ಬೆಂಗಳೂರು: ಇದು ಸಿದ್ದರಾಮಯ್ಯನವರ ನಿದ್ದೆ ಸರ್ಕಾರ. ಸರ್ಕಾರ ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಇಲ್ಲವಾದರೆ, ಈ ಭ್ರಷ್ಟಾಚಾರದಲ್ಲಿ ಸಿಎಂಗೆ 85% ಕಮಿಷನ್ ಹೋಗುತ್ತಿದೆ ಎಂಬುದಕ್ಕೆ ಅರ್ಥವಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆಗೆ ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಟಾರ್ಗೆಟ್ ನೀಡಲಾಗುತ್ತಿದ್ದು, ಅದರ ಪರಿಣಾಮವಾಗಿ ಸನ್ನದುಗಳು ಹರಾಜಿನ ಸರಕಾಗಿವೆ ಎಂದು ಹೇಳಿದರು. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡ ತಿಮಿಂಗಿಲವೊಂದನ್ನು ಬಂಧಿಸಿದ್ದಾರೆ. ಒಂದೇ ಒಂದು ಸನ್ನದಿಗೆ 2.30 ಕೋಟಿ ರೂ. ಲಂಚ ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಅಬಕಾರಿ ಇಲಾಖೆ ಆರ್ಥಿಕ ಇಲಾಖೆಯಡಿ ಬರುತ್ತದೆ. ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣ ಎಂದು ಹೇಳಿದರು. ನಕಲಿ ಗಾಂಧಿಗಳು ಇವರು. ಗಾಂಧಿ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ. ಜನರನ್ನು ಕುಡಿಸಿ ಹಾಳು ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು. ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ, ಸಿಎಂ ಅವರನ್ನು ಸಂಪುಟದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

