ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ರಾಜಕಾರಣಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಗಾರರಾಗಿ ಗುರುತಿಸಿಕೊಂಡಿರುವ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮುಖಂಡ ಶಂಭು ಕಾಳೆ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಚ್.ಕೆ. ಪಾಟೀಲ ಅವರು ಜನಪರ ಆಡಳಿತದ ಮೂಲಕ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ಅನುಭವ ಮತ್ತು ಹಿರಿತನ ಪರಿಗಣಿಸಿ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅವಕಾಶ ನೀಡದಿರುವುದು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ” ಎಂದು ಹೇಳಿದರು.
ಪರಿಶಿಷ್ಟ ಜಾತಿ ಸಮುದಾಯದವರು ಸದಾ ಎಚ್.ಕೆ. ಪಾಟೀಲ ಅವರ ಪರ ನಿಂತಿದ್ದು, ಅವರಿಗೆ ನ್ಯಾಯ ಸಿಗಲೇಬೇಕು ಎಂದು ಒತ್ತಾಯಿಸಿದರು.
ಹೊನ್ನಪ್ಪ ಮಾತನಾಡಿ, “ಮೊದಲ ಸಚಿವ ಸಂಪುಟ ರಚನೆಯಲ್ಲಿಯೇ ಎಚ್.ಕೆ. ಪಾಟೀಲ ಅವರ ಅನುಭವಕ್ಕೆ ತಕ್ಕ ಗೌರವ ಸಿಗಬೇಕಿತ್ತು. ಅವರು ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನಾಯಕರು” ಎಂದು ಹೇಳಿದರು.
ಗುರುರಾಜ ಸಂಕಣ್ಣವರ ಮಾತನಾಡಿ, ಜೂನ್ 16ರಂದು ನಗರದ ಕಾಟನ್ ಸೇಲ್ಸ್ ಸೊಸೈಟಿಯಲ್ಲಿ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ತಕ್ಷಣ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಜೂನ್ 19ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಸಿಂಗಾಡಿ, ಮಲ್ಲಿಕಾರ್ಜುನ ಸಂಗಾಪುರ, ಯಲ್ಲಪ್ಪ ಒಂಟೆತ್ತಿನ, ಗಂಗಾಧರ ವಾಲಿಕಾರ ಹಾಗೂ ಗಣೇಶ ಕಟಿಗಿ ಉಪಸ್ಥಿತರಿದ್ದರು.



