Home Blog Page 177

ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ

0

ಬೆಂಗಳೂರು: ಬಳ್ಳಾರಿ ವಿಷಯ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ. ಪತ್ರವನ್ನೂ ನೀಡಿಲ್ಲ ಹಣ ಕಟ್ಟಿಲ್ಲ; ಅನುಮತಿ ಪಡೆದಿಲ್ಲ ಎಂದು ಕಮೀಷನರ್ ಹೇಳಿದ್ದಾಗಿ ಗಮನ ಸೆಳೆದರು.

ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕಾಂಗ್ರೆಸ್ ನಾಯಕರ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗಿದೆ. ದರ್ಪ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ರಾಜೀವ್ ಗೌಡರನ್ನು ಬಂಧಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿದ ಇವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಬೇಕು. ಇಲ್ಲವಾದರೆ, ಇದನ್ನು ನಾವು ರಾಜ್ಯಮಟ್ಟದ ವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕರು ಇಂಥ ದುಂಡಾವರ್ತಿ ಮಾಡುವುದು ಸರಿಯೇ ಎಂದು ಕೇಳಿದರು. ನಿಂದನೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರೂ ಅಲ್ಲಿ ಧರಣಿ ಕುಳಿತಿದ್ದಾರೆ. ಇದನ್ನು ಬಿಜೆಪಿ ವಿಶೇಷ ಆದ್ಯತೆ ಮೇಲೆ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ಷೇಪಿಸಿದರು.

ಇವತ್ತು ಬೆಳಿಗ್ಗೆಯಿಂದ ಮಾಧ್ಯಮಗಳಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ಸಿನ ಮುಖಂಡ ರಾಜೀವ್ ಗೌಡ ಎಂಬ ವ್ಯಕ್ತಿ ಅಲ್ಲಿನ ಮುನ್ಸಿಪಲ್ ಕಮೀಷನರ್‍ರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟು ಬಿಡುವ ಬೆದರಿಕೆ ಹಾಕಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ ಪೌರ ಕಾರ್ಮಿಕರನ್ನೂ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಎಲ್ಲರನ್ನೂ ಶಿಡ್ಲಘಟ್ಟ ಬಿಡಿಸಿ ಓಡಿಸುವೆ; ಯಾರ್ಯಾರು ಬ್ಯಾನರ್ ಕಿತ್ತು ಹಾಕಿದವರ ವಿರುದ್ಧ ಕೆಟ್ಟ ಪದ ಬಳಸಿದ್ದಾಗಿ ಆಕ್ಷೇಪಿಸಿದರು.

ತಾಂತ್ರಿಕ ದೋಷದಿಂದ ಕ್ರೇನ್ ಪಲ್ಟಿ: ಬೆಂಗಳೂರು ಮೆಟ್ರೋ ಬ್ಲೂ ಲೈನ್ ಕಾಮಗಾರಿ ವೇಳೆ ತಪ್ಪಿದ ಭಾರೀ ಅನಾಹುತ

0

ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಭಾರೀ ಅವಘಡ ತಪ್ಪಿದೆ. ನಸುಕಿನ ಜಾವ 3.45ರ ಸುಮಾರಿಗೆ ಬೃಹತ್ ಕ್ರೇನ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಕಾರ್ಮಿಕರು ಅಥವಾ ವಾಹನ ಸವಾರರಿಗೆ ಗಾಯವಾಗಿಲ್ಲ.

ಘಟನೆ ಸಂಭವಿಸಿದ ವೇಳೆ ಸುತ್ತಮುತ್ತ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಭಾರವಾದ ಉಕ್ಕಿನ ಗಿರ್ಡರ್ ಎತ್ತುವ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ನೀಡಿದ ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ಸದಾಶಿವ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಕ್ಕಿನ ಗಿರ್ಡರ್ ಎತ್ತುವಾಗ ಕ್ರೇನ್‌ನ ಒಂದು ಭಾಗ ಏಕಾಏಕಿ ಮೇಲಕ್ಕೆ ಚಲಿಸಿ ಸಮತೋಲನ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಎಕ್ಸ್‌ಕ್ಲೂಸಿವ್ ದೃಶ್ಯಗಳು ಲಭ್ಯವಾಗಿದ್ದು, ಇಂದು ಮುಂಜಾನೆ ಸುಮಾರು 3.20ರ ವೇಳೆಗೆ ಅಪಘಾತ ನಡೆದಿರುವುದು ದೃಢಪಟ್ಟಿದೆ. ವಾಹನಗಳ ಓಡಾಟದ ಸಮಯದಲ್ಲೇ ಕ್ರೇನ್ ಪಲ್ಟಿಯಾಗಿರುವುದಾಗಿ ಹೇಳಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಬೆಂಗಳೂರು ನಗರದಲ್ಲಿ ಹಲವು ಭಾಗಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ಕೆಲ ರಸ್ತೆಗಳಲ್ಲೀಗಾಗಲೇ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಇಂತಹ ಘಟನೆಗಳು ಸಾರ್ವಜನಿಕ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.

ಸಿಎಂ–ಡಿಸಿಎಂ ಗೊಂದಲಕ್ಕೆ ತೆರೆ: ರಾಹುಲ್ ಗಾಂಧಿಯಿಂದ ದೆಹಲಿಗೆ ಆಹ್ವಾನ – ಅಶೋಕ್ ಪಟ್ಟಣ್

0

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ವಿಚಾರಗಳನ್ನು ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಆಹ್ವಾನಿಸಿದ್ದಾರೆ ಎಂದು ವಿಧಾನಸಭಾ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುವ ಮಾತುಕತೆಯಲ್ಲಿ ಎಲ್ಲಾ ಗೊಂದಲಗಳಿಗೆ ಅಂತ್ಯ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್ ಪಟ್ಟಣ್, ನಿನ್ನೆ ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಯಾವುದೇ ಅಧಿಕೃತ ಚರ್ಚೆ ನಡೆಸಿಲ್ಲ. ಆದರೆ ಇಬ್ಬರನ್ನೂ ದೆಹಲಿಗೆ ಬರಲು ಸೂಚಿಸಿದ್ದಾರೆ. ದೆಹಲಿಗೆ ಹೋದ ನಂತರ ಎಲ್ಲ ವಿಚಾರಗಳನ್ನು ಸರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವಿವರಿಸಿದರು.

ಡಿಕೆ ಶಿವಕುಮಾರ್ ಮಾತನಾಡಬೇಕು ಎಂದು ಕೇಳಿಕೊಂಡ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಬರಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದು, ಶೇ.100ರಷ್ಟು ಗೊಂದಲಗಳು ಪರಿಹಾರವಾಗಲಿವೆ ಎಂದು ಅಶೋಕ್ ಪಟ್ಟಣ್ ವಿಶ್ವಾಸ ವ್ಯಕ್ತಪಡಿಸಿದರು.

ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ರನ್‌ವೇಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ಗಾಂಧಿ ಬಂದ ಸಂದರ್ಭದಲ್ಲಿ ಸಾಮಾನ್ಯ ಮಾತುಕತೆ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಕುರ್ಡಿ ಗ್ರಾಮದಲ್ಲಿ ಚರಂಡಿಗೆ ಬಿದ್ದು ವೃದ್ಧೆ ಸಾವು – ಪಂಚಾಯಿತಿ ವಿರುದ್ಧ ಜನರ ಅಸಮಾಧಾನ

0

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದ ದುರ್ಘಟನೆ ಗ್ರಾಮ ಪಂಚಾಯಿತಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಮತ್ತೆ ಬಯಲು ಮಾಡಿದೆ. ಅರೆಬರೆ ಕಾಮಗಾರಿ ಮಾಡಿದ್ದ ಚರಂಡಿಯಲ್ಲಿ ಬಿದ್ದು 60 ವರ್ಷದ ಗಂಗಮ್ಮ ಆರೋಲಿ ಸಾವನ್ನಪ್ಪಿದ್ದಾರೆ.

ಘಟನೆ ಗ್ರಾಮದ ಚರ್ಚ್ ಮುಂಭಾಗದಲ್ಲಿ ನಡೆದಿದೆ. ಚರಂಡಿ ಕಾಮಗಾರಿಯ ವೇಳೆ ಹಲವೆಡೆ ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಈ ದುರಂತಕ್ಕೆ ನೇರ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೂರು ತಿಂಗಳಿಗೂ ಹೆಚ್ಚು ಸಮಯ ಕಳೆದರೂ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಅಪೂರ್ಣ ಸ್ಥಿತಿಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯವಾಗುವಂತೆ ಮಾಡಿದೆ. ಈ ಕುರಿತು ಹಲವು ಬಾರಿ ಗುತ್ತಿಗೆದಾರರಿಗೆ ತಿಳಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಘಟನೆ ಬಳಿಕ ಕುರ್ಡಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯದಿಂದ ಸಂಭವಿಸಿದ ಈ ಸಾವು ಗ್ರಾಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Gadag-ಏರ್ ಫ್ರೆಶ್ನರ್ ಬಾಟಲ್ ಸ್ಫೋಟ: ಬಾಲಕಿ ಗಂಭೀರ ಗಾಯ!

0

ಗದಗ: ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡ ಕಾರಣ ಅಪ್ರಾಪ್ತ ಬಾಲಕಿಯೊಬ್ಬಳ ಮುಖಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆ ಪಕ್ಕದಲ್ಲಿ ಬೆಂಕಿ ಹಚ್ಚಿದ ವೇಳೆ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಈ ಘಟನೆ ಜರುಗಿದೆ.

ಸ್ಫೋಟದಿಂದ ಗಾಯಗೊಂಡ ಬಾಲಕಿಯನ್ನು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಬಾಲಕಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಚುಡಾಯಿಸುತ್ತಿದ್ದ ಅಲ್ತಾಪ್ ಎಂಬ ಯುವಕನೇ ಉದ್ದೇಶಪೂರ್ವಕವಾಗಿ ಏರ್ ಫ್ರೆಶ್ನರ್ ಬಾಟಲ್ ಸ್ಫೋಟ ಮಾಡಿದ್ದಾನೆ ಎಂದು ದೂರಿದ್ದಾರೆ. ಈ ಹಿಂದೆ ಕೂಡ ಎರಡು ಕುಟುಂಬಗಳ ನಡುವೆ ಗಲಾಟೆಗಳು ನಡೆದಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆಯ ಮಾಹಿತಿ ಪಡೆದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಮಾತನಾಡಿದ ಅವರು, ಮನೆ ಸಮೀಪ ಬೆಂಕಿ ಹಚ್ಚಿದಾಗ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಬಾಲಕಿಗೆ ಗಾಯವಾಗಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಚುಡಾಯಿಸಿದ್ದಾನೆ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ವರದಕ್ಷಿಣೆ ಕೇಸ್‌ಗೆ ತಿರುವು: “ನನ್ನನ್ನು ಕೊಲ್ಲಲು ಪತ್ನಿಯೇ ಪ್ಲಾನ್ ಮಾಡಿದ್ದಳು”- ಕಾನ್ಸಟೇಬಲ್ ಮಚೇಂದ್ರ ಗಂಭೀರ ಆರೋಪ

0

ಬೀದರ್: ಜಿಲ್ಲೆಯ ಪೊಲೀಸ್ ಕಾನ್ಸಟೇಬಲ್ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ಇದೀಗ ಪ್ರತಿದಾಳಿ ನಡೆಸಿದ್ದು, ಪತ್ನಿ ಸೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪತ್ನಿ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ, ತನ್ನನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ಮಚೇಂದ್ರ ಆರೋಪಿಸಿದ್ದಾರೆ. ಊಟಕ್ಕೆ ವಿಷ ಬೆರೆಸಿ ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಪತ್ನಿ ಭೇಟಿಗೆ ಬರಲಿಲ್ಲ, ಯಾವುದೇ ಆರೈಕೆ ನೀಡಲಿಲ್ಲ ಎಂದು ಮಚೇಂದ್ರ ಆರೋಪಿಸಿದ್ದಾರೆ. ಬಳಿಕ ಸ್ವಗ್ರಾಮ ಚಿಟಗುಪ್ಪಾಕ್ಕೆ ಬಂದಾಗ ಪತ್ನಿ ತವರು ಮನೆಗೆ ತೆರಳಿದ್ದಾಳೆ ಎಂದು ಹೇಳಿದ್ದಾರೆ.

ಈ ಕಾರಣಗಳಿಂದ ಜನವರಿ 2025ರಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ನಂತರ ಸೆಟಲ್‌ಮೆಂಟ್ ಎಂಬ ಹೆಸರಿನಲ್ಲಿ ಕರೆಸಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದು, ಒಪ್ಪದ ಕಾರಣ ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಬಳಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

2025ರ ಸೆಪ್ಟೆಂಬರ್‌ನಲ್ಲಿ ಮತ್ತೆ ಹುಮನಾಬಾದ್‌ನಲ್ಲಿ ಹಲ್ಲೆ ನಡೆದಿದೆ ಎಂದು ಹೇಳಿರುವ ಮಚೇಂದ್ರ, ವರದಕ್ಷಿಣೆ ಡಿಮ್ಯಾಂಡ್, ಮಕ್ಕಳಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದೆ ಎಂಬ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಈ ಆರೋಪ–ಪ್ರತ್ಯಾರೋಪಗಳ ನಡುವೆ ಪ್ರಕರಣದ ತನಿಖೆ ಯಾವ ದಿಕ್ಕು ಪಡೆಯಲಿದೆ ಎಂಬುದನ್ನು ಕಾನೂನು ಪ್ರಕ್ರಿಯೆ ನಿರ್ಧರಿಸಬೇಕಿದೆ.

ICC Rankings: 1736 ದಿನಗಳ ಬಳಿಕ ಸಿಂಹಾಸನ ವಾಪಸ್: ಕಿಂಗ್ ಕೊಹ್ಲಿ ಮತ್ತೆ ನಂ.1!

0

ಏಕದಿನ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿಯಿಂದ ಭರ್ಜರಿ ಗೌರವ ಲಭಿಸಿದೆ. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ನಿರಂತರವಾಗಿ 50 ಪ್ಲಸ್ ರನ್ ಗಳಿಸಿರುವ ಕೊಹ್ಲಿ, ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 785 ರೇಟಿಂಗ್ ಅಂಕಗಳೊಂದಿಗೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಇದೊಂದು ಖುಷಿಯ ಸಂಗತಿಯಾಗಿದ್ದರೆ, ಇದೇ ವೇಳೆ ಈವರೆಗೆ ಅಗ್ರಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ.

ವಿರಾಟ್ ಕೊಹ್ಲಿ ಸುಮಾರು 4 ವರ್ಷ 9 ತಿಂಗಳು (1736 ದಿನಗಳ) ದೀರ್ಘ ಕಾಯುವಿಕೆಯ ಬಳಿಕ ಮತ್ತೆ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಿಂದೆ ಅವರು 2021ರ ಏಪ್ರಿಲ್ 13ರವರೆಗೆ ಅಗ್ರಸ್ಥಾನದಲ್ಲಿದ್ದರು. ಅದರ ಬಳಿಕ ಪಾಕಿಸ್ತಾನದ ಬಾಬರ್ ಆಝಂ ಆ ಸ್ಥಾನವನ್ನು ವಶಪಡಿಸಿಕೊಂಡಿದ್ದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಗಳಿಸಿ ತಮ್ಮ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಈ ಅದ್ಭುತ ಪ್ರದರ್ಶನವೇ ಅವರನ್ನು ಮತ್ತೆ ಶ್ರೇಯಾಂಕದ ಶಿಖರಕ್ಕೆ ಕೊಂಡೊಯ್ದಿದೆ.

ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ (ಟಾಪ್):

  1. ವಿರಾಟ್ ಕೊಹ್ಲಿ – 785

  2. ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) – 784

  3. ರೋಹಿತ್ ಶರ್ಮಾ – 775

  4. ಶುಭಮನ್ ಗಿಲ್

  5. ಶ್ರೇಯಸ್ ಅಯ್ಯರ್

ಆದರೆ ಕೊಹ್ಲಿಗೆ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಸುಲಭವಾಗಿಲ್ಲ. ಏಕೆಂದರೆ ಡ್ಯಾರಿಲ್ ಮಿಚೆಲ್ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದು, ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿನ ಪ್ರದರ್ಶನವೇ ಮುಂದಿನ ವಾರದ ಶ್ರೇಯಾಂಕವನ್ನು ನಿರ್ಧರಿಸಲಿದೆ. ಕೊಹ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಕನ್ನಡದಲ್ಲೇ ಪತ್ರ ಬರೆದು ಮೋದಿ ಸಂಕ್ರಾಂತಿ ಶುಭಾಶಯ: ಕರ್ನಾಟಕಕ್ಕೆ ವಿಶೇಷ ಗೌರವ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ್ದು, ವಿಶೇಷವಾಗಿ ಕನ್ನಡದಲ್ಲೇ ಪತ್ರ ಬರೆದು ಶುಭಹಾರೈಸಿರುವುದು ಗಮನ ಸೆಳೆದಿದೆ. ಈ ಪತ್ರವನ್ನು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೋದಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರ ಬರೆದು ಆಯಾ ರಾಜ್ಯದ ಜನತೆಗೆ ಸಂಕ್ರಾಂತಿ / ಪೊಂಗಲ್ ಶುಭಾಶಯ ಕೋರಿದ್ದಾರೆ. ಅದರಲ್ಲೂ ಕನ್ನಡದಲ್ಲಿ ನೇರವಾಗಿ ಸಂದೇಶ ನೀಡಿರುವುದು ಕರ್ನಾಟಕದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.

ಪತ್ರದಲ್ಲಿ ಮೋದಿ, “ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಈ ಹಬ್ಬ ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ” ಎಂದು ಬರೆದಿದ್ದಾರೆ.

ದೇಶಾದ್ಯಂತ ವಿಭಿನ್ನ ರೂಪಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬವಾಗಿದ್ದು, ಒಗ್ಗಟ್ಟಿನ ಭಾವನೆಯನ್ನು ಬಲಪಡಿಸುವ ಹಬ್ಬ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಸಂಕ್ರಾಂತಿ ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಹೇಳಿದ ಮೋದಿ, “ಇದು ಅನ್ನದಾತರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ. ಸಂಕ್ರಾಂತಿ ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುಂದಕ್ಕೆ ಸಾಗಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.

“ನಿಮ್ಮ ಜೀವನದಲ್ಲಿ ಸಮೃದ್ಧಿ, ಆರೋಗ್ಯ, ಸಂತೋಷ ನೆಲೆಸಲಿ. ನಿಮ್ಮ ಮನೆಗಳಲ್ಲಿ ಸಂತೋಷ, ಸಮಾಜದಲ್ಲಿ ಸಾಮರಸ್ಯ ಮೂಡಲಿ” ಎಂದು ಪ್ರಧಾನಿ ಹಾರೈಸಿದ್ದಾರೆ.

ಟ್ವಿಟ್ಟರ್ ಪೋಸ್ಟ್‌ನಲ್ಲೂ ಮೋದಿ, “ಎಳ್ಳು-ಬೆಲ್ಲದ ಮಾಧುರ್ಯದಂತೆ ಈ ಹಬ್ಬ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ. ಸೂರ್ಯ ದೇವರು ಎಲ್ಲರನ್ನೂ ಆಶೀರ್ವದಿಸಲಿ” ಎಂದು ಹೇಳಿದ್ದಾರೆ.

ಮಹಿಳಾ ಆಯುಕ್ತೆಗೆ ಫೋನ್‌ನಲ್ಲಿ ನಿಂದನೆ: ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ FIR

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಮೂಲಕ ಅಶ್ಲೀಲ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.

ಪೌರಾಯುಕ್ತೆ ಅಮೃತಾ ಗೌಡ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ, BNS 79, 132, 352, 199, 54 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನಲ್ಲಿ, ತಮಗೆ ಮಾನಸಿಕವಾಗಿ ಭಾರೀ ಆಘಾತ ಉಂಟಾಗಿದ್ದು, ತಾವು ಕೇಂದ್ರ ಸ್ಥಾನದಲ್ಲಿ ಒಬ್ಬರೇ ವಾಸಿಸುತ್ತಿರುವುದರಿಂದ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಯ ಅಮೃತಾ ಗೌಡ, “ಬ್ಯಾನರ್ ತೆರವುಗೊಳಿಸುವ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರವಾಗಿತ್ತು. ಕೌನ್ಸಿಲರ್‌ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಸಾರ್ವಜನಿಕ ತೊಂದರೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನೋವು ತಂದಿದೆ” ಎಂದಿದ್ದಾರೆ.

ಆರೋಪಕ್ಕೆ ರಾಜೀವ್ ಗೌಡ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಗೌಡ,
“ನಾನು ಅಧಿಕಾರಿಗೆ ಬೆದರಿಕೆ ಹಾಕಿಲ್ಲ. ಫ್ಲೆಕ್ಸ್‌ಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದೇನೆ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಯಾವುದೇ ಕಾನೂನು ಕ್ರಮಕ್ಕೂ ಸಿದ್ಧ” ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜೀವ್ ಗೌಡನ ಬಂಧನಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಮಹಿಳಾ ಅಧಿಕಾರಿಗಳ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾನರ್ ಹಾಕಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದ್ದರು. ಇದಕ್ಕೆ ಸಂಬಂಧಿಸಿ ರಾಜೀವ್ ಗೌಡ ಪೌರಾಯುಕ್ತೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: “ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

“ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ. ಶಿಷ್ಟಾಚಾರದ ಮೂಲಕ ಅವರನ್ನು ನಾನು ಸ್ವಾಗತಿಸಿ, ಭೇಟಿ ಮಾಡಿದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವೇ? ನೀವುಗಳು ನಿಮಗೆ ಇಚ್ಛೆ ಬಂದಂತೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೀರಿ.

ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದು ನಮ್ಮ ನಾಯಕರು ಹೇಳಿದ್ದಾರೆ. ನರೇಗಾ ವಿಚಾರವಾಗಿ ನಾವು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ರಾಜಕಾರಣ ಚರ್ಚೆ ಮಾಡಿದ್ದೇವೆ.

“ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂಬ ಟ್ವೀಟ್ ವಿಚಾರವಾಗಿ ಕೇಳಿದಾಗ, “ನಾನು ಹೊಸದಾಗಿ ಈ ಮಾತನ್ನು ಹೇಳುತ್ತಿಲ್ಲ. ಒಕ್ಕಲಿಗ ಉದ್ಯಮಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅಲ್ಲಿನ ಉದ್ಯಮಿಗಳ ಜೊತೆ ನನ್ನ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದೇನೆ” ಎಂದರು. ದೆಹಲಿಗೆ ತೆರಳುತ್ತಿದ್ದೀರಾ ಎಂದು ಕೇಳಿದಾಗ, “16 ರಂದು ದೆಹಲಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು.

error: Content is protected !!