ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳ ಇದೀಗ ಅಚ್ಚರಿ ಘಟನೆಯ ಸಾಕ್ಷಿಯಾಗಿದೆ. ನಾನೊಬ್ಬ ಪವಾಡ ಪುರುಷ ಎಂದು ಹೇಳಿಕೊಂಡು ಬಂದ ಸ್ವಯಂ ಘೋಷಿತ ಸ್ವಾಮಿಯೊಬ್ಬ ಉತ್ಖನನ ಸ್ಥಳಕ್ಕೆ ಬಂದು ಹೈಡ್ರಾಮ ನಡೆಸಿದ್ದಾನೆ.
ತಾನು ಎಸ್.ಸಿ. ಹಿರೇಮಠ ಎಂದು ಪರಿಚಯಿಸಿಕೊಂಡ ಸ್ವಾಮಿ, “ನಾನು ರಾಣಿ ಚೆನ್ನಮ್ಮ ವಂಶಸ್ಥ” ಎಂದು ಹೇಳಿಕೊಂಡು, ತಾನು ನಿಂತಿರುವ ಜಾಗದಲ್ಲಿ ಸಾವಿರ ಕೆಜಿ ತೂಕದ ಚಾಮುಂಡಿ ಮೂರ್ತಿ ಇದೆ ಎಂದು ಹೇಳಿದ್ದಾನೆ.
ಇನ್ನೂ ಮುಂದೆ ಹೋಗಿ, “ಈ ಮೂರ್ತಿ ಬಂಗಾರ ಹಾಗೂ ವಜ್ರಖಚಿತವಾಗಿದೆ. ಹತ್ತು ಅಡಿ ಆಳಕ್ಕೆ ತೆಗಿದರೆ ಮೂರ್ತಿ ಸಿಗುತ್ತದೆ” ಎಂದು ಹೇಳಿ ಜನರ ಗಮನ ಸೆಳೆದಿದ್ದಾನೆ. ಕೈಯಲ್ಲಿ ಪತ್ರಿಕಾಯಿ ಹಿಡಿದುಕೊಂಡು ನಾಟಕೀಯವಾಗಿ ವರ್ತಿಸಿದ ಸ್ವಾಮಿ, ಸ್ಥಳದಲ್ಲಿ ಪವಾಡ ತೋರಿಸುವಂತೆ ವರ್ತನೆ ನಡೆಸಿದ್ದಾನೆ. ಆದರೆ ಸ್ಥಳೀಯರು ಈ ಹೇಳಿಕೆಗಳನ್ನು ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿದ್ದಾರೆ. ಲಕ್ಕುಂಡಿಯ ಇತಿಹಾಸಕ್ಕೂ, ಚಾಮುಂಡಿಗೂ ಯಾವುದೇ ಸಂಬಂಧವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಊರಿಗೆ ಬಂದು ಸುಳ್ಳು ಹೇಳ್ತಿಯಾ?” ಎಂದು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಸ್ವಾಮಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ವಯಂಘೋಷಿತ ಸ್ವಾಮಿ ಹಿಂಬದಿಯಿಂದ (ರಿವರ್ಸ್) ಓಡಿ ಪರಾರಿಯಾಗಿದ್ದಾನೆ.
ಸ್ಥಳೀಯರ ಮಾತಿನಲ್ಲಿ, “ಇವನು ಪವಾಡ ಪುರುಷ ಅಲ್ಲ, ಸುಳ್ಳು ಸ್ವಾಮಿ” ಎಂಬುದೇ ಈಗ ಲಕ್ಕುಂಡಿಯಲ್ಲಿ ಚರ್ಚೆಯ ವಿಷಯವಾಗಿದೆ.

