ಬೆಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರಿಂದ ₹20 ಲಕ್ಷ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಮಡಿವಾಳ ಪೊಲೀಸರ ವಿಚಾರಣೆ ವೇಳೆ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ, “ಕುಪೇಂದ್ರ ರೆಡ್ಡಿ ಪರಿಚಯದ ವ್ಯಕ್ತಿ. ಆತನೊಂದಿಗೆ ಹೋಗಿದ್ದೇ ಹೊರತು ದರೋಡೆ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ವಿಚಾರಿಸಿದ ನಂತರವೇ ಈ ಪ್ರಕರಣದ ಬಗ್ಗೆ ತಿಳಿಯಿತು” ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಇನ್ನು, ತಮ್ಮ ಗುರುತಿನ ಚೀಟಿ (ಐಡಿ ಕಾರ್ಡ್) ದುರ್ಬಳಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಐಡಿ ಕಾರ್ಡ್ನ್ನು ವಾಹನದ ಡ್ಯಾಶ್ಬೋರ್ಡ್ನಲ್ಲಿ ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೆ ಅದನ್ನು ತೆಗೆದುಕೊಂಡು ದುರ್ಬಳಕೆ ಮಾಡಲಾಗಿದೆ. ಅಗತ್ಯವಿದ್ದರೆ ಐಡಿ ಕಾರ್ಡ್ ದುರ್ಬಳಕೆ ಕುರಿತು ನಾನು ಕೂಡ ದೂರು ನೀಡುತ್ತೇನೆ” ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಆದರೆ, ಪ್ರಕರಣದ ಇತರ ಆರೋಪಿಗಳು ವಿಚಾರಣೆ ವೇಳೆ ಮಹೇಶ್ ಕನಕಗಿರಿ ವಿರುದ್ಧವೇ ಆರೋಪ ಮಾಡಿದ್ದಾರೆ. “ಎಲ್ಲವೂ ಅವರಿಗೆ ಗೊತ್ತಿತ್ತು. ಅವರ ಸೂಚನೆಯಂತೆ ನಾವು ನಡೆದುಕೊಂಡಿದ್ದೇವೆ” ಎಂದು ಅವರು ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ.
ಇದರಿಂದಾಗಿ ಮಹೇಶ್ ಕನಕಗಿರಿ ಅವರ ಪಾತ್ರದ ಕುರಿತು ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಅವರ ಹೇಳಿಕೆ ಮತ್ತು ಸಹಆರೋಪಿಗಳ ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮಹೇಶ್ ಕನಕಗಿರಿ ಅವರ ಮೊಬೈಲ್ ಫೋನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ದರೋಡೆಗೆ ಸಂಬಂಧಿಸಿದಂತೆ ಯಾವುದೇ ಕರೆ, ಸಂದೇಶ ಅಥವಾ ಚಾಟಿಂಗ್ ನಡೆದಿದೆಯೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತಿದೆ. ತನಿಖೆ ವೇಳೆ ಅವರು ಕುಪೇಂದ್ರ ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇದಲ್ಲದೆ, ಘಟನೆ ನಡೆದ ಸ್ಥಳದ ಹೋಟೆಲ್ ಸಿಸಿಟಿವಿ ದೃಶ್ಯಗಳು ಸೇರಿದಂತೆ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಶಫಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಶಫಿ ವಿರುದ್ಧ ಈ ಹಿಂದೆಯೂ ದರೋಡೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಆ ಪ್ರಕರಣಗಳಿಗೂ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರಿಗೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪ್ರಕರಣದ ಸಮಗ್ರ ತನಿಖೆ ನಡೆಸಿ ಮಹೇಶ್ ಕನಕಗಿರಿ ಅವರ ಪಾತ್ರದ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕುವಂತೆ ನಗರ ಪೊಲೀಸ್ ಆಯುಕ್ತರು ಡಿಸಿಪಿ ಸುಜಿತಾ ಅವರಿಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.



