Home Blog Page 11

ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು: ಡಿ.ಕೆ. ಸುರೇಶ್ ತಿರುಗೇಟು

0

ಬೆಂಗಳೂರು:“ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ಸ್ಮರಣೆ ಮಾಡಿಕೊಂಡು, ಅದನ್ನು ತೀರಿಸುವ ನಾಯಿಗಳು” ಎಂದು ಬಮೂಲ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಬಾಲ ನಾಯಿಯನ್ನೇ ಅಲ್ಲಡಿಸಬಾರದು ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಅವರು ಯಾರನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ. ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ. ನಿಯತ್ತಿನ ನಾಯಿಗಳು” ಎಂದರು.

ಹಾಗಾದರೆ ಹೊರಗಡೆಯಿಂದ ಬಂದವರು ಬೀದಿ ನಾಯಿಗಳೇ ಎಂದು ಕೇಳಿದಾಗ, “ನಾನು ಹಾಗೆಂದು ಹೇಳಿಲ್ಲ. ಕಟ್ಟಾ ಕಾಂಗ್ರೆಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು. ಈ ನಾಯಿಗಳು ಬೀದಿ ನಾಯಿಗಳೇ ಆಗಿರಲಿ, ಸಾಕಿದ ನಾಯಿಗಳೇ ಆಗಿರಲಿ, ಯಜಮಾನನ ಋಣ ತೀರಿಸುತ್ತವೆಯೇ ಹೊರತು, ಬೇರೆ ರೀತಿ ಮಾಡುವುದಿಲ್ಲ.

ಅದು ನಿಯತ್ತಿನ ನಾಯಿಗಳ ಸ್ವಭಾವ. ನಿಯತ್ತಿಗಾಗಿಯೇ ಜನ ನಾಯಿಗಳನ್ನು ಸಾಕುತ್ತಾರೆ. ಬೇರೆಯವರು ನಮ್ಮ ಋಣ ತೀರಿಸುತ್ತಾರೋ ಇಲ್ಲವೋ, ನಾಯಿ ನಮ್ಮ ಋಣ ತೀರಿಸುತ್ತದೆ ಎಂಬ ಕಾರಣಕ್ಕೆ ನಾಯಿ ಸಾಕುತ್ತಾರೆ. ಬೀದಿ ನಾಯಿಗೆ ಊಟ ಹಾಕುತ್ತಾರೆ. ನಾಯಿ ನಿಯತ್ತಿನ ಬಗ್ಗೆ ಅನೇಕ ಗಾದೆಗಳು, ನಾಣ್ನುಡಿಗಳಿವೆ” ಎಂದು ಸ್ಪಷ್ಟನೆ ನೀಡಿದರು.

ಶಾಸಕರ ವಿದೇಶ ಪ್ರವಾಸ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ

ಶಾಸಕರ ಪ್ರವಾಸದ ಬಗ್ಗೆ ಕೇಳಿದಾಗ, “ಅವರು ಶಾಸಕರಾಗಿರುವುದರಿಂದ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ನೀವು ಶಾಸಕರಾಗಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ. ನೀವು ಶಾಸಕರಾಗಲು ಪ್ರಯತ್ನಿಸಿ. ಕೆಲವರು ವಿಶ್ವಾಸಕ್ಕೆ ಹೋಗುತ್ತಾರೆ, ಮತ್ತೆ ಕೆಲವರು ದೇಶ ನೋಡಲು ಹೋಗುತ್ತಾರೆ,

ಇನ್ನು ಕೆಲವರು ಅಧ್ಯಯನಕ್ಕಾಗಿ ಹೋಗುತ್ತಾರೆ. ಇಲ್ಲಿ ವ್ಯಾಖ್ಯಾನ ಮಾಡುವಂತದ್ದು ಇಲ್ಲ. ಆಗಾಗ್ಗೆ ಶಾಸಕರುಗಳು ವಿದೇಶಕ್ಕೆ ಹೋಗಿ ಬರುತ್ತಾರೆ. ಇದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಕೆಲಸಗಳ ಒತ್ತಡ, ಗೊಂದಲಗಳ ಮಧ್ಯೆ ಕುಟುಂಬ ಹಾಗೂ ಸ್ನೇಹಿತರ ವಿದೇಶ ಪ್ರವಾಸ ಎಲ್ಲರಿಗೂ ನೆಮ್ಮದಿ ನೀಡುತ್ತದೆ” ಎಂದು ತಿಳಿಸಿದರು.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಕೇಳಿದಾಗ, “ಪಂದ್ಯ ಚೆನ್ನಾಗಿತ್ತು, ಭಾರತ ಗೆದ್ದಿದೆ, ಇನ್ನು ಅನೇಕ ಪಂದ್ಯ ಗೆಲ್ಲಬೇಕಿದೆ” ಎಂದು ತಿಳಿಸಿದರು. ಆರ್ ಎಸ್ಎಸ್ ನೋಂದಣಿಯಾಗಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನನಗೆ ಆ ವಿಚಾರದ ಬಗ್ಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು.

ಬಾಲಿವುಡ್ ಲೆಜೆಂಡ್ ಸಲೀಂ ಖಾನ್ ಆಸ್ಪತ್ರೆ ದಾಖಲು: ನಟ ಸಲ್ಮಾನ್ ಖಾನ್ ಭೇಟಿ

ಬಾಲಿವುಡ್‌ನ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆ ದಾಖಲಿಸಲಾಗಿದೆ. ದಾಖಲು ಕಾರಣವನ್ನು ಆಸ್ಪತ್ರೆ ಬಹಿರಂಗಪಡಿಸಿಲ್ಲ, ಆದರೆ ಕುಟುಂಬದ ಸದಸ್ಯರು ಅವರ ಆರೋಗ್ಯದ ಪರಿಶೀಲನೆಗೆ ಹತ್ತಿರದಿಂದ ಪಾಲ್ಗೊಂಡಿದ್ದಾರೆ.

ಸಾಲ್ಮಾನ್ ಖಾನ್, ಅಲ್ವಿರಾ ಹಾಗೂ ಅತುಲ್ ಅಗ್ನಿಹೋತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಭಾವುಕರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವಿಶಿಷ್ಟ ಚಿಕಿತ್ಸೆ ವ್ಯವಸ್ಥೆ ಜಾರಿಯಲ್ಲಿದೆ.

70 ರ ದಶಕದಿಂದಲೂ ಶೋಲೆ, ದೀವಾರ್, ಜಂಜೀರ್ ಮುಂತಾದ ಚಿತ್ರಗಳಿಗೆ ಕಥೆ ಬರೆದ ಸಲೀಂ ಖಾನ್, ಭಾರತೀಯ ಚಿತ್ರರಂಗದ ಚಿರಸ್ಮರಣೀಯ ಕಥೆಗಾರರಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅವರು ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಅಭಿಮಾನಿಗಳು ಮತ್ತು ಚಿತ್ರರಂಗದ ಹಿರಿಯರು ಈಗ ಸಲೀಂ ಖಾನ್ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸರ ಕಾರ್ಯಾಚರಣೆ: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಫುಟ್ಬಾಲ್ ಆಟಗಾರ ಅರೆಸ್ಟ್!

0

ಬೆಂಗಳೂರು: ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ ವಿದೇಶಿ ಫುಟ್ಬಾಲ್ ಆಟಗಾರನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಸೌತ್ ಆಫ್ರಿಕಾ ಮೂಲದ ಕೊರ್ಲಿ ಡೇನಿಯಲ್ ಬಂಧಿತನಾಗಿದ್ದು, ಸ್ಪೋರ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಆಗಾಗ ಕೇರಳದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದನು ಎನ್ನಲಾಗಿದೆ. ಆದರೆ ಜೀವನೋಪಾಯಕ್ಕಾಗಿ ಡ್ರಗ್ ಪೆಡ್ಲಿಂಗ್‌ಗೆ ತೊಡಗಿದ್ದನೆಂಬ ಆರೋಪ ಕೇಳಿಬಂದಿದೆ.

ಬಂಧಿತನಿಂದ ಸುಮಾರು 4 ಲಕ್ಷ 48 ಸಾವಿರ ರೂಪಾಯಿ ಮೌಲ್ಯದ 56 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶ- ಓರ್ವ ಬಂಧನ

0

ಬೆಂಗಳೂರು: ನಗರದಲ್ಲಿ ಡ್ರಗ್ಸ್ ದಂಧೆಕೋರರ ಹಾವಳಿ ಮುಂದುವರೆದಿದೆ. ಇವರನ್ನು ಮಟ್ಟ ಹಾಕಲು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ನಗರದಲ್ಲಿಯೇ ಡ್ರಗ್ಸ್ ಮಾರಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು ಈತನಿಂದ ಒಟ್ಟಾರೆ ಒಂದೂವರೆ ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

LSD ಮಾತ್ರೆ, MDMA, ಹೈಡ್ರೋ ಗಾಂಜಾ, ಕೊಕೇನ್, LSD ಸ್ಟ್ರಿಪ್‌ಗಳನ್ನು ಪೊಲೀಸಕ್ಕೆ ವಶಪಡಿಸಿಕೊಂಡಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ಎರಡನೇ ಬಾರಿಗೆ ಬಂಧಿತನಾಗಿದ್ದು, ಹಿಂದೆ ಗಡಿಪಾರು ಮಾಡಲಾಗಿದ್ದನು. ಇದೀಗ, ಅವನ ವಿರುದ್ಧ ಹೊಸ ದಾಖಲೆ ಮತ್ತು ತನಿಖೆ ಮುಂದುವರಿದಿದೆ.

ಇದೊಂದಿಗೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಲ್ಲಿ ನೈಜಿರಿಯಾ ಮೂಲದ ವೆರೋನಿಕಾ ಎಮ್ಯಾನುಯೆಲ್ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದು, 2.5 ಕೆಜಿ ಮೆಥಾಂಪೆಟಮೈನ್ ಗಾಂಜಾವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಈ ಪ್ರಕರಣಗಳು ಬೆಂಗಳೂರಿನಲ್ಲಿ ಡ್ರಗ್ಸ್ ವ್ಯಾಪಾರವು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಹತ್ತಿರದ ಜಾಲದಿಂದ ನಡೆಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ.

ಸಿಎ ಸೈಟ್‌ಗಳೇ ಕಾಂಗ್ರೆಸ್ ಕಚೇರಿಗಳಿಗಾ? 40 ಕೋಟಿ ಭೂಮಿ 2 ಕೋಟಿಗೆ — ಸರ್ಕಾರದ ವಿರುದ್ಧ ಗಂಭೀರ ಆರೋಪ

0

ಬೆಂಗಳೂರು: ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್ ಹಂಚಿಕೆ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳೊಂದಿಗೆ ಗಂಭೀರ ಆರೋಪ ಹೊರಿಸಿದ್ದಾರೆ.

ರಾಜ್ಯದ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷದ ಕಚೇರಿಗಳಿಗೆ ಭೂಮಿ ನೀಡಲಾಗುತ್ತಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆಗಳಲ್ಲಿ ಸಿಎ ಸೈಟ್ ಹಂಚಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಲಕ್ಷಾಂತರ ಮೌಲ್ಯದ ಸೈಟ್ 22 ಲಕ್ಷಕ್ಕೆ, ಬಾದಾಮಿಯಲ್ಲಿ 1.22 ಲಕ್ಷಕ್ಕೆ ನೀಡಲಾಗಿದೆ. ಎಸ್‌ಆರ್ ಮೌಲ್ಯದ ಕೇವಲ 5 ಶೇಕಡಾ ಹಣಕ್ಕೆ ಭೂಮಿ ನೀಡಿರುವುದು ಸರ್ಕಾರದ ನೇರ ಭೂಕಬಳಿಕೆ ಎಂದು ಆರೋಪಿಸಿದರು. ಒಟ್ಟು 40 ಕೋಟಿ ಮೌಲ್ಯದ ಭೂಮಿಯನ್ನು 2 ಕೋಟಿ ರೂಪಾಯಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ನಗರ ಯೋಜನಾ ನಿಯಮ ಪ್ರಕಾರ ಸಿಎ ಸೈಟ್‌ಗಳು ಶಾಲೆ, ಆಸ್ಪತ್ರೆ ಮತ್ತು ಸಾರ್ವಜನಿಕ ಸೇವೆಗಳಿಗಷ್ಟೇ ಬಳಕೆಯಾಗಬೇಕು. ಆದರೆ ರಾಜಕೀಯ ಬಳಕೆ ನಿಯಮ ಉಲ್ಲಂಘನೆ. ದೇವನಹಳ್ಳಿಯಲ್ಲಿ 17 ಕೋಟಿ ಮೌಲ್ಯದ ನಿವೇಶನ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೀಡುವ ಪ್ರಸ್ತಾವವೂ ಪ್ರಶ್ನೆಗೆ ಒಳಪಟ್ಟಿದೆ.

ಗ್ರಾಮ ಪಂಚಾಯತ್ ಭೂಮಿಯನ್ನು ಲೀಸ್ ನೀಡಲು ಅವಕಾಶವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿರಸ್ಕರಿಸಿರುವುದನ್ನೂ ಅವರು ಉಲ್ಲೇಖಿಸಿದರು. ಉಡುಪಿಯ ಅಂಜಾರು, ಕಾರ್ಕಳದ ಕುಕ್ಕುಂದೂರು ಮತ್ತು ಕುಂದಾಪುರದಲ್ಲಿ ಸರ್ಕಾರವೇ ಭೂಮಿ ನೀಡಿರುವುದನ್ನು ವಿಧಾನ ಪರಿಷತ್ ಮಾಹಿತಿ ಬಹಿರಂಗಪಡಿಸಿದೆ ಎಂದರು.

ಈ ಎಲ್ಲವನ್ನು ಉಲ್ಲೇಖಿಸಿದ ಅವರು ತಕ್ಷಣ ಭೂಮಿ ವಾಪಸ್ ಪಡೆಯಬೇಕು; ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಫೆ.28 ರಿಂದ ದ್ವಿತೀಯ ಪಿಯುಸಿ, ಮಾ.18 ರಿಂದ SSLC ಪರೀಕ್ಷೆ: ಸಚಿವ ಮಧು ಬಂಗಾರಪ್ಪ

0

ಬೆಂಗಳೂರು: ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ ಎಂದು ಮಾಹಿತಿ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆ – ವೇಳಾಪಟ್ಟಿ

  • ಫೆಬ್ರವರಿ 28 – ಕನ್ನಡ, ಅರೇಬಿಕ್
  • ಮಾರ್ಚ್ 2 – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
  • ಮಾರ್ಚ್ 3 – ಇಂಗ್ಲಿಷ್
  • ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾರ್ಚ್ 5 – ಇತಿಹಾಸ
  • ಮಾರ್ಚ್ 6 – ಭೌತಶಾಸ್ತ್ರ
  • ಮಾರ್ಚ್ 7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
  • ಮಾರ್ಚ್ 10 – ಅರ್ಥಶಾಸ್ತ್ರ
  • ಮಾರ್ಚ್ 11 – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
  • ಮಾರ್ಚ್ 12 – ಹಿಂದಿ
  • ಮಾರ್ಚ್ 13 – ರಾಜ್ಯಶಾಸ್ತ್ರ
  • ಮಾರ್ಚ್ 14 – ಲೆಕ್ಕಶಾಸ್ತ್ರ, ಗಣಿತ
  • ಮಾರ್ಚ್ 16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
  • ಮಾರ್ಚ್ 17 – ಹಿಂದುಸ್ತಾನಿ ಸಂಗೀತ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ – ವೇಳಾಪಟ್ಟಿ (ಪರೀಕ್ಷೆ 1)

  • ಮಾರ್ಚ್ 18 – ಪ್ರಥಮ ಭಾಷೆ
  • ಮಾರ್ಚ್ 23 – ವಿಜ್ಞಾನ
  • ಮಾರ್ಚ್ 25 – ದ್ವಿತೀಯ ಭಾಷೆ
  • ಮಾರ್ಚ್ 28 – ಗಣಿತ
  • ಮಾರ್ಚ್ 30 – ತೃತೀಯ ಭಾಷೆ
  • ಏಪ್ರಿಲ್ 2 – ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ – ವೇಳಾಪಟ್ಟಿ (ಪರೀಕ್ಷೆ 2)

  • ಮೇ 18 – ಪ್ರಥಮ ಭಾಷೆ
  • ಮೇ 19 – ವಿಜ್ಞಾನ
  • ಮೇ 20 – ದ್ವಿತೀಯ ಭಾಷೆ
  • ಮೇ 21 – ಗಣಿತ
  • ಮೇ 22 – ತೃತೀಯ ಭಾಷೆ
  • ಮೇ 23 – ಸಮಾಜ ವಿಜ್ಞಾನ

ವಿದ್ಯಾರ್ಥಿಗಳು ವೇಳಾಪಟ್ಟಿಯಂತೆ ಸಿದ್ಧತೆ ನಡೆಸುವಂತೆ ಸಚಿವರು ಕರೆ ನೀಡಿದ್ದಾರೆ.

ಸ್ಕೂಟಿ–ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸಾವು! ಓರ್ವನ ಸ್ಥಿತಿ ಗಂಭೀರ

0

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದೊಡ್ಡರಿ ಕಾವಲು ಗೇಟ್ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ರಮೇಶ್ (23) ಮತ್ತು ಪುರುಷೋತ್ತಮ್ (26) ಎಂದು ಗುರುತಿಸಲಾಗಿದೆ.

ರಮೇಶ್ ಹಾಗೂ ಕಿರಣ್ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಪುರುಷೋತ್ತಮ್ ಅವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಯಿಂದ ರಮೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಪುರುಷೋತ್ತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸ್ಕೂಟಿಯಲ್ಲಿ ಇದ್ದ ಕಿರಣ್ ಗಂಭೀರ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಮೇಶ್ ಹೆಲ್ಮೆಟ್ ಧರಿಸಿಕೊಂಡಿದ್ದರೂ, ಅಪಘಾತದ ರಭಸಕ್ಕೆ ಬೈಕ್ ಹ್ಯಾಂಡಲ್ ಎದೆಗೆ ಒತ್ತಿಕೊಂಡ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಕಣ್ಣೀರಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಸಾವೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

. ಮಗನ ಸಾವಿನ ಶೋಕ ತಾಳಲಾರದೆ ದಂಪತಿ ನೇಣಿಗೆ: 4 ಪುಟದ ಡೆತ್‌ನೋಟ್ ಬರೆದಿಟ್ಟು ದಾರುಣ ಅಂತ್ಯ

0

ರಾಯ್ಪುರ: ಛತ್ತೀಸ್‌ಗಢದಲ್ಲಿ ಮನಕಲುಕುವ ಘಟನೆ ನಡೆದಿದೆ. ಪುತ್ರನ ಅಪಘಾತ ಮರಣದ ನೋವಿನಿಂದ ಬಳಲುತ್ತಿದ್ದ ದಂಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಛತ್ತೀಸ್‌ಗಢ ರಾಜ್ಯದ ರಾಯ್ಪುರ ಪ್ರದೇಶದಲ್ಲಿ ಕೃಷ್ಣ ಪಟೇಲ್ (48) ಮತ್ತು ಅವರ ಪತ್ನಿ ರಮಾ ಬಾಯಿ (47) ತಮ್ಮ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ 4 ಪುಟಗಳ ಡೆತ್‌ನೋಟ್ ಹಾಗೂ ವೀಡಿಯೊ ಸಂದೇಶ ಪತ್ತೆಯಾಗಿದೆ.

ದಂಪತಿಯ ಏಕೈಕ ಪುತ್ರ ಆದಿತ್ಯ ಪಟೇಲ್ (21) 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಕೃಷ್ಣ ಮತ್ತು ಗೃಹಿಣಿ ರಮಾ ಬಾಯಿಗೆ ಪುತ್ರನೇ ಜೀವನವಾಗಿದ್ದರಿಂದ ಅವನ ಸಾವಿನ ಬಳಿಕ ಮನನೊಂದು ಬದುಕುತ್ತಿದ್ದರು.

ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋಗಿದ್ದ. ಪುತ್ರ ಮೊದಲು ಹೋಗಲು ಹಿಂಜರಿದಿದ್ದ. ಆದರೆ, ಆತನ ತಂದೆ, ‘ಇದು ದೇವರ ಕೆಲಸ.. ಹೋಗಿ ಬಾ’ ಎಂದು ಒತ್ತಾಯಿಸಿದ್ದರು. ಈ ವಿಚಾರವನ್ನು ನೆನೆದು, ನಾನು ತಪ್ಪು ಮಾಡಿದೆ ಅಂತ ತಂದೆ ಕಣ್ಣೀರಿಟ್ಟಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಖಾಕಿ ಕುರ್ಚಿಯಲ್ಲಿ ಪುಟ್ಟ ಹೀರೋ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಬಾಲಕನ ಕನಸು ನೆರವೇರಿಸಿದ ಎಸ್‌ಪಿ

0

ದಾವಣಗೆರೆ: ಜಿಲ್ಲೆಯಲ್ಲಿ ಮನಮುಟ್ಟುವ ಘಟನೆ ನಡೆದಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ 3.5 ವರ್ಷದ ಬಾಲಕ ಹಿತಾರ್ಥ್ ಕನಸನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾಕಾರಗೊಳಿಸಲಾಯಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು–ಅನುಷಾ ದಂಪತಿಯ ಪುತ್ರ ಹಿತಾರ್ಥ್‌ಗೆ 1.5 ವರ್ಷದಾಗಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಮಣಿಪಾಲ್ ಆಸ್ಪತ್ರೆ ನಲ್ಲಿ 8 ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಈಗಾಗಲೇ 80% ಚೇತರಿಕೆ ಕಂಡಿದ್ದರೂ ಕುಟುಂಬದ ಆತಂಕ ಕಡಿಮೆಯಾಗಿಲ್ಲ.

ಮಗ ಪೊಲೀಸ್ ಅಧಿಕಾರಿಯಾಗಬೇಕು ಎಂಬ ತಂದೆಯ ಕನಸಿಗೆ ಸ್ಪಂದಿಸಿದ ಎಸ್‌ಪಿ ಶೇಖರ್ ಹೆಚ್ ಟಿ, ಖಾಕಿ ಉಡುಪಿನಲ್ಲಿ ಬಂದ ಮಗುವನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಹೂಗುಚ್ಛ ನೀಡಿ ಸ್ವಾಗತಿಸಿ ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿದರು.

ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ – ಎಷ್ಟಿದೆ ಇಂದಿನ ದರ..?

0

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಫೆಬ್ರವರಿ 17, 2026 ಮಂಗಳವಾರದಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ದರ ₹153 ಇಳಿಕೆಯಾಗಿದ್ದು ₹15,491ಕ್ಕೆ ತಲುಪಿದೆ. 10 ಗ್ರಾಂ ದರದಲ್ಲಿ ₹1,530 ಇಳಿಕೆಯಾಗಿದ್ದು ₹1,54,910 ಆಗಿದೆ.

22 ಕ್ಯಾರೆಟ್ ಚಿನ್ನದ 1 ಗ್ರಾಂ ದರ ₹140 ಇಳಿಕೆಯಾಗಿದ್ದು ₹14,200ಕ್ಕೆ ಲಭ್ಯವಾಗಿದೆ. 10 ಗ್ರಾಂ ದರದಲ್ಲಿ ₹1,400 ಇಳಿಕೆಯಾಗಿದ್ದು ₹1,42,000ಕ್ಕೆ ತಲುಪಿದೆ.

ಬೆಳ್ಳಿ ದರದಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ ₹8 ಇಳಿಕೆಯಾಗಿದ್ದು, ಕೆಜಿಗೆ ₹8,000 ಕಡಿಮೆಯಾಗಿ ₹2,60,000ಕ್ಕೆ ದಾಖಲಾಗಿದೆ.

ಚಿನ್ನದ ಬೆಲೆ ಫೆಬ್ರವರಿ 7ರಿಂದ ಏರಿಕೆ ಹಾದಿ ಹಿಡಿದಿತ್ತು. ಫೆಬ್ರವರಿ 1ರಂದು ₹16,058 ಇದ್ದ ದರ ಫೆ.9ರಂದು ₹15,884ಕ್ಕೆ ಇಳಿಕೆಯಾಗಿತ್ತು. ಈ ತಿಂಗಳ ಕನಿಷ್ಠ ದರ ಫೆ.2ರಂದು ₹15,317 ದಾಖಲಾಗಿದ್ದರೆ, ಗರಿಷ್ಠ ದರ ₹16,058 ಆಗಿತ್ತು. ಇತ್ತೀಚೆಗೆ ₹15,371ಕ್ಕೆ ಇಳಿದಿದ್ದ ದರ ಇದೀಗ ₹15,491ಕ್ಕೆ ಏರಿಕೆಯಾಗಿದೆ.

ಲಾಭಾಂಶ ಬುಕ್ಕಿಂಗ್ ಮಾಡುವ ಉದ್ದೇಶದಿಂದ ಹೂಡಿಕೆದಾರರು ಚಿನ್ನ ಮಾರಾಟದಲ್ಲಿ ತೊಡಗಿರುವುದರಿಂದ ದರದಲ್ಲಿ ಇಳಿಕೆ ಕಂಡುಬರುತ್ತಿದೆ. ಜೊತೆಗೆ ಜಾಗತಿಕ ರಾಜಕೀಯ ಪರಿಸ್ಥಿತಿಗಳು ಸ್ಥಿರವಾಗಿರುವುದೂ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

error: Content is protected !!