ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಹಾಗೂ ಸಹಬಾಳ್ವೆ ಬೆಳೆಸುವಲ್ಲಿ ಜಾತ್ರಾಮಹೋತ್ಸವಗಳ ಪಾತ್ರ ಮಹತ್ವದ್ದಾಗಿದೆ. ಜಗತ್ತಿಗೆ ಸಮಾನತೆ, ಸಹಬಾಳ್ವೆ, ಭ್ರಾತೃತ್ವ ಹಾಗೂ ಸಾಮರಸ್ಯದ ಸಂದೇಶ ಸಾರಿದ ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಧನ್ಯತೆಯ ಸಂಗತಿ ಎಂದು ಹೊಳೆ ಇಟಗಿಯ ಹಿರಿಯ ಮುಖಂಡ ಸಣ್ಣವೀರಪ್ಪ ಫ. ಹಳ್ಳೆಪ್ಪನವರ ಹೇಳಿದರು.
ಶ್ರೀಕ್ಷೇತ್ರ ವರವಿಯ ಮೌನೇಶ್ವರ ದೇವಸ್ಥಾನದಲ್ಲಿ 2026ನೇ ಸಾಲಿನ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸಿ ಮೌನೇಶ್ವರರಿಗೆ ಭಕ್ತಿ ಸಮರ್ಪಿಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳೂ ಜಾತ್ರಾಮಹೋತ್ಸವದ ಆಹ್ವಾನಕ್ಕೆ ಗೌರವ ನೀಡಿ ಭಾಗವಹಿಸಬೇಕು. ಇದು ನಮ್ಮ ಮಠದ ಜಾತ್ರೆ ಎಂಬ ಭಾವನೆಯೊಂದಿಗೆ ಪಾಲ್ಗೊಂಡು ಮೌನೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದರು.
ಎಲ್ಲರೊಂದಿಗೆ ಅರಿತು ಬೆರೆತು ಬಾಳುವ ವಿಶ್ವಕರ್ಮ ಸಮಾಜ ಬಹುದೊಡ್ಡ ಸಮಾಜ. ಬೇರೆಯವರನ್ನು ತಿದ್ದಿ, ತೀಡಿ, ಬುದ್ಧಿಹೇಳಿ ಮೂರ್ತಿ ಮಾಡುವ ಬುದ್ಧಿವಂತಿಕೆ ಹೊಂದಿರುವ ಈ ಸಮಾಜದ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು ಎಂದು ಹಳ್ಳೆಪ್ಪನವರ ಹೇಳಿದರು.
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಬಾಗಲಕೋಟೆಯ ವೈದ್ಯ ಡಾ. ವಿನೋದ ಅಕ್ಕಸಾಲಿ ಮಾತನಾಡಿ, ಸಮಾಜ ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿ ಉತ್ತಮ ಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ. ವಿಶ್ವಕರ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯುವಜನರು ಮಾದಕ ವ್ಯಸನಗಳಿಗೆ ಮಾರುಹೋಗಬಾರದು ಎಂದು ಕರೆ ನೀಡಿದರು.
ಪೊಲೀಸ್ ಇಲಾಖೆಯ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾದ ವಿಶ್ವನಾಥ ಬಡಿಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲಾಖೆ ನೀಡಿದ ಗೌರವವನ್ನು ಸಮಾಜಕ್ಕೆ ಅರ್ಪಿಸುವೆ. ಸಾಧಕರನ್ನು ಗೌರವಿಸುವುದರಿಂದ ಇನ್ನಷ್ಟು ಸಾಧನೆಗೆ ಪ್ರೇರಣೆ ದೊರೆಯುತ್ತದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಆಶೀರ್ವಾದ ದೊರೆತಿರುವುದು ಧನ್ಯತಾ ಭಾವ ಮೂಡಿಸಿದೆ ಎಂದರು.
ವರವಿ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಮಠಾಧಿಪತಿಗಳು, ಪೀಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಸಮಸ್ತ ಭಕ್ತರ ಸಮ್ಮುಖದಲ್ಲಿ ಜಾತ್ರಾಮಹೋತ್ಸವ ಶ್ರದ್ಧೆ–ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಸಹಕಾರ ನೀಡಿದ ಎಲ್ಲರಿಗೂ ಮೌನೇಶ್ವರರು ಸನ್ಮಂಗಲವನ್ನುಂಟು ಮಾಡಲಿ ಎಂದರು.
ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ, ಚಿಕ್ಕಮಗಳೂರಿನ ರೈತ ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಹ. ಬಡಿಗೇರ ಮಾತನಾಡಿದರು.
ವಿಜಯಪುರ ಮೂರು ಜಾವಧೀಶ್ವರ ಮಠದ ಶ್ರೀ ಮಹೇಂದ್ರ ಮಹಾಸ್ವಾಮೀಜಿ, ಲೇಬಗಿರಿ ಲಕ್ಷ್ಮೀಂದ್ರಸ್ವಾಮಿಗಳ ಮಠದ ಶ್ರೀ ನಾಗಮೂತೇಂದ್ರ ಮಹಾಸ್ವಾಮೀಜಿ ಹಾಗೂ ಹುಬ್ಬಳ್ಳಿ ವೇ.ಬ್ರ. ಶ್ರೀ ಶಂಕರಾಚಾರ್ಯ ಗು. ಕಡ್ಲಾಸ್ಕರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಶ್ವಕರ್ಮ ಸಮಾಜದ ಮುಖಂಡ ಮುತ್ತಣ್ಣ ಬಡಿಗೇರ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಶಿಕ್ಷಕ ಸತೀಶ ಹೊರಪೇಟೆ ಪ್ರಾರ್ಥಿಸಿದರು. ಮೋಹನ ಸಿ. ನರಗುಂದ ಸ್ವಾಗತಿಸಿದರು. ಪ್ರಾಧ್ಯಾಪಕ ವಿಶ್ವನಾಥ ಯ. ಕಮ್ಮಾರ ನಿರೂಪಿಸಿದರು. ಚಂದ್ರಕಾಂತ ಸೋನಾರ ವಂದಿಸಿದರು.
ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ಶಿಕ್ಷಣವಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
— ಡಾ. ವಿನೋದ ಅಕ್ಕಸಾಲಿ, ವೈದ್ಯರು, ಬಾಗಲಕೋಟೆ



