ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತ ಕೇವಲ ಮನರಂಜನೆಗೆ ಸೀಮಿತವಲ್ಲ, ಅದು ನಮ್ಮ ಸಂಸ್ಕೃತಿ ಹಾಗೂ ಭವ್ಯ ಪರಂಪರೆಯ ಸಂಕೇತವಾಗಿದೆ. ಸಂಗೀತ ಮಾನಸಿಕ ನೆಮ್ಮದಿ ನೀಡುವುದರ ಜತೆಗೆ ಭಗವಂತನ ಒಲುಮೆಗೂ ಕಾರಣವಾಗುವ ಮಾಧ್ಯಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೀತಿ ಹೊನ್ನಗುಡಿ ಹೇಳಿದರು.
ಎಸ್.ವಿ.ಟಿ. ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಪುಟ್ಟರಾಜ ಸಂಗೀತ ಸಂಭ್ರಮ–26’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪುಟ್ಟರಾಜ ಗವಾಯಿಗಳು ಸಂಗೀತದ ಮೂಲಕ ಭಗವಂತನ ಒಲುಮೆ ಪಡೆದು ನಡೆದಾಡುವ, ಮಾತನಾಡುವ ದೇವರು ಎನಿಸಿಕೊಂಡಿದ್ದರು. ವೀರೇಶ್ವರ ಪುಣ್ಯಾಶ್ರಮದ ಮೂಲಕ ಸಂಗೀತ ಸೇವೆ ಸಲ್ಲಿಸಿ ನಮ್ಮ ಭವ್ಯ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಅವರ ಶಿಷ್ಯ–ಪ್ರಶಿಷ್ಯರು ಗದುಗಿನ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹೆಚ್ಚಿಸಿದ್ದಾರೆ. ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಪ್ರೀತಿ ಹೊನ್ನಗುಡಿ ಹೇಳಿದರು.
ಕಾರ್ಯಕ್ರಮವನ್ನು ವನಜಾಕ್ಷಿ ಎಸ್. ತೋಟಗಂಟಿಮಠ ಉದ್ಘಾಟಿಸಿದರು. ಸೇವಾ ಸಮಿತಿ ಅಧ್ಯಕ್ಷ ಪಂ. ಫಕೀರೇಶ್ವರ ಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ.ಟಿ. ಅಧ್ಯಕ್ಷ ಡಾ. ಸಂತೋಷ ತೋಟಗಂಟಿಮಠ ಸೇವಾ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.
ಸುಕ್ರುಸಾಬ ಮುಲ್ಲಾ ಹಾರ್ಮೋನಿಯಂ ಸೋಲೋ, ಸಂಜಯಕುಮಾರ ಅರ್ಕಸಾಲಿ ವಯೋಲಿನ್ ಸೋಲೋ, ನಾಗೇಂದ್ರ ಅಕ್ಕಸಾಲಿ ತಬಲಾ ಸೋಲೋ, ಕುಮಾರ ಮಠ ಗುತ್ತರಗಿ ಹಿಂದೂಸ್ತಾನಿ ಗಾಯನ ಹಾಗೂ ಕೃತಿಕಾ ಶರಣಯ್ಯ ಹಿಡ್ಕಿಮಠ ವಚನ ಗಾಯನ ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾ ವಿಕಾಸ ಪರಿಷತ್ ವತಿಯಿಂದ ಪುಸ್ತಕ ದಾಸೋಹ ಯೋಜನೆಯಡಿ 200 ಯುವಕರಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ವಿಜಯಕುಮಾರ ಹಿರೇಮಠ, ಅನಿತಾ ತೋಟಗಂಟಿಮಠ, ಸ್ನೇಹಾ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪಂ. ಸಿ.ಕೆ.ಎಚ್. ಶಾಸ್ತ್ರೀ ಕಡಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಮಾರ ಹಿರೇಮಠ ವಂದಿಸಿದರು.



