Home Blog Page 190

ಮೆಕ್ಕೆಜೋಳ ಬೆಳೆದ ರೈತರ ಗೊಂದಲ ನಿವಾರಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳ ಎಂಎಸ್‌ಪಿ ಅಡಿಯಲ್ಲಿ ಖರೀದಿ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿ ಟಿಎಪಿಎಂಎಸ್ ಮೂಲಕ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಈ ನಡುವೆ ಏಕಾಏಕಿ ಅದನ್ನು ಪೂರ್ಣಗೊಳಿಸದೇ ಮಾರುಕಟ್ಟೆ ಮಧ್ಯಪ್ರವೇಶ ದರ ಅಡಿಯಲ್ಲಿ ನೋಂದಣಿ ಪ್ರಾರಂಭಿಸಿದೆ. ಹೀಗಾದರೆ ಈಗಾಗಲೇ ಎಂಎಸ್‌ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ರೈತರ ಗತಿಯೇನು ಎಂದು ಟಿಎಪಿಸಿಎಂಎಸ್‌ನ ತಾಲೂಕಾಧ್ಯಕ್ಷ ಸೋಮಣ್ಣ ಉಪನಾಳ ಪ್ರಶ್ನಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಎಂಎಸ್‌ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ಅಂದಾಜು ಶೇ. 70ಕ್ಕೂ ಅಧಿಕ ರೈತರ ಡೆಲಿವರಿ ಬಾಕಿ ಇದೆ. ಪ್ರಥಮ ಆದ್ಯತೆಯ ಮೇರೆಗೆ ಬಾಕಿಯಿರುವ ರೈತರ ಡೆಲಿವರಿಯನ್ನು ಪಡೆಯಲು ಸರ್ಕಾರ ಶೀಘ್ರವಾಗಿ ಕ್ರಮ ವಹಿಸಬೇಕು. ಇದರೊಂದಿಗೆ ತರಾತುರಿಯಲ್ಲಿ ನೋಂದಣಿಗಾಗಿ ಸೃಷ್ಟಿಸಿದ ತಂತ್ರಾಂಶ ಸಂಪೂರ್ಣ ಅವೈಜ್ಞಾನಿಕವಾಗಿದೆ.
ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಪೂರ್ಣ ವೈಜ್ಞಾನಿಕವಾಗಿ ಪ್ರಕ್ರಿಯೆಗೆ ಅಣಿಯಾಗಿ ಕಡಲೆ, ಕುಸುಬಿ, ಬಿಳಿಜೋಳ ಮುಂತಾದವುಗಳಿಗೆ ಬೆಂಬಲ ಬೆಲೆ ಅಡಿಯಲ್ಲಿ ಪ್ರಕ್ರಿಯೆ ನೋಂದಣಿಗೆ ಚಾಲನೆ ನೀಡಿ ರೈತ ಕುಲಕ್ಕೆ ಒಳಿತನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

WPL 2026; ಡೆಲ್ಲಿ ವಿರುದ್ಧ ಸುಲಭವಾಗಿ ಗೆದ್ದು ಲೀಗ್ ನಲ್ಲಿ ಗೆಲುವಿನ ಖಾತೆ ತೆರೆದ ಮುಂಬೈ!

0

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026ರ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಆರಂಭಿಕ ಆಘಾತಗಳ ನಡುವೆಯೂ ನೇಟ್ ಸೀವರ್ ಬ್ರಂಟ್ (70) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಅಜೇಯ 74) ಅವರ ಅದ್ಭುತ ಇನ್ನಿಂಗ್ಸ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿತು.

196 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಮುಖ ಆಟಗಾರ್ತಿಯರ ವೈಫಲ್ಯದಿಂದ 19 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಚಿನೆಲ್ಲೆ ಹೆನ್ರಿ (56) ಒಬ್ಬರೇ ಹೋರಾಟ ನಡೆಸಿದರೂ ಫಲಿತಾಂಶ ಬದಲಾಯಿಸಲು ಸಾಧ್ಯವಾಗಲಿಲ್ಲ.

ಮುಂಬೈ ಪರ ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ಮತ್ತು ಸೀವರ್ ಬ್ರಂಟ್ ಅವರ ಶಿಸ್ತಿನ ಬೌಲಿಂಗ್ ಡೆಲ್ಲಿಯನ್ನು ಸಂಪೂರ್ಣವಾಗಿ ಕಟ್ಟಿಹಾಕಿತು ಎನ್ನಲಾಗಿದೆ.

ಚಿತ್ರದುರ್ಗ| ಭೀಕರ ಅಪಘಾತ; ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ದುರ್ಮರಣ

0

ಚಿತ್ರದುರ್ಗ:- ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

ಮೃತರನ್ನು ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶ್ವಂತ್(22) ಎಂದು ಗುರುತಿಸಲಾಗಿದೆ. ಇವರು ಹಿರಿಯೂರು ತಾಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದವರು ಎನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆಡಿಎಸ್‌ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಸೂಸೈಡ್!

0

ಉತ್ತರ ಕನ್ನಡ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜರುಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರಿಶಾಲ್‌ ಡಿಸೋಜಾ‌(20) ಎಂದು ಗುರುತಿಸಲಾಗಿದೆ. ಚೈತ್ರಾ ಕೋಠಾರಕರ ಪುತ್ರ ಚಿರಾಗ್​​ ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪ ಕೇಳಿಬಂದಿದೆ.

ಚೈತ್ರಾ ಕೋಠಾರಕರ ಪುತ್ರ ಚಿರಾಗ್​​, ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿ ನಿವಾಸಿ ರಿಶಾಲ್‌ ಡಿಸೋಜಾ‌ಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಕಳೆದ ಕೆಲ ದಿನಗಳಿಂದ ಯುವತಿ ಮನೆ ಬಳಿ ಬಂದು ಹೋಗುತ್ತಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದು ಚಿರಾಗ್‌ ಹೇಳಿದ್ದ. ಇದರಿಂದ ನೊಂದ ರಿಶಾಲ್‌ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಸದ್ಯ ರಿಶಾಲ್‌ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ದೂರಿನ ಮೇರೆಗೆ ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಶೀಘ್ರವೇ ಟ್ರ್ಯಾಕಿಗಿಳಿಯಲಿದೆ ಪಿಂಕ್ ಲೈನ್ ಮೆಟ್ರೋ, ನಾಳೆ ರೋಲಿಂಗ್ ಸ್ಟಾಕ್ ಟೆಸ್ಟ್ ಆರಂಭ!

0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ.

ಶೀಘ್ರವೇ ಪಿಂಕ್ ಲೈನ್ ಮೆಟ್ರೋ ಟ್ರ್ಯಾಕ್‌ಗೆ ಇಳಿಯಲಿದ್ದು, ನಾಳೆಯಿಂದ ರೋಲಿಂಗ್ ಸ್ಟಾಕ್ ಪರೀಕ್ಷೆಗಳು ಆರಂಭವಾಗಲಿವೆ. ಈ ಪರೀಕ್ಷೆಗಳ ಮೂಲಕ ಸಿಗ್ನಲಿಂಗ್ ವ್ಯವಸ್ಥೆ, ಬ್ರೇಕ್ ಕಾರ್ಯಕ್ಷಮತೆ, ರೈಲಿನ ವೇಗ, ವಿದ್ಯುತ್ ಹಾಗೂ ದೂರಸಂಪರ್ಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಲಾಗುತ್ತದೆ.

ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಸುಮಾರು 7.5 ಕಿ.ಮೀ ಉದ್ದದ ಪಿಂಕ್ ಲೈನ್ ಮಾರ್ಗದಲ್ಲಿ ರೋಲಿಂಗ್ ಸ್ಟಾಕ್ ಟೆಸ್ಟ್ ನಡೆಯಲಿದ್ದು, ಜ.11ರಿಂದ ಏಪ್ರಿಲ್ ಮಧ್ಯಭಾಗದವರೆಗೆ ಮುಂದುವರೆಯಲಿದೆ. ವಾಣಿಜ್ಯ ಸಂಚಾರ ಆರಂಭಿಸುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಹಂತವಾಗಿರುವ ಈ ಪರೀಕ್ಷೆಗಳು, ಮೆಟ್ರೋ ರೈಲುಗಳ ಕಾರ್ಯಕ್ಷಮತೆ ಹಾಗೂ ವಿವಿಧ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಂಪೂರ್ಣ ಮೌಲ್ಯಮಾಪನಕ್ಕೆ ನೆರವಾಗಲಿವೆ. ಅನುಮೋದನೆ ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿವೆ.

ಅವ್ವ ಸೇವೆಗೆ ಗೌರವ: ಡಾ. ಬಸವರಾಜ ಧಾರವಾಡರಿಗೆ ಸನ್ಮಾನ

0

ಗದಗ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಯಡಿಯೂರ-ಗದಗ, ಲಿಂಗಾಯತ ಪ್ರಗತಿಶೀಲ ಸಂಘ ಗದಗ ಹಾಗೂ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅವ್ವನ ಕುರಿತ ವಿಶೇಷ ಶಿವಾನುಭವ, ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ರೂವಾರಿಗಳಾದ ಅವ್ವ ಸೇವಾ ಟ್ರಸ್ಟ್‌ನ ಗದಗಿನ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರನ್ನು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಅವ್ವ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶಶಿ ಸಾಲಿ ಮುಂತಾದವರು ಉಪಸ್ಥಿತರಿದ್ದರು.

ಚಳಿ ಎಫೆಕ್ಟ್: ಚಿಕನ್–ಮೊಟ್ಟೆ ದರ ಏರಿಕೆ! ಕೆಜಿ ಮಾಂಸ ಎಷ್ಟು ಗೊತ್ತಾ?

0

ಬೆಂಗಳೂರು:- ಕರ್ನಾಟಕದಲ್ಲಿ ಚಳಿ ತೀವ್ರವಾಗಿದ್ದು, ಇದರ ಪರಿಣಾಮವಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಯ ದರದಲ್ಲಿ ಏರಿಕೆ ಕಂಡುಬಂದಿದೆ.

ಶೀತ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿದ್ದು, ಕೋಳಿ ಫಾರಂಗಳಲ್ಲಿ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಾದ ಕೋಳಿ ಸದ್ಯ 1.8 ಕೆಜಿಗೆ ಸೀಮಿತವಾಗುತ್ತಿದ್ದು, ತಿಂಗಳಿಗೆ 28ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ 22ರಿಂದ 24 ಮೊಟ್ಟೆ ಮಾತ್ರ ಇಡುತ್ತಿವೆ.

ಚಳಿಗಾಲದಲ್ಲಿ ಸೂರ್ಯನ ಬೆಳಕು ಹಾಗೂ ಬಿಸಿಲಿನ ಕೊರತೆಯಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಚಿಕನ್ ಬೆಲೆ ಕೆಜಿಗೆ 280ರಿಂದ 300 ರೂಪಾಯಿಗೆ ಏರಿಕೆಯಾಗಿ, ಮೊಟ್ಟೆಯ ದರದಲ್ಲೂ ಹೆಚ್ಚಳವಾಗಿದೆ. ಬೆಲೆ ಏರಿಕೆಯ ಹೊಡೆತದಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮೊಟ್ಟೆ ಬೇಡಿಕೆ ಕುಸಿತ ಕಂಡುಬಂದಿದೆ.

ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿಗೆ ಪತ್ರಕರ್ತ ನಾಗರಾಜ್ ವೈ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ಮಾಧ್ಯಮ ಅಕಾಡೆಮಿಯ 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ `ಪ್ರಜಾ ಸಂದೇಶ ದತ್ತಿ ಪ್ರಶಸ್ತಿ’ಗೆ ಟಿವಿ 5 ವಾಹಿನಿ ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜ್ ವೈ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮಾಧ್ಯಮ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ದೃಶ್ಯ ಹಾಗೂ ಮುದ್ರಣ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಯುವಕನೊಬ್ಬ ಅನ್ಯಜಾತಿ ಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ ಹಾಕಿದ ಘಟನೆ ಬಗ್ಗೆ ಟಿವಿ 5 ವಾಹಿನಿಯಲ್ಲಿ ವಿಶೇಷ ವರದಿ ಮಾಡಿದ್ದರು.

ಕೊಪ್ಪಳ ಜಿಲ್ಲೆಯ ಪತ್ರಕರ್ತ ಬಳಗ ಹರ್ಷ ವ್ಯಕ್ತಪಡಿಸಿದ್ದು ಅರ್ಹ ಪತ್ರಕರ್ತನಿಗೆ ಪ್ರಶಸ್ತಿ ದೊರಕಲು ಕಾರಣರಾದ ಮಾಧ್ಯಮ ಅಕಾಡೆಮಿ ಅಧ್ಯಕ್ಷರಿಗೂ, ಮಾಧ್ಯಮ ಅಕಾಡೆಮಿ ಸದಸ್ಯರು, ಕೊಪ್ಪಳದ ಹಿರಿಯ ಪತ್ರಕರ್ತರಾದ ನಿಂಗಜ್ಜ ಅವರಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು ಅವರಿಗೆ ಕೊಪ್ಪಳ ಜಿಲ್ಲೆಯ ಪತ್ರಕರ್ತರು ಅಭಿನಂದನೆ ತಿಳಿಸಿದ್ದಾರೆ.

ಪ್ರಶಸ್ತಿಯು ಸಾಮಾಜಿಕವಾಗಿ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾನು ಮಾಡಿದ ವರದಿ ಪರಿಗಣಿಸಿ ಪ್ರಶಸ್ತಿ ನೀಡಿದ್ದಕ್ಕೆ ಸರ್ಕಾರಕ್ಕೆ ಹಾಗೂ ಮಾಧ್ಯಮ ಅಕಾಡೆಮಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರ್ಹರನ್ನು ಗುರುತಿಸುತ್ತಿರುವ ಅಕಾಡೆಮಿ ಸದಸ್ಯರು, ಹಿರಿಯ ಪತ್ರಕರ್ತ ಕೆ. ನಿಂಗಜ್ಜ, ಮಾಧ್ಯಮ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು, ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಎಂ ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರಿಗೆ ನಾಗರಾಜ್ ವೈ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪುರ ರಸ್ತೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ರಾಷ್ಟ್ರಮಟ್ಟದ 4ನೇ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸ್ಥಳೀಯ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಪಟುಗಳಾದ ಸಂಪ್ರೀತ್ ಪಿ.ಹೂಗಾರ್ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ, ವಿರೂಪಾಕ್ಷಿ ಕೆ.ಹೊಂಬಾಳಿ ಕುಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ದ್ವಿತೀಯ, ಅಮೈರಾ ಮುಲ್ಲಾ ಕಟಾದಲ್ಲಿ ಪ್ರಥಮ, ವೇದಸಾಯಿ ವಿ.ಪುಪ್ತಿ ಕಟಾದಲ್ಲಿ ತೃತೀಯ, ಯಜ್ಞ ಸಾಯಿ ವಿ.ಪುಪ್ತಿ ತೃತೀಯ ಸ್ಥಾನ ಹಾಗೂ ಭರತ್ ಇರಾಳ್ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಾದ ಆಸೀಫ್ ಅ.ಕದಡಿ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ: ಜ್ಯೋತಿ ಎಂ.ಗೊಡಬಾಳ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಗಲಾಟೆಯ ಘಟನೆಗಳನ್ನು ರಾಜಕೀಯ ಲಾಭಕ್ಕೆ ಜಟಿಲಗೊಳಿಸಿ ಹಲ್ಲೆಯ ಆರೋಪ ಹೇಳುತ್ತಿರುವುದು ಬಿಜೆಪಿಯ ಹತಾಶೆಯ ಮನಸ್ಥಿತಿಯ ಕಾರಣಕ್ಕೆ ಬಂದವುಗಳು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ. ದೇಶದಲ್ಲಿ ಈಗಾಗಲೇ ಸುಳ್ಳು ಹೇಳುವ ಮೂಲಕ, ಜನ ಮತ್ತು ವ್ಯವಸ್ಥೆಯನ್ನು ಕಲುಷಿತಗೊಳಿಸಿ ಅಧಿಕಾರ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಮರ್ಥ ಆಡಳಿತ ಅರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಹತಾಶೆಯಿಂದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೊಪ್ಪಳದ ರೈಲ್ವೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇದನ್ನು ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಮಾಡಿಸಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಇದೆಲ್ಲಾ ಅತ್ಯಂತ ಕ್ಷುಲ್ಲಕ ಮತ್ತು ಅಧಿಕಾರದ ಹಪಾಹಪಿತನಕ್ಕೆ ಸಾಕ್ಷಿಯಾಗಿದೆ. ಇಂತಹ ಕೆಲಸ ಮಾಡುವುದೇ ಬಿಜೆಪಿಯ ಹಳೆಯ ಚಾಳಿ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸಹಜವಾಗಿ ಕಾರ್ಯಕರ್ತರಿಗೆ ನೋವಾಗಿ ಕೂಗಾಡಿದ್ದಕ್ಕೆ ಬಡಿದೇ ಬಿಟ್ಟರು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಜನಾರ್ಧನರಡ್ಡಿ ಅವರು ಕಾಲಿಡುತ್ತಲೇ ಜಗಳ, ಗಲಾಟೆಗಳು ಪ್ರಾರಂಭವಾಗಿದ್ದು, ಸದಾ ತಮಗೆ ಸಂಬಂಧವೇ ಇಲ್ಲದ ಮಾತುಗಳಿಂದ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡುವ ಜನಾರ್ಧನ ರಡ್ಡಿಯವರಿಂದಲೇ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಶಾಂತಿ ಭಂಗವಾಗುತ್ತಿದೆ. ಇವರನ್ನು ಕಾನೂನು ಮೂಲಕ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.

error: Content is protected !!