Homecultureನೈತಿಕ ನಿಯಮಗಳು ಶಾಶ್ವತ : ಶ್ರೀ ರಂಭಾಪುರಿ ಜಗದ್ಗುರುಗಳು

ನೈತಿಕ ನಿಯಮಗಳು ಶಾಶ್ವತ : ಶ್ರೀ ರಂಭಾಪುರಿ ಜಗದ್ಗುರುಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಸೊರಬ : ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಮನುಷ್ಯನಿಗೆ ಮಾನಸಿಕ ಶಾಚಿತಿ, ಸಂತೃಪ್ತಿ ಇಲ್ಲದಂತಾಗಿದೆ. ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೊರಬ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬೆಲೆಯುಳ್ಳ ಬದುಕಿಗೆ ಸಂಸ್ಕಾರ ಮುಖ್ಯ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ಕರ್ತವ್ಯ, ಶಿಸ್ತು, ಶ್ರದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನದ ಅರಿವು ಮುಖ್ಯವೆಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ ಎಂದರು.
ಜಿ.ಪಂ ಮಾಜಿ ಸದಸ್ಯ ಗಿರೀಶ ಸಮಾರಂಭವನ್ನು ಉದ್ಘಾಟಿಸಿದರು. ಮಳಲಿ ಮಠದ ಡಾ.ನಾಗಭೂಷಣ ಶ್ರೀಗಳು, ಜಡೆ ಡಾ.ಮಹಾಂತ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕುರುವತ್ತಿ ನಂದೀಶ್ವರ ಶ್ರೀಗಳು, ಲಕ್ಕವಳ್ಳಿ ಜೈನ ಮಠದ ಶ್ರೀಗಳು, ತಿರುಮಲಕೊಪ್ಪದ ದಾನ್ಯ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ನೇತೃತ್ವವನ್ನು ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಬನ್ನಿಕೊಪ್ಪದ ಡಾ. ಸುಜ್ಞಾನ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಾಗರದ ಪಂಚಾಕ್ಷರಯ್ಯನವರು ವೀರಶೈವ ಧರ್ಮದ ಹಿರಿಮೆ ಮತ್ತು ಗುರು ಮಹಿಮೆ ಕುರಿತು ಉಪನ್ಯಾಸವನ್ನಿತ್ತರು. ಸದಾನಂದಗೌಡ್ರು ಬಳಗಲಿ, ಜಡೆ ಕೆ.ಬಂಗಾರಪ್ಪಗೌಡ್ರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾಳಂಗಿ ಮತ್ತು ಅಗಸನಹಳ್ಳಿ ಭಜನಾ ಮಂಡಳಿಯಿಂದ ಪ್ರಾರ್ಥನಾ ಗೀತೆ ಜರುಗಿತು. ಬಂಕವಳ್ಳಿ ಬಿ.ವೀರೇಂದ್ರಗೌಡ ನಿರೂಪಿಸಿದರು. ಕುಬಟೂರಿನ ಗಿರೀಶ ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img