ಬಳ್ಳಾರಿ, ಜನವರಿ 6: ಬಳ್ಳಾರಿ ನಗರದಲ್ಲಿ ನಡೆದ ಗಲಭೆ ವೇಳೆ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಮೃತದೇಹವನ್ನು ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೇ ಯಾರದ್ದೋ ಒತ್ತಾಯಕ್ಕೆ ಮಣಿದು ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಇದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದಲೇ ನಡೆದ ಕ್ರಮ ಎಂದು ಅವರು ಆರೋಪಿಸಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಪಡೆದಿದೆ.
ಗಲಭೆ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಬಳ್ಳಾರಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ತಕ್ಷಣವೇ, ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆರೋಪಗಳ ಸುರಿಮಳೆಗೈದರು.
ಶ್ರೀರಾಮುಲು ಮಾತನಾಡಿ, “ಬಳ್ಳಾರಿ ಘಟನೆ ಆಕಸ್ಮಿಕವಲ್ಲ, ಇದು ಪೂರ್ವನಿಯೋಜಿತ ಸಂಚು. ಫಿಲ್ಮ್ ಸ್ಟೈಲ್ನಲ್ಲಿ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರು ಎಂಟ್ರಿ ಕೊಟ್ಟು, ಬಾರ್ಗಳಿಂದ ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಂಡು ದಾಳಿ ನಡೆಸಿದ್ದಾರೆ” ಎಂದು ನೇರ ಆರೋಪ ಮಾಡಿದರು.
ಇನ್ನೂ ಗಂಭೀರ ಆರೋಪ ಮಾಡಿರುವ ಅವರು, ಮೃತ ರಾಜಶೇಖರ್ ಅವರ ಅಂತ್ಯಸಂಸ್ಕಾರ ಸಂಪ್ರದಾಯದಂತೆ ಮಣ್ಣು ಮಾಡುವ ಮೂಲಕ ನಡೆಯಬೇಕಿತ್ತು. ಆದರೆ, ಕುಟುಂಬಸ್ಥರ ವಿರೋಧದ ನಡುವೆಯೇ ದೇಹವನ್ನು ಸುಟ್ಟು ಹಾಕಲಾಗಿದೆ. ಇದು ವ್ಯವಸ್ಥಿತವಾಗಿ ಸಾಕ್ಷಿ ನಾಶ ಮಾಡುವ ಪ್ರಯತ್ನ ಎಂದರು.
“ಕುಟುಂಬದವರನ್ನು ಪೊಲೀಸರು ಹೆದರಿಸಿ, ಬೆದರಿಕೆ ಹಾಕಿ ಮಾನವ ಸರ್ಪಗಾವಲಿನಲ್ಲಿ ದಹನ ನಡೆಸಲಾಗಿದೆ. ಏಕೆ ಸುಟ್ಟು ಹಾಕಲಾಯಿತು ಎಂಬುದಕ್ಕೆ ಯಾರೂ ಉತ್ತರ ಕೊಟ್ಟಿಲ್ಲ. ಆದರೆ, ಇಂದಲ್ಲ ನಾಳೆ ಈ ಸತ್ಯ ಹೊರಬರುತ್ತದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ತಂದೆಯ ಸಮಾಧಿಯ ಪಕ್ಕದಲ್ಲಿ ನೆಲ ಅಗೆದಿರುವ ಫೋಟೋಗಳನ್ನು ಪ್ರದರ್ಶಿಸಿದ ಶ್ರೀರಾಮುಲು, ಅಂತ್ಯಸಂಸ್ಕಾರಕ್ಕೆ ಪೂರ್ವಸಿದ್ಧತೆ ನಡೆದಿದ್ದರೂ ಸಾಕ್ಷಿ ಸಿಗಬಾರದು ಎಂಬ ಉದ್ದೇಶದಿಂದಲೇ ದಹನ ಮಾಡಲಾಗಿದೆ ಎಂದು ಆರೋಪಿಸಿದರು. “ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಮೃತದೇಹವನ್ನು ಸುಟ್ಟಿದ್ದಾರೆ. ಇದು ಸಹಜವಲ್ಲ” ಎಂದರು.
ಪೊಲೀಸ್ ಅಧಿಕಾರಿಗಳ ಮೇಲೂ ಅವರು ಗಂಭೀರ ಆರೋಪ ಹೊರಿಸಿದರು. “ಎಎಸ್ಪಿ ರವಿಕುಮಾರ್ ಅವರು ಕುಟುಂಬದವರನ್ನು ಬೆದರಿಸಿ ದಹನ ನಡೆಸಿಸಿದ್ದಾರೆ. ಇದು ಬೇಕಂತಲೇ ಮಾಡಿದ ಮರ್ಡರ್. ಕೊಂದು ನಮ್ಮ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಶಾಸಕ ಭರತ್ ರೆಡ್ಡಿ ಸಂಚು ರೂಪಿಸಿದ್ದಾರೆ” ಎಂದು ಕಿಡಿಕಾರಿದರು.
ಡಿಎಸ್ಪಿ ನಂದಾರೆಡ್ಡಿ ಮತ್ತು ಎಎಸ್ಪಿ ರವಿಕುಮಾರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಅವರು, “ಜೀವ ತೆಗೆದುಕೊಳ್ಳುವ ಅಧಿಕಾರ ದೇವರಿಗೆ ಮಾತ್ರ ಇದೆ. ರಾಜಕೀಯ ಶಾಶ್ವತ ಅಲ್ಲ. ಇಂದು ನಾನು, ನಾಳೆ ನೀನು ಸೋಲ್ತೀವಿ. ಆದರೆ, ಮನುಷ್ಯನ ಜೀವದ ಜೊತೆ ಆಟ ಆಡೋದು ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಶ್ರೀರಾಮುಲು, “ನೀವು ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿದ್ದೀರಿ. ಆದರೆ, ಅಸಲಿ ತಪ್ಪಿತಸ್ಥ ಎಎಸ್ಪಿ ರವಿಕುಮಾರ್. ಘಟನೆ ನಡೆಯುವಾಗ ಅವರು ಸ್ಥಳದಲ್ಲಿರಲಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದರೂ ಟಿಯರ್ ಗ್ಯಾಸ್ ಬಳಕೆಗೆ ಅನುಮತಿ ನೀಡಲಿಲ್ಲ” ಎಂದು ಆರೋಪಿಸಿದರು.
ಇಡೀ ಘಟನೆ ಪೂರ್ವನಿಯೋಜಿತ ಹಲ್ಲೆ ಎಂದು ಪುನರುಚ್ಚರಿಸಿದ ಅವರು, “ಯಾವ್ಯಾವ ಕೇಸ್ ಹಾಕಬೇಕು ಎಂದು ಐಜಿ ಜೊತೆ ಭರತ್ ರೆಡ್ಡಿ ಚರ್ಚೆ ಮಾಡ್ತಾರೆ. ಮಧ್ಯೆ ಮಧ್ಯೆ ಜನಾರ್ದನ ರೆಡ್ಡಿಯವರನ್ನೂ ಜೋಡಿಸುತ್ತಾರೆ. ನಮ್ಮ ತಪ್ಪಿದ್ರೆ ನಮ್ಮನ್ನು ಬಿಡ್ತಿದ್ರಾ? ಸಿಬಿಐ ತನಿಖೆಗೆ ಪ್ರಕರಣ ಹೋದಾಗ ಎಲ್ಲರೂ ಹೊರಗೆ ಬರುವುದೇ ಖಚಿತ” ಎಂದು ಎಚ್ಚರಿಕೆ ನೀಡಿದರು.
ಬಳ್ಳಾರಿ ಗಲಭೆ ಇದೀಗ ಕೇವಲ ಕಾನೂನು-ಸುವ್ಯವಸ್ಥೆಯ ವಿಷಯವಲ್ಲದೆ, ಸಾಕ್ಷಿ ನಾಶ, ಪೊಲೀಸ್ ಪಾತ್ರ ಮತ್ತು ರಾಜಕೀಯ ಸಂಚು ಆರೋಪಗಳೊಂದಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.