ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳ ಎಂಎಸ್ಪಿ ಅಡಿಯಲ್ಲಿ ಖರೀದಿ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿ ಟಿಎಪಿಎಂಎಸ್ ಮೂಲಕ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಈ ನಡುವೆ ಏಕಾಏಕಿ ಅದನ್ನು ಪೂರ್ಣಗೊಳಿಸದೇ ಮಾರುಕಟ್ಟೆ ಮಧ್ಯಪ್ರವೇಶ ದರ ಅಡಿಯಲ್ಲಿ ನೋಂದಣಿ ಪ್ರಾರಂಭಿಸಿದೆ. ಹೀಗಾದರೆ ಈಗಾಗಲೇ ಎಂಎಸ್ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ರೈತರ ಗತಿಯೇನು ಎಂದು ಟಿಎಪಿಸಿಎಂಎಸ್ನ ತಾಲೂಕಾಧ್ಯಕ್ಷ ಸೋಮಣ್ಣ ಉಪನಾಳ ಪ್ರಶ್ನಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಎಂಎಸ್ಪಿ ಅಡಿಯಲ್ಲಿ ನೋಂದಾಯಿಸಿಕೊಂಡ ಅಂದಾಜು ಶೇ. 70ಕ್ಕೂ ಅಧಿಕ ರೈತರ ಡೆಲಿವರಿ ಬಾಕಿ ಇದೆ. ಪ್ರಥಮ ಆದ್ಯತೆಯ ಮೇರೆಗೆ ಬಾಕಿಯಿರುವ ರೈತರ ಡೆಲಿವರಿಯನ್ನು ಪಡೆಯಲು ಸರ್ಕಾರ ಶೀಘ್ರವಾಗಿ ಕ್ರಮ ವಹಿಸಬೇಕು. ಇದರೊಂದಿಗೆ ತರಾತುರಿಯಲ್ಲಿ ನೋಂದಣಿಗಾಗಿ ಸೃಷ್ಟಿಸಿದ ತಂತ್ರಾಂಶ ಸಂಪೂರ್ಣ ಅವೈಜ್ಞಾನಿಕವಾಗಿದೆ.
ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಪೂರ್ಣ ವೈಜ್ಞಾನಿಕವಾಗಿ ಪ್ರಕ್ರಿಯೆಗೆ ಅಣಿಯಾಗಿ ಕಡಲೆ, ಕುಸುಬಿ, ಬಿಳಿಜೋಳ ಮುಂತಾದವುಗಳಿಗೆ ಬೆಂಬಲ ಬೆಲೆ ಅಡಿಯಲ್ಲಿ ಪ್ರಕ್ರಿಯೆ ನೋಂದಣಿಗೆ ಚಾಲನೆ ನೀಡಿ ರೈತ ಕುಲಕ್ಕೆ ಒಳಿತನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

