ವಿಜಯಸಾಕ್ಷ್ಮಿ ಸುದ್ದಿ, ಲಕ್ಷ್ಮೇಶ್ವರ: ದೇವಸ್ಥಾನದ ಸುತ್ತಮುತ್ತ ಪೂಜಾ ಕಾರ್ಯ ಮಾಡುತ್ತಿದ್ದ ವ್ಯಕ್ತಿಯೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಇದು ಬಯಲಾಗಿದೆ.
ಪಟ್ಟಣದ ಕನಕಭವನದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಐಪಿಎಲ್ ಟಿ-20 ಪಂದ್ಯಗಳ ಗೆಲುವು-ಸೋಲಿನ ಮೇಲೆ ಹಣ ಪಣಕ್ಕಿಟ್ಟು ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಲಕ್ಷ್ಮೇಶ್ವರ ಪೊಲೀಸರು ಮೇ 26ರಂದು ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಸಮೀರ್ ಎಸ್/ಒ ಕೃಷ್ಣಾಜಿ ಪೂಜಾರ (39) ಎಂದು ಗುರುತಿಸಲಾಗಿದೆ. ಆತ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಸಮೀಪ ನಿವಾಸಿಯಾಗಿದ್ದು, ವೃತ್ತಿಯಿಂದ ಪೂಜಾರಿಯಾಗಿದ್ದಾನೆ. ಆದರೆ ಇದೇ ವ್ಯಕ್ತಿ ಮೊಬೈಲ್ ಮೂಲಕ ಐಪಿಎಲ್ ಪಂದ್ಯಗಳ ಫಲಿತಾಂಶದ ಮೇಲೆ ಹಣ ಪಣಕ್ಕಿಟ್ಟು ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ದಾಳಿ ವೇಳೆ ಆರೋಪಿಯ ವಶದಿಂದ ಒಂದು ರೆಡ್ಮಿ ಮೊಬೈಲ್ ಫೋನ್, ₹800 ನಗದು ಹಾಗೂ ಕ್ರಿಕೆಟ್ ತಂಡಗಳ ಹೆಸರು ಮತ್ತು ಹಣದ ಲೆಕ್ಕ ಬರೆದಿದ್ದ ಚೀಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿ ವಸ್ತುಗಳ ಒಟ್ಟು ಮೌಲ್ಯ ₹2,800 ಎಂದು ಅಂದಾಜಿಸಲಾಗಿದೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 98/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ 78(1)(A)(iv)(vi) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪಿಎಸ್ಐ ನಾಗರಾಜ ಗದಾಡ ಅವರ ಸ್ವಯಂ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಐಪಿಎಲ್ ಬೆಟ್ಟಿಂಗ್ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



