Home Blog Page 178

ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

0

ಬೆಂಗಳೂರು: ವಿವೇಕನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಂಜಿತ್ ಬಾಗ್ (35) ಮತ್ತು ಮಿಥುನ್ ಕುಂಭಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಓಡಿಸ್ಸಾದಿಂದ ತರಲಾಗುತ್ತಿದ್ದ ಗಾಂಜಾವನ್ನು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವಾಟ್ಸ್‌ಆಪ್ ಮೂಲಕ ಡ್ರಗ್ ಡೀಲಿಂಗ್ ನಡೆಸುತ್ತಿದ್ದು, ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ಎಂಬಾತ ಈ ಇಬ್ಬರನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುವಂತೆ ಸೂಚನೆ ನೀಡುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ರಾಕೇಶ್ ವಾಟ್ಸ್‌ಆಪ್ ಮೂಲಕಲೇ ಡ್ರಗ್ ಡೀಲ್‌ಗಳನ್ನು ಆಪರೇಟ್ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಕೇಶ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಮೊದಲು ಈ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 21 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಕೇಶ್ ಹಾಗೂ ಸುಕ್ರ ವರ್ಮಾ ಎಂಬುವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ವಿವೇಕನಗರ ಪೊಲೀಸರ ಮುಂದುವರೆದ ತನಿಖೆ ನಡೆಯುತ್ತಿದೆ.

 

ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ

0

ಚಿತ್ರದುರ್ಗ: ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿನ್ನೆ ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಬಂದಿದ್ದರು. ಜರ್ಮನಿಯು ಉತ್ಪಾದನಾ ಹಬ್ ಆಗಿರುವ ತಂತ್ರಜ್ಞಾನದ ದೇಶ. ಅಂಥ ದೇಶದ ಚಾನ್ಸೆಲರ್ ಕರ್ನಾಟಕಕ್ಕೆ ಬಂದರೆ, ಇವರಲ್ಲಿ ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಅದೇ ಕುರ್ಚಿ ಕಸಿದುಕೊಳ್ಳಲು ಹೋಗಿ ರಾಹುಲ್ ಗಾಂಧಿ ಜೊತೆ ನಿಂತುಕೊಂಡಿದ್ದಾರೆ. ಇದರಂದ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಕೇಳಿದರು.

ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಇದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಕಾತುರದಲ್ಲಿದ್ದಾರೆ. ನನ್ನ ತಾಳ್ಮೆ ಕೆಣಕಬೇಡಿ; ನಾನು ಸಿಎಂ ಆಗಬೇಕೆಂದು ಉಳಿದವರು ರೆಡಿ ಆಗಿದ್ದಾರೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಷ್ಟೇ ಅಲ್ಲ; ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ನಾವೆಲ್ಲರೂ ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಎಲ್ಲರದೂ ಆಗಿದೆ. ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ ಎಂದು ನುಡಿದರು. ನಾನು ಈಗಾಗಲೇ ಈ ಕುರಿತು ಪಕ್ಷದ ದೆಹಲಿ ವರಿಷ್ಠರಿಗೆ ಮಾತನಾಡಿದ್ದೇನೆ. ಇವತ್ತು, ನಾಳೆಯೊಳಗೆ ಅದರ ಬಗ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಸರ್ಕಾರಿ ವೈದ್ಯರ ಮನೆಯಲ್ಲಿ ಗಾಂಜಾ ಪತ್ತೆ: ಆರೋಗ್ಯ ಇಲಾಖೆ ನೋಟಿಸ್

0

ಬೆಳಗಾವಿ: ಬೆಳಗಾವಿಯ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ಪತ್ತೆ ಹಾಗೂ ಸೇವನೆ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಂಬಂಧಪಟ್ಟ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

ನಾಲ್ಕು ದಿನಗಳ ಹಿಂದೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೈದ್ಯ ಡಾ. ರಾಹುಲ್ ಬಂತಿ ಅವರ ನಿವಾಸದಲ್ಲಿ ಸುಮಾರು 134 ಗ್ರಾಂ ಗಾಂಜಾ ಪತ್ತೆಯಾಗಿದೆ. ನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತಾಗ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಡಾ. ರಾಹುಲ್ ಬಂತಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡಾ. ರಾಹುಲ್ ಬಂತಿ ಅವರು ಪ್ರಸ್ತುತ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳ ತಜ್ಞ ವೈದ್ಯರಾಗಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ. ಈಶ್ವರ ಗಡಾದ ಡಾ. ರಾಹುಲ್ ಬಂತಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ – ದಿವ್ಯಜ್ಯೋತಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು

0

ತಿರುವನಂತಪುರಂ: ಮಕರ ಸಂಕ್ರಾಂತಿ ಎಂದರೆ ದೇಶಾದ್ಯಂತ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳ ಪ್ರತಿಧ್ವನಿ. ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು, ಕಠಿಣ ವೃತಗಳನ್ನು ಪಾಲಿಸಿ, ಶಬರಿಮಲೆಗೆ ಹೊರಡುವ ಲಕ್ಷಾಂತರ ಭಕ್ತರ ದೃಶ್ಯವೇ ಒಂದು ಭಕ್ತಿ ಹಬ್ಬ.

ಇಂದು ಮಕರ ಸಂಕ್ರಾಂತಿ. ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಪವಿತ್ರ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಶಬರಿಮಲೆಯಲ್ಲಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಇನ್ನೂ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಅಯ್ಯಪ್ಪನ ತತ್ವವೇ “ತತ್ವಮಸಿ” — ನೀನೇ ಆ ದೇವರು ಎಂಬ ವೇದ ಮಹಾವಾಕ್ಯದ ಸಾರ. ಅಜ್ಞಾನದಿಂದ ಜ್ಞಾನಕ್ಕೆ ದಾರಿ ತೋರಿಸುವ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಲಕ್ಷಾಂತರ ಭಕ್ತರು ಮಾಲೆ ಧರಿಸಿ ವೃತಾಚರಣೆ ನಡೆಸುತ್ತಾರೆ. ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಭಕ್ತರ ಸಂಖ್ಯೆಯ ಭಾರೀ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ವ್ಯವಸ್ಥೆ ಭಾರೀ ಮುನ್ನೆಚ್ಚರಿಕೆ ವಹಿಸಿದೆ.  1,000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ, ಬಿಗಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಮತ್ತು ತುರ್ತು ಸೇವೆಗಳ ವ್ಯವಸ್ಥೆ

ಆದರೆ ಈ ಭಕ್ತಿ ಸಂಭ್ರಮದ ನಡುವೆ, ಕೇರಳದಲ್ಲಿ ವಿವಾದವೂ ಭುಗಿಲೆದ್ದಿದೆ. ಎರೆಮಲೆಯಲ್ಲಿ ಮಾಲಾಧಾರಿಗಳ ವಾಹನಗಳನ್ನು ನಿಲ್ಲಿಸಿ, “ಖಾಸಗಿ ವಾಹನ ಬಿಡುವುದಿಲ್ಲ, ಕೇರಳ ಸರ್ಕಾರಿ ಬಸ್‌ಲ್ಲೇ ಹೋಗಬೇಕು” ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

“ನಾವು ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಈಗ ಮತ್ತೆ ಸರ್ಕಾರಿ ಬಸ್‌ಗೆ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಮ್ಮ ಭಕ್ತಿ ಮತ್ತು ಶ್ರದ್ಧೆಗೆ ಅವಮಾನ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಭಕ್ತರ ಮೇಲೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.

ಕೊಡಲಿಯಿಂದ ಕೊಚ್ಚಿ ಮಹಿಳೆ ಹತ್ಯೆ ಪ್ರಕರಣ: ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

0

ಬೆಂಗಳೂರು ಗ್ರಾಮಾಂತರ: ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಆರೋಪಿ ವೀರಭದ್ರಪ್ಪ ಜನವರಿ 12 ರಂದು ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಗ್ರಾಮದಲ್ಲಿ 55 ವರ್ಷದ ದ್ರಾಕ್ಷಾಯಿಣಿ ಎಂಬ ಮಹಿಳೆಯನ್ನು ಹಾಡಹಗಲೇ ಕೊಲೆ ಮಾಡಿದ್ದ. ಈ ಕೃತ್ಯದ ನಂತರ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ತಡರಾತ್ರಿ ತನ್ನೂರಿನ ಮನೆಯಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೃದಯಾಘಾತದಿಂದ ಮಂಡ್ಯದ ಯೋಧ ಸಾವು: ಪೊಲೀಸರಿಂದ ಗೌರವ ಸಮರ್ಪಣೆ

0

ಮಂಡ್ಯ: ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಗಡಿ ಭದ್ರತಾ ಪಡೆ (BSF) ಯೋಧನೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಎಂದು ಗುರುತಿಸಲಾಗಿದೆ.

ಮೃತ ಯೋಧ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಚಾಕೋರುದಲ್ಲಿರುವ BSF ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2000ರಲ್ಲಿ ಮೈಸೂರಿನಲ್ಲಿ ನಡೆದ BSF ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಆಯ್ಕೆಯಾಗಿ BSF ಸೇರಿದ್ದ ಮಾದೇಗೌಡ, ಕಳೆದ 25 ವರ್ಷಗಳಿಂದ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.

ಮೃತ ಯೋಧರಿಗೆ ಪತ್ನಿ ಎಸ್. ಶಿಲ್ಪಾ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮೃತ ಯೋಧರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಇದೇ ವೇಳೆ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ ಹಾಗೂ ಎಸ್ಪಿ ಶೋಭಾರಾಣಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಧ್ಯಾಹ್ನದ ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Lakkundi-ಲಕ್ಕುಂಡಿಯ ಭರಮಪ್ಪನ ಕಟ್ಟೆ ಕೆಳಗೆ ಏಳು ಕೊಪ್ಪರಿಗೆ ಚಿನ್ನ ಇದೆಯಂತೆ..? ಘಟಸರ್ಪ ಕಾಯುತ್ತಿದೆಯಂತೆ- 25 ವರ್ಷಗಳ ಹಿಂದಿನ ಭಯಾನಕ ದೃಶ್ಯ ಬಿಚ್ಚಿಟ್ಟ ಬಸಪ್ಪ ಬಡಿಗೇರ!

0

ಗದಗ: ಲಕ್ಕುಂಡಿ ಗ್ರಾಮದ ಶಾವಿಗಿ ಭರಮಪ್ಪನ ಕಟ್ಟೆ ಬಳಿ ಹೆಡೆ ಎತ್ತಿ ಕುಳಿತ ಘಟಸರ್ಪವನ್ನು 25 ವರ್ಷಗಳ ಹಿಂದೆ ಕಣ್ಣಾರೆ ಕಂಡಿದ್ದೇನೆ ಎಂದು ಬಸಪ್ಪ ಬಡಿಗೇರ ಹೇಳಿದ್ದಾರೆ. ಈ ಭಯಾನಕ ದೃಶ್ಯ ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.

ಆಲದ ಮರದ ಕೆಳಗೆ, ಬೀಸುಕಲ್ಲಿನ ಆಕಾರದಲ್ಲಿ ಹೆಡೆ ಎತ್ತಿ ಕುಳಿತಿದ್ದ ಘಟಸರ್ಪವನ್ನು ಕಂಡು ಕೈಯಲ್ಲಿದ್ದ ಚೆಂಬನ್ನು ಬಿಟ್ಟು ಭಯದಿಂದ ಓಡಿ ಮನೆಗೆ ಹೋಗಿದ್ದೆ ಎಂದು ಬಸಪ್ಪ ವಿವರಿಸಿದ್ದಾರೆ.

ಘಟಸರ್ಪವು ಸುಮಾರು ಆರು ಅಡಿ ಉದ್ದವಿತ್ತು. ಆ ದೃಶ್ಯ ನೋಡಿ ‘ಶಿವ ಶಿವ ಪರಮಾತ್ಮ’ ಎಂದು ಹೇಳಿಕೊಂಡು ಅಲ್ಲಿಂದ ಓಡಿ ಬಂದೆ ಎಂದು ನೆನಪಿಸಿಕೊಂಡಿದ್ದಾರೆ.

ಶಾವಿಗಿ ಭರಮಪ್ಪನ ಕಟ್ಟೆಯ ಕೆಳಗೆ ಏಳು ಕೊಪ್ಪರಿಗೆ ಚಿನ್ನ ಇರುವುದು ಸತ್ಯ ಎಂದು ಹೇಳಿರುವ ಬಸಪ್ಪ, ನಿಧಿಯ ಕಾವಲಿಗಾಗಿ ಅಲ್ಲಿ ಎರಡು ಕೋಣಗಳು ಹಾಗೂ ಒಂದು ಘಟಸರ್ಪ ಇರುವುದಾಗಿ ಗ್ರಾಮಸ್ಥರಲ್ಲಿ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ನಿಧಿ ತೆಗೆಯಲು ಬಂದಾಗ ಮೊದಲು ಎರಡು ಕೋಣಗಳು, ನಂತರ ಘಟಸರ್ಪ ಕಾಣಿಸಿಕೊಳ್ಳುತ್ತದೆ ಎಂಬ ಮಾತುಗಳು ಹರಡಿವೆ.

ಇಂತಹ ನಿಧಿಯನ್ನು ತೆಗೆಯಲು ತಾಕತ್ತಿರುವ ಮಂತ್ರವಾದಿಯ ಅಗತ್ಯವಿದೆ ಎನ್ನುವ ನಂಬಿಕೆ ಇದೆ. ಸ್ವಾತಂತ್ರ್ಯ ನಂತರವೂ ನಿಧಿ ತೆಗೆಯಲು ಪ್ರಯತ್ನ ನಡೆದಿದ್ದು, ಆ ವೇಳೆ ಒಬ್ಬ ರಕ್ತಕಾರಿ ಮೃತಪಟ್ಟಿದ್ದಾನೆ ಎಂಬ ವದಂತಿಯೂ ಇದೆ. ಈ ಕಾರಣದಿಂದ ನಿಧಿ ತೆಗೆಯುವ ಪ್ರಯತ್ನ ವಿಫಲವಾಗಿ ಎಲ್ಲರೂ ಓಡಿ ಹೋಗಿದ್ದಾರೆ ಎಂದು ಬಸಪ್ಪ ಹೇಳಿದ್ದಾರೆ.ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಬಂಗಾರ ಸಿಗುತ್ತದೆ ಎನ್ನುವ ಮಾತುಗಳು ಇಂದಿಗೂ ಗ್ರಾಮದಲ್ಲಿ ಕೇಳಿ ಬರುತ್ತಿವೆ.

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ವಿಜಯನಗರ – ಚಾಲುಕ್ಯರ ಕಾಲದ ಒಡವೆಗಳಾಗಿರುವ ಸಾಧ್ಯತೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ಗದಗ: ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ನಿಧಿಯಲ್ಲಿನ ಒಡವೆಗಳು ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿರುವ ಸಾಧ್ಯತೆ ಇದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಒಡವೆಗಳು ಕನಿಷ್ಠ 300 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಬ್ರಿಟಿಷ್ ಕಾಲಕ್ಕೂ ಮೊದಲುಗಿನವುಗಳಾಗಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಒಡವೆಗಳನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ನಾಲ್ಕು ಮಂದಿ ಅಧಿಕಾರಿಗಳ ತಂಡ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ನಾಲ್ವರು ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿಯೇ ಸಂಪೂರ್ಣ ವಿಡಿಯೋ ಚಿತ್ರೀಕರಣದ ಮೂಲಕ ಈ ಪರಿಶೀಲನೆ ಪ್ರಕ್ರಿಯೆ ನಡೆಸಲಾಗಿದೆ. ಒಡವೆಗಳ ಕುರಿತು ಸಂಪೂರ್ಣ ವರದಿ ಬರಲು ಮೂರು ದಿನಗಳ ಕಾಲ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ನೋಡಿದಾಗ ಈ ಒಡವೆಗಳು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದವುಗಳೆಂದು ತೋರುತ್ತಿದೆ. ಒಡವೆಗಳ ಗಾತ್ರವನ್ನು ಗಮನಿಸಿದರೆ, ದಷ್ಟಪುಷ್ಟ ವ್ಯಕ್ತಿಗಳು ಧರಿಸುತ್ತಿದ್ದ ಆಭರಣಗಳಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷವಾಗಿ ಕೈಕಡಗ, ಕಿವಿಯ ಓಲೆಗಳ ವಿನ್ಯಾಸವನ್ನು ಆಧರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ವರದಿ ಬಂದ ಬಳಿಕ ನಿಖರವಾದ ಕಾಲಘಟ್ಟ ಹಾಗೂ ಇತಿಹಾಸಿಕ ಹಿನ್ನೆಲೆ ಸ್ಪಷ್ಟವಾಗಲಿದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿದ್ದಾರೆ.

ತಂದೆ ಮಾತು ಮೀರಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ಕೊಟ್ಟೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಹೆಚ್‌ಡಿ ರೇವಣ್ಣ ಗರಂ

0

ಹಾಸನ: ಜಿಲ್ಲೆಯ ರಾಜಕೀಯ ಮತ್ತೆ ಕುದಿಯತೊಡಗಿದೆ. ಅರಸೀಕೆರೆಯಿಂದ ಸ್ಪರ್ಧೆ ಮಾಡುವಂತೆ ಶಾಸಕ ಶಿವಲಿಂಗೇಗೌಡ ನೀಡಿದ ಪಂಥಾಹ್ವಾನಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಭಾರೀ ಪ್ರತಿಕ್ರಿಯೆ ನೀಡಿದ್ದು, ವೇದಿಕೆಯಲ್ಲೇ ಸ್ಫೋಟಕ ವಾಗ್ದಾಳಿ ನಡೆಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ,
“ಈ ಗಿರಾಕಿ ಎಲ್ಲಿದ್ದ? ಇಷ್ಟು ಮಾತನಾಡ್ತಾನಾ? ಅವನಿಗೆ ತಾಕತ್ ಇದ್ಯಾ?” ಎಂದು ನೇರವಾಗಿ ಪ್ರಶ್ನೆ ಎಸೆದಿದ್ದಾರೆ.

“ಆ ಸಮಾಜದ ಹೆಸರಿನಲ್ಲಿ ಇಪ್ಪತ್ತು ವರ್ಷ ರಾಜಕೀಯ ಮಾಡಿಕೊಂಡಿದ್ದಾನೆ. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ನಾನು ಚೆನ್ನಾಗಿ ಗೊತ್ತಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ” ಎಂದು ಎಚ್ಚರಿಕೆ ಶೈಲಿಯಲ್ಲಿ ಹೇಳಿದ್ದಾರೆ.

“ನಾನು ಸವಾಲು ಸ್ವೀಕರಿಸುತ್ತೇನೆ. ಆದರೆ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ. ಅವನು ಈ ಮಟ್ಟಕ್ಕೆ ಬರಲು ನಾವು ಏನೇನು ಮಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿದೆ” ಎಂದು ತಮ್ಮ ಕೊಡುಗೆಗಳನ್ನು ನೆನಪಿಸಿದರು.

ಹಿಂದಿನ ರಾಜಕೀಯ ಹಿನ್ನೆಲೆಯ ಬಗ್ಗೆ ಮಾತನಾಡಿದ ರೇವಣ್ಣ, “ನಮ್ಮ ಸಮಾಜ ಒಕ್ಕಲಿಗರಿಗೆ ಟಿಕೆಟ್ ನೀಡಿ ಎಂದಿತ್ತು. ಆದರೂ ನಾನು ಕುರುಬ ಸಮುದಾಯದ ಬಿಳಿ ಚೌಡಯ್ಯರನ್ನು ಜಿಪಂ ಉಪಾಧ್ಯಕ್ಷನನ್ನಾಗಿ ಮಾಡಿದೆ. ನಾಲ್ಕು ಬಾರಿ ಗೆಲ್ಲಿಸಿದವರು ಯಾರು?” ಎಂದು ಪ್ರಶ್ನಿಸಿದರು.

“ಚುನಾವಣೆಯಲ್ಲಿ ಸೋತ ದಿನ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದೆ. ನನ್ನ ತಂದೆ ಲಿಂಗಾಯಿತರಿಗೆ ಕ್ಷೇತ್ರ ಕೊಡಬೇಕು ಎಂದಿದ್ದರು. ಆದರೆ ಅವರ ಮಾತು ಮೀರಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ಕೊಟ್ಟೆ” ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ತಾನು ಮತ್ತು ಕುಮಾರಸ್ವಾಮಿ ಸಹಿ ಹಾಕಿದ ವಿಚಾರ ಉಲ್ಲೇಖಿಸಿ, “ನಮ್ಮ ಸಮಾಜದವರೇ ಪ್ರಶ್ನೆ ಮಾಡಿದರೂ ನಾವು ಸಹಿ ಹಾಕಿದೆವು” ಎಂದರು.

ಹಾಸನ ಕ್ಷೇತ್ರದ ರಾಜಕೀಯದ ಬಗ್ಗೆ ಮಾತನಾಡುತ್ತಾ, “ಐವತ್ತು ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದರು. ಆಗ ನನ್ನ ಪತ್ನಿಯನ್ನು ಪ್ರಚಾರಕ್ಕೆ ಕಳುಹಿಸಿದೆ. ಸಾಮಾನ್ಯ ಕಾರ್ಯಕರ್ತ ಸ್ವರೂಪ್‌ಪ್ರಕಾಶ್ ಅವರನ್ನು ನಿಲ್ಲಿಸಿದೆ” ಎಂದು ಹೇಳುವ ಮೂಲಕ ಪ್ರೀತಂ ಗೌಡ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.

ಅರಸೀಕೆರೆ ವ್ಯಾಪಾರಿಯ ಅಕಾಲಿಕ ಮರಣ: ಗ್ರಾಹಕರಿಗೆ ವಸ್ತು ಕೊಡುತ್ತಲೇ ನೆಲಕ್ಕುರುಳಿ ಸಾವು

0

ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಂಗಡಿಯಲ್ಲಿ ವ್ಯವಹಾರದಲ್ಲಿ ನಿರತರಾಗಿದ್ದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಜೀವ ಕಳೆದುಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಮೃತ ವ್ಯಕ್ತಿ ದುಮ್ಮೇನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ (45). ಅವರು ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ನಡೆಸುತ್ತಿದ್ದರು. ಜ.12ರ ಸಂಜೆ ಅಂಗಡಿಯಲ್ಲಿ ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿದ್ದ ಸಂದರ್ಭದಲ್ಲೇ ಪ್ರವೀಣ್ ಏಕಾಏಕಿ ನೆಲಕ್ಕುರುಳಿದ್ದಾರೆ.

ಸ್ಥಳದಲ್ಲಿದ್ದ ಅವರ ಪುತ್ರ ತಕ್ಷಣ ಸ್ಪಂದಿಸಿ ತಂದೆಗೆ ಪ್ರಥಮ ಚಿಕಿತ್ಸೆಯಾಗಿ ಎದೆ ಒತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗದೆ, ಪ್ರವೀಣ್ ಅಂಗಡಿಯಲ್ಲೇ ಮೃತಪಟ್ಟಿದ್ದಾರೆ.

ಈ ಪ್ರಕರಣ ಮತ್ತಷ್ಟು ನೋವು ತಂದಿರುವುದು ಕುಟುಂಬ ಹಿನ್ನೆಲೆಯಿಂದ. ಕೊರೊನಾ ಸಮಯದಲ್ಲಿ ಪ್ರವೀಣ್ ಅವರ ಪತ್ನಿ ಸಾವನ್ನಪ್ಪಿದ್ದು, ಇದೀಗ ತಂದೆಯನ್ನೂ ಕಳೆದುಕೊಂಡ ಮಗ ಒಬ್ಬನೇ ಅನಾಥನಾಗಿ ಉಳಿದಿದ್ದಾನೆ.

ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡಿದವರು ಕಣ್ಣೀರಿಡುವಂತಾಗಿದೆ.

error: Content is protected !!