ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಿಂದೂ-ಮುಸ್ಲಿಂ ಸೌಹಾರ್ದ ಮತ್ತು ಭಾವೈಕ್ಯದ ಅಪರೂಪದ ಮಾದರಿಯೊಂದು ನರೇಗಲ್ಲ ಸಮೀಪದ ಕೋಚಲಾಪುರ ಗ್ರಾಮದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ಮೂಡಿ ಬಂದಿದ್ದು, ಗ್ರಾಮದ ಜನರು ಸಮಾಜಕ್ಕೆ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.
ಕೋಚಲಾಪುರ ಪುಟ್ಟ ಗ್ರಾಮವಾದರೂ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸಿ ಅಣ್ಣ-ತಮ್ಮಂದಿರಂತೆ ಬೆರೆಯುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಈ ಬಾರಿ ಮೊಹರಂ ಹಬ್ಬದ ಮೆರವಣಿಗೆಗಾಗಿ ಅಗತ್ಯವಿದ್ದ ಡೋಲಿ ನಿರ್ಮಾಣಕ್ಕೆ ಗ್ರಾಮದ ಪ್ರಕಾಶ ಬಳಗೋಡಮಠ ಅವರು ಉದಾರ ದೇಣಿಗೆ ನೀಡಿ ಸಹಕರಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ನೂತನ ಡೋಲಿಯನ್ನು ಹಿಂದೂ ಬಾಂಧವರು ಭಜನೆಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸೌಹಾರ್ದತೆಯ ಅನನ್ಯ ಸಂದೇಶ ಸಾರಿದರು. ಈ ದೃಶ್ಯ ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಎಲ್ಲ ಧರ್ಮಗಳ ಮೂಲ ತತ್ವ ಮಾನವೀಯತೆ ಮತ್ತು ಶಾಂತಿಯೇ ಆಗಿದೆ. ಕೋಚಲಾಪುರ ಗ್ರಾಮದಲ್ಲಿ ಕಾಣುತ್ತಿರುವ ಭಾವೈಕ್ಯತೆ ಇತರರಿಗೆ ಮಾದರಿಯಾಗಿದ್ದು, ಈ ಸೌಹಾರ್ದತೆ ಎಂದೆಂದಿಗೂ ಉಳಿಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದಾನಿ ಪ್ರಕಾಶ ಬಳಗೋಡಮಠ ಹಾಗೂ ಡೋಲಿ ನಿರ್ಮಿಸಿದ ಶಾಶ್ವತಾಚಾರಿ ಕಮ್ಮಾರ ಅವರನ್ನು ನರೇಗಲ್ಲ ದರ್ಗಾದ ಅಜ್ಜನವರಾದ ಹಜರತ್ ಮಂಜೂರ ಹುಸೇನಶಾವಲಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಅಂದಾನಯ್ಯ ಮಾಲಗಿತ್ತಿಮಠ, ಜಿನ್ನಾಸಾಬ ಚಾಕ್ರೆ, ಸಂಗಯ್ಯ ಮಾಲಗಿತ್ತಿಮಠ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಬ್ಬಾಸಲಿ ರವಡೂರ ಕಾರ್ಯಕ್ರಮ ನಿರೂಪಿಸಿದರೆ, ಪೀರಸಾಬ ಗಡಾದ ಸ್ವಾಗತಿಸಿದರು.
“ಎಲ್ಲ ಧರ್ಮಗಳ ತಿರುಳು ಒಂದೇ. ಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯೇ ಎಲ್ಲ ಧರ್ಮಗಳ ಸಂದೇಶ. ಕೋಚಲಾಪುರದ ಭಾವೈಕ್ಯತೆ ಇಡೀ ಸಮಾಜಕ್ಕೆ ಮಾದರಿ.”
ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ನರೇಗಲ್ಲ ಹಿರೇಮಠ



