Home Blog Page 163

ನೌಕರರಿಂದ ಬೆಂಗಳೂರು ಚಲೋ: ನಾಳೆ ಸಂಜೆಯಿಂದ KSRTC, BMTC ಸಂಚಾರ ಸ್ಥಗಿತ?

0

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ನಾಳೆ ಸಂಜೆ ಬಳಿಕ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಕರೆ ನೀಡಿದ್ದು, ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದ್ದು, ಬೇಡಿಕೆಗಳ ಕುರಿತು ತೀರ್ಮಾನ ಕೈಗೊಳ್ಳದಿದ್ದರೆ ಸಾರಿಗೆ ಬಂದ್ ಮಾಡುವುದಾಗಿ ನೌಕರರು ಎಚ್ಚರಿಸಿದ್ದಾರೆ. ಸರ್ಕಾರದಿಂದ ಅಧಿಕೃತ ನಿರ್ಧಾರ ಹೊರಬಾರದಿದ್ದರೆ ಗುರುವಾರ ಸಂಜೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೀಗ ಮುಷ್ಕರದ ಹಿನ್ನೆಲೆ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಕರ್ತವ್ಯಕ್ಕೆ ಹಾಜರಾಗದ ನೌಕರರಿಗೆ ‘ನೋ ವರ್ಕ್, ನೋ ಪೇ’ ಅನ್ವಯಿಸಲಾಗುವುದು ಎಂದು ಸೂಚಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದರೆ ಸೇವಾ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಎಚ್ಚರಿಸಿದ್ದಾರೆ.

T20 World Cup 2026: ಭಾರತದ “ಸೂಪರ್ 8” ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ ನೋಡಿ!

0

ಟಿ20 ವಿಶ್ವಕಪ್‌ನ ಮೊದಲ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟ ತಲುಪಿವೆ. 20 ತಂಡಗಳ ಪೈಕಿ ಈಗಾಗಲೇ 7 ತಂಡಗಳು ಸೂಪರ್-8 ಹಂತಕ್ಕೆ ಪ್ರವೇಶಿಸಿವೆ. ಗ್ರೂಪ್-ಎಯಿಂದ ಭಾರತ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ.

ಇಂದು ನಡೆಯಲಿರುವ ನಮೀಬಿಯಾ ವಿರುದ್ಧ ಪಾಕಿಸ್ತಾನ ನಡುವಿನ ನಿರ್ಣಾಯಕ ಪಂದ್ಯವನ್ನು ಹೊರತುಪಡಿಸಿದರೆ, ಉಳಿದ ಪಂದ್ಯಗಳು ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ತರಲಾರವು. ಇದೀಗ ಸೂಪರ್-8 ಹಂತದಲ್ಲಿ ಭಾರತ ಎದುರಿಸಲಿರುವ ತಂಡಗಳ ವಿವರ ಹೀಗಿದೆ.

ಫೆಬ್ರವರಿ 22ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಫೆಬ್ರವರಿ 26ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತವು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಮೈದಾನದಲ್ಲಿ ನಡೆಯಲಿದೆ.

ಮಾರ್ಚ್ 1ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸೂಪರ್-8 ಹಂತದಲ್ಲಿ ಎರಡು ಗುಂಪುಗಳಿದ್ದು, ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಹೀಗಾಗಿ ಭಾರತ ಪಾಲಿಗೆ ಮುಂದಿನ ಮೂರು ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ. ಉತ್ತಮ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಹಂತ ತಲುಪಲಿದೆ.

ಹೆಂಡತಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಪತ್ನಿ ಕೊಲೆಗೈದ ಪಾಪಿ ಪತಿ

0

ಬೆಂಗಳೂರು: ಹೆಂಡತಿಯ ಶೀಲ ಶಂಕಿಸಿ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ 55 ವರ್ಷದ ದೇವಿಕಾ ಮೃತರಾಗಿದ್ದು, ಪತಿ ಕುಮಾರ್ (65) ಮಧ್ಯರಾತ್ರಿ 12:45ರ ಸುಮಾರಿಗೆ ಪತ್ನಿ ಮಲಗಿದ್ದಾಗ ಅವಳ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ತಾಜಾ ಮಾಹಿತಿ ಪ್ರಕಾರ, ದೇವಿಕಾ ಸಮೀಪದಲ್ಲಿ ಕುಟುಂಬ ಸಮೇತ ಶಬರಿಮಲೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪತ್ನಿ ಡ್ರೈವರ್ ಜೊತೆ ಮಾತನಾಡುತ್ತಿದ್ದುದರಿಂದ ಪತಿ ಅನುಮಾನಗೊಂಡಿದ್ದರು. ಬಳಿಕ ಹೆಂಡತಿ ಮೇಲೆ ಅನುಮಾನಿಸಿ ಗಲಾಟೆ ಮಾಡುತ್ತಿದ್ದ. ಪತ್ನಿಯನ್ನು ಕೊಂದ ಬಳಿಕ ಆರೋಪಿ ಕುಮಾರ್ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆರೋಪಿ ಕುಮಾರ್‌ನನ್ನು ಮಕ್ಕಳು ತಡೆದಿದ್ದಾರೆ.

ಘಟನೆ ಸಂಬಂಧ ಗೋವಿಂದರಾಜ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಗಂಡ ಕುಮಾರ್ ಪೊಲೀಸ್ ಬಂಧನದಲ್ಲಿ ಇರಿಸಿಕೊಂಡಿದ್ದಾರೆ.

ನೀನು ಕಳ್ಳ, ಸುಳ್ಳ.. ಅವಾಚ್ಯ ಶಬ್ದಗಳಿಂದ PDO ಅಧಿಕಾರಿಗೆ ನಿಂದನೆ.! ಗ್ರಾ.ಪಂ ಸದಸ್ಯನ ವಿರುದ್ಧ ಆಕ್ರೋಶ – ವಿಡಿಯೋ ವೈರಲ್

0

ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಜಾನುಕೊಂಡ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯನೊಬ್ಬ ಪಿಡಿಒ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾನುಕೊಂಡ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಅವರು, ಪಂಚಾಯಿತಿ ಪಿಡಿಒ ಅಧಿಕಾರಿ ಮುಕುಂದ ಅವರನ್ನು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಪಂಚಾಯಿತಿಗೆ ಭೇಟಿ ನೀಡಿದ ಅವರು,

“ನೀನು ಕಳ್ಳ, ನೀನು ಸುಳ್ಳ, ನಿನಗೆ ಏನು ಮಾಡಬೇಕು ಅಂತ ನನಗೆ ಗೊತ್ತಿದೆ” ಎಂದು ಬೆದರಿಕೆ ಹಾಕಿರುವ ದೃಶ್ಯಗಳು ವೈರಲ್ ವಿಡಿಯೋದಲ್ಲಿ ದಾಖಲಾಗಿವೆ.

ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಅಧಿಕಾರಿಗೆ ಅವಮಾನಕ ರವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸಂಬಂಧಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಘಟನೆ ಕುರಿತು ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ: ಚುನಾವಣಾ ಆಯೋಗ ಘೋಷಣೆ

0

ನವದೆಹಲಿ: ಚುನಾವಣಾ ಆಯೋಗ ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಮಾರ್ಚ್ 16ರಂದು ನಡೆಯಲಿದೆ ಎಂದು ಬುಧವಾರ ಪ್ರಕಟಿಸಿದೆ.

ಏಪ್ರಿಲ್ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಈ ಸ್ಥಾನಗಳು ಖಾಲಿಯಾಗಲಿದ್ದು, ಅದಕ್ಕಾಗಿ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ಸೇರಿದಂತೆ ಒಟ್ಟು 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

2026ರ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಾರ್ಚ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಸಹ ನಡೆಯಲಿದೆ.

ರಾಜ್ಯಸಭೆಯ 37 ಸದಸ್ಯರ ಅವಧಿ ಏಪ್ರಿಲ್ 2026ರಲ್ಲಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಚುನಾವಣೆಗಳು ನಡೆಯುತ್ತಿವೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಯಾದಗಿರಿಯಲ್ಲಿ ಘೋರ ದುರಂತ: ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವು!

0

ಯಾದಗಿರಿ: ಖಾಸಗಿ ಶಾಲಾ ಬಸ್ ಹರಿದು ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ. ಪುನೀತ್ (4) ಮೃತ ದುರ್ದೈವಿ ಬಾಲಕನಾಗಿದ್ದು, ಆತ ಗಾಜರಕೋಟ್ ಗ್ರಾಮದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಪ್ರತಿದಿನದಂತೆ ಗ್ರಾಮದಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ದು, ನಂತರ ಮನೆಗೆ ತಲುಪಿಸುವ ಕೆಲಸವನ್ನು ಶಾಲಾ ಬಸ್ ನಿರ್ವಹಿಸುತ್ತಿತ್ತು. ಅದರಂತೆ ವಿದ್ಯಾರ್ಥಿಗಳನ್ನು ಬಿಡಲು ಬಸ್ ಗ್ರಾಮಕ್ಕೆ ಬಂದಿತ್ತು. ಬಾಲಕ ಬಸ್ಸಿನಿಂದ ಇಳಿದ ಬಳಿಕ ಚಾಲಕ ರಿವರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾನೆ.

ಈ ವೇಳೆ ಹಿಂದೆ ನೋಡದೇ ಚಾಲಕ ರಿವರ್ಸ್ ತೆಗೆದುಕೊಂಡಿದ್ದು, ಬಾಲಕನ ಮೇಲೆ ಹರಿದಿದೆ. ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.

ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಬೆಳಗಾವಿಯಲ್ಲಿ ಕಾರಿನಲ್ಲಿ ರಿವಾಲ್ವರ್ ಇಟ್ಟು ಸಂಚರಿಸಿದ್ದ ವ್ಯಕ್ತಿ ಅರೆಸ್ಟ್.!

0

ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರದ ಕೋರ್ಟ್ ಸರ್ಕಲ್ ಬಳಿ ಕಾರಿನಲ್ಲಿ ರಿವಾಲ್ವರ್ ಇಟ್ಟು ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದ ವೇಳೆ, ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಲೈಸನ್ಸ್ ಹೊಂದಿದ್ದ ರಿವಾಲ್ವರ್ ಪತ್ತೆಯಾಗಿದೆ.

ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ನಿವಾಸಿ ರಮೇಶ್ ಕೇಸರಗೊಪ್ಪ ಚೌವಾಣ (52) ಎಂದು ಗುರುತಿಸಲಾಗಿದೆ. ರಿವಾಲ್ವರ್‌ಗೆ ಲೈಸನ್ಸ್ ಇದ್ದರೂ ಅದು ಬಾಗಲಕೋಟೆ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಜೊತೆಗೆ, ಶಸ್ತ್ರಾಸ್ತ್ರ ಪರವಾನಗಿಯ ನವೀಕರಣ ಅವಧಿ ಮುಗಿದಿದ್ದರೂ, ಸಂಬಂಧಿತ ಪೊಲೀಸ್ ಠಾಣೆಗೆ ಶಸ್ತ್ರವನ್ನು ಜಮಾ ಮಾಡದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿನ್ನೆಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಗೋಕಾಕ್ ಶಹರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬಾಲಿವುಡ್ ಲೆಜೆಂಡ್ ಸಲೀಂ ಖಾನ್ ಗಂಭೀರ ಸ್ಥಿತಿಯಲ್ಲಿ: ಮೆದುಳಿನ ರಕ್ತಸ್ರಾವಕ್ಕೆ ಶಸ್ತ್ರಚಿಕಿತ್ಸೆ

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಪ್ರಸಿದ್ಧ ಕಥೆ ಬರಹಗಾರ ಸಲೀಂ ಖಾನ್ ಅವರನ್ನು ಮಂಗಳವಾರ (ಫೆಬ್ರವರಿ 17) ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 90 ವರ್ಷದ ಸಲೀಂ ಖಾನ್ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಮಂಗಳವಾರ ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತುರ್ತು ಆಸ್ಪತ್ರೆಗೆ ಕರೆತರಲಾಗಿ ತಕ್ಷಣ ವೈದ್ಯಕೀಯ ಪರಿಹಾರ ಆರಂಭಿಸಲಾಯಿತು. ವೈದ್ಯರ ಪ್ರಾಥಮಿಕ ವರದಿಯಂತೆ, ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವ ಸಂಭವಿಸಿದ್ದು, ಅವರಿಗೆ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಫೆಬ್ರವರಿ 18 ರಂದು ಶಸ್ತ್ರಚಿಕಿತ್ಸೆ ನಡೆಸಿ ರಕ್ತಸ್ರಾವವನ್ನು ನಿಲ್ಲಿಸಲು ವೈದ್ಯರು ಯೋಜಿಸಿದ್ದಾರೆ.

ಅವರ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ ಸ್ಥಿತಿ ಸ್ಥಿರವಾಗಿದೆ ಎಂದು ಮಂಗಳವಾರ ಸಂಜೆ ಪ್ರಕಟಣೆ ಹೊರಬಂತು. ಚಿಕಿತ್ಸೆ ಸಮಯದಲ್ಲಿ, ಸಲ್ಮಾನ್ ಖಾನ್, ಸಲ್ಮಾ ಖಾನ್, ಹೆಲೆನ್, ಅರ್ಬಾಜ್, ಅಲ್ವಿರಾ, ಅರ್ಪಿತಾ, ಆಯುಷ್ ಶರ್ಮಾ, ನಿರ್ವಾಣ ಮತ್ತು ಅರ್ಹಾನ್ ಆಸ್ಪತ್ರೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಂಜಯ್ ದತ್ ಸಹ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಲೀಂ ಖಾನ್ ಬಾಲಿವುಡ್‌ನಲ್ಲಿ ಬಹಳ ಪ್ರಸಿದ್ಧ ಕಥೆ ಬರಹಗಾರರು. ಅವರ ಸಹ-ಲೇಖಕ ಜಾವೇದ್ ಅಖ್ತರ್ ಜೊತೆಗೆ ಬಹುಪ್ರಸಿದ್ಧ ಚಿತ್ರಕಥೆಗಳನ್ನು ರಚಿಸಿದ್ದರು. 1964 ರಲ್ಲಿ ಸಲ್ಮಾ ಖಾನ್ ಅವರಿಗೆ ಮದುವೆಯಾಗಿದ್ದು, ಬಾಲಿವುಡ್ ಸ್ಟಾರ್ ಮಕ್ಕಳು ಸಲ್ಮಾನ್, ಅರ್ಬಾಜ್, ಸೊಹೈಲ್ ಮತ್ತು ಅಲ್ವಿರಾ ಅವರನ್ನು ಹೊಂದಿದ್ದಾರೆ. 1981 ರಲ್ಲಿ ನಟಿ ಹೆಲೆನ್ ಅವರನ್ನು ಮದುವೆ ಮಾಡಿದ್ದು, ಅರ್ಪಿತಾ ಅವರನ್ನು ದತ್ತ ಪಡೆದುಕೊಂಡಿದ್ದಾರೆ.

16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

0

ರಾಮನಗರ: ಜಿಲ್ಲೆಯಲ್ಲಿ ನಡೆದ ಸರಣಿ ಚಿನ್ನದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 16.8 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ದೇವಸ್ಥಾನದ ಬಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತಕ್ಷಣವೇ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.

ತನಿಖೆಯಲ್ಲಿ ಆರೋಪಿಗಳು ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕೆಂಗಲ್ ದೇವಾಲಯದ ಬಳಿಯ ಕೃತ್ಯವೂ ಇದೇ ಸರಣಿಯ ಭಾಗವಾಗಿದ್ದು, ಆರೋಪಿಗಳು ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದರು.

ಬಂಧಿತರಿಂದ 120 ಗ್ರಾಂ ಚಿನ್ನದ ಗಟ್ಟಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯೊಂದಿಗೆ ನಾಲ್ಕು ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್: ಹತ್ತು ಮಂದಿ ವಿರುದ್ಧ ದೂರು

0

ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿವಾದದ ಹಿನ್ನೆಲೆ ಸಾರಿಗೆ ಇಲಾಖೆ ನೌಕರ ವೀರಪ್ಪರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹತ್ತು ಮಂದಿಗೆ ವಿರುದ್ಧ ಪ್ರಕರಣ ದಾಖಲಾಗಿದೆ.

ವೀರಪ್ಪ ಅವರ ಪುತ್ರ ವಿವೇಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ಮಲ್ಲಮ್ಮ, ಮಹದೇವಮ್ಮ, ಹರೀಶ, ಲೋಕೇಶ, ಮಹದೇವ, ಬಾಗಲಯ್ಯ, ಸತೀಶ, ಜಯರಾಮ, ಧರ್ಮ ಮತ್ತು ಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆಸ್ತಿ ವಿಚಾರವಾಗಿ ನಡೆದ ತೀವ್ರ ಕಲಹವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ವೀರಪ್ಪ ಅವರ ಮೃತದೇಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆಯನ್ನು ನೀಡಿದೆ.

ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದು, ಪ್ರಕರಣದ ನಿಖರ ಹಿನ್ನೆಲೆಯನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

error: Content is protected !!