Home Blog Page 10

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ! ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಬೆಂಗಳೂರು: ನಗರದಲ್ಲಿ ಆಡಳಿತಾತ್ಮಕ ವೈಫಲ್ಯದ ಗಂಭೀರ ಉದಾಹರಣೆ ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಕಿಡಿಕಾರಿದೆ. ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಅದರ ಕುರಿತು ಮಾ.25ರೊಳಗೆ ಹಿಂಬರಹ ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಡಿ. ಮೆಹಬೂಬ್ ಬಾಷಾ ಎಂಬವರು ಜೀವಂತವಾಗಿದ್ದರೂ, 2025ರ ಏಪ್ರಿಲ್ 23ರಂದು ಬಿಬಿಎಂಪಿ ಚಿಕ್ಕಪೇಟೆ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು ಅವರ ಹೆಸರಿನಲ್ಲಿ ತಾತ್ಕಾಲಿಕ ಮರಣ ಪ್ರಮಾಣ ಪತ್ರ ನೀಡಿರುವುದು ಪ್ರಕರಣದ ಮೂಲವಾಗಿದೆ. ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆಹೋದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಓ. ಅಶ್ವಿನಿ, “ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿರುವುದರಿಂದ, ಇದೀಗ ಅವರಿಗೆ ಪಡಿತರ ಸಿಗುತ್ತಿಲ್ಲ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, “ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಬುಧವಾರದೊಳಗೆ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದೆ.

ಇದೇ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಸಂಬಂಧಿತ ಅಧಿಕಾರಿಗಳು, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.

21ನೇ ಶತಮಾನದಲ್ಲೂ ಜಾತಿ ವೈಷಮ್ಯ: ನೀರಿನ ವಿಚಾರಕ್ಕೆ ಗದಗದಲ್ಲಿ ಗುಂಪು ಘರ್ಷಣೆ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ನೀರು ಕುಡಿದ ವಿಷಯಕ್ಕೆ ಎರಡು ಸಮುದಾಯಗಳ ನಡುವೆ ಉದ್ಭವಿಸಿದ ವಿವಾದ ಕಲ್ಲು ತೂರಾಟದ ಮಟ್ಟಕ್ಕೆ ಏರಿದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ಪ್ರಕಾರ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ಆತ ಎಸ್ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ವಿಷಯ ಊರಿನಲ್ಲೆಲ್ಲ ಹರಡಿ, ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.

ಈ ವಾಗ್ವಾದವು ನಂತರ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಟ ನಡೆಸಿ ಕಲ್ಲು ತೂರಾಟಕ್ಕೆ ಮುಂದಾದರು. ಘಟನೆಯ ಪರಿಣಾಮವಾಗಿ ಎರಡೂ ಸಮುದಾಯಗಳ ಸೇರಿ ಸುಮಾರು 15 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

https://www.facebook.com/reel/1249793023467525

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಸಮಾನತೆ ಮತ್ತು ಕಾನೂನುಗಳಿದ್ದರೂ, ಅಲ್ಪ ಕಾರಣಕ್ಕೂ ಜಾತಿ ಆಧಾರಿತ ಸಂಘರ್ಷಗಳು ನಡೆಯುತ್ತಿರುವುದು ಚಿಂತಾಜನಕವಾಗಿದೆ.

ಬೆಲೆ ಏರಿಕೆಯೂ ಅಡ್ಡಿಯಾಗಲಿಲ್ಲ: ಗದಗದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಏರಿಕೆ

0

ಗದಗ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಆದಾಯ ಹರಿದುಬಂದಿದ್ದು, ಮದ್ಯ ಮಾರಾಟದಿಂದ ಸುಮಾರು ₹400 ಕೋಟಿ ವಹಿವಾಟು ನಡೆದಿದೆ.  ಬರಪೀಡಿತ ಪ್ರದೇಶವಾಗಿದ್ದರೂ ಜಿಲ್ಲೆಯ ಮದ್ಯಪ್ರಿಯರು ಖರೀದಿಯಲ್ಲಿ ಹಿಂದೇಟು ಹಾಕದಿರುವುದು ಗಮನಾರ್ಹವಾಗಿದೆ.

ರಾಜ್ಯ ಸರ್ಕಾರ 2025ರ ಏಪ್ರಿಲ್‌ನಿಂದ ಮದ್ಯ ಹಾಗೂ ಬಿಯರ್ ದರಗಳನ್ನು ಏರಿಸಿದ್ದರೂ, ಇದರಿಂದ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಾಣಿಸಲಿಲ್ಲ. ಬಾಕ್ಸ್‌ಗಳ ಲೆಕ್ಕದಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡರೂ, ಬೆಲೆ ಏರಿಕೆಯ ಪರಿಣಾಮ ಒಟ್ಟು ಆದಾಯದಲ್ಲಿ ಏರಿಕೆ ಕಂಡುಬಂದಿದೆ.

2024-25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟವಾಗಿ ₹306.34 ಕೋಟಿ ಆದಾಯ ಬಂದಿತ್ತು. 2025-26ರಲ್ಲಿ ಇದು 8.35 ಲಕ್ಷ ಬಾಕ್ಸ್‌ಗೆ ಇಳಿದಿದ್ದರೂ, ₹340.54 ಕೋಟಿ ವ್ಯವಹಾರ ದಾಖಲಾಗಿದೆ. ಅಂದರೆ, ಬಾಕ್ಸ್‌ಗಳ ಪ್ರಮಾಣ ಕಡಿಮೆಯಾದರೂ ₹35 ಕೋಟಿ ಹೆಚ್ಚುವರಿ ಆದಾಯ ಲಭ್ಯವಾಗಿದೆ.

ಇನ್ನು ಬಿಯರ್ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. 2024-25ರಲ್ಲಿ 4.09 ಲಕ್ಷ ಬಾಕ್ಸ್ ಮಾರಾಟದಿಂದ ₹50.05 ಕೋಟಿ ಆದಾಯ ಬಂದಿದ್ದರೆ, 2025-26ರಲ್ಲಿ 3.38 ಲಕ್ಷ ಬಾಕ್ಸ್ ಮಾರಾಟದಿಂದ ₹47.05 ಕೋಟಿ ಆದಾಯ ಮಾತ್ರ ಬಂದಿದೆ. ಬಿಯರ್ ಬೆಲೆಯಲ್ಲಿ ಭಾರಿ ಏರಿಕೆಯೇ ಈ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಜಿಲ್ಲೆಯ ವಿವಿಧ ವಲಯಗಳಲ್ಲೂ ಮದ್ಯ ಮಾರಾಟದಲ್ಲಿ ಅಲ್ಪ ವ್ಯತ್ಯಾಸ ಕಂಡುಬಂದಿದೆ. ಗದಗ, ಮುಂಡರಗಿ, ನರಗುಂದ, ರೋಣ ಮತ್ತು ಶಿರಹಟ್ಟಿ ವಲಯಗಳಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದ ಪ್ರಮಾಣದಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡರೂ, ಒಟ್ಟು ಆದಾಯದಲ್ಲಿ ಏರಿಕೆ ದಾಖಲಾಗಿದೆ.

“ಮದ್ಯ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ, ಒಟ್ಟಾರೆ ಆರ್ಥಿಕ ವಹಿವಾಟು ಉತ್ತಮವಾಗಿದೆ. ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ” ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್ ತಿಳಿಸಿದ್ದಾರೆ.

ಬಿರುಗಾಳಿ ಮಳೆ ಅಬ್ಬರ: ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತ!

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆ ಭಾರೀ ಅನಾಹುತದ ಭೀತಿ ಮೂಡಿಸಿತು.

ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮರಗಳು ರಸ್ತೆಯ ಮೇಲೆ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದ ಗೌರಿಶಂಕರ ನಗರದಲ್ಲಿ ಮಳೆ ಅಬ್ಬರದಿಂದ ಮನೆಗಳ ಮುಂಭಾಗ ಹಾಗೂ ರಸ್ತೆ ಮೇಲೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದವು. ಅದೃಷ್ಟವಶಾತ್ ಮಳೆ ಬೀಳುವ ವೇಳೆ ಜನ ಸಂಚಾರ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ.

ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ದುರಸ್ತಿ ಕಾರ್ಯ ಕೈಗೊಂಡರು. ಇದೇ ವೇಳೆ ನಗರದ ಗಡಾದ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ.

ಮಳೆ ವೇಳೆ ಆಟೋವನ್ನು ಮರದ ಕೆಳಗೆ ನಿಲ್ಲಿಸಿದ್ದ ಮಾಲೀಕ ಜಬೀಯುಲ್ಲಾ, ತನ್ನ ವಾಹನ ನಾಶವಾಗಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬಿರುಗಾಳಿ ಮಳೆಯಿಂದ ಉಂಟಾದ ಹಾನಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

IPL ಕ್ರೇಜ್ ಹೆಚ್ಚಿಸಲು 11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ; ಯಾವಾಗ, ಎಲ್ಲಿ?

2026ರ ಐಪಿಎಲ್ ಟೂರ್ನಿ ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು, ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳಿಗೆ ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಿದೆ.

ದೇಶದ ವಿವಿಧ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಅಭಿಮಾನಿಗಳಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ. ಟಿಕೆಟ್ ಕೊರತೆ ಅಥವಾ ಹೆಚ್ಚಾದ ದರಗಳಿಂದ ಮೈದಾನಕ್ಕೆ ಹೋಗಲು ಸಾಧ್ಯವಾಗದ ಅಭಿಮಾನಿಗಳು ಫ್ಯಾನ್ ಪಾರ್ಕ್‌ಗಳಲ್ಲಿ ದೊಡ್ಡ ಪರದೆಗಳ ಮೂಲಕ ಪಂದ್ಯಗಳನ್ನು ವೀಕ್ಷಿಸಬಹುದು. ಈ ಬಾರಿ ಒಟ್ಟು 11 ರಾಜ್ಯಗಳ 15 ನಗರಗಳನ್ನು ಫ್ಯಾನ್ ಪಾರ್ಕ್‌ಗಳಿಗೆ ಆಯ್ಕೆ ಮಾಡಲಾಗಿದೆ.

ಮಾರ್ಚ್ 28 ಮತ್ತು 29ರಂದು ನಡೆಯುವ ಮೊದಲ ವಾರದಲ್ಲಿ ರೋಹ್ಟಕ್, ಭೋಪಾಲ್, ನಾಗ್ಪುರ, ತುಮಕೂರು ಮತ್ತು ಕೃಷ್ಣನಗರದಲ್ಲಿ ಫ್ಯಾನ್ ಪಾರ್ಕ್‌ಗಳು ತೆರೆಯಲಿವೆ. ಏಪ್ರಿಲ್ 4 ಮತ್ತು 5ರಂದು ಮಥುರಾ, ಜೋಧಪುರ, ನಿಜಾಮಾಬಾದ್, ಮೈಸೂರು ಹಾಗೂ ಭುವನೇಶ್ವರದಲ್ಲಿ ಎರಡನೇ ಹಂತ ನಡೆಯಲಿದೆ. ಏಪ್ರಿಲ್ 11 ಮತ್ತು 12ರಂದು ಮೀರತ್, ನಾಡಿಯಾಡ್, ರತ್ನಗಿರಿ, ಕೊಯಮತ್ತೂರು ಮತ್ತು ರೂರ್ಕೆಲಾದಲ್ಲಿ ಮೂರನೇ ಹಂತದ ಫ್ಯಾನ್ ಪಾರ್ಕ್‌ಗಳು ನಡೆಯಲಿವೆ.

ಫ್ಯಾನ್ ಪಾರ್ಕ್‌ಗಳು ಕೇವಲ ಪಂದ್ಯ ವೀಕ್ಷಣೆಗೆ ಸೀಮಿತವಾಗಿಲ್ಲ. ಇಲ್ಲಿ ಸಂಗೀತ ಕಾರ್ಯಕ್ರಮಗಳು, ಮನರಂಜನೆ, ವಿವಿಧ ಆಹಾರ ಮಳಿಗೆಗಳು, ಮಕ್ಕಳಿಗಾಗಿ ಆಟದ ಜಾಗ, ವರ್ಚುವಲ್ ಬ್ಯಾಟಿಂಗ್, ಬೌಲಿಂಗ್ ನೆಟ್‌ಗಳು ಹಾಗೂ ಫೇಸ್ ಪೇಂಟಿಂಗ್ ಸೇರಿದಂತೆ ಹಲವು ಆಕರ್ಷಣೆಗಳನ್ನು ಒದಗಿಸಲಾಗುತ್ತದೆ. ಇದರಿಂದ ಅಭಿಮಾನಿಗಳಿಗೆ ಮಿನಿ ಕಾರ್ನಿವಲ್ ಅನುಭವ ಸಿಗಲಿದೆ.

ಬಿಸಿಸಿಐ 2015ರಲ್ಲಿ ಫ್ಯಾನ್ ಪಾರ್ಕ್ ಪರಿಕಲ್ಪನೆಯನ್ನು ಆರಂಭಿಸಿದ್ದು, ಕ್ರೀಡಾಂಗಣಗಳಿಂದ ದೂರವಿರುವ ನಗರಗಳಲ್ಲೂ ಐಪಿಎಲ್ ಕ್ರೇಜ್ ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ. 2026ರಲ್ಲಿಯೂ ಇದೇ ಉತ್ಸಾಹವನ್ನು ಮುಂದುವರಿಸುತ್ತಾ, ಇನ್ನಷ್ಟು ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಅಭಿಮಾನಿಗಳನ್ನು ಸೆಳೆಯಲು ಸಜ್ಜಾಗಿದೆ.

 

ಚಿನ್ನದ ದರ ದಿಢೀರ್ ಕುಸಿದಿದ್ದು ಯಾಕೆ!? ಗೋಲ್ಡ್ ಇಳಿಕೆಗೆ ಇದು ಕಾರಣವೇ?

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ಜಾಗತಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.

ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಕರಗಿದೆಯೆಂದು ಅಂತರರಾಷ್ಟ್ರೀಯ ಹಣಕಾಸು ವಿಶ್ಲೇಷಣಾ ವರದಿಗಳು ತಿಳಿಸಿವೆ.

ಸಾಮಾನ್ಯವಾಗಿ ಷೇರು ಮಾರುಕಟ್ಟೆ ಕುಸಿದಾಗ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಆದರೆ ಈ ಬಾರಿ ವಿಭಿನ್ನ ಬೆಳವಣಿಗೆ ಕಂಡುಬಂದಿದ್ದು, ಷೇರು ಮಾರುಕಟ್ಟೆಯ ಜೊತೆಗೆ ಚಿನ್ನ ಮತ್ತು ಬೆಳ್ಳಿ ದರವೂ ಕುಸಿದಿರುವುದು ಗಮನಾರ್ಹವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನೀಡಿದ ಎಚ್ಚರಿಕೆ ಹಾಗೂ ಹಾರ್ಮುಜ್ ಜಲಸಂಧಿ ಕುರಿತ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದು ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿರುವುದರಿಂದ ಅಮೆರಿಕದ ಬಾಂಡ್‌ಗಳ ಮೇಲೆ ಹೂಡಿಕೆ ಹೆಚ್ಚಾಗಿದೆ. 10 ವರ್ಷದ ಬಾಂಡ್ ಇಳುವರಿ ಏರಿಕೆಯಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದವರು ಡಾಲರ್ ಆಧಾರಿತ ಹೂಡಿಕೆಗಳತ್ತ ತಿರುಗುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದ್ದು, ಹಲವಾರು ದೇಶಗಳಲ್ಲಿ ಇಂಧನ ದರ ಹೆಚ್ಚಾಗಿದೆ. ಇದರಿಂದ ಕೆಲವು ರಾಷ್ಟ್ರಗಳು ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ ಎಂಬ ವರದಿಗಳು ಬಂದಿವೆ. ಜೊತೆಗೆ ವಿಮಾನ ಸಂಚಾರ ವ್ಯತ್ಯಯಗೊಂಡಿರುವುದರಿಂದ ಚಿನ್ನದ ವ್ಯಾಪಾರಕ್ಕೂ ತೊಂದರೆ ಉಂಟಾಗಿದೆ.

ಭಾರತದಲ್ಲಿಯೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ದರಗಳು ಕುಸಿತ ಕಂಡಿವೆ. ಕಳೆದ ವಾರ 10 ಗ್ರಾಂ ಚಿನ್ನದ ಫ್ಯೂಚರ್ ದರ 1,44,492 ರೂ. ಇದ್ದರೆ, ಈಗ ಸುಮಾರು 10 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದ್ದು 1,29,595 ರೂ. ಮಟ್ಟಕ್ಕೆ ಬಂದಿದೆ.

ಈ ಬೆಳವಣಿಗೆ ಹೂಡಿಕೆದಾರರಲ್ಲಿ ಆತಂಕವನ್ನುಂಟುಮಾಡಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Expiry Date ಗಮನಿಸಿ: ಹಳೆಯ LPG ಸಿಲಿಂಡರ್ ಬಳಕೆ ಅಪಾಯಕಾರಿ, ಇಷ್ಟು ದಿನದೊಳಗೆ ಬಳಸಿ ಮುಗಿಸಬೇಕು!

0

ಮನೆ ಅಥವಾ ವಾಣಿಜ್ಯ ಬಳಕೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ.

ಸಿಲಿಂಡರ್‌ಗಳ ಮೇಲೆ ನೀಡಲಾಗಿರುವ ‘ಎಕ್ಸ್‌ಪೈರಿ ಡೇಟ್’ ಬಗ್ಗೆ ಅರಿವು ಇರದೇ ಇರುವುದರಿಂದ ಕೆಲವೊಮ್ಮೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲ್ಭಾಗದಲ್ಲಿರುವ ಕಬ್ಬಿಣದ ಪಟ್ಟಿಗಳಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳ ಸಂಯೋಜನೆ (ಉದಾ: A-26, B-27, C-28, D-29) ಕಾಣಿಸುತ್ತದೆ. ಇದು ಸಿಲಿಂಡರ್‌ನ ಸುರಕ್ಷತಾ ಪರೀಕ್ಷೆಯ ಅವಧಿಯನ್ನು ಸೂಚಿಸುತ್ತದೆ. ಅಕ್ಷರಗಳು ತಿಂಗಳುಗಳನ್ನು ಸೂಚಿಸುತ್ತವೆ – A (ಜನವರಿ-ಮಾರ್ಚ್), B (ಏಪ್ರಿಲ್-ಜೂನ್), C (ಜುಲೈ-ಸೆಪ್ಟೆಂಬರ್), D (ಅಕ್ಟೋಬರ್-ಡಿಸೆಂಬರ್). ಅಂಕಿಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ A-26 ಎಂದರೆ 2026ರ ಮಾರ್ಚ್ ಒಳಗೆ ಸಿಲಿಂಡರ್ ಪರೀಕ್ಷೆಗೆ ಒಳಪಡಿಸಬೇಕು ಎಂದರ್ಥ. ಈ ಅವಧಿ ಕಳೆದ ಬಳಿಕ ಸಿಲಿಂಡರ್ ಬಳಸುವುದು ಅಪಾಯಕಾರಿ.

ಸಿಲಿಂಡರ್ ಸಂಗ್ರಹಿಸುವಾಗ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಗಾಳಿಯಾಡುವ ಜಾಗದಲ್ಲಿ ಇಡುವುದು ಮುಖ್ಯವಾಗಿದ್ದು, ಮುಚ್ಚಿದ ಕಪಾಟು ಅಥವಾ ನೆಲಮಾಳಿಗೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಸಿಲಿಂಡರ್ ಅನ್ನು ಸದಾ ನೆಟ್ಟಗೆ ನಿಲ್ಲಿಸಬೇಕು; ಮಲಗಿಸಿ ಇಡುವುದು ಅಪಾಯಕಾರಿಯಾಗಿದೆ. ಜೊತೆಗೆ ಶಾಖದ ಮೂಲಗಳಿಂದ ಕನಿಷ್ಠ ಒಂದು ಮೀಟರ್ ದೂರದಲ್ಲಿರಿಸಬೇಕು. ಸ್ಟಾಕ್‌ನಲ್ಲಿ ಇಡುವ ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಸರಿಯಾಗಿ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಗ್ಯಾಸ್ ಸೋರಿಕೆ ಕಂಡುಬಂದಲ್ಲಿ ತಕ್ಷಣವೇ ರೆಗ್ಯುಲೇಟರ್ ಆಫ್ ಮಾಡಬೇಕು. ಮನೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ಯಾವುದೇ ಎಲೆಕ್ಟ್ರಿಕ್ ಸ್ವಿಚ್ ಅಥವಾ ಬೆಂಕಿ ಬಳಸದಿರುವುದು ಅತ್ಯಂತ ಮುಖ್ಯ. ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಹಾಕಿ, ಅದನ್ನು ತೆರೆದ ಜಾಗಕ್ಕೆ ಸ್ಥಳಾಂತರಿಸಬೇಕು.

ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಅನಾಹುತಗಳನ್ನು ತಪ್ಪಿಸಿ, ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಬಳಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

 

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಪ್ರಕರಣ: ತೀವ್ರ ಗಾಯಗೊಂಡಿದ್ದ ಇಂಜಿನಿಯರ್ ಸಾವು

ಚಿಕ್ಕಬಳ್ಳಾಪುರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸಮೀಪ ಎರಡು ದಿನಗಳ ಹಿಂದೆ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ನಿತಿನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ನಿತಿನ್ ಚಿಕ್ಕಬಳ್ಳಾಪುರ ನಗರದ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಸ್ನೇಹಿತನೊಂದಿಗೆ ಊಟಕ್ಕೆ ತೆರಳಿದ್ದ ನಿತಿನ್, ಬಳಿಕ ವಾಪಸ್ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಮುದ್ದೇನಹಳ್ಳಿ ಬಳಿಯ ವಿಟಿಯು ಕಾಲೇಜು ಸಮೀಪ ಅಪಘಾತ ಸಂಭವಿಸಿದೆ. ನಿತಿನ್ ಹಾಗೂ ಅವನ ಸ್ನೇಹಿತ ಬಜಾಜ್ ಚೇತಕ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ಬಂದ ಟಿವಿಎಸ್ ಬೈಕ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಯಿಂದ ನಿತಿನ್ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ವಿಚಾರ: ರೈತರಿಗೆ ಗುಡ್ ನ್ಯೂಸ್, ದುರಸ್ತಿ ಕಾರ್ಯ ಆರಂಭ!

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ಪರಿಣಾಮ ಬೆಳೆ ಹಾಗೂ ಜಮೀನು ಹಾನಿಗೊಳಗಾದ ರೈತರಿಗೆ ಸರ್ಕಾರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದೆ.

ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕಾಲುವೆ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ನೀರಿನ ಪೂರೈಕೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಬಸ್ಸಾಪುರ ಗ್ರಾಮದ ಸುತ್ತಮುತ್ತ ರೈತರು ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದ್ದು, ಜಮೀನಿನಲ್ಲಿ ಮರಳು ಮತ್ತು ಕಲ್ಲು ತುಂಬಿಕೊಂಡು ಗದ್ದೆಗಳು ಹಾಳಾಗಿವೆ. ಇದರಿಂದ ಆಕ್ರೋಶಗೊಂಡ ರೈತರು, ಕಾಲುವೆ ದುರಸ್ತಿ ಕಾಮಗಾರಿಗೆ ಬಂದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಪರಿಹಾರ ನೀಡದೇ ಕಾಮಗಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಇದಾದ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎರಡು ದಿನಗಳ ಕಾಲ ಸಭೆ ನಡೆಸಿ ರೈತರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಇಂದಿನಿಂದ ದುರಸ್ತಿ ಕಾರ್ಯಗಳು ಆರಂಭಗೊಂಡಿವೆ. ಸದ್ಯ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್‌ಗಳನ್ನು ಬಳಸಿ ಕಾಲುವೆ ದುರಸ್ತಿ ಮಾಡಲಾಗುತ್ತಿದೆ.

ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆದರು. ಕಳೆದ ನಾಲ್ಕು ತಿಂಗಳಿಂದ ಕಾಲುವೆಯಲ್ಲಿ ಸಮಸ್ಯೆ ಇದ್ದರೂ ಸರಿಯಾದ ನಿರ್ವಹಣೆ ಆಗದ ಕಾರಣ ಈ ಘಟನೆ ಸಂಭವಿಸಿದೆ ಎಂದು ರೈತರು ಸಚಿವರ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈಗಾಗಲೇ 92 ರೈತರು ಬೆಳೆ ಕಳೆದುಕೊಂಡಿರುವುದು ಗುರುತಿಸಲಾಗಿದ್ದು, ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ನಿಗದಿ ಮಾಡಿ ವಿತರಿಸಲಾಗುವುದು ಎಂದು ಹೇಳಿದರು. ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇನ್ನು ಎರಡರಿಂದ ಮೂರು ದಿನಗಳಲ್ಲಿ ತಾತ್ಕಾಲಿಕವಾಗಿ ಕಾಲುವೆ ದುರಸ್ತಿ ಪೂರ್ಣಗೊಳಿಸಿ, ಸುಮಾರು 2 ಸಾವಿರ ಕ್ಯೂಸೆಕ್ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಸಲಾಗುವುದು. ಬಳಿಕ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ, ರೈತರಿಗೆ ಪರಿಹಾರ ಶೀಘ್ರ ನೀಡಬೇಕು ಹಾಗೂ ಕಾಲುವೆ ಶಾಶ್ವತ ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಮುಂದುವರಿದಿದೆ.

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ನೆರಡು ತಿಂಗಳಲ್ಲಿ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತ!

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದ್ದು, ನಗರದ ಪಿಂಕ್ ಲೈನ್ ಮೆಟ್ರೋ ಸಂಚಾರ ಮೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಪಿಂಕ್ ಲೈನ್ ಮೆಟ್ರೋವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ಆರಂಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಆರ್‌ಡಿಎಸ್‌ಓ ವತಿಯಿಂದ ವಿವಿಧ ತಾಂತ್ರಿಕ ತಪಾಸಣೆಗಳು ನಡೆಯಲಿವೆ. ಈ ವೇಳೆ ರೈಲಿನ ವೇಗ ಮತ್ತು ಲೋಡ್ ಟೆಸ್ಟ್, ಟ್ರ್ಯಾಕ್ ಪರಿಶೀಲನೆ, ಸ್ಟೇಷನ್‌ಗಳ ಪರಿಶೀಲನೆ ಹಾಗೂ ಪವರ್ ಸಿಸ್ಟಮ್‌ಗಳ ಚೆಕ್ಕಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಈ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡ ಬಳಿಕ, ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆ ಪಡೆಯಲು ಬಿಎಂಆರ್‌ಸಿಎಲ್ ವರದಿಯನ್ನು ಸಲ್ಲಿಸಲಿದೆ. ಅಂತಿಮ ಹಂತದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷತಾ ಅನುಮೋದನೆ ದೊರೆತ ಬಳಿಕ ಪಿಂಕ್ ಲೈನ್ ಮೆಟ್ರೋವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಮೊದಲ ಹಂತವಾಗಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗವನ್ನು ತಾವರೆಕೆರೆ ಮತ್ತು ಕಾಳೇನ ಅಗ್ರಹಾರ ನಡುವೆ ಆರಂಭಿಸಲಾಗುತ್ತದೆ. ಉಳಿದ 13 ಕಿಲೋಮೀಟರ್ ಅಂಡರ್‌ಗ್ರೌಂಡ್ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಈ ಮೂಲಕ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆ ಮತ್ತಷ್ಟು ವೇಗ ಪಡೆಯುತ್ತಿದ್ದು, ಸಾರ್ವಜನಿಕರಿಗೆ ಸಂಚಾರ ಸುಲಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.

error: Content is protected !!