Home Blog Page 211

ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ರಾಜಧಾನಿಯಲ್ಲಿ ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ ಒಂಟಿ ಮಹಿಳೆಯೊಬ್ಬರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಪೈಪ್‌ಲೈನ್ ರಸ್ತೆಯಲ್ಲಿ ಏಪ್ರಿಲ್ 21ರಂದು ನಡೆದಿದ್ದ ಘಟನೆ ಆರಂಭದಲ್ಲಿ ಸಾಮಾನ್ಯ ರಸ್ತೆ ಅಪಘಾತ ಎಂದು ಕಾಣಿಸಿಕೊಂಡಿತ್ತು. ಆದರೆ ಪೊಲೀಸರ ತೀವ್ರ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಮತ್ತು ಸುಲಿಗೆ ಯತ್ನ ಎಂಬುದು ಬಹಿರಂಗವಾಗಿದೆ.

ವಿಜಯಲಕ್ಷ್ಮಿ ಎಂಬ ಮಹಿಳೆಯ ಪರಿಚಯ ಹೊಂದಿದ್ದ ಆರೋಪಿ ಚೇತನ್, ಆಕೆಯ ಬಳಿ ಹಣ ಮತ್ತು ಚಿನ್ನಾಭರಣ ಇರುವ ಮಾಹಿತಿ ಆಧರಿಸಿ ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದ. ಯೋಜನೆಯಂತೆ ಮಹಿಳೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಕೇಶ್ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ನಡೆದ ತಕ್ಷಣವೇ ಮತ್ತೊಂದು ಆಟೋದಲ್ಲಿ ಬಂದ ಆರೋಪಿಗಳು ರಕ್ಷಕರಂತೆ ನಟಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ನಡುವೆ ಮಂಜುನಾಥ್ ಎಂಬ ಆರೋಪಿ ಮಹಿಳೆಯ ಪರ್ಸ್‌ನಲ್ಲಿದ್ದ ಮನೆ ಕೀಲಿಯನ್ನು ಕದ್ದು, ನೇರವಾಗಿ ಮನೆಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಆಧಾರ್ ಕಾರ್ಡ್ ಬೇಕು ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮತ್ತೊಂದೆಡೆ ರಾಕೇಶ್ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ‘ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಮಹಿಳೆಯನ್ನು ನಾನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದು ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ.

ಆದರೆ ಮಹಿಳೆಯ ಮನೆಯಲ್ಲಿ ನಡೆದ ಕಳ್ಳತನ ಯತ್ನದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪ್ರಕರಣ ಭೇದಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ವಿಜಯಲಕ್ಷ್ಮಿ ಮೃತಪಟ್ಟಿದ್ದು, ಪ್ರಕರಣ ಕೊಲೆ ತಿರುವು ಪಡೆದುಕೊಂಡಿದೆ.

ಪ್ರಕರಣ ಸಂಬಂಧ ರಾಕೇಶ್, ಚೇತನ್, ಪ್ರದೀಪ್, ಯೋಹಾನ್ ಸೇರಿ ಐವರನ್ನು ಬಂಧಿಸಲಾಗಿದೆ. ಇದೇ ವೇಳೆ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಮಂಜುನಾಥ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಸದ್ಯ ಆರೋಪಿಗಳ ವಿರುದ್ಧ ಕೊಲೆ, ಸಂಚು ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ ; ಮಡಿಕೇರಿಯಲ್ಲಿ ತಪ್ಪಿದ ಭಾರೀ ದುರಂತ

0

ಮಡಿಕೇರಿ: ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಚಾಲನೆ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ತಾಳತ್‌ಮನೆ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

‘ಪೂರ್ಣಿಮಾ ಟ್ರಾವೆಲ್ಸ್’ಗೆ ಸೇರಿದ ಬಸ್ ಚಲಿಸುತ್ತಿದ್ದ ವೇಳೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಪರಿಣಾಮ ಬಸ್ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ಆದರೆ ರಸ್ತೆ ಬದಿಯ ದಿಣ್ಣೆಗೆ ಗುದ್ದಿ ನಿಂತಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೊಂದೆಡೆ ತಮಿಳುನಾಡು ರಾಜಕೀಯದಲ್ಲಿ ಸರ್ಕಾರ ರಚನೆಗೆ ಭಾರೀ ಕಸರತ್ತು ನಡೆಯುತ್ತಿದೆ. ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 107 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್‌ನ 5 ಶಾಸಕರ ಬೆಂಬಲದೊಂದಿಗೆ ಒಟ್ಟು 112 ಸಂಖ್ಯಾಬಲ ಹೊಂದಿದೆ. ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ 118 ತಲುಪಲು ಇನ್ನೂ ಆರು ಶಾಸಕರ ಬೆಂಬಲಕ್ಕಾಗಿ ಟಿವಿಕೆ ತೀವ್ರ ಪ್ರಯತ್ನ ನಡೆಸುತ್ತಿದೆ.

ಈ ನಡುವೆ ಎಐಎಡಿಎಂಕೆಯ ಕೆಲ ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಸ್ಥಳಾಂತರಿಸಿರುವ ಬೆಳವಣಿಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ “ವಿಜಯ್ ಸರ್ಕಾರ ರಚಿಸಲಿ, ಆರು ತಿಂಗಳು ತೊಂದರೆ ಕೊಡುವುದಿಲ್ಲ” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅತ್ತ ಜಾಗತಿಕ ಯುದ್ಧದ ಪರಿಣಾಮ ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯಕ್ಕೂ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆ ಸಮಸ್ಯೆ ಮತ್ತು ಇಂಧನ ದರ ಏರಿಕೆಯಿಂದ ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಹಾಗೂ ಕಟ್ಟಿಂಗ್ ಯೂನಿಟ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕೈಗಾರಿಕಾ ಮಾಲೀಕರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.

ಟಿಸಿಎಸ್ ಮತಾಂತರ-ಕಿರುಕುಳ ಪ್ರಕರಣ: ತಲೆಮರೆಸಿಕೊಂಡಿದ್ದ ನಿದಾ ಖಾನ್ ಬಂಧನ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಿದಾ ಖಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್‌ರನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.

ನಾಸಿಕ್ ಎಸ್‌ಐಟಿ, ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಹಾಗೂ ಕ್ರೈಂ ಬ್ರಾಂಚ್ ತಂಡಗಳು ಎರಡು ದಿನಗಳಿಂದ ನಾರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯ ಫ್ಲಾಟ್ ಮೇಲೆ ನಿಗಾ ಇಟ್ಟಿದ್ದವು. ಬಳಿಕ ಗುರುವಾರ ಕಾರ್ಯಾಚರಣೆ ನಡೆಸಿ ನಿದಾ ಖಾನ್‌ರನ್ನು ಬಂಧಿಸಲಾಯಿತು. ಬಂಧನದ ಬಳಿಕ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.

ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದ ನಿದಾ ಖಾನ್, ಬಂಧನ ತಪ್ಪಿಸಲು ನಿರೀಕ್ಷಣಾ ಜಾಮೀನು ಕೋರಿದ್ದಳು. ಆದರೆ ಗಂಭೀರ ಆರೋಪಗಳ ಹಿನ್ನೆಲೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಟಿಸಿಎಸ್ ಸಂಸ್ಥೆ ಏಪ್ರಿಲ್ 9ರಂದು ನಿದಾ ಖಾನ್‌ರನ್ನು ಅಮಾನತುಗೊಳಿಸಿತ್ತು. ಕಂಪನಿಯ ಆಂತರಿಕ ನೆಟ್‌ವರ್ಕ್ ಮತ್ತು ಅಧಿಕೃತ ಪ್ರವೇಶವನ್ನು ಕೂಡ ರದ್ದುಗೊಳಿಸಲಾಗಿತ್ತು. 2021ರಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಸೇರಿದ್ದ ನಿದಾ ಖಾನ್, ವಿವಾದ ಸಾರ್ವಜನಿಕವಾಗುವ ಕೆಲ ತಿಂಗಳ ಮೊದಲು ನಾಸಿಕ್‌ನಿಂದ ಮುಂಬೈ ಕಚೇರಿಗೆ ವರ್ಗಾವಣೆಗೊಂಡಿದ್ದಳು ಎನ್ನಲಾಗಿದೆ.

ಈ ಪ್ರಕರಣವು ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನ ಬಳಿಕ ಬಹಿರಂಗವಾಗಿತ್ತು. ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಹಾಗೂ ಆತ ಈಗಾಗಲೇ ವಿವಾಹಿತ ಎಂಬ ವಿಚಾರ ಮುಚ್ಚಿಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದರು. ಇದೇ ವೇಳೆ ದಾನಿಶ್ ಶೇಖ್ ಸಹೋದರಿಯಾದ ನಿದಾ ಖಾನ್ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳಾಡಿ ಮತಾಂತರಕ್ಕೆ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಾದ ಬಳಿಕ ಮತ್ತಷ್ಟು ಮಹಿಳಾ ಉದ್ಯೋಗಿಗಳು ಮುಂದೆ ಬಂದು ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.

ಎಲುಬುಗಳಲ್ಲಿ ಹೆಚ್ಚು ನೋವು ಕಾಣುತ್ತಿದೆಯಾ? ಹಾಗಿದ್ರೆ ಈ ವಿಟಮಿನ್ ಕೊರತೆ ಇರಬಹುದು! ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದೇಹದ ದುರ್ಬಲತೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ವಿಟಮಿನ್ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವಾಗಿದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ಎಲುಬುಗಳಲ್ಲಿ ನೋವು, ದುರ್ಬಲತೆ ಹಾಗೂ ಗಟ್ಟಿತನ ಕಡಿಮೆಯಾಗುವ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇದಲ್ಲದೆ ಕ್ಯಾಲ್ಸಿಯಂ, ವಿಟಮಿನ್ ಬಿ12 ಹಾಗೂ ವಿಟಮಿನ್ C ಕೊರತೆಯೂ ದೇಹದ ಸ್ನಾಯು ಮತ್ತು ಸಂಧಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲ ಈ ಕೊರತೆ ಮುಂದುವರಿದರೆ ಎಲುಬುಗಳು ದುರ್ಬಲವಾಗಿ ಮುರಿತದ ಅಪಾಯವೂ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈ ಸಮಸ್ಯೆ ನಿವಾರಣೆಗೆ ಸಮತೋಲನ ಆಹಾರ ಅತ್ಯಂತ ಮುಖ್ಯವಾಗಿದ್ದು, ಹಾಲು, ಮೊಸರು, ಹಸಿರು ತರಕಾರಿ, ಮೊಟ್ಟೆ, ಹಣ್ಣುಗಳು ಹಾಗೂ ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಬೇಕು ಎಂದು ಸಲಹೆ ನೀಡಲಾಗಿದೆ. ಜೊತೆಗೆ ಪ್ರತಿದಿನ ಕೆಲವು ಸಮಯ ಸೂರ್ಯನ ಬೆಳಕಿಗೆ ಒಳಗಾಗುವುದರಿಂದ ವಿಟಮಿನ್ ಡಿ ಪಡೆಯಲು ಸಹಾಯವಾಗುತ್ತದೆ.

ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ವ್ಯಾಯಾಮ, ನಡಿಗೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಎಲುಬುಗಳನ್ನು ಗಟ್ಟಿಯಾಗಿಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.

“ಡಿಕೆ ಶಿವಕುಮಾರ್ ಮಾಡಿದ ಸಹಾಯ ಜೀವನದಲ್ಲಿ ಮರೆಯಲ್ಲ” ; ಮದ್ದೂರು ಉತ್ಸವದಲ್ಲಿ ಭಾವುಕರಾದ ರವಿಚಂದ್ರನ್

ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುರಿತು ಭಾವುಕವಾಗಿ ಮಾತನಾಡಿ ಎಲ್ಲರ ಗಮನ ಸೆಳೆದರು. ಜೀವನದ ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತ ವ್ಯಕ್ತಿ ಡಿಕೆ ಶಿವಕುಮಾರ್ ಎಂದು ಹೇಳಿದ ಅವರು, “ಈ ಜೀವ ನಿಮಗೇ ಅರ್ಪಣೆ ಸರ್” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, “ಮನುಷ್ಯನ ಜೀವನದಲ್ಲಿ ಕೆಲ ಸಂದರ್ಭಗಳು ತುಂಬ ಕಠಿಣವಾಗಿರುತ್ತವೆ. ಆ ಸಮಯದಲ್ಲಿ ಯಾರು ನಮ್ಮ ಕೈ ಹಿಡಿಯುತ್ತಾರೆ ಅನ್ನೋದು ಮುಖ್ಯ. ನಾನು ಯಾರ ಬಳಿಯೂ ಸಹಾಯ ಕೇಳುವ ವ್ಯಕ್ತಿ ಅಲ್ಲ. ಆದರೆ ನಾನು ಕೇಳುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್” ಎಂದು ಹೇಳಿದರು.

ಚಿತ್ರರಂಗದಲ್ಲಿ ನಾಲ್ಕು ದಶಕಗಳ ಪಯಣವನ್ನು ನೆನಪಿಸಿಕೊಂಡ ಅವರು, “ನಾನು ಬಿದ್ದಾಗಲೂ ಜನ ನನ್ನ ಕೈಬಿಡಲಿಲ್ಲ. ‘ರಾಮಾಚಾರಿ’ ಸಮಯದಿಂದಲೇ ಪ್ರೇಕ್ಷಕರು ನನ್ನ ಜೊತೆ ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ನನಗೆ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.

“ನಾವು 40-50 ವರ್ಷಗಳ ಸ್ನೇಹಿತರು. ಆದರೆ ನಾನು ಎಂದಿಗೂ ಆ ಸ್ನೇಹವನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ಆದರೂ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ‘ನಾನು ಏನು ಮಾಡಬೇಕು ಹೇಳಪ್ಪ’ ಎಂದು ಕೇಳಿದರು. ಆ ಮಾತು ಜೀವನಪೂರ್ತಿ ನೆನಪಿರುತ್ತದೆ” ಎಂದು ಭಾವುಕರಾದರು.

ಇದೇ ವೇಳೆ ಮದ್ದೂರು ಶಾಸಕ ಉದಯ್ ಅವರ ಸಹಾಯವನ್ನೂ ಸ್ಮರಿಸಿದ ರವಿಚಂದ್ರನ್, “ಅವರು ನನಗೆ ಗೊತ್ತಾಗದಂತೆ ಸಹಾಯ ಮಾಡಿದ್ದಾರೆ. ಸ್ನೇಹ ಮತ್ತು ಪ್ರೀತಿಗೆ ಮಾತ್ರ ನಾನು ತಲೆಬಾಗುತ್ತೇನೆ” ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ, “ಡಿಕೆ ಶಿವಕುಮಾರ್ ಎಲ್ಲಿರುತ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾರೆ” ಎಂದು ಹೇಳುವ ಮೂಲಕ ತಮ್ಮ ಆತ್ಮೀಯತೆಯನ್ನು ಬಹಿರಂಗಪಡಿಸಿದರು.

ಮುಂದಿನ 3 ದಿನ ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮೇ 8 ಮತ್ತು 9 ರಂದು ಗುಡುಗು ಸಹಿತ ಮಳೆ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಮೇ 8 ರಂದು ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆಯ ಸಮಯದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು IMD ಬೆಂಗಳೂರು ಕೇಂದ್ರ ತಿಳಿಸಿದೆ.

ಮಳೆಯ ಮುನ್ಸೂಚನೆಯಿದ್ದರೂ ರಾಜ್ಯದ ಕೆಲ ಭಾಗಗಳಲ್ಲಿ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವ ಸಾಧ್ಯತೆ ಕಡಿಮೆ ಇದ್ದು, ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಮುಂದುವರಿಯಲಿದೆ ಎಂದು ವರದಿ ಹೇಳಿದೆ.

ಬಸ್ ಚಲಿಸುತ್ತಿದ್ದಾಗಲೇ ಹೃದಯಾಘಾತ: ಚಾಲಕ ಸಾವು, ತಪ್ಪಿದ ದುರಂತ!

ಮಡಿಕೇರಿ: ವಾಹನ ಚಾಲನೆ ವೇಳೆಯೇ ಹೃದಯಾಘಾತ ಸಂಭವಿಸಿದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ನಡೆದಿದೆ.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ‘ಪೂರ್ಣಿಮಾ ಟ್ರಾವೆಲ್ಸ್’ ಬಸ್ ಚಲಿಸುತ್ತಿದ್ದಾಗ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ.

ಘಟನೆಯ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲನೆ ವೇಳೆ ಚಾಲಕ ಮೃತಪಟ್ಟಿದ್ದರೂ ಬಸ್ ದಿಕ್ಕು ತಪ್ಪಿ ದೊಡ್ಡ ದುರಂತವಾಗುವ ಸಾಧ್ಯತೆ ಇದ್ದರೂ ದಿಣ್ಣೆಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೋ ವಿರುದ್ಧದ ರೋಚಕ ಪಂದ್ಯದಲ್ಲಿ ಹೋರಾಡಿ ಸೋತ RCB: ತವರಲ್ಲಿ LSGಗೆ ಮೊದಲ ಜಯ!

ಮಳೆಯ ಅಡಚಣೆಯ ನಡುವೆಯೇ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡದ ಪರ ಮಿಚೆಲ್ ಮಾರ್ಶ್ ಸ್ಫೋಟಕ ಶತಕ (111 ರನ್, 56 ಎಸೆತ) ಸಿಡಿಸಿ ತಂಡವನ್ನು ಬಲವಾದ ಮೊತ್ತದತ್ತ ಕರೆದೊಯ್ದರು. ಅವರ ಜೊತೆಗೆ ಪೂರನ್ 38 ರನ್ ಮತ್ತು ಕೊನೆಯಲ್ಲಿ ರಿಷಭ್ ಪಂತ್ ಅಜೇಯ 32 ರನ್ ಗಳಿಸಿ ಲಕ್ನೋ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ದಾಖಲಿಸಿತು. ಮಳೆಯ ಅಡಚಣೆಯಿಂದ ಡಕ್‌ವರ್ಥ್ ಲೂಯಿಸ್ ನಿಯಮದಡಿ RCBಗೆ 19 ಓವರ್‌ಗಳಲ್ಲಿ 213 ರನ್‌ಗಳ ಗುರಿ ನೀಡಲಾಯಿತು.

ಗುರಿ ಬೆನ್ನಟ್ಟಿದ RCB ಆರಂಭದಲ್ಲೇ ವಿರಾಟ್ ಕೊಹ್ಲಿ ಹಾಗೂ ಬೆಥಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಪಡಿಕ್ಕಲ್ ಮತ್ತು ರಜತ್ ಪಟಿದಾರ್ 93 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಪಟಿದಾರ್ 61 ರನ್, ಟಿಮ್ ಡೇವಿಡ್ 40 ರನ್ ಹಾಗೂ ಕೊನೆಯಲ್ಲಿ ಶೆಪಾರ್ಡ್ ಅಜೇಯ 23 ರನ್ ಗಳಿಸಿದರೂ ತಂಡ 6 ವಿಕೆಟ್ ನಷ್ಟಕ್ಕೆ 203 ರನ್‌ಗಳಷ್ಟೇ ಗಳಿಸಲು ಸಾಧ್ಯವಾಯಿತು.

ಕೊನೆಯ 24 ಎಸೆತಗಳಲ್ಲಿ 63 ರನ್ ಅಗತ್ಯವಿದ್ದ ಹಂತದಲ್ಲಿ ಲಕ್ನೋ ಬೌಲರ್‌ಗಳು ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ತಮ್ಮ ಕಡೆ ತಿರುಗಿಸಿಕೊಂಡರು. ಈ ಜಯದೊಂದಿಗೆ ತವರು ಮೈದಾನದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಲಕ್ನೋ ತಂಡಕ್ಕೆ ಮೊದಲ ಗೆಲುವು ಲಭಿಸಿದೆ.

ಅಂಜನಾದ್ರಿ ಆಂಜನೇಯನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ದೇಣಿಗೆ ನೀಡಿದ ಉದ್ಯಮಿ

ಕೊಪ್ಪಳ: ಗಂಗಾವತಿ ತಾಲೂಕಿನಲ್ಲಿರುವ ಪವಿತ್ರ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಗೆ ಉದ್ಯಮಿಯೊಬ್ಬರು 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೇಣಿಗೆ ನೀಡಿರುವ ಘಟನೆ ನಡೆದಿದೆ.

ಎಎಂಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾಲೀಕ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಮಹೇಶ್ ರೆಡ್ಡಿ ಅವರು ದಂಪತಿ ಸಮೇತ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕಲ್ಪ ಪೂಜೆ ಹಾಗೂ ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ ಬಳಿಕ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೂಜೆ ನಂತರ ಸುಮಾರು 2.5 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ, ಚಕ್ರ, ಕಿರೀಟ ಮತ್ತು ಗದೆಯನ್ನು ಆಂಜನೇಯ ಸ್ವಾಮಿಗೆ ದೇಣಿಗೆ ರೂಪದಲ್ಲಿ ಗಂಗಾವತಿ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಈ ಮೂಲಕ ಅಂಜನಾದ್ರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಬಂಗಾರದ ದೇಣಿಗೆ ದೊರೆತಿದೆ.

ಈ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ ದಂಪತಿ ಹಾಗೂ ಮಹೇಶ್ ರೆಡ್ಡಿ ದಂಪತಿ ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಈ ದೇಣಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ? ಪ್ರಶ್ನಿಸಿದ 8 ಭಜರಂಗದಳ ಕಾರ್ಯಕರ್ತರು ಅರೆಸ್ಟ್!

ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಲವ್ ಜಿಹಾದ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವರದಿಯ ಪ್ರಕಾರ, ನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಹಾಗೂ ಮುಸ್ಲಿಂ ಯುವಕ ಒಟ್ಟಿಗೆ ಕಂಡುಬಂದಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಭಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ ವೇಳೆ ಯುವಕ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗಂಭೀರಗೊಂಡಿದೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಯುವಕ ಸಮೀರ್ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಬಳಿಕ ಅಪ್ರಾಪ್ತ ಬಾಲಕಿಯ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಡಾ. ರಾಮ್ ಅರಸಿದ್ದಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದು, ಪ್ರಕರಣ ಕುರಿತು ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ. ಕೊಪ್ಪಳ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

error: Content is protected !!