ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗಾಗಿ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ (ಎಪಿಆರ್ಓ)ಗಳು ನಿಷ್ಪಕ್ಷಪಾತವಾಗಿ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಂಡು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಸೂಸುತ್ರವಾಗಿ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಶನಿವಾರ ನಗರದ ವಿದ್ಯಾಗಿರಿಯ ಜೆಎಸ್ಎಸ್ ಮಹಾವಿದ್ಯಾಲಯದ ಆವರಣದಲ್ಲಿ ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್ಓ)ಗಳಿಗೆ ಆಯೋಜಿಸಿದ್ದ ಮೊದಲ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರನ್ನು ಉದ್ದೇಶಿಸಿ ಮಾತನಾಡಿದರು.
ಮತದಾನ ನಡೆಯುವ ವೇಳೆ ಮತದಾರರಿಗೆ ಯಾವುದೇ ಅಡೆ-ತಡೆಯಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿಯಾಗಿ ಎರಡು ಹಂತದ ತರಬೇತಿ ನೀಡಲಾಗುತ್ತಿದ್ದು, ಇದು ಮೊದಲ ಹಂತವಾಗಿದೆ. ಅಧಿಕಾರಿಗಳಿಗೆ ಮತಯಂತ್ರಗಳ ಮಾದರಿ, ಬಳಕೆ ಮಾಡುವ ವಿಧಾನ ಕುರಿತು ನುರಿತ ತಜ್ಞರು ತರಬೇತಿ ನೀಡುತ್ತಾರೆ ಎಂದರು.
ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಮತ್ತು ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಚುನಾವಣಾ ಆಯೋಗ ಶಾಸನಬದ್ಧ ಅಧಿಕಾರ ಮತ್ತು ಜವಾಬ್ದಾರಿ ನೀಡಿದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಹಾಯಕ ಚುನಾವಣಾಧಿಕಾರಿಗಳಾದ ಪ್ರಿಯಾಂಗಾ ಎಂ., ಶಾಲಂ ಹುಸೇನ್, ನೋಡಲ್ ಅಧಿಕಾರಿ ಅಜೀಜ್ ದೇಸಾಯಿ, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಮಹಾನಗರ ಪಾಲಿಕೆ ವಲಯಾಧಿಕಾರಿ ಶಂಕರಗೌಡ ಪಾಟೀಲ, ಚುನಾವಣಾ ವಿಭಾಗಾಧಿಕಾರಿ ಉಮೇಶ ಸವಣೂರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಸಂಪತ್ಕುಮಾರ್ ವಡೆಯರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಆರ್ಓಗಳಿಗೆ ಮಾಸ್ಟ್ರಿಂಗ್ ಮತ್ತು ಡಿಮಾಸ್ಟ್ರಿಂಗ್ ಸುಲಭವಾಗಿ ಮಾಡಿಕೊಡಲು ಅಗತ್ಯ ಕ್ರಮ, ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಡಿಮಾಸ್ಟಿçಂಗ್ ವ್ಯವಸ್ಥಿವಾಗಿ ನಿರ್ವಹಿಸಲು ಸೆಕ್ಟರ್ ಆಫೀಸರ್ಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ಎಲ್ಲರೂ ಸಹಕರಿಸಿ, ಚುನಾವಣೆ ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.