ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಪ್ರಾಚೀನ ಅವಶೇಷಗಳು ಪತ್ತೆಯಾಗುತ್ತಿವೆ.
ಲಕ್ಕುಂಡಿ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಉತ್ಖನನ ಕಾರ್ಯ ನಡೆಯುತ್ತಿದ್ದು, ಈ ವೇಳೆ ಶಿವಲಿಂಗದ ಪಾನಿ ಪೀಠ, ಶಿವಲಿಂಗ ಮೂರ್ತಿ ಹಾಗೂ ಕಲ್ಲಿನಲ್ಲಿ ಕೆತ್ತಿದ ನಾಗರ ಹಾವು ಶಿಲ್ಪ ಪತ್ತೆಯಾಗಿದೆ.
ಇದರೊಂದಿಗೆ ಕೊಡಲಿ ಆಕಾರದ ಪ್ರಾಚ್ಯವಸ್ತುವೂ ಉತ್ಖನನದಲ್ಲಿ ಸಿಕ್ಕಿರುವುದು ಪುರಾತತ್ವ ವಲಯದಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.
ನಿನ್ನೆ ಸಾಯಂಕಾಲ ಉತ್ಖನನ ವೇಳೆ ಪುರಾತನ ಕಾಲದ ಲೋಹದ ಗಂಟೆ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಹಿತ್ತಾಳೆಯಿಂದ ತಯಾರಿಸಿದ ಪುರಾತನ ಗಂಟೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 35 ಕಾರ್ಮಿಕರು ಅತ್ಯಂತ ಸೂಕ್ಷ್ಮವಾಗಿ ಉತ್ಖನನ ಕಾರ್ಯ ನಡೆಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಚರಣೆ ಮುಂದುವರಿದಿದೆ. ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದೆ. ಉತ್ಖನನ ನಡೆಯುತ್ತಿರುವ ಪಕ್ಕದ ಕೋಟೆ ಗೋಡೆಯಲ್ಲಿಯೇ ಅನೇಕ ಪ್ರಾಚ್ಯವಸ್ತುಗಳು ಹುದುಗಿಕೊಂಡಿರುವುದು ಕಂಡುಬಂದಿದ್ದು, ಲಕ್ಕುಂಡಿಯ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿದೆ. ಒಂದೊಂದು ಶಿಲೆಯೂ ಪುರಾತನ ಕಾಲದ ಕಲಾ ವೈಭವವನ್ನು ಸಾರುತ್ತಿದೆ.
ಈ ಅಪರೂಪದ ಶಿಲ್ಪಕಲೆಗಳು ರಾಜ್ಯದಾದ್ಯಂತ ಜನರಲ್ಲಿ ಕುತೂಹಲ ಹೆಚ್ಚಿಸಿವೆ. ಚಿನ್ನದ ಶ್ರೀಮಂತಿಕೆಯಿಂದ ಮಾತ್ರವಲ್ಲ, ಕಲೆಯ ಶ್ರೀಮಂತಿಕೆಯಿಂದಲೂ ಲಕ್ಕುಂಡಿ ಅಪರೂಪದ ನಾಡು ಎನ್ನುವುದನ್ನು ಈ ಉತ್ಖನನ ಸಾರಿ ಸಾರಿ ಸಾಬೀತು ಮಾಡುತ್ತಿದೆ.

