ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ನಂದಿನಿ ತುಪ್ಪದ ಸರಬರಾಜು ಮತ್ತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರಂಭವಾಗಿದೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ವತಿಯಿಂದ ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಕಾರ್ಯಕ್ರಮಕ್ಕೆ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಇಂದು ಬೆಂಗಳೂರು ಡೇರಿ ಆವರಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗುವ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ಇದೀಗ ಮತ್ತೆ ದೇವಸ್ಥಾನಕ್ಕೆ ತಲುಪಲಿದೆ.
ಬೆಲೆ ಏರಿಕೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಳೆದ ಕೆಲವು ಸಮಯದಿಂದ ಕೆಎಂಎಫ್ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ನಡುವೆ ತುಪ್ಪ ಸರಬರಾಜು ಒಪ್ಪಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ, ಎರಡೂ ಸಂಸ್ಥೆಗಳ ನಡುವಿನ ಮಾತುಕತೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸರಬರಾಜು ಮರುಪ್ರಾರಂಭಗೊಂಡಿದೆ.
ತಿರುಪತಿ ಲಡ್ಡುವಿನ ವಿಶಿಷ್ಟ ಸ್ವಾದ ಮತ್ತು ಗುಣಮಟ್ಟಕ್ಕೆ ನಂದಿನಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಕ್ತರ ನಿರೀಕ್ಷೆಯಂತೆ ಈ ಸೇವೆ ಪುನರಾರಂಭಗೊಂಡಿರುವುದು ಸಂತಸದ ವಿಚಾರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಎಫ್ ಅಧಿಕಾರಿಗಳು, “ತಿರುಪತಿ ಲಡ್ಡುವಿನ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಪಾಡುವಲ್ಲಿ ನಂದಿನಿ ತುಪ್ಪ ಪ್ರಮುಖವಾಗಿದೆ. ಭಕ್ತರ ಅಪೇಕ್ಷೆಯಂತೆ ಮತ್ತೆ ಸರಬರಾಜು ಆರಂಭಿಸಿರುವುದು ಸಂತೋಷ ತಂದಿದೆ” ಎಂದು ತಿಳಿಸಿದರು.
ಇಂದು ನಂದಿನಿ ತುಪ್ಪ ಹೊತ್ತ ಲಾರಿಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಸರಬರಾಜು ಮರುಚಾಲನೆ ನೀಡಲಾಗಿದೆ.



