ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣೆಂದರೆ ಸಾಕ್ಷಾತ್ ದೇವಿಯ ಸ್ವರೂಪ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ತ್ರೀಯರನ್ನು ಅವಮಾನಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ತಾಯಿ ಸ್ಥಾನವನ್ನು ಅಗೌರವಿಸಿದ್ದಾರೆ. ಇಂತಹ ರಾಜಕಾರಣಿಗಳು ನಮಗೆ ಬೇಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಕರೀಮಸಾಬ ಸುಣಗಾರ ಹೇಳಿದ್ದಾರೆ.
ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿ, ಸಂವಿಧಾನಿಕ ಉನ್ನತ ಹುದ್ದೆಯಲ್ಲಿದ್ದು, ರಾಜ್ಯದ ಆಡಳಿತ ನಿರ್ವಹಿಸಿರುವ ಕುಮಾರಸ್ವಾಮಿಯವರಿಂದ ಇಂತಹ ಅಗೌರವವನ್ನು ಮಹಿಳಾ ಸಮುದಾಯ ಸಹಿಸದು.
ಹೆಣ್ಣು ಕಾಳಿ ಆಗುವ ಮುನ್ನವೇ ಮಾಜಿ ಮುಖ್ಯಮಂತ್ರಿಗಳು ಮಹಿಳಾ ಸಮುದಾಯದಲ್ಲಿ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನ ಪರವಾಗಿ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡಿ ಜನರ ಮನ ಗೆದ್ದಿದೆ, ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲರು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅವರಿಂದ ಸೈ ಎನಿಸಿಕೊಂಡಿದ್ದಾರೆ ಎಂದು ಕರೀಮಸಾಬ ಸುಣಗಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.