Home Blog Page 127

25 ಲಕ್ಷ ರೂ. ಲಂಚ ಪ್ರಕರಣ: ಅಬಕಾರಿ ಡಿಸಿ ಸೇರಿ ಮೂವರಿಗೆ ಜಾಮೀನು

0

ಬೆಂಗಳೂರು: 25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯವು ಅಬಕಾರಿ ಇಲಾಖೆಯ ಡಿಸಿ ಜಗದೀಶ್, ತಮ್ಮಣ್ಣ ಹಾಗೂ ಕಾನ್ಸಟೇಬಲ್ ಲಕ್ಕಪ್ಪ ಅವರಿಗೆ ಜಾಮೀನು ನೀಡಿದೆ.

ನಿನ್ನೆ ನ್ಯಾಯಾಲಯ ಈ ಮೂವರು ಆರೋಪಿಗಳಿಗೆ ಜಾಮೀನು ನೀಡಿದ್ದು, ಪ್ರಮುಖ ಆರೋಪಿ ಆಗಿರುವ ಅಬಕಾರಿ ಡಿಸಿ ಜಗದೀಶ್ ಅವರಿಗೆ ಆರೋಗ್ಯ ಕಾರಣಗಳನ್ನು ಆಧಾರವಾಗಿಸಿಕೊಂಡು ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಇತ್ತೀಚೆಗೆ ಜಗದೀಶ್ ಅವರ ಕುಟುಂಬದ ಸದಸ್ಯರೊಬ್ಬರು ನಿಧನರಾಗಿರುವುದನ್ನೂ ನ್ಯಾಯಾಲಯ ಪರಿಗಣಿಸಿದೆ ಎನ್ನಲಾಗಿದೆ.

25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಈ ಮೂವರು ಆರೋಪಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಮುಂದಿನ ವಿಚಾರಣೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಬಿಜೆಪಿ ಗೆಲುವು ಕೇರಳದ ಬದಲಾವಣೆಗೆ ಸಂಕೇತ: ಪ್ರಧಾನಿ ನರೇಂದ್ರ ಮೋದಿ

0

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ರಾಜಕೀಯ ಬದಲಾವಣೆ ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿರುವನಂತಪುರಂ ನಗರಸಭೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ರಾಜ್ಯ ರಾಜಧಾನಿಗೆ ಭೇಟಿ ನೀಡಿದ ಅವರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಸುಮಾರು ನಾಲ್ಕು ದಶಕಗಳ ಹಿಂದೆ ಒಂದೇ ನಗರವನ್ನು ಗೆಲ್ಲುವುದರೊಂದಿಗೆ ಎಂದು ನೆನಪಿಸಿಕೊಂಡರು ಮತ್ತು ಕೇರಳದಲ್ಲೂ ಅದೇ ಆಗುತ್ತದೆ ಎಂದು ಹೇಳಿದರು. 1987 ರ ಮೊದಲು, ಗುಜರಾತ್‌ನಲ್ಲಿ ಬಿಜೆಪಿ ಒಂದು ಸಣ್ಣ ಪಕ್ಷವಾಗಿತ್ತು. 1987 ರಲ್ಲಿ, ಮೊದಲ ಬಾರಿಗೆ, ಬಿಜೆಪಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಹಿಡಿತ ಸಾಧಿಸಿತು, ಇತ್ತೀಚೆಗೆ ತಿರುವನಂತಪುರದಲ್ಲಿ ಪಕ್ಷದ ಗೆಲುವಿನಂತೆಯೇ.

ಅಂದಿನಿಂದ, ಗುಜರಾತ್‌ನ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ್ದಾರೆ ಮತ್ತು ನಾವು ದಶಕಗಳಿಂದ ಅದನ್ನು ಮುಂದುವರೆಸಿದ್ದೇವೆ. ನಮ್ಮ ಪ್ರಯಾಣ ಗುಜರಾತ್‌ನ ಒಂದು ನಗರದಲ್ಲಿ ಪ್ರಾರಂಭವಾಯಿತು, ಮತ್ತು ಅದೇ ರೀತಿ, ಕೇರಳದಲ್ಲಿ, ನಮ್ಮ ಆರಂಭವು ಒಂದೇ ನಗರದಿಂದ ಪ್ರಾರಂಭವಾಗಿದೆ. ತಿರುವನಂತಪುರಂ ನಗರಸಭೆಯಲ್ಲಿ ತಮ್ಮ ಪಕ್ಷದ ಗೆಲುವು ಕೇರಳವನ್ನು ಎಲ್‌ಡಿಎಫ್ ಮತ್ತು ಯುಡಿಎಫ್‌ನ ಭ್ರಷ್ಟ ಆಡಳಿತದಿಂದ ಮುಕ್ತಗೊಳಿಸುವ ದೃಢ ಸಂಕಲ್ಪದ ವಿಜಯವಾಗಿದೆ ಎಂದು ಅವರು ಹೇಳಿದರು.

ಸೋಶಿಯಲ್ ಮೀಡಿಯಾ ತೇಜೋವಧೆಗೆ ಬಲಿ: ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣದಲ್ಲಿ ವಿಡಿಯೋ ವೈರಲ್ ಮಾಡಿದ ಇಬ್ಬರ ಬಂಧನ

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇರೆಗೆ ಸುಭಾಷ್ ಮತ್ತು ಹರಿಶ್ಚಂದ್ರ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ರಾಜೀವ್ ಪಿಕಳೆ, ಸೋಶಿಯಲ್ ಮೀಡಿಯಾದ ತೇಜೋವಧೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೈರಲ್ ಆಗಿದ್ದ ವಿಡಿಯೋದಲ್ಲಿ, ಪಿಕಳೆ ರೋಗಿಗೆ ಅವಧಿ ಮೀರಿದ ಔಷಧ ನೀಡಿದ ವಿಚಾರ ಉಲ್ಲೇಖವಾಗಿತ್ತು.

ಈ ವಿಡಿಯೋ ವೈರಲ್ ಆದ ಬಳಿಕ ಪಿಕಳೆ ತೀವ್ರವಾಗಿ ನೊಂದಿದ್ದು, ಸಾರ್ವಜನಿಕವಾಗಿ ಕ್ಷಮೆಯನ್ನೂ ಕೇಳಿದ್ದರು. ಆದರೆ ಜಾಲತಾಣಗಳಲ್ಲಿ ನಿರಂತರ ಟೀಕೆ ಮತ್ತು ಅವಮಾನ ಮುಂದುವರಿದ ಕಾರಣ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ದಿನ ಪಿಕಳೆ ತಮ್ಮ ನಿವಾಸದಲ್ಲಿಯೇ ಡಬಲ್ ಬ್ಯಾರಲ್ ಗನ್ ಬಳಸಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟಿನಲ್ಲಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ದುರ್ಬಳಕೆ ಯಾವ ಮಟ್ಟಿಗೆ ಮಾನಸಿಕ ಹಾನಿ ಉಂಟು ಮಾಡಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.

ಓಶಿವಾರಾ ಫೈರಿಂಗ್ ಪ್ರಕರಣದಲ್ಲಿ KRK ಅರೆಸ್ಟ್: ತಮ್ಮದೇ ಬಂದೂಕಿನಿಂದ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡ ನಟ

ಅಂಧೇರಿ ಓಶಿವಾರಾದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಬಾಲಿವುಡ್ ನಟ ಹಾಗೂ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಅವರನ್ನು ಓಶಿವಾರಾ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ವಸತಿ ಕಟ್ಟಡದ ಮೇಲೆ ನಡೆದ ಫೈರಿಂಗ್‌ಗೆ ಬಳಸಲಾದ ಬಂದೂಕು ಕೆಆರ್‌ಕೆ ಅವರ ಲೈಸೆನ್ಸ್ ಪಡೆದ ವೈಯಕ್ತಿಕ ಬಂದೂಕು ಎಂಬುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದ ಪ್ರಮುಖ ಶಂಕಿತನಾಗಿ ಪರಿಗಣಿಸಲಾಗಿದೆ.

ಶುಕ್ರವಾರ ಸಂಜೆ ಕೆಆರ್‌ಕೆ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ತಾವು ಗುಂಡು ಹಾರಿಸಿದ್ದನ್ನು ಒಪ್ಪಿಕೊಂಡಿದ್ದು, ಲೈಸೆನ್ಸ್ ಬಂದೂಕನ್ನೇ ಬಳಸಿದ್ದಾಗಿ ಹೇಳಿದ್ದಾರೆ. ಆದರೆ, ಯಾರಿಗೂ ಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೆಆರ್‌ಕೆ ಅವರ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಜನವರಿ 18ರಂದು ನಳಂದ ಸೊಸೈಟಿಯ ವಸತಿ ಕಟ್ಟಡದ ಮೇಲೆ ಎರಡು ಗುಂಡುಗಳು ಹಾರಿದ ಘಟನೆ ನಡೆದಿದೆ. ಒಂದನ್ನು ಎರಡನೇ ಮಹಡಿಯಿಂದ, ಮತ್ತೊಂದನ್ನು ನಾಲ್ಕನೇ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ.

ಎರಡನೇ ಮಹಡಿಯಲ್ಲಿ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ (45) ವಾಸವಿದ್ದು, ನಾಲ್ಕನೇ ಮಹಡಿಯಲ್ಲಿ ಮಾಡೆಲ್ ಪ್ರತೀಕ್ ಬೈದ್ ವಾಸಿಸುತ್ತಿದ್ದಾರೆ. ಫೈರಿಂಗ್ ಬಳಿಕ ಎರಡೂ ಫ್ಲಾಟ್‌ಗಳಲ್ಲಿ ಗುಂಡಿನ ಗುರುತುಗಳು ಕಂಡುಬಂದಿವೆ.

ಪ್ರಕರಣದ ತನಿಖೆಗೆ ಅಪರಾಧ ವಿಭಾಗದ ಹಲವು ತಂಡಗಳು ತೊಡಗಿಸಿಕೊಂಡಿದ್ದವು. ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಕೊರತೆಯಿಂದ ಸಾಕ್ಷ್ಯ ಸಂಗ್ರಹಕ್ಕೆ ಅಡ್ಡಿಯಾಗಿತ್ತು. ಆದರೆ ನಂತರ ವಿಧಿವಿಜ್ಞಾನ ವರದಿ ಮೂಲಕ ಗುಂಡುಗಳು ಕೆಆರ್‌ಕೆ ಅವರ ಬಂದೂಕಿನಿಂದಲೇ ಹೊರಬಂದಿರುವ ಸಾಧ್ಯತೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ.

ರೆಡ್ಡಿ, ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್​ʼಗೆ ಬೆಂಕಿ: ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ

0

ಬಳ್ಳಾರಿ: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲುಗೆ ಸಂಬಂಧಿಸಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದ ಎಂಟು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೀಲ್ಸ್ ಮಾಡುವ ಉದ್ದೇಶದಿಂದಲೇ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರುಕ್ಮಿಣಿ ಅವೆನ್ಯೂ ಲೇಔಟ್ (ಜಿ ಸ್ಕ್ವೇರ್) ನ ಸೈಟ್ ಎಂಜಿನಿಯರ್ ರಿಜ್ವಾನ್ ಈ ಕುರಿತು ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಬಂದು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಕಿಗೆ ಆಹುತಿಯಾದ ಮಾಡೆಲ್ ಹೌಸ್, ಜನಾರ್ದನ ರೆಡ್ಡಿ ಅವರ ಪತ್ನಿ ಜಿ. ಲಕ್ಷ್ಮೀ ಅವರಿಗೆ ಸೇರಿದೆ. ದುರುದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮನೆಗೆ ಬೆಂಕಿ ಬಿದ್ದ ಪರಿಣಾಮ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಏಸಿ, ಫ್ರಿಡ್ಜ್, ಪಿಓಪಿ ಕೆಲಸ, ವುಡನ್ ಬಾಗಿಲುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು ₹1.25 ಕೋಟಿ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರು ನೀಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇತ್ತೀಚಿನ ಬ್ಯಾನರ್ ಗಲಭೆ ವೇಳೆ ಶಾಸಕ ಭರತ್ ರೆಡ್ಡಿ ‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಹೇಳಿಕೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿ, ಆ ದಿಕ್ಕಿನಲ್ಲಿ ತನಿಖೆ ನಡೆಸುವಂತೆ ದೂರುದಲ್ಲಿ ಮನವಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದು, ಇಬ್ಬರು ಎಫ್‌ಎಸ್‌ಎಲ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ತಂಡದಿಂದ ತನಿಖೆ ನಡೆಯುತ್ತಿದೆ.

ಉಗ್ರ ಸಂಘಟನೆಗೆ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!

0

ಉತ್ತರ ಕನ್ನಡ: ಯುವಕರನ್ನು ತೀವ್ರವಾದ ಚಟುವಟಿಕೆಗಳತ್ತ ಸೆಳೆಯಲು ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸೇರ್ಪಡೆಗೊಳಿಸುವ ಸಂಚು ರೂಪಿಸಿದ್ದ ಆರೋಪದಡಿ, ಶಿರಸಿ ನಿವಾಸಿ ಸಯ್ಯದ್ ಎಂ. ಇದ್ರಿಸ್ ಅವರಿಗೆ ವಿಶೇಷ ಎನ್ಐಎ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಾಲಯ ಈ ತೀರ್ಪನ್ನು ಭಾರತೀಯ ದಂಡ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (UAPA) ಅಡಿ ನೀಡಿದ್ದು, ಜೊತೆಗೆ ಅಪರಾಧಿಗೆ 70,000 ರೂ. ದಂಡವನ್ನು ವಿಧಿಸಲಾಗಿದೆ.

ಈ ಪ್ರಕರಣವು ಮೊದಲಿಗೆ 2020 ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಠಾಣೆಯಿಂದ ದಾಖಲಾಗಿದ್ದು, ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರ ಮಾಡಲಾಗಿತ್ತು. ತನಿಖೆಯ ವೇಳೆ ಎನ್ಐಎ ಶಿರಸಿಯಲ್ಲಿ ಸಯ್ಯದ್ ಇದ್ರಿಸ್ ಹಾಗೂ ಜಮ್ಮು–ಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್ ಅವರನ್ನು ಬಂಧಿಸಿತ್ತು.

ಎನ್ಐಎ ಆರೋಪದಂತೆ, ಈ ಇಬ್ಬರು ತಾನಿಯಾ ಪರ್ವೀನ್ ಎಂಬ ಮಹಿಳೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಘಟಕ ಸ್ಥಾಪಿಸಲು ಸಂಚು ರೂಪಿಸಿದ್ದರು. ಹಿಂದಿನ ಶೋಧ ಕಾರ್ಯಾಚರಣೆಯಲ್ಲಿ, ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಬದೂರಿಯಾ ಪ್ರದೇಶದಲ್ಲಿ ತಾನಿಯಾ ಪರ್ವೀನ್ನನ್ನು ಪೊಲೀಸರು ಬಂಧಿಸಿದ್ದರು.

ಶೋಧದ ವೇಳೆ ಕಾನೂನುಬಾಹಿರ ಸಾಹಿತ್ಯ ಸೇರಿದಂತೆ ಹಲವು ಅಕ್ರಮ ವಸ್ತುಗಳನ್ನು ವಶಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಿದೆ.

ಮುಡಾ ಹಗರಣದಲ್ಲಿ ಮತ್ತೊಂದು ಶಾಕ್: ಮರೀಗೌಡರ 6 ಸೈಟ್‌, 3 ಅಪಾರ್ಟ್‌ಮೆಂಟ್ ಜಪ್ತಿ – 460 ಕೋಟಿ ಆಸ್ತಿ ಇಡಿ ವಶಕ್ಕೆ

0

ಮೈಸೂರು/ಬೆಂಗಳೂರು: ಮುಡಾ ಸೈಟ್ ಹಂಚಿಕೆ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತೊಂದು ದೊಡ್ಡ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಸ್.ಕೆ. ಮರೀಗೌಡ ಅವರಿಗೆ ಸೇರಿದ 20.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇಡಿ ತನಿಖೆಯ ಪ್ರಕಾರ, ಮುಡಾ ಅಧ್ಯಕ್ಷರಾಗಿದ್ದ ಕಾಲದಲ್ಲಿ ಮರೀಗೌಡ ಅವರು ಆಗಿನ ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಸಹಾಯದಿಂದ ಅಕ್ರಮ ಮಾರ್ಗದಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮರೀಗೌಡ ಹೆಸರಲ್ಲಿ ಇದ್ದ 6 ನಿವೇಶನಗಳು ಹಾಗೂ 3 ವಸತಿ ಸಂಕೀರ್ಣ ಕಟ್ಟಡಗಳನ್ನು ಇಡಿ ಜಪ್ತಿ ಮಾಡಿದೆ.

ತನಿಖೆಯಲ್ಲಿ ವಕ್ರತುಂಡ ಲೇಔಟ್ ಅಭಿವೃದ್ಧಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ವಕ್ರತುಂಡ ಸೊಸೈಟಿ ಮರೀಗೌಡ ಅವರ ಪತ್ನಿ ಜಯಶ್ರೀ ಹೆಸರಿನಲ್ಲಿ ಇದ್ದರೂ, ಅದರ ನಿಯಂತ್ರಣ ಜಯರಾಂ ಎಂಬ ವ್ಯಕ್ತಿಯ ಕೈಯಲ್ಲಿತ್ತು ಎಂದು ವರದಿಯಾಗಿದೆ. ಇದೇ ವೇಳೆ ಜಯರಾಂ ಅವರು ಸಂಬಂಧಿಕರ ಹೆಸರಲ್ಲಿ 53 ಲಕ್ಷ ರೂ. ಹಣ ವರ್ಗಾವಣೆ ನಡೆಸಿರುವುದೂ ಪತ್ತೆಯಾಗಿದೆ.

ಮರೀಗೌಡ ಅವರು ಸೊಸೈಟಿಯಿಂದ 50 ಲಕ್ಷ ರೂ. ಸಾಲ ಪಡೆದಿರುವಂತೆ ಲೆಕ್ಕ ತೋರಿಸಿ, ಮುಡಾದಲ್ಲಿ ಅಕ್ರಮ ನಡೆಸಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂಬ ಗಂಭೀರ ಅಂಶಗಳನ್ನು ಇಡಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಇದುವರೆಗೆ ಒಟ್ಟು 460 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ಹಿಂದೆ ಜಿ.ಟಿ. ದಿನೇಶ್‌ಕುಮಾರ್ ಸೇರಿದಂತೆ ಹಲವು ಆರೋಪಿಗಳಿಂದ ಅಕ್ರಮವಾಗಿ ಸಂಪಾದನೆ ಮಾಡಿದ 283 ನಿವೇಶನಗಳನ್ನು ವಶಕ್ಕೆ ಪಡೆದುಕೊಂಡಿತ್ತು.

ಇನ್ನೊಂದೆಡೆ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ಐವರಿಗೆ ನೀಡಲಾಗಿದ್ದ ‘ಬಿ’ ರಿಪೋರ್ಟ್ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜನವರಿ 28ಕ್ಕೆ ಮುಂದೂಡಿದೆ.

ಹುಬ್ಬಳ್ಳಿ- ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ಅವಘಡ: ಸಿಎಂ–ಜಮೀರ್ ಕಟೌಟ್ ಕುಸಿದು ಮೂವರಿಗೆ ಗಂಭೀರ ಗಾಯ

0

ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಕಟೌಟ್‌ಗಳು ಕುಸಿದು ಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುವ ವೇಳೆ ಕಾಂಗ್ರೆಸ್ ಪಕ್ಷದಿಂದ ರಸ್ತೆ ಪಕ್ಕಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ನಾಯಕರ ದೊಡ್ಡ ಗಾತ್ರದ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಬೆಳಗ್ಗೆ ಅಚಾನಕವಾಗಿ ಸಿಎಂ ಹಾಗೂ ಸಚಿವ ಜಮೀರ್ ಅವರ ಕಟೌಟ್‌ಗಳು ಮುರಿದು ಕೆಳಗೆ ಬಿದ್ದ ಪರಿಣಾಮ ಅಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಶಾರದಾ ಕ್ಯಾರಕಟ್ಟಿ ಎಂಬ ಮಹಿಳೆ ಕೂಡ ಇದ್ದಾರೆ. ಶಾರದಾ ಅವರು ಹುಬ್ಬಳ್ಳಿ ಗಂಗಾಧರ ನಗರದ ಸೆಟಲ್‌ಮೆಂಟ್ ಬಡಾವಣೆಯ ನಿವಾಸಿಯಾಗಿದ್ದು, ಮನೆ ಪಡೆಯಲು ಮಗ ಶಶಿಕಾಂತ ಜೊತೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದರು.

ಕಟೌಟ್ ಬೀಳುವ ಸಂದರ್ಭದಲ್ಲಿ ಮಗ ಶಶಿಕಾಂತ್ ತಪ್ಪಿಸಿಕೊಂಡಿದ್ದು, ತಾಯಿ ಶಾರದಾ ಮೇಲೆ ಕಟೌಟ್ ಬಿದ್ದು ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದೊಡ್ಡ ಕಟೌಟ್ ಅಳವಡಿಸುವ ವೇಳೆ ಸುರಕ್ಷತಾ ಕ್ರಮ ಪಾಲನೆಯಿಲ್ಲದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಸ್ನೇಹಿತನಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಯುವಕನ ಕೊಲೆ!

0

ರಾಯಚೂರು: ನಗರದ ಜಹೀರಾಬಾದ್ ಪ್ರದೇಶದ ಮಾವಿನ ಕೆರೆ ಬಳಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಹತ್ಯೆಗೀಡಾದ ಯುವಕನನ್ನು 22 ವರ್ಷದ ವಿಶಾಲ್ ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈ ಘಟನೆಯ ಸಂಬಂಧ ರಾಜು ಮತ್ತು ಬಸವರಾಜ್ ಎಂಬ ಇಬ್ಬರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ, ವಿಶಾಲ್ ತನ್ನ ಸ್ನೇಹಿತನಿಗೆ ಆರೋಪಿಗಳು ಬೈದಿದ್ದನ್ನು ಪ್ರಶ್ನಿಸಲು ಹೋಗಿದ್ದಾನೆ. ಈ ವೇಳೆ ಮೂವರ ನಡುವೆ ಮಾತಿನ ಚಕಮಕಿ ಉಂಟಾಗಿ, ಗಲಾಟೆ ತೀವ್ರಗೊಂಡಿದೆ.

ಮಾತಿನ ಜಗಳ ತೀವ್ರವಾದ ಬಳಿಕ, ಇಬ್ಬರು ಆರೋಪಿಗಳು ವಿಶಾಲ್ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಚಳಿ–ಒಣಹವೆ ಮುಂದುವರಿಕೆ: ಹವಾಮಾನ ಇಲಾಖೆ

0

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಶೀತ ಹಾಗೂ ಒಣಹವೆಯ ವಾತಾವರಣ ಮುಂದುವರಿದಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದೂ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ತೀವ್ರ ಚಳಿಯ ಜೊತೆಗೆ ಒಣಹವೆಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಇಂದು ಶೀತದೊಂದಿಗೆ ಮಂಜು ಮುಸುಕಿದ ವಾತಾವರಣ ಇರಲಿದ್ದು, ಮಕ್ಕಳು, ವೃದ್ಧರು ಹಾಗೂ ಅಸ್ವಸ್ಥರು ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

 ದಕ್ಷಿಣ ಒಳನಾಡಿನಲ್ಲಿ ಒಣಹವೆ

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳು

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಪ್ರದೇಶ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಇಂದು ಒಣಹವೆಯ ವಾತಾವರಣ ಇರಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ತೀವ್ರ ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಹೊದಿಕೆ ಬಳಕೆ, ಬಿಸಿ ಆಹಾರ ಸೇವನೆ ಹಾಗೂ ಸಮತೋಲನ ಆಹಾರಕ್ಕೆ ಆದ್ಯತೆ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

error: Content is protected !!