Home Blog Page 21

ಧರ್ಮದ ಅರಿವನ್ನು ಎಷ್ಟು ಅರಿತರೂ ಖಾಲಿಯಾಗದು: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಕಲಘಟಗಿ: ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಶ್ರಮಿಸುವ ಅವಶ್ಯಕತೆಯಿದೆ. ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಅರಿವನ್ನು ಜಾಗೃತಗೊಳಿಸಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪುನರುತ್ಥಾನಗೊಳಿಸುವುದೇ ನಿಜವಾದ ಗುರುವಿನ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ದಾಸ್ತಿಕೊಪ್ಪ ಹನ್ನೆರಡು ಮಠದ ಶಿವಾಚಾರ್ಯ ರತ್ನ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳವರ 35ನೇ ವರ್ಷದ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನದಿಯ ನೀರನ್ನು ಎಷ್ಟು ತುಂಬಿದರೂ ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ 그것ನ್ನು ಖಾಲಿಯಾಗುವುದಿಲ್ಲ. ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ ಸಂಸ್ಕಾರ ದೇವ ಮಾನವರನ್ನು ಸೃಷ್ಟಿಸುತ್ತದೆ. ಜನಮನದಲ್ಲಿ ಮನೆ ಮಾಡಿರುವ ಬಿಕ್ಕಟ್ಟು ಹೋಗಿ ಒಗ್ಗಟ್ಟು ಮೂಡಬೇಕಾಗಿದೆ. ಹಣತೆ ತನಗಾಗಿ ಉರಿಯುವುದಿಲ್ಲ. ಪರಿಸರವನ್ನು ಬೆಳಗಲು ತನ್ನನ್ನು ತಾನು ಸುಟ್ಟುಕೊಂಡು ಉರಿಯುತ್ತದೆ. ಮಹಾತ್ಮರು ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಕರೆದೊಯ್ಯುವ ಮಹಾನ್ ಶಕ್ತಿಯನ್ನು ಹೊಂದಿದ್ದಾರೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ವಿಕಾಸಕ್ಕೆ ಅಮೂಲ್ಯವಾದ ಆಧ್ಯಾತ್ಮದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ಹನ್ನೆರಡು ಮಠದ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಆಚಾರ ವಿಚಾರ ಸಂಪನ್ನರಾಗಿ ಶಿವಾದ್ವೈತ ತತ್ವ ಸಿದ್ಧಾಂತದ ಪ್ರತಿಪಾದಕರಾಗಿ ಗುರುಸ್ಥಲದ ಕೀರ್ತಿ ಕಳಸವನ್ನು ಎತ್ತಿ ಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನೇತೃತ್ವ ವಹಿಸಿದ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಣ ಕಳೆದುಕೊಂಡು ಮನುಷ್ಯ ಬದುಕಬಹುದು. ಆದರೆ ಗುಣ ಕಳೆದುಕೊಂಡು ಬದುಕುವುದು ಕಷ್ಟ. ಶೀಲ, ಶೌರ್ಯ, ಚಟುವಟಿಕೆ, ಪಾಂಡಿತ್ಯ ಮತ್ತು ಮಿತ್ರ ಸಂಗ್ರಹ ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳು. ಲಿಂ. ಮಡಿವಾಳ ಶಿವಾಚಾರ್ಯರು ತಪಸ್ವಿಗಳಾಗಿ ಧರ್ಮ ತತ್ವದ ಪರಿಪಾಲಕರಾಗಿ ಭಕ್ತರ ಬಾಳಿಗೆ ಬೆಳಕು ತೋರಿದರು ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹನುಮಾಪುರ ಕಾಳಿಕಾ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ರಾಯನಾಳ ರೇವಣಸಿದ್ಧೇಶ್ವರ ಸ್ವಾಮಿಗಳು, ಬೆಲವಂತರ ಹಿರೇಮಠದ ರೇವಣಸಿದ್ಧ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಹನ್ನೆರಡು ಮಠದ ನೂತನ ಪಟ್ಟಾಧ್ಯಕ್ಷರಾದ ಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ವೀರಯ್ಯ ನಾಗಲೋಟಿಮಠ ನಿರೂಪಿಸಿದರು. ಮಲ್ಲಯ್ಯಸ್ವಾಮಿ ತೋಟಗಂಟಿ ಮತ್ತು ಸಹ ಕಲಾವಿದರಿಂದ ಸಂಗೀತ ಸೌರಭ ಜರುಗಿತು. ಸಮಾರಂಭಕ್ಕೂ ಮುನ್ನ ಕಲಘಟಗಿ ನಗರದಲ್ಲಿ ಲಿಂ. ಮಡಿವಾಳ ಶಿವಾಚಾರ್ಯರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.

ಸಮಾರಂಭ ಉದ್ಘಾಟಿಸಿದ್ದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಿಪೂರ್ಣನಾದ ಜ್ಞಾನಿ ಯಾವಾಗಲೂ ತುಂಬಿದ ಕೊಡದಂತೆ. ಬೆಳೆದ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಿಂತ ನೆಲ ತ್ಯಾಗದ ಹಿರಿಮೆಯನ್ನು ಮತ್ತು ಪರೋಪಕಾರವನ್ನು ಎತ್ತಿ ತೋರಿಸುತ್ತವೆ. ಅದೇ ರೀತಿ ಮಡಿವಾಳ ಶಿವಾಚಾರ್ಯರು ಧರ್ಮಮುಖಿಯಾಗಿ, ಸಮಾಜಮುಖಿಯಾಗಿ ಬಾಳಿ ಭಕ್ತ ಸಂಕುಲಕ್ಕೆ ಧರ್ಮದ ಬೆಳಕು ತೋರಿ ಮುನ್ನಡೆಸಿದ ಕೀರ್ತಿವಂತರು ಎಂದರು.

ಬೆಂಬಲ ಬೆಲೆಗಾಗಿ ಅನ್ನದಾತರ ಕಿಡಿ: ರಾಜ್ಯ ಸರ್ಕಾರಕ್ಕೆ ರೈತರ ಎಚ್ಚರಿಕೆ-ಅಧಿಕಾರಿಗಳ ಭರವಸೆಯ ನಂತರ ಮೊಟಕುಗೊಂಡ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗದಗ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಲೆ ಪಾತಾಳಕ್ಕಿಳಿದಿದ್ದರಿಂದ ಬೇಸತ್ತಿದ್ದ ರೈತರು ಮಂಗಳವಾರ ಗದಗ–ಬಾಗಲಕೋಟೆ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ, `ಬೆಂಬಲ ಬೆಲೆ ಘೋಷಣೆ ಮಾಡದೇ ಒಂದು ಹೆಜ್ಜೆ ಸಹ ಹಿಂದೆ ಸರಿಯುವುದಿಲ್ಲ’ ಎಂದು ಘೋಷಣೆಗಳನ್ನು ಕೂಗುತ್ತ ಹೋರಾಟ ಕೈಗೊಂಡರು.

ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ವೀರಯೋಧ ದಿ. ಬಸವರಾಜ ರಮಾಣಿಯವರ ಸ್ಮಾರಕ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕೋಟುಮಚಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮಂಗಳವಾರ ಬೆಳಗ್ಗೆಯಿಂದಲೇ ರಾಜ್ಯ ಹೆದ್ದಾರಿಯ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಸ್ತೆಯ ಮಧ್ಯೆ ಟ್ರಾಕ್ಟರ್, ಚಕ್ಕಡಿ, ಬೈಕ್, ಲಾರಿ ನಿಲ್ಲಿಸಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾಜಗೌಡ ಸಂಕನಗೌಡ್ರ ಮಾತನಾಡಿ, ರೈತರ ಕೋಪಕ್ಕೆ ಕಾರಣ ಒಂದೇ, ಈರುಳ್ಳಿ ಮತ್ತು ಮೆಕ್ಕೆಜೋಳಕ್ಕೆ ತಕ್ಷಣವೇ ಬೆಂಬಲ ಬೆಲೆ ಘೋಷಿಸಬೇಕು. ಸಿಎಂ ಬದಲಾವಣೆ ಗೊಂದಲದಲ್ಲಿ ಸರ್ಕಾರ ಮುಳುಗಿದೆ, ರಾಜಕಾರಣಿಗಳು ದಿನವಿಡೀ ಮೋಜು-ಮಸ್ತಿ ಮಾಡುತ್ತಾರೆ. ಆದರೆ ಅನ್ನದಾತನ ಕಣ್ಣೀರು, ಹೊಟ್ಟೆ ಬಾಧೆ, ನಷ್ಟ ಇವೆಲ್ಲ ಯಾರಿಗೂ ಕಾಣುತ್ತಿಲ್ಲ ಎಂದು ಟೀಕಿಸಿ, ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮುತ್ತಣ್ಣಗೌಡ ಚೌರಡ್ಡಿ ಮಾತನಾಡಿ, ಬೆಂಬಲ ಬೆಲೆ ಘೋಷಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಚಳುವಳಿ ಅಬ್ಬರಿಸಲಿದೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಹೋರಾಟ ಈಗಷ್ಟೇ ಶುರುವಾಗಿದೆ ಎಂದರು.

ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ತಕ್ಷಣವೇ ಬರುವಂತೆ ರೈತರು ಒತ್ತಾಯಿಸಿದರಲ್ಲದೆ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಹಾಜರಾಗಲೇಬೇಕು ಎಂದು ಪಟ್ಟು ಹಿಡಿದರು.

ರಸ್ತೆ ತಡೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದ್ದರೂ, ಅನ್ನದಾತರು ಸ್ಪಷ್ಟವಾಗಿ `ನಮ್ಮ ಬೇಡಿಕೆಗೆ ನ್ಯಾಯ ಸಿಕ್ಕರೆ ಮಾತ್ರ ಹೋರಾಟ ಮುಗಿಯಲಿದೆ’ ಎಂದು ಘೋಷಣೆ ಕೂಗಿದರು. ಗದಗದ ಮಣ್ಣಿನಲ್ಲಿ ರೈತರ ಕೋಪ ಈಗ ಜ್ವಾಲಾಮುಖಿಯಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ, ಗದಗ ತಹಸೀಲ್ದಾರರು ಭೇಟಿ ನೀಡಿ ರೈತ ಸಮಸ್ಯೆಯನ್ನು ಆಲಿಸಲು ಮುಂದಾಗಿದ್ದರು. ಆದರೆ, ಜಿಲ್ಲಾಧಿಕಾರಿ, ಸಚಿವರು ಸ್ಥಳಕ್ಕೆ ಬರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾನಿರತ ರೈತರು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹಾದೇವಗೌಡ ಪಾಟೀಲ, ಈರಪ್ಪ ರಾಮಗೇರಿ, ಹುಚ್ಚೀರಪ್ಪ ಬಡಿಗೇರ, ಶ್ರೀಧರ ಕುಲಕರ್ಣಿ, ಬಸವಂತಪ್ಪ ಇಟಗಿ, ಗುರುಮೂರ್ತೆಪ್ಪ ಕುರುಡಗಿ, ಮಲ್ಲೇಶಪ್ಪ ಸೂಡಿ, ಸಂಗಣ್ಣ ದಂಡಿನ, ಶರಣಪ್ಪ ಕೊಪ್ಪದ, ಯಮನೂರಸಾಬ ಬಿಚ್ಚುಮನಿ, ಶಿವಯ್ಯ ಅಂಗಡಿ, ಜಗದೀಶ ಮಲ್ಲಣ್ಣವರ, ಪಾಲಾಕ್ಷಯ್ಯ ಬಳಿಗೇರಿಮಠ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಬಾಕ್ಸ್
ಅಂತಿಮವಾಗಿ ಉಪವಿಭಾಗಾಧಿಕಾರಿ ಗಂಗಪ್ಪ ಹಾಗೂ ಗದಗ ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ ರೈತರ ಮನವೊಲಿಸಲು ಯಶಸ್ವಿಯಾದರು. ರೈತರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಕೂಡಲೇ ಪತ್ರ ಬರೆಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬೆಂಬಲ ಬೆಲೆ ಘೋಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ತರುವಾಯ ರೈತ ಸಂಘಗಳು ಹೋರಾಟವನ್ನು ಮೊಟಕುಗೊಳಿಸಿದರು.

 

ಗೋವಿನಜೋಳದ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ: 4ನೇ ದಿನಕ್ಕೆ ಕಾಲಿಟ್ಟ ರೈತಪರ ಸಂಘಟನೆಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ.

ಆದರಹಳ್ಳಿಯ ಕುಮಾರ ಮಹಾರಾಜ ಸ್ವಾಮೀಜಿ ಸೋಮವಾರದಿಂದಲೇ ಉಪವಾಸ ಕೈಗೊಂಡಿದ್ದು, ಸರಕಾರ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇವರಿಗೆ ಕುಂದಗೋಳದ ಶ್ರೀ ಬಸವಣ್ಣಜ್ಜನವರು ಸಾಥ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ರೈತರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾರೆ. ನಾಲ್ಕು ದಿನ ಕಳೆದರೂ ಸಹ ಜನಪ್ರತಿನಿಧಿಗಳು ಬಂದಿಲ್ಲ. ಇದು ರೈತರನ್ನು ರೊಚ್ಚಿಗೆಬ್ಬಿಸಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತರ ಹೋರಾಟದ ಅರಿವಿಲ್ಲ. ಮೊದಲು ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸಿ, ನಂತರ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆಯ ಹಣ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಬೆಂಬಲ ಬೆಲೆ ಆಸೆ ತೋರಿಸಿದ್ದರಿಂದ ಈ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿದ್ದಾರೆ. ಆದರೆ ಒಕ್ಕಣಿ ಮುಗಿದರೂ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಸರಕಾರಗಳು ರೈತರ ಕಣ್ಣೊರೆಸುವ ತಂತ್ರ ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲವೆಂದರೆ ರೈತರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನಿಸಿದರು.

ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್ ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ ಅವರು ಸತ್ಯಾಗ್ರಹ ನಿರತ ಶ್ರೀಗಳು ಮತ್ತು ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಈ ಹೋರಾಟದ ಬಗ್ಗೆ ಸಾಕಷ್ಟು ಕಳಕಳಿ ವ್ಯಕ್ತಪಡಿಸಿದ್ದು, ನ. 20ರಂದು ನಡೆಯಲಿರುವ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ಮಾಡಲಿದ್ದಾರೆ. 2 ದಿನಗಳಲ್ಲಿ ರೈತರ ಬೇಡಿಕೆ ಈಡೇರುವ ಸಿಹಿ ಸುದ್ದಿ ಸಿಗಲಿದೆ. ದಯವಿಟ್ಟು ಉಪವಾಸ ಕೈಬಿಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆದ್ರಳ್ಳಿ ಶ್ರೀಗಳು, ರೈತರ ನ್ಯಾಯಯುತ ಬೇಡಿಕೆ ಈಡೇರಬೇಕು. ರೈತರು 4 ದಿನಗಳಿಂದ ಅನೇಕ ರೀತಿಯ ಹೋರಾಟ ಮಾಡಿದರೂ ಸ್ಥಳೀಯವಾಗಿಯೇ ಇರುವ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಣ್ಣೆತ್ತಿಯೂ ನೋಡಿಲ್ಲ. ಅವರ ಬಗ್ಗೆ ನಮಗೆ ವಿಶ್ವಾಸ ಇಲ್ಲದಂತಾಗಿದೆ. ಇನ್ನೇನಿದ್ದರೂ ನಮ್ಮ ಬೇಡಿಕೆ ಈಡೇರಿದ ಸರ್ಕಾರದ ಆದೇಶದೊಂದಿಗೆ ಅಧಿಕಾರಿಗಳು ಬರಬೇಕು. ಅಲ್ಲಿಯವರೆಗೂ ಹನಿ ನೀರೂ ಕುಡಿಯುವುದಿಲ್ಲ. ರೈತರಿಗಾಗಿ ಪ್ರಾಣ ಹೋದರೂ ಸರಿ ಎಂದು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ವಾಪಸ್ ಹೋದರು.

ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ಸುಜಾತಾ ದೊಡ್ಡಮನಿ, ನಾಗರಾಜ ಚಿಂಚಲಿ, ವಕೀಲ ರವಿಕಾಂತ ಅಂಗಡಿ, ಸೋಮಣ್ಣ ಡಾಣಗಲ್ಲ ಮಾತನಾಡಿದರು. ಈ ವೇಳೆ ಟಾಕಪ್ಪ ಸಾತಪುತೆ, ಚನ್ನಪ್ಪ ಷಣ್ಮುಖಿ, ಬಸಣ್ಣ ಹಂಜಿ, ಬಸವರಾಜ ಮೇಲ್ಮುರಿ, ಪ್ರವೀಣ ನೆಲೊಗಲ್ಲ, ಅಮರೇಶ ತೆಂಬದಮನಿ, ನೀಲಪ್ಪ ಶರಸೂರಿ, ನೀಲಪ್ಪ ಕರ್ಜೆಕಣ್ಣವರ, ದಾದಾಪೀರ್ ಮುಚ್ಛಾಲೆ, ರಮೇಶ ಹಂಗನಕಟ್ಟಿ, ಪ್ರಭು ಮತ್ತಿಕಟ್ಟಿ, ವಿರುಪಾಕ್ಷಪ್ಪ ಮುದಕಣ್ಣವರ, ಹೊನ್ನಪ್ಪ ವಡ್ಡರ, ಮಂಜುನಾಥ ಛಲವಾದಿ, ಅರುಣಕುಮಾರ ಪೂಜಾರ ಮತ್ತಿತರರು ಇದ್ದರು.

ಉಪವಾಸ ಕೈಗೊಂಡಿರುವ ಕುಮಾರ ಮಹಾರಾಜ ಸ್ವಾಮೀಜಿಯವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿರುವ ವೇದಿಕೆಯಿಂದ ಹೊರ ಬಂದು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಪೊಲೀಸರ ವಿನಂತಿ ಮೇರೆಗೆ ಮತ್ತೆ ರಸ್ತೆ ತಡೆ ಕೈಬಿಟ್ಟು ವೇದಿಕೆಗೆ ತೆರಳಿದರು.

 

ನಾಟ್ಯ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆ ವಿಶ್ವವಿದ್ಯಾಲಯ ವತಿಯಿಂದ 2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ನಗರದ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಜೂನಿಯರ್ ಪರೀಕ್ಷೆಯಲ್ಲಿ ಈಶ್ವರಿ ಷಡಾಕ್ಷರಿ (ಶೇ. 76.5) ಮತ್ತು ಸೀನಿಯರ್ ಪರೀಕ್ಷೆಯಲ್ಲಿ ವೈಷ್ಣವಿ ಷಡಾಕ್ಷರಿ (ಶೇ. 73.4) ಪ್ರಥಮ ಶ್ರೇಣಿಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಕಾಡೆಮಿಯ ಅಧ್ಯಕ್ಷೆ ರಾಘವಿ ಜ್ಯೋತಿಶ್ರೀ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

 

ಶಾಲೆಯ ವಾತಾವರಣ ಕಲಿಕೆಗೆ ಪೂರಕವಾಗಿರಲಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಶಾಲೆಗಳಲ್ಲಿಯೂ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸರಕಾರಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಸರಕಾರಿ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 4ರಲ್ಲಿ ಮಂಗಳವಾರ ನಡೆದ ನೂತನ ಶೌಚಾಲಯ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗುವ ಉತ್ತಮ ವಾತಾವರಣ ಇರುವುದು ಅಗತ್ಯವಾಗಿದೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಸಮಗ್ರ ಬದಲಾವಣೆ ಕಾಣಬಹುದು. ಶಾಲೆಗಳಲ್ಲಿ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಶಾಲೆಯ ವಾತಾವರಣ ಮಕ್ಕಳ ಕಲಿಕೆಗೆ ಪೂರಕವಾಗಿರಬೇಕು. ಅಂದಾಗ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಅರ್. ಪಾಟೀಲ, ಹಾಲಿ ಸದಸ್ಯ ಬಸವರಾಜ ಓದುವವರು, ಪ್ರವೀಣ ಬೊಮಲೆ, ಗಂಗಾಧರ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ, ಪ್ರವೀಣ ಬಾಳಿಕಾಯಿ, ಮುಖ್ಯೋಪಾಧ್ಯಾಯ ಬಿ.ಎಚ್. ಸಣ್ಣಮನಿ, ನಿಂಗಪ್ಪ ಬನ್ನಿ, ವಿಜಯ ಕುಂಬಾರ, ಮಂಜುನಾಥ ಉಮಚಗಿ, ಮಂಜುನಾಥ ಹೊಗೆಸೊಪ್ಪಿನ, ವಿಶಾಲ ಬಟಗುರ್ಕಿ, ಸಂತೋಷ ಜಾವೂರ, ರಮೇಶ ಹಾಳದೋಟದ, ಸಿಆರ್‌ಪಿ ಉಮೇಶ ನೇಕಾರ ಮುಂತಾದವರಿದ್ದರು.

ಜಂಗಮ ವಟುಗಳಿಗೆ ಲಿಂಗದೀಕ್ಷೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಲ್ಲಿನ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6 ಘಂಟೆಗೆ ಮಳೆಮಲ್ಲೇಶ್ವರ ಲಿಂಗಕ್ಕೆ ಹಾಗೂ ಅನ್ನಪೂರ್ಣೇಶ್ವರಿ ಮೂರ್ತಿಗೆ ಅಭಿಷೇಕ ಹೂವಿನ ಅಲಂಕಾರ ನೆರವೇರಿಸಲಾಯಿತು.

ನಂತರ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ, ಲಿಂಗದೀಕ್ಷೆಯನ್ನು ನೀಡಿದರು. ಜಂಗಮರು ಶಿವನ ಜ್ಞಾನ ಪಡೆಯಬೇಕಾದರೆ ಮೊದಲು ಅಯ್ಯಾಚಾರ ದೀಕ್ಷೆ ಪಡೆಯಬೇಕು. ಲಿಂಗದೀಕ್ಷೆ, ಸಂಸ್ಕಾರದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ. ಅಯ್ಯಾಚಾರದಿಂದ ಮಾನವನ ಪ್ರತಿನಿತ್ಯ ಲಿಂಗಪೂಜೆ ಮಾಡುತ್ತ ಹೋದಂತೆಲ್ಲ ಮನಸ್ಸಿನ ಏಕಾಗ್ರತೆ, ಶಾಂತಿ, ನೆಮ್ಮದಿಯಿಂದ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಮಲ್ಲಿಕಾರ್ಜುನ ಶ್ರೀಗಳು, ಸಂಸ್ಕಾರವಂತರೂ ನಿತ್ಯ ಲಿಂಗಾರ್ಚನೆ ಮಾಡುವ ಮೂಲಕ ಧರ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ದೀಕ್ಷೆ ಪಡೆದ ವಟುಗಳಿಗೆ ಹೊಸಳ್ಳಿಮಠ, ರುದ್ರಮುನಿ ಹಿರೇಮಠ, ಗುರಪಾದಯ್ಯ ಪ್ರಭುಸ್ವಾಮಿಮಠ ಹಾಗೂ ರುದ್ರಯ್ಯ ಸೋಬರದಮಠ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. 9 ಜನ ಜಂಗಮ ವಟುಗಳು ಅಯ್ಯಾಚಾರ ದೀಕ್ಷೆ ಹಾಗೂ 6 ಜನ ಭಕ್ತರು ಲಿಂಗದೀಕ್ಷೆ ಪಡೆದರು.

ಹೆಸರುಕಾಳು ಖರೀದಿ ಸಮಸ್ಯೆ ಪರಿಹಾರಕ್ಕೆ ಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರ ಸದಾ ರೈತರ ಪರವಾಗಿದೆ. ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ಯಾವುದೇ ಕಾರಣಕ್ಕೂ ರೈತರಿಗೆ ಹಾನಿಯಾಗಲು ಬಿಡುವುದಿಲ್ಲ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಬಿಂಕದಕಟ್ಟಿಯ ಗ್ರಾಮ ಪಂಚಾಯಿತಿ ಭವನದಲ್ಲಿ ಹೆಸರುಕಾಳು ಖರೀದಿ ಪ್ರಕ್ರಿಯೆಯಲ್ಲಿ ಉದ್ಭವಿಸಿರುವ ತಾಂತ್ರಿಕ ಮತ್ತು ಗುಣಮಟ್ಟದ ಅಂಶಗಳ ಸಮಸ್ಯೆಗಳ ಪರಿಹಾರಕ್ಕಾಗಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರೈತರ ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಗಮನವಿಟ್ಟು ಆಲಿಸಿದ ಸಚಿವ ಡಾ. ಎಚ್.ಕೆ. ಪಾಟೀಲ, ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೃಷಿಕರಿಗೆ ನ್ಯಾಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯಡಿ ಈವರೆಗೆ ಗದಗ ಜಿಲ್ಲೆಯಲ್ಲಿ ಕೇವಲ 440 ಕ್ವಿಂಟಲ್ ಹೆಸರುಕಾಳುಗಳನ್ನು ಮಾತ್ರ ಖರೀದಿಸಲಾಗಿದೆ ಎಂದು ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಚ್ಚಿನ ಹೆಸರುಕಾಳು ಬೆಳೆ ಗುಣಮಟ್ಟದ ಆಧಾರದ ಮೇಲೆ ‘ರಿಜೆಕ್ಟ್’ ಆಗುತ್ತಿರುವುದನ್ನು ಅವರು ತಿಳಿಸಿದರು.

ಹೆಸರುಕಾಳು ಬೆಳೆ ಹಾನಿಗೊಳಗಾಗಿಲ್ಲ, ಕೇವಲ ಸ್ವಲ್ಪ ಕಪ್ಪು ಚುಕ್ಕೆಗಳು ಕಂಡುಬರುವ ಮಟ್ಟಿಗೆ ಮಾತ್ರ ವ್ಯತ್ಯಾಸವಿದ್ದು, ಇದಕ್ಕೂ ವಾತಾವರಣದ ವೈಪರಿತ್ಯಗಳು ಕಾರಣವೆಂದು ರೈತ ಮುಖಂಡರು ವಿವರಿಸಿದರು. ಇಂತಹ ಪರಿಸ್ಥಿತಿಯನ್ನು ಪರಿಗಣಿಸಿ, ಸರ್ಕಾರವು ಮಾರ್ಗಸೂಚಿಗಳನ್ನು ಸಡಿಲಗೊಳಿಸಿ ರೈತರಿಂದ ಹೆಸರುಕಾಳು ಖರೀದಿ ಮಾಡಿ ರೈತರ ಆರ್ಥಿಕ ಹಾನಿಯನ್ನು ತಪ್ಪಿಸಬೇಕೆಂದು ಸಚಿವರ ಗಮನಕ್ಕೆ ತಂದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ರೈತರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸುತ್ತಿದೆ. ರೈತರು ಬೆಳೆದ ಹೆಸರು ಖರೀದಿಗೆ ಇರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಸೂಚನೆಯಂತೆ ಕ್ರಮ ವಹಿಸಿ ಪ್ರಯತ್ನಿಸಲಾಗುವುದು. ರೈತರ ಶ್ರಮಕ್ಕೆ ಹಾನಿಯಾಗದಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ ಎಂದರು.

ಸಭೆಯಲ್ಲಿ ಆನಂದಸ್ವಾಮಿ ಗಡ್ಡದೇವರಮಠ, ರವಿ ಮೂಲಿಮನಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಾ.ಪಂ ಇಓ ಮಲ್ಲಯ್ಯ ಕೆ, ತಹಸೀಲ್ದಾರರ ಶ್ರೀನಿವಾಸ್ ಮೂರ್ತಿ, ಕೃಷಿ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಅಪ್ಪಣ್ಣ ಇನಾಮತಿ, ಸಿ.ಬಿ. ದೊಡ್ಡಗೌಡ್ರ, ಬಿ.ಆರ್. ದೇವರೆಡ್ಡಿ, ಗ್ರಾ.ಪಂ ಅಧ್ಯಕ್ಷ ನಿಂಗಪ್ಪ ಪರಪ್ಪನವರ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಸದಸ್ಯರಾದ ತಿಮ್ಮನಗೌಡ್ರ, ಪತ್ತೆಸಾಬ್ ನದಾಫ್, ವೆಂಕಟೇಶ್ ಕುನಿ, ಮಂಜುನಾಥ ಮಕಳಿ, ಭೀಮವ್ವ ಬೇವಿನಕಟ್ಟಿ, ಲಕ್ಷ್ಮೀ ಮೂಲಿಮನಿ, ತುಳಸ ತಿಮ್ಮನಗೌಡ್ರ, ಜೈಬುನಬಿ ಸೋನೆಖಾನವರ, ಅಶೋಕ ಕರೂರ, ದೇವೇಂದ್ರ ಗೌಡ್ರು, ಕರಿಗೌಡ್ರ, ಗಾಯತ್ರಿ ಖಾನಾಪುರ, ಗಂಗವ್ವ ತಡಿಸಿ ಮುಂತಾದವರು ಹಾಜರಿದ್ದರು.

ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ 1.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಲಾಗಿತ್ತು. ಅದರಲ್ಲಿ 96043 ಹೆಕ್ಟೇರ್ ಪ್ರದೇಶದ ಹೆಸರುಕಾಳು ಹಾನಿಯಾಗಿದೆ. ಸರ್ಕಾರ ಹೆಸರುಕಾಳು ಖರೀದಿಗಾಗಿ ಪ್ರತಿ ಕ್ವಿಂಟಲ್ ಕಾಳಿಗೆ 8768 ರೂಗಳನ್ನು ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಒಟ್ಟು 57 ಕಡೆಗಳಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.

ವಿಜಯೇಂದ್ರ ಬಿಟ್ರೆ ರಾಜ್ಯಾಧ್ಯಕ್ಷ ಆಗ್ತೀವಿ ಅನ್ನೋ ಬೇರೆ ನಾಯಕರು ಬಿಜೆಪಿಯಲ್ಲಿ ಇಲ್ಲ: ಎಸ್.ಆರ್ ವಿಶ್ವನಾಥ್

0

ಬೆಂಗಳೂರು:- ಬಿಜೆಪಿಯಲ್ಲಿ ವಿಜಯೇಂದ್ರ ಬಿಟ್ರೆ ರಾಜ್ಯಾಧ್ಯಕ್ಷ ಆಗ್ತೀವಿ ಅಂತ ಹೇಳೋ ನಾಯಕರಿಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರಗೆ ಪರ್ಯಾಯವಾಗಿ ರಾಜ್ಯಾಧ್ಯಕ್ಷ ಆಗ್ತೀವಿ ಅನ್ನೋ ಬೇರೆ ನಾಯಕರು ಇಲ್ಲ. ಎರಡೇ ವರ್ಷಕ್ಕೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ರೆ ಅವಕಾಶ ಕಿತ್ತುಕೊಂಡಂತೆ ಆಗಲಿದೆ.‌ ಹಾಗಾಗಿ ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು.

ವಿಜಯೇಂದ್ರಗೆ ಎರಡು ವರ್ಷದ ಅವಕಾಶ ಕೊಟ್ಟಿದ್ದಾರೆ. ಇನ್ನೂ ಒಂದು ವರ್ಷ ಅವಕಾಶ ಕೊಟ್ಟರೆ ಪೂರ್ಣ ಅವಕಾಶ ಕೊಟ್ಟಂತಾಗಲಿದೆ. ಯಾವುದೇ ಅಧ್ಯಕ್ಷರಿಗೆ ಮೂರು ವರ್ಷ ಅವಕಾಶ ಕೊಡಬೇಕು. ಯಾರಿಗೇ ಆಗಲೀ ಪೂರ್ಣ ಅವಕಾಶ ಕೊಟ್ಟು ನೋಡಬೇಕು ಎಂದು ವಿಜಯೇಂದ್ರರನ್ನು ಇನ್ನೂ ಒಂದು ವರ್ಷ ಮುಂದುವರೆಸಬೇಕು ಎಂದು ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ.

ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರೈಸಿದ್ದಾರೆ. ಅವರು ಎರಡು ವರ್ಷ ಮುಗಿಸಿದ್ದು ಗೊತ್ತೇ ಆಗಲಿಲ್ಲ. ಬಹಳ ಚಿಕ್ಕ ವಯಸ್ಸಿಗೆ ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ವಿಪಕ್ಷ ನಾಯಕರ ಜತೆ ಸೇರಿಕೊಂಡು ವಿಜಯೇಂದ್ರ ಅವರು ಅನೇಕ ಹೋರಾಟ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಪಲ್ಟಿ: ತಪ್ಪಿದ ದುರಂತ, 33 ಮಂದಿ ಪಾರು!

0

ಮಂಡ್ಯ:- ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿರುವ ಘಟನೆ ಜರುಗಿದೆ.

ಯಾಲದಹಳ್ಳಿ‌ಕೊಪ್ಪಲು ಗ್ರಾಮದ 33 ಮಂದಿ ಅಯ್ಯಪ್ಪನ ಮಾಲೆ ಧರಿಸಿ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳುತ್ತಿದ್ದರು. ಈ ವೇಳೆ ಕೇರಳದ ಏರಿಮಲೈ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತವಿಲ್ಲದೇ ಬಸ್‌ನಲ್ಲಿದ್ದವರು ಪಾರಾಗಿದ್ದಾರೆ.

ಕೆಲ ಮಾಲಾಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಘಟನಾ ಸ್ಥಳಕ್ಕೆ ಏರಿಮಲೈ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಅಂಕೋಲಾ–ಯಲ್ಲಾಪುರ ಹೆದ್ದಾರಿ ಸಂಚಾರ ಬಂದ್!

0

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-52ರ ಕಂಚಿನ ಬಾಗಿಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದ ಘಟನೆ ಜರುಗಿದೆ.

ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಅರುಣ್ ಶೇಖ್ ಗಂಭೀರ ಗಾಯಗೊಂಡ ಚಾಲಕನಾಗಿದ್ದು, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್‌ನಿಂದ ಉಡುಪಿ ಕಡೆಗೆ ಹೋಗುತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ಯಾಂಕರ್ ನಲ್ಲಿ ಇದ್ದ ಗ್ಯಾಸ್ ಲೀಕ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 52ರ ಸಂಚಾರ ಬಂದ್ ಮಾಡಿದ್ದು, ಅಂಕೋಲ ದಿಂದ ಮಾದನಗೇರಿ ಹೆದ್ದಾರಿ ಮೂಲಕ ಮಾರ್ಗ ಬದಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ NDR ತಂಡ ರವಾನೆ ಮಾಡಲಾಗಿದ್ದು, ಗ್ಯಾಸ್ ಸೋರಿಕೆಯನ್ನ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಘಟನೆ ಸಂಬಂಧ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!