Home Blog Page 11

ರೈತರ ತಾಳ್ಮೆ ಪರೀಕ್ಷಿಸಿದರೆ ಉಗ್ರ ಹೋರಾಟ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಬೇಕು. ರೈತರ ತಾಳ್ಮೆ ಪರೀಕ್ಷಿಸಿದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಎಚ್ಚರಿಸಿದರು.

ಸರ್ಕಾರ ಬೆಂಬಲ ಬೆಲೆಯ ಯೋಜನೆಯಡಿ ಗೋವಿನಜೋಳ ಖರೀದಿಸಬೇಕು ಎಂದು 6 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಗುರುವಾರ ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದರು. ಈ ವೇಳೆ ರೈತರ ಬೃಹತ್ ಪ್ರತಿಭಟನಾ ರ‍್ಯಾಲಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಒಂದು ತಿಂಗಳಿಂದ ರೈತರು ಗೋವಿನಜೋಳ ಒಕ್ಕಲಿ ಮಾಡಿ ಸಂಗ್ರಹಿಸಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1600-1700 ರೂನಂತೆ ಮಾರಾಟವಾಗುತ್ತಿದೆ. 2400 ರೂ ಬೆಂಬಲ ಬೆಲೆ ಘೋಷಣೆಗೆ ಸೀಮಿತವಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಅತ್ತಿಮತ್ತೂರಿನ ನಿಜಗುಣಶಿವಯೋಗಿಗಳು, ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು, ಜಮಖಂಡಿ ಶ್ರೀಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರ ಕರ್ನಾಟಕ ಮಹಾಸಭಾ ರಾಜ್ಯಧ್ಯಕ್ಷ, ಕನ್ನಡಪರ ಸಂಘಟನೆಯ ಶರಣು ಗೋಡಿ, ಹೊನ್ನಪ್ಪ ವಡ್ಡರ ಮಾತನಾಡಿ, ರೈತರೆಲ್ಲ ಬೆಳೆ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ಪ್ರಾರಂಭವಾದರೆ ಅದು ಸ್ಮಶಾನ ಕೇಂದ್ರ ತೆರೆದಂತಾಗುತ್ತದೆ. ಸಂಕಷ್ಟದಲ್ಲಿರುವ ರೈತರಿಗೆ ಈಗಲಾದರೂ ಈ ಭಾಗದ ಸಂಸದರು, ಸಚಿವರು, ಶಾಸಕರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತು ಅವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು. ರೈತರ ಹೋರಾಟಕ್ಕೆ ಬೆದರಿಕೆಗಳು ಬರುತ್ತಿವೆ. ಈ ಹೋರಾಟ ಸ್ವಂತ, ಸ್ವಾರ್ಥದ ಹೋರಾಟವಲ್ಲ. ರೈತರ ಆಕ್ರೋಶದ ಕಟ್ಟೆಯೊಡೆದು ಉಂಟಾಗುವ ಅನಾಹುತಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ ಎಂದು ಎಚ್ಚರಿಸಿದರು.

ಈ ವೇಳೆ ರೈತ ಮುಖಂಡರಾದ ಮಾಣಿಕಮ್ಮ ಚಿಲ್ಲೂರ, ಮಹೇಶ ಹೊಗೆಸೊಪ್ಪಿನ, ಪರಮೇಶ್ವರ ನಾಯ್ಕರ, ನಾಗರಾಜ ಚಿಂಚಲಿ, ವಿಜಯ ಕುಮಾರ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಪರಮೇಶ್ವರ ನಾಯಕರ ಮಾತನಾಡಿದರು.

ರೈತ ಮುಖಂಡರಾದ ಎಂ.ಎಸ್. ದೊಡ್ಡಗೌಡರ, ಶಂಕ್ರಣ್ಣ ಕಾಳೆ, ನಿಂಬಣ್ಣ ಮಡಿವಾಳರ, ಈರಣ್ಣ ಪೂಜಾರ, ಟಾಕಪ್ಪ ಸಾತಪೂತೆ, ಬಸವರಾಜ ಸಾತಪೂತೆ, ಬಸವಣ್ಣೆಪ್ಪ ನಂದೆಣ್ಣವರ, ಎಂ.ಎ**.** ಗದಗ, ದಾದಾಪೀರ ಮುಚ್ಚಾಲೆ, ಸುಭಾಷ್ ಬಟಗುರ್ಕಿ, ಸುಭಾನ ಹೊಂಬಳ, ಪ್ರವೀಣ ಬಾಳಿಕಾಯಿ, ಶಂಕರ ಬ್ಯಾಡಗಿ, ಚನ್ನಪ್ಪ ಷಣ್ಮುಖಿ, ಪ್ರಕಾಶ ಕೊಂಚಿಗೇರಿಮಠ, ಭಾಗ್ಯಶ್ರೀ ಬಾಬಣ್ಣ, ಲೋಕೇಶ ಸುತಾತ, ಮುತ್ತಣ್ಣ ಗಡೆಪ್ಪನವರ, ಚಂದ್ರಗೌಡ ಕರಿಗೌಡ್ರ, ವಸಂತ ಕರಿಗೌಡ್ರ, ಭರಮಣ್ಣ ರೊಟ್ಟಿಗವಾಡ, ಸುರೇಶ ಹಟ್ಟಿ, ನಾಗೇಶ ಅಮರಾಪೂರ, ಈರಣ್ಣ ಪವಾಡದ, ಸೋಮಣ್ಣ ಡಾಣಗಲ್, ಬಸಣ್ಣ ಹಂಜಿ, ಪರಮೇಶಗೌಡ ಪಾಟೀಲ, ವಿಜಯ ಹತ್ತಿಕಾಳ, ಬಸವೇಶ ಮಹಾಂತಶೆಟ್ಟರ, ಗಿರೀಶ ಅಗಡಿ, ಬಸವರಾಜ ಹಿರೇಮನಿ ಸೇರಿದಂತೆ ಅನೇಕರಿದ್ದರು.

ಲಕ್ಷ್ಮೇಶ್ವರ ಬಂದ್ ಕರೆಯ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಬಿಜಾಪೂರದ ರಾಮನಗೌಡ್ರ ಹಟ್ಟಿ, ಡಿವೈಎಸ್‌ಪಿಗಳಾದ ಮುರ್ತುಜಾ ಖಾದ್ರಿ, ಪ್ರಭುಗೌಡ ಡಿ.ಕೆ, ಸಿಪಿಐ ಬಿ.ವಿ. ನೇಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ, ಕ್ರೆಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ, ಸೇರಿದಂತೆ 5 ಸಿಪಿಐ, 8 ಪಿಎಸ್‌ಐ, 14 ಎಎಸ್‌ಐ, 3 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ಸೇರಿ ಒಟ್ಟು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.

 

ಜಲ ಸಂರಕ್ಷಣೆಯಲ್ಲಿ ಗದಗ ರಾಜ್ಯಕ್ಕೆ ಪ್ರಥಮ

0

ವಿಜಯಸಾಕ್ಷಿ ಸುದ್ದಿ, ಗದಗ: ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ‘ಜಲಸಂಚಾಯಿ ಜನಭಾಗಿದಾರಿ 1.0’ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯು ಐತಿಹಾಸಿಕ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದೆ. ಜಲ ಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆಯು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ದೇಶದ 780 ಜಿಲ್ಲೆಗಳಲ್ಲಿ (ಝೋನ್ 3, ಕ್ಯಾಟಗರಿ 3ರಲ್ಲಿ) ನಾಲ್ಕನೇ ಸ್ಥಾನ ಪಡೆಯುವ ಮೂಲಕ 25 ಲಕ್ಷ ರೂಪಾಯಿಗಳ ನಗದು ಬಹುಮಾನಕ್ಕೆ ಭಾಜನವಾಗಿದೆ.

`ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ನೀರಿನ ಗುಣಮಟ್ಟವನ್ನು ಸುಧಾರಿಸುವುದು, ನೀರಿನ ಕೊರತೆಯ ಸವಾಲಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಸಮರ್ಥ ಪರಿಹಾರವನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು.

ಈ ಹಿನ್ನೆಲೆಯಲ್ಲಿ 2024 ಏಪ್ರಿಲ್ 1ರಿಂದ 2025 ಮಾರ್ಚ್ 31ರವರೆಗಿನ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟಿಕಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸೇರಿದಂತೆ ವಿವಿಧ ಯೋಜನೆಗಳಡಿ ಬೃಹತ್ ಜಲ ಕ್ರಾಂತಿಗೆ ನಾಂದಿ ಹಾಡಿದವು. ಈ ಅವಧಿಯಲ್ಲಿ ಒಟ್ಟು 11,971 ಜಲ ಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜಲಸಂಚಾಯಿ ಪೋರ್ಟಲ್‌ನಲ್ಲಿ ದಾಖಲಿಸಲಾಯಿತು.

ಮುಖ್ಯವಾಗಿ 11,329 ವೈಯಕ್ತಿಕ ಮತ್ತು ಸಮುದಾಯ ಬಂಡು ನಿರ್ಮಾಣ ಮಾಡಲಾಯಿತು. 465 ಮಳೆ ನೀರು ಕೊಯ್ಲು ಕಾಮಗಾರಿಗಳು, 75 ಬೋರವೆಲ್ ರಿಚಾರ್ಜ್, 10 ಚೆಕ್ ಡ್ಯಾಂ ನಿರ್ಮಾಣದಿಂದ ಗದಗ ಜಿಲ್ಲೆಯ ಜಲ ಸಂರಕ್ಷಣೆಯ ಚಿತ್ರಣವೇ ಬದಲಾಗಿದೆ. ಗದಗ ಜಿಲ್ಲಾ ಪಂಚಾಯಿತಿಯ ಈ ಶ್ರಮಕ್ಕೆ ಕೇಂದ್ರ ತಂಡದಿಂದ ಮನ್ನಣೆ ದೊರೆತಿದೆ. ಕೇಂದ್ರ ನೋಡಲ್ ಅಧಿಕಾರಿಗಳು 2025 ಜೂನ್ 16ರಿಂದ 21ರವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿ, ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಶಸ್ತಿಗೆ ಕಾರಣವಾಗಿದೆ.

“ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಕರ್ನಾಟಕದಲ್ಲೇ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆ ಕುರಿತು ಅಧಿಕಾರಿಗಳು ಶ್ರಮವಹಿಸಿ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿರುವುದು ಪ್ರಶಂಸನೀಯ. ಬರುವ ಅನುದಾನವನ್ನು ಅಭಿಯಾನದ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಶ್ರಮಿಸಲಾಗುವುದು”

  • ಶ್ರೀಧರ ಸಿ.ಎನ್.
    ಜಿಲ್ಲಾಧಿಕಾರಿಗಳು, ಗದಗ.

“ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಲವು ಪರಿಸರ ಸ್ನೇಹಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಕೇಂದ್ರ ಅಧ್ಯಯನ ತಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಥಮ ಸ್ಥಾನ ದೊರೆತಿರುವುದು ನಮಗೆ ಮತ್ತಷ್ಟು ಕ್ರಿಯಾತ್ಮಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಪ್ರೋತ್ಸಾಹಕವಾಗಿದೆ”

  • ಸಿ.ಆರ್. ಮುಂಡರಗಿ.
    ಉಪಕಾರ್ಯದರ್ಶಿ, ಜಿ.ಪಂ-ಗದಗ.

“ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಿಸಿರುವುದರಿಂದಲೇ ಈ ಪ್ರಶಸ್ತಿ ಬಂದಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ತಯಾರಿಸಿ, ಅನುಮೋದನೆ ಪಡೆದು ಹೆಚ್ಚಿನ ಕ್ರಿಯಾತ್ಮಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮವಹಿಸಲಾಗುವುದು”

  • ಕಿರಣಕುಮಾರ್ ಎಸ್.ಹೆಚ್.
    ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ,
    ಮನರೇಗಾ ವಿಭಾಗ, ಜಿ.ಪಂ ಗದಗ.

 

ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ತೀವ್ರ ಅಸ್ವಸ್ಥ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ತಾಲೂಕಿನ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ತೀವ್ರ ಅಸ್ವಸ್ಥಗೊಂಡು ಗದಗ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.

ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭವಾಗಬೇಕೆಂಬ ಬೇಡಿಕೆಯೊಂದಿಗೆ ಲಕ್ಷ್ಮೇಶ್ವರಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಕಳೆದ 4 ದಿನಗಳಿಂದ ಹನಿ ನೀರು, ಅನ್ನ, ಔಷಧವನ್ನೂ ಸೇವಿಸದೇ ಸಲ್ಲೇಖನ ವ್ರತದೊಂದಿಗೆ ರೈತರ ಹೋರಾಟಕ್ಕೆ ಶ್ರೀಗಳು ಬಲ ತುಂಬಿದ್ದರು.

ಶ್ರೀಗಳ ಕಠಿಣ ಹೋರಾಟಕ್ಕೆ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಮಾಜಿ ಶಾಸಕರು ಸೇರಿ ಅನೇಕ ಮುಖಂಡರು ಕಠಿಣ ಉಪವಾಸ ವ್ರತ ಕೈಬಿಡುವಂತೆ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ್ದ ಶ್ರೀಗಳು ಹೋರಾಟದ ದಿಕ್ಕನ್ನೇ ಬದಲಿಸಿದ್ದರು.

ದಿನೇ ದಿನೇ ಆರೋಗ್ಯದಲ್ಲಿ ಏರುಪೇರಾಗಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ಅಲ್ಲದೆ ಬೆನ್ನು, ಕಾಲು ನೋವುಗಳು ಬಾಧಿಸುತ್ತಿದ್ದರೂ ರೈತರ ಸಲುವಾಗಿ ಪ್ರಾಣ ನೀಡುತ್ತೇನೆ ಹೊರತು ನ್ಯಾಯ ಸಿಗುವವರೆಗೂ ಜಾಗೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಆರೋಗ್ಯ ಇಲಾಖೆ ವತಿಯಿಂದ ಕಳೆದ 2-3 ದಿನಗಳಿಂದ ಗಂಟೆಗೊಂದು ಬಾರಿ ಸಕ್ಕರೆ ಪ್ರಮಾಣ, ರಕ್ತದೊತ್ತಡ ಪರೀಕ್ಷೆ ಮಾಡಲು ಸಮುದಾಯ ಆರೋಗ್ಯ ಕೇಂದ್ರದಿಂದ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಗುರುವಾರ ಲಕ್ಷ್ಮೇಶ್ವರ ಬಂದ್ ಕರೆ ಹಿನ್ನೆಲೆಯಲ್ಲಿ ಆರೋಗ್ಯದೊಂದಿಗೆ ಒತ್ತಡದ ಕಾರಣದಿಂದ ಕುಗ್ಗಿಸಿದ್ದರು. ಪ್ರತಿಭಟನಾ ಮೆರವಣಿಗೆ ವೇದಿಕೆ ಏರುತ್ತಿದ್ದಂತೆ ಏಕಾಏಕಿ ಅಸ್ವಸ್ಥಗೊಂಡರು. ಕೂಡಲೇ ತಾಲೂಕು ಆಸ್ಪತ್ರೆಗೆ ವೈದ್ಯಾಧಿಕಾರಿಗಳಿಂದ ಶ್ರೀಗಳ ತಪಾಸಣೆ ಮಾಡಲಾಗಿ, ಬಿಪಿ, ಶುಗರ್ ಮಟ್ಟ ಕಡಿಮೆಯಾಗಿ, ಪಲ್ಸ್ ರೇಟ್ ಜಾಸ್ತಿಯಾಗಿ ಅರ್ಧ ಪ್ರಜ್ಞಾವಸ್ಥೆಗೆ ತಲುಪಿದ್ದರಿಂದ ಕೂಡಲೇ ಹೆಚ್ಚಿನ ചികിത്സೆಗೆ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಶ್ರೀಗಳು ರೈತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡು ನಿತ್ರಾಣಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಯಾವುದೇ ತೊಂದರೆ ಇಲ್ಲ. ಭಕ್ತರು ಆತಂಕಕ್ಕೆ ಒಳಗಾಗುವದು ಬೇಡ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಮತ್ತು ವಿಶ್ರಾಂತಿಯ ಅನಿವಾರ್ಯತೆಯಿದೆ. ಅವರು ಕೂಡಲೇ ಆರೋಗ್ಯ ಸುಧಾರಿಸಿ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುವದಾಗಿ ಮಂಜುನಾಥ ಮಾಗಡಿ ತಿಳಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಅವರು ಶ್ರೀಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಜಿಲ್ಲಾಸ್ಪತ್ರೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅವರಿಗೆ ಸೂಚಿಸಿದರು.

 

ಭೀಕರ ಅಪಘಾತ: ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸಾವು

0

ಚಿಕ್ಕೋಡಿ:- ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಜರುಗಿದೆ.

ಅಥಣಿ ತಾಲೂಕಿನ ತೆಲಸಂಗ ಗ್ರಾಮ‌ದ ನಿವಾಸಿ ರಾಮಪ್ಪ ನಿಂಗಪ್ಪ ಸಾವಳಗಿ ಮೃತ ಬೈಕ್ ಸವಾರ. ಯಲ್ಲಮ್ಮ ದೇವಿಯ ದರ್ಶನ ಮುಗಿಸಿ ವಾಪಸ್ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಐಗಳಿ ಪೊಲೀಸ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಅಪಸ್ಮಾರ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮುಂಡರಗಿಯ ತಾಲೂಕಾ ಆಸ್ಪತ್ರೆ ಸಭಾಭವನದಲ್ಲಿ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಜರುಗಿತು.

ಮುಂಡರಗಿ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಲಕ್ಷ್ಮಣ ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೂರ್ಛೆ ರೋಗ/ಅಪಸ್ಮಾರ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಕುಟುಂಬ–ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಅಪಸ್ಮಾರದ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಮುಂಡರಗಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಅಪಸ್ಮಾರ ರೋಗ ಲಕ್ಷಣಗಳು, ಅಪಸ್ಮಾರದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಕಬಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಪ್ರವೀಣ ರೋಣದ ಅವರು ಕಬಿ ಕಾರ್ಯಕ್ರಮದ ಉದ್ದೇಶಗಳು ಮತ್ತು ಗುರಿಗಳ ಬಗ್ಗೆ ಜಾಗೃತಿ ಮೂಡಿಸಿದರು.

ಕಬಿ ಕಾರ್ಯಕ್ರಮದ ಡಾ. ಅಶ್ವಿನಿ ಎಂ. ಕುರಿಯವರು ಮಾತನಾಡಿ, ಈ ಖಾಯಿಲೆಗೆ ಅನುಗುಣವಾಗಿ ದಿನನಿತ್ಯದ ಚಟುವಟಿಕೆಗಳನ್ನು ಮತ್ತು ವ್ಯಾಯಾಮಗಳನ್ನು ಮಾಡುವುದರ ಜೊತೆಗೆ ಚಿಕಿತ್ಸೆ ಮತ್ತು ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ರವಿ ನಂದ್ಯಾಳ ಸ್ವಾಗತಿಸಿದರು. ಮಂಜುಳಾ ಸಜ್ಜನರ ಕಾರ್ಯಕ್ರಮ ನಿರೂಪಿಸಿದರು. ರೇವಣಸಿದ್ಧಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ. ನಿತಿನ್ ಸ್ವರೂಪ, ಡಾ. ರವಿ ಕಡಗಾವಿ, ಎನ್‌ಸಿಡಿ ಕಾರ್ಯಕ್ರಮ ಸಂಯೋಜಕರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಬೀದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತಾ ಲೈಸನ್ಸ್ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ಬೀದಿ ವ್ಯಾಪಾರಿಗಳಿಗೆ ನಗರಸಭೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಗದಗ ನಗರ ತಿಲಕ್ ಪಾರ್ಕ್ ಹತ್ತಿರ ಐ.ಎಸ್.ಇ ಹಾಗೂ ಆಹಾರ ಸುರಕ್ಷತಾ ಲೈಸನ್ಸ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಕ್ತುಂಸಾಬ ನಾಲಬಂದ ವಹಿಸಿಕೊಂಡಿದ್ದರು. ಕೃಷ್ಣಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಆಹಾರ ಸುರಕ್ಷತಾ ನೋಡ್‌ಲ್ ಅಧಿಕಾರಿ ವಿವೇಕ ತ್ರಿಮಲ್ಲೇ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಬಸರಾಜ ಮಲ್ಲೂರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ವಿ. ಸಂತೋಷ, ಎಸ್.ಬಿ.ಐ ಬ್ಯಾಂಕಿನ ಶಿವಾನಂದ ಪೊಶೆಟ್ಟಿ, ನಗರಸಭೆ ಪೌರಾಯುಕ್ತರು, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲಗೌಡ ಸಂಕನಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಖ್ತರ್‌ಸಾಬ ಬಬರ್ಚಿ ಪಾಲ್ಗೊಂಡಿದ್ದರು.

ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ರಮೇಶ ಮುಳಗುಂದ, ಅನ್ವರ್ ಶಿರಹಟ್ಟಿ, ಮಂಜುನಾಥ, ಮಾರುತಿ ಸೋಳಂಕಿ, ತಬರೇಜ ಪಠಾಣ್, ರಾಜಾಖಾನ ಪಠಾಣ್, ಸಿ.ಎಲ್.ಎಫ್ ಅಧ್ಯಕ್ಷರಾದ ಅಶ್ವಿನಿ ಬಳ್ಳಾರಿ, ರಶಿದಾ ನದಾಫ್, ಫಾತೀಮಾ ಧಾರವಾಡ, ರಜೀಯಾ ಹತ್ತಿವಾಲೆ, ಬಾಷಾಸಾಬ ಮಲ್ಲಸಮುದ್ರ, ನಗರ ಸಮಿತಿ ಅಧ್ಯಕ್ಷ ಜಹಾಂಗೀರ ಮುಳಗುಂದ, ಫಯಾಜ್ ನಾರಾಯಣಕೇರಿ, ರಾಮವ್ವ ಲಮಾಣಿ, ಕುತೇಜಾ ದೊಡ್ಡಮನಿ ಉಪಸ್ಥಿತರಿದ್ದರು. ನಿಂಗನಗೌಡ ಮಾಲಿಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ನಾವೀನ್ಯತೆಯೇ ಸ್ಪರ್ಧಾತ್ಮಕತೆಯ ಮೂಲಾಧಾರ: ಎಚ್.ಜಿ. ಹಿರೇಗೌಡ್ರ 

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ, ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರ ಹಾಗೂ ನರಗುಂದ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ `ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು’ ಕಾರ್ಯಕ್ರಮವನ್ನು ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾ.ಪಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಉದ್ಘಾಟಿಸಿ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ, ನಾವೀನ್ಯತೆಯೇ ಸ್ಪರ್ಧಾತ್ಮಕತೆಯ ಮೂಲಾಧಾರವಾಗಿದೆ. ಪ್ರಪಂಚದಾದ್ಯಂತ ಉದ್ಯಮಗಳು, ಹೊಸ ತಂತ್ರಜ್ಞಾನಗಳು ಮತ್ತು ವ್ಯವಹಾರ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಂತೆ, ಸಹಕಾರಿ ಸಂಸ್ಥೆಗಳು ಸಾಂಪ್ರದಾಯಿಕವಾಗಿ ಸಮುದಾಯ ಕೇಂದ್ರಿತ ಮತ್ತು ಸದಸ್ಯ ಚಾಲಿತ ವಿಧಾನಕ್ಕೆ ಹೆಸರುವಾಸಿಯಾಗಿವೆ. 21ನೇ ಶತಮಾನದ ಸಹಕಾರಿ ಸಂಸ್ಥೆಗಳು ಇನ್ನು ಮುಂದೆ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಇವುಗಳು ಜಾಗತಿಕವಾಗಿ ಸ್ಪರ್ಧಿಸುತ್ತಿವೆ ಮತ್ತು ಸಹಕರಿಸುತ್ತಿವೆ ಎಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ನರಗುಂದ ತಾಲೂಕಿನ ವಿಸ್ತರಣಾಧಿಕಾರಿ ದಿಲೀಪ ಐ. ನದಾಫ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ಬಸವರಾಜ ನಿಡಗುಂದಿ ನರಗುಂದ ತಾಲೂಕಿನ ಸಮಗ್ರ ಸಹಕಾರ ಸಂಘಗಳ ಮಾಹಿತಿಯನ್ನು ವಿವರಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿಯ ಅಧ್ಯಕ್ಷ ಶಂಕರಗೌಡ ಬ.ಗಡಿಯಪ್ಪಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘಗಳು ತಮ್ಮ ಸದಸ್ಯರ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಮೀಸಲಾಗಿರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಈ ಗುರಿಗಳಿಗೆ ಪ್ರಮುಖ ಕೊಡುಗೆದಾರರಾಗಿ ಸಹಕಾರ ಸಂಘಗಳು ಗುರುತಿಸಲ್ಪಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರ ಅಧ್ಯಕ್ಷ ಬಸವರಾಜ ಗು.ಬೆಣ್ಣಿ, ಉಪಾಧ್ಯಕ್ಷ ಲಕ್ಷ್ಮಣ ರಾ.ಮುದಕಣ್ಣವರ, ಈರಪ್ಪ ನಿಂಗಪ್ಪ ಲೋಕುರ, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಈಶ್ವರಪ್ಪ ಮನಿಕಟ್ಟಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕ ಪರಿಶೋಧಕ ಎ.ಎಂ. ಖಟವಟೆ, ಕೆ.ಸಿ.ಸಿ. ಬ್ಯಾಂಕ್ ನರಗುಂದ ನಿರೀಕ್ಷಕ ಮಹಾಂತೇಶ ಎಸ್.ತಳಗಿನಮನಿ, ಪಿ.ಎಂ. ಗೆನ್ನೂರ, ಧಾರವಾಡ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರು ಹಾಗೂ ಜಿಲ್ಲಾ ಮುಖ್ಯಸ್ಥರಾದ ಡಾ. ಪ್ರಸನ್ ಎಸ್.ಪಟ್ಟೇದ, ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ಸೆಟ್ಟೆಪ್ಪ ಮುಳ್ಳೂರು ಉಪಸ್ಥಿತರಿದ್ದರು.

ಡಾ. ಎಂ.ಬಿ. ಮಡಿವಾಳರ ಉಪನ್ಯಾಸ ನೀಡಿದರು. ಹುಣಸಿಕಟ್ಟಿ ಗ್ರಾ.ಪಂ ಕಾರ್ಯದರ್ಶಿ ಕೆ.ಎನ್. ಹದಗಲ್ ಪ್ರಾರ್ಥಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘ ಹುಣಸಿಕಟ್ಟಿಯ ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್. ಹುಚ್ಚನಗೌಡ್ರ ಸ್ವಾಗತಿಸಿದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ನಿರೂಪಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಗಾಪೂರದ ಮುಖ್ಯ ಕಾರ್ಯನಿರ್ವಾಹಕ ಲಿಂಗರಡ್ಡಿ ಶಿ.ಹಳೇಮನಿ ವಂದಿಸಿದರು.

ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲ ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ, ಆರ್ಥಿಕ ಕಾರ್ಯಸಾಧ್ಯತೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುವ ವಿಶಿಷ್ಟ ವ್ಯಾಪಾರ ಘಟಕಗಳಾಗಿ ಸಹಕಾರಿಗಳನ್ನು ಬಹಳ ಹಿಂದಿನಿಂದಲೂ ಗುರುತಿಸಲಾಗಿದೆ. ಆದಾಗ್ಯೂ ಜಾಗತಿಕ ಸ್ಪರ್ಧಾತ್ಮಕತೆಯು ಸಾಮಾಜಿಕ ಬದ್ಧತೆಗಿಂತ ಹೆಚ್ಚಿನದನ್ನು ಬಯಸುತ್ತದೆ. ಇದಕ್ಕೆ ಹೊಂದಿಕೊಳ್ಳುವಿಕೆ, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಸ್ಪಂದಿಸುವಿಕೆ ಮತ್ತು ನಾವೀನ್ಯತೆಯ ಅಗತ್ಯವಿದೆ ಎಂದರು.

ರೈತರ ಹೋರಾಟಕ್ಕೆ ಬೆಂಬಲ

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಬೆಳೆದ ಮೆಕ್ಕೆಜೋಳದ ಬೆಳೆಯನ್ನು ಖರೀದಿಸಲು ಖರೀದಿ ಕೇಂದ್ರ ಆರಂಭ, ಬೆಂಬಲ ಬೆಲೆ ಹಾಗೂ ಬೆಳೆ ಪರಿಹಾರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಲಕ್ಷ್ಮೇಶ್ವರ ಬಂದ್‌ನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್‌ಶೆಟ್ಟಿ ಸಾರಥ್ಯದಲ್ಲಿ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯನವರ ಕಾರ್ಯಾಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹಾಲಪ್ಪ ವರವಿ, ಗದಗ ಜಿಲ್ಲಾಧ್ಯಕ್ಷ ಸಣ್ಣಯಲ್ಲಪ್ಪ ವಳಗೇರಿ, ಗೌರವಾಧ್ಯಕ್ಷ ಸದಾನಂದ ನಂದೆಣ್ಣವರ, ಕುಮಾರ್ ಬೆಟಗೇರಿ, ರಮೇಶ್ ಲಮಾಣಿ, ಸಂತೋಷ್ ರಾಠೋಡ, ಮಾಲತೇಶ ರಗಟಿ, ಕೊಟ್ರೇಶ್ ನಿರಲಿಗಿಮಠ, ಮನು ಕಲಾಲ, ಶ್ರೀನಿವಾಸ ಬಸವರೆಡ್ಡಿ, ನಾಗರಾಜ್, ಕೆಂಚಪ್ಪ, ನಿಂಗಪ್ಪ ರಗಟಿ, ಮಹಮ್ಮದಲಿ ಸನದಿ, ಗೋಪಾಲ ಲಮಾಣಿ, ನಾಗೇಶ್ ಲಮಾಣಿ, ಲಕ್ಷ್ಮಣ್ ಲಮಾಣಿ, ಶರಣಪ್ಪಗೌಡ ಪಾಟೀಲ್, ಬಸು ಅತ್ತಿಗೆರಿ, ಸಿದ್ದು ಹಡಗಲಿ, ಸಂತೋಷಗೌಡ ಪಾಟೀಲ, ಹಾಲಪ್ಪ, ಮುದುಕಪ್ಪ, ಈಶ್ವರ, ಮಂಜಣ್ಣ, ರಂಗಪ್ಪ, ಹನುಮಂತ, ಫಕ್ಕೀರೇಶ, ಮಹಾಂತೇಶ, ಶಂಕರಗೌಡ, ನಿಂಗಪ್ಪ, ದುದಪೀರಾ, ನಾಗೇಶ್, ಇಮಾಮಸಾಬ ಮುಂತಾದವರು ಉಪಸ್ಥಿತರಿದ್ದರು.

ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ವಾಸ್ತವಿಕತೆಯ ನೆಲಗಟ್ಟಿನಲ್ಲಿ ಹೋರಾಟ ಸಾಗಬೇಕು ಮತ್ತು ಅದು ದಾರಿ ತಪ್ಪದಿರಲಿ ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು.

ಈ ಕುರಿತು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಬಲ ಬೆಲೆ ಘೋಷಿಸಿದ್ದರಿಂದ ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈ ವೇಳೆಗಾಗಲೇ ಖರೀದಿ ಕೇಂದ್ರ ಶುರು ಮಾಡಬೇಕಿತ್ತು. ಆದರೆ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಯೋಜನೆ ನೆಪದಲ್ಲಿ ಖಜಾನೆ ಖಾಲಿ ಆಗಿದೆ. ಈಗ ಮೆಕ್ಕೆಜೋಳ ಖರೀದಿಸುವುದು ಸರ್ಕಾರಕ್ಕೆ ಆಗದ ಕೆಲಸ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ಖರೀದಿ ಕೇಂದ್ರ ಆರಂಭ ಆಗಬಹುದು. ಇಲ್ಲದಿದ್ದರೆ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನ ಇಲ್ಲ ಎಂದು ತಿಳಿಸಿದ ಅವರು, ಆಮರಣಾಂತ ಉಪವಾಸ ನಡೆಸುತ್ತಿರುವ ಕುಮಾರ ಮಹಾರಾಜರಿಗೆ ಹೆಚ್ಚು ಕಡಿಮೆ ಆದರೆ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.

ಪದೇಪದೇ ಊರನ್ನು ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ, ಕೂಲಿಕಾರರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗುತ್ತದೆ. ಕಾರಣ ಹೋರಾಟಗಾರರು ಬಂದ್‌ಗೆ ಕರೆ ನೀಡುವ ಮೊದಲು ಸಾಕಷ್ಟು ಬಾರಿ ವಿಚಾರ ಮಾಡಬೇಕು ಎಂದರಲ್ಲದೆ, ರೈತರ ನ್ಯಾಯಯುತ ಬೇಡಿಕೆಗೆ ಯಾವಾಗಲೂ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಎಸ್.ಪಿ. ಪಾಟೀಲ, ವಿ.ಜಿ. ಪಡಿಗೇರಿ, ಸೋಮಣ್ಣ ಉಪನಾಳ, ಬಸವೇಶ ಮಹಾಂತಶೆಟ್ಟರ, ಅಪ್ಪಣ್ಣ ಸಾಲಿ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ನಿಂಗಪ್ಪ ಬನ್ನಿ, ಶಾಂತಣ್ಣ ಬಳ್ಳಾರಿ, ನಿಂಗಪ್ಪ ಹುನಗುಂದ, ಹನಮಂತಪ್ಪ ತಳವಾರ, ಎನ್.ಎನ್. ನೆಗಳೂರ, ಬಸಣ್ಣ ಹಂಜಿ, ಮಹಾದೆವಪ್ಪ ಅಣ್ಣಿಗೇರಿ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಗಂಗಾಧರ ಮೆಣಸಿನಕಾಯಿ, ಎಂ.ಆರ್. ಪಾಟೀಲ ಮತ್ತಿತರರು ಇದ್ದರು.

 

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಅವಾಂತರ: ಬೈಕ್ ನಿಂದ ಸ್ಕಿಡ್ ಆಗಿ ಬಿದ್ದ ಮಹಿಳೆ ಮೇಲೆ ಹರಿದ ಟಿಪ್ಪರ್, ಸ್ಥಳದಲ್ಲೇ ಸಾವು

0

ಬೆಂಗಳೂರು:- ನಗರದಲ್ಲಿ ಹಾಳಾದ ರಸ್ತೆ ಗುಂಡಿ ಅವಾಂತರ ಮುಂದುವರಿದಿದೆ. ರಸ್ತೆಯ ಗುಂಡಿ ಯಿಂದ ಬೈಕ್ ಅಪಘಾತ ಸಂಭವಿಸಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

ಗೋಕಾಕ್ ಮೂಲದ ಶಾಂತಮ್ಮ(46) ಮೃತ ಮಹಿಳೆ. ಗೋಕಾಕ್ ಮೂಲದ 46 ವರ್ಷದ ಶಾಂತಮ್ಮ, ಮಗನ ಜೊತೆ ವಾಸವಾಗಿದ್ದವರು, ಸಂಜೆ 3.30 ಗಂಟೆಗೆ ಸ್ನೇಹಿತೆ ಜೊತೆ ಬೈಕ್‌ನಲ್ಲಿ ಸಾಗುತ್ತಿರುವಾಗ ಹುಳಿಮಾವು ಸರಸ್ವತಿಪುರಂ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದರು.

ರಸ್ತೆ ಹಾಳಾಗಿರುವುದರಿಂದ ಬೈಕ್ ನಿಯಂತ್ರಣ ತಪ್ಪಿದ್ದು, ಕೂಡಲೇ ರಸ್ತೆ ಮೇಲೆ ಬಿದ್ದ ಮಹಿಳೆ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!