ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಧಾರ್ಮಿಕ ಆಚರಣೆಗಳಿಂದ ಉತ್ತಮ ಸಂಸ್ಕಾರ, ಧರ್ಮ ಸಹಿಷ್ಣುತೆ, ಶಾಂತಿ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಕಂಚೀಕೆರೆ ಗ್ರಾಮದಲ್ಲಿ ಸೋಮವಾರ ವೀರಭದ್ರೇಶ್ವರ ದೇವಸ್ಥಾನ ಅನಾವರಣ, ಶಿಲಾಮೂರ್ತಿ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಗುಗ್ಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.
ಧಾರ್ಮಿಕ ಆಚರಣೆಗಳಲ್ಲಿ ರಾಜಕೀಯದ ಹಸ್ತಕ್ಷೇಪ ಒಳಿತಲ್ಲ. ಗ್ರಾಮಗಳಲ್ಲಿ ಸರ್ವಧರ್ಮೀಯರು ಒಗ್ಗೂಡಿ ಉತ್ಸವಗಳಲ್ಲಿ ಪಾಲ್ಗೊಂಡರೆ ಧಾರ್ಮಿಕ ಕಾರ್ಯಕ್ರಮಗಳ ಮೆರುಗು ಹೆಚ್ಚುತ್ತದೆ. ಮಾನವನ ಆಸೆಗೆ ಅಂತ್ಯವಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಪಾವು ಭೂಮಿಯನ್ನು ಬಿಡದ ಜನಗಳ ಮಧ್ಯೆ ದೇವಸ್ಥಾನಕ್ಕೆಂದು ಕೆರೆಯ ಭೂಮಿಯನ್ನು ಮೀಸಲಿಟ್ಟು, ಪವಿತ್ರ ಕಾರ್ಯದಲ್ಲಿ ತೊಡಗಿರುವುದಕ್ಕೆ ಗ್ರಾಮದ ಸರ್ವಧರ್ಮೀಯರ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ ಸಮಿತಿ ಮುಖಂಡ ಬಿದ್ರಿ ಕೊಟ್ರೇಶ್ ಮಾತನಾಡಿ, ದೇವಸ್ಥಾನ ನಿರ್ಮಾಣದಲ್ಲಿ ಗ್ರಾಮದ ಎಲ್ಲಾ ವರ್ಗದವರ ಶ್ರಮವಿದೆ. ವಿಷೇಶವಾಗಿ ಗ್ರಾಮದಲ್ಲಿ ಎಲ್ಲಾ ದೇವಸ್ಥಾನಗಳ ಮೂರ್ತಿಗಳನ್ನು ವೀರಭದ್ರೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದ್ದು ನಮ್ಮ ಗ್ರಾಮದ ಪುಣ್ಯವೆಂದರು.
ಎಂ. ತಿಪ್ಪೇಸ್ವಾಮಿ, ಸಿದ್ದಲಿಂಗಯ್ಯ, ಕೆಂಚನಗೌಡ, ಶಾನುಭೋಗರ ಕೆಂಚಪ್ಪ, ಕೆ.ಎಸ್. ಜಾತಪ್ಪ, ಕಲ್ಲಳ್ಳಿ ಸಿದ್ದವೀರಪ್ಪ, ಮೋತಿ ಸಿದ್ದಪ್ಪ, ಬಸಣ್ಣ, ಕೊಟ್ರೇಶ್, ಬಾರಿಕರ ಮಂಜಪ್ಪ, ಸಂಗಜ್ಜ, ಸುನೀಲ, ಅರುಣ್ ಕುಮಾರ್, ಲಿಂಗರಾಜ್, ವೀರಣ್ಣ, ತೇಜಶ್ವರ ತಿಮ್ಮಾಳ, ದೇವೇಂದ್ರ, ಹನುಮಂತ, ಕೋಲ್ಕರ್ ಬಸವರಾಜ, ಗೋಣೆಪ್ಪ,ಅಂಜಿನಿ, ನಾಗರಾಜ, ಹಾಗೂ ಇತರರು ಭಾಗವಹಿಸಿದ್ದರು.