ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣಿನ ಆರೋಗ್ಯ ಸಂರಕ್ಷಣೆ, ಕೃಷಿ ತ್ಯಾಜ್ಯಗಳ ಸಮರ್ಪಕ ಬಳಕೆ ಹಾಗೂ ಪರ್ಯಾಯ ಗೊಬ್ಬರಗಳ ಮಹತ್ವದ ಕುರಿತು ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳಲ್ಲಿ “ಜಮೀನು ಉಳಿಸಿ” (ಖೇತ ಬಚಾವೋ) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, ಮಣ್ಣಿನ ಆರೋಗ್ಯ ಕಾಪಾಡಲು ಕೃಷಿ ತ್ಯಾಜ್ಯಗಳ ಮರುಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಾಗಿ, ಫಲವತ್ತತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮತ್ತೋರ್ವ ವಿಜ್ಞಾನಿ ಡಾ. ಚೇತನ ಬಾಬು ತಾಂತ್ರಿಕ ಉಪನ್ಯಾಸ ನೀಡಿ, ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ, ರೈಜೋಬಿಯಂ ಹಾಗೂ ಪಿ.ಎಸ್.ಬಿ. ಬಳಸಿ ಬೀಜೋಪಚಾರ ಮಾಡುವ ವಿಧಾನವನ್ನು ವಿವರಿಸಿದರು. ಜೊತೆಗೆ ಕೊಟ್ಟಿಗೆ ಗೊಬ್ಬರ ಹಾಗೂ ಗೋ ಉತ್ಪನ್ನಗಳ ಉಪಯುಕ್ತತೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ಮಾತನಾಡಿ, ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ರಸಗೊಬ್ಬರಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಗೊಬ್ಬರಗಳ ಬಳಕೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಉದ್ದು ಹಾಗೂ ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಲಾಯಿತು.
ನರಗುಂದ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಿಗಿ ಸ್ವಾಗತಿಸಿದರು. ಶಿವಾನಂದ ಸಾಠೆ ವಂದಿಸಿದರು.
ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಕೃಷಿ ತಜ್ಞರಿಂದ ಮಾಹಿತಿ ಪಡೆದುಕೊಂಡರು.
“ಮಣ್ಣಿನ ಆರೋಗ್ಯವೇ ಕೃಷಿಯ ಜೀವಾಳ. ಸಾವಯವ ಮತ್ತು ಜೈವಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ, ಭೂಮಿಯ ಫಲವತ್ತತೆ ಹೆಚ್ಚುತ್ತದೆ.”
ಡಾ. ವಿನಾಯಕ ನಿರಂಜನ
ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ
ರೈತರಿಗೆ ಉದ್ದು-ತೊಗರಿ ಬೀಜ ವಿತರಣೆ
ಖೇತ ಬಚಾವೋ ಅಭಿಯಾನದ ಅಂಗವಾಗಿ ಬನಹಟ್ಟಿ ಹಾಗೂ ಬೈರನಹಟ್ಟಿ ಗ್ರಾಮಗಳ ರೈತರಿಗೆ ಕೃಷಿ ಇಲಾಖೆ ವತಿಯಿಂದ ಉದ್ದು ಮತ್ತು ತೊಗರಿಯ ಸುಧಾರಿತ ತಳಿಯ ಬೀಜಗಳನ್ನು ಪ್ರಾತ್ಯಕ್ಷಿಕೆಗಾಗಿ ವಿತರಿಸಿ, ಪರ್ಯಾಯ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.



