ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದೀಗ ಸರಸಕ್ಕೆ ಕರೆದು ಟೆಕ್ಕಿಯೊಬ್ಬರಿಂದ ಹಣ ದೋಚಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ಐವರನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಮಲತಾ @ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ @ ಸ್ವೀಟಿ, ಜಗದೀಶ್, ಲೋಕೇಶ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿದ್ದ ಇಬ್ಬರು ಮಹಿಳೆಯರು ಟೆಕ್ಕಿಯನ್ನು ಸರಸಕ್ಕೆ ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದ ಬಳಿಕ 40 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಟೆಕ್ಕಿ ನಿರಾಕರಿಸಿದಾಗ ಸಹಚರರನ್ನು ಕರೆದು ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ.
ಘಟನೆಯ ನಂತರ ಟೆಕ್ಕಿ ಅಲ್ಲಿಂದ ತಪ್ಪಿಸಿಕೊಂಡು ಸ್ಥಳೀಯರ ಸಹಾಯದಿಂದ 112ಕ್ಕೆ ಕರೆ ಮಾಡಿದ್ದಾನೆ. ಮಾಹಿತಿ ಪಡೆದ ಹೊಯ್ಸಳ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ, ಟೆಕ್ಕಿ ಹಾಗೂ ಹಲ್ಲೆ ನಡೆಸಿದ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಪ್ರಕರಣದ ಹಿನ್ನೆಲೆ ಬೆಳಕಿಗೆ ಬಂದಿದೆ. ಡಿಸೆಂಬರ್ 10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಯುವತಿಯೊಬ್ಬಳ ಪರಿಚಯವಾಗಿದ್ದು, ಆಕೆ 20 ಸಾವಿರ ರೂ. ಕೇಳಿದ್ದಾಳೆ. ಟೆಕ್ಕಿ ಹಣ ನೀಡಲು ಒಪ್ಪಿಕೊಂಡು ಮಹಿಳೆಯ ಮನೆಗೆ ಹೋಗಿದ್ದಾಗ, ಬೆದರಿಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ನಂತರ ಅದೇ ಮಹಿಳೆ ತನ್ನ ಸ್ನೇಹಿತೆಯ ಸಹಾಯದಿಂದ ಮತ್ತೆ ಟೆಕ್ಕಿಯನ್ನು ಕರೆಸಿ ಮತ್ತೊಂದು 20 ಸಾವಿರ ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದಾಳೆ. ಈ ಕುರಿತು ಟೆಕ್ಕಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದು, ಸದ್ಯ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.



