ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಯಾವಗಲ್ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಬೇಸಿಗೆಯಲ್ಲಿ ಸಿಗುವ ಉದ್ಯೋಗವನ್ನು ಬಳಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಜೊತೆಗೆ ಎಲ್ಲರೂ ವಿಮೆಗಳನ್ನು ಮಾಡಿಸಿ ವಿಮೆಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಸಾಮೂಹಿಕ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಉದ್ಯೋಗವನ್ನು ಅರಸಿ ಬೇರೆ ಕಡೆ ವಲಸೆ ಹೋಗದೆ ನಮ್ಮ ಗ್ರಾಮದಲ್ಲೇ ಸಿಗುವ ನರೇಗಾ ಕೂಲಿ ಕೆಲಸಗಳನ್ನು ಮಾಡಿ ಜೀವನವನ್ನು ಸಾಗಿಸಿ ಗುಳೇ ಹೋಗುವುದನ್ನು ತಪ್ಪಿಸಿ ಎಂದರಲ್ಲದೆ, ತಾಲೂಕಿನಲ್ಲಿ ಮಹಿಳಾ ಸಬಲಿಕರಣ ಮಾಡುವ ನಿಟ್ಟಿನಲ್ಲಿ ಸ್ತ್ರೀ ಚೇತನ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾ.ಪA ಅಧ್ಯಕ್ಷರಾದ ಶಂಷಾದ್ ಬೇಗಮ್ ಬಾಬಾನಗರ ಮಾತನಾಡಿ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಕೂಡಾ ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಯಾಗಿದ್ದು, ಅಪಘಾತದಿಂದ ಉಂಟಾಗುವ ಮರಣ ಅಥವಾ ಅಂಗವೈಕಲ್ಯಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದಕ್ಕೆ ವಾರ್ಷಿಕವಾಗಿ ಕೇವಲ 20 ರೂ (ಆನ್ಲೈನ್ನಲ್ಲಿ 19 ರೂ) ಪ್ರೀಮಿಯಂನೊಂದಿಗೆ, ಇದು ಎಲ್ಲಾ ಆದಾಯ ವರ್ಗದ ಜನರಿಗೆ ಅನೂಕಲವಾಗಿದೆ. ಅಪಘಾತದಿಂದ ಸಾವು ಸಂಭವಿಸಿದರೆ, ನಾಮಿನಿಗೆ 2 ಲಕ್ಷ ರೂ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಇದು ಕುಟುಂಬಕ್ಕೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ. ಮುಖ್ಯವಾಗಿ ಇದು ಕಡಿಮೆ ಆದಾಯದ ಗುಂಪುಗಳು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ, ಆಪತ್ತು-ಪೀಡಿತ ಪ್ರದೇಶಗಳಲ್ಲಿ ವಾಸಿಸುವವರು ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಶಿವಾನಂದ ಮೀಶಿ, ಸದಸ್ಯರಾದ ಹೆಚ್.ಎಂ. ಪಾಟೀಲ್, ಸಂತೋಷ್ ಕಮತಿ, ರೇಣುಕಾ ಕುರಿ, ಲಲಿತಾ ರೋಣದ, ಕೆಂಚಪ್ಪ ಮಾದರ್ ಸೇರಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬೋದ್ಲೆಖಾನ, ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕರಾದ ಗುರುಬಸಪ್ಪ ವೀರಾಪುರ್, ಸಂಜೀವಿನಿ ಸಿಬ್ಬಂದಿಗಳು ಹಾಗೂ ಕೂಲಿಕಾರರು ಭಾಗವಹಿಸಿದ್ದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯು (Pಒಎಎಃಙ) ಭಾರತ ಸರ್ಕಾರದ ಜೀವ ವಿಮಾ ಯೋಜನೆಯಾಗಿದ್ದು, ಕಡಿಮೆ ಆದಾಯ ವರ್ಗಗಳಿಗೆ ಕೈಗೆಟಕುವ ಪ್ರೀಮಿಯಂನಲ್ಲಿ ಜೀವ ವಿಮೆ ಒದಗಿಸುತ್ತದೆ. ಯಾವುದೇ ಕಾರಣದಿಂದ (ನೈಸರ್ಗಿಕ/ಅನೈಸರ್ಗಿಕ) ವಿಮಾದಾರ ಸಾವಿಗೀಡಾದರೆ, ನಾಮಿನಿಗೆ 2 ಲಕ್ಷ ರೂ ವಿಮಾ ಮೊತ್ತ ಸಿಗಲಿದೆ. ಇದಕ್ಕಾಗಿ ವಾರ್ಷಿಕವಾಗಿ 436 ರೂಗಳು ನೇರವಾಗಿ ನಿಮ್ಮ ಖಾತೆಯಿಂದ ಡೆಬಿಟ್ ಆಗುತ್ತದೆ. ಈ ಹಿನ್ನೆಲೆಯಲ್ಲಿ 18-50 ವರ್ಷದವರು, ಉಳಿತಾಯ ಖಾತೆ ಹೊಂದಿದವರು ಈ ವಿಮೆಯನ್ನು ಮಾಡಿಸಿಕೊಳ್ಳಬೇಕೆಂದು ಚಂದ್ರಶೇಖರ ಬಿ.ಕಂದಕೂರ ಮನವಿ ಮಾಡಿದರು.