸ್. ಪಾಟೀಲ, ಮುಖಂಡರಾದ ಅನಿಲಕುಮಾರ ಪಾಟೀಲ, ಶರಣಪ್ಪ ಪಟಗಿ, ಕಿಮ್ಸ್ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಸುಕನ್ಯಾ ಪ್ರಾರ್ಥಿಸಿದರು. ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಸ್ವಾಗತಿಸಿದರು. ಡಾ.ರಾಜಶೇಖರ ದ್ಯಾಬೇರಿ ನಿರೂಪಿಸಿದರು.
ರಾಜ್ಯದಲ್ಲಿ ಹೆರಿಗೆ ಸಂದರ್ಭದಲ್ಲಿ 1000ರಲ್ಲಿ 24 ಮಕ್ಕಳು ಸಾವಿಗೀಡಾಗುತ್ತಿದ್ದು, ಸುಧಾರಿತ-ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಬೇಕು. ಹೀಗಾಗಿ ಕಿಮ್ಸ್ಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಭಾಗದ ಊರುಗಳ ಜನರಿಗೆ ಒಳ್ಳೆಯ ಚಿಕಿತ್ಸೆ ನೀಡುವಲ್ಲಿ ವೈದ್ಯರು ಮುಂದಾಗಬೇಕು ಎಂದು ಜಿ.ಎಸ್. ಪಾಟೀಲ ತಿಳಿಸಿದರು.