ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಪವನ್ ನೆಜ್ಜೂರು ಡೆತ್ ನೋಟ್ ಬರೆದಿದ್ದಾರೆ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಬಿಡ್ಡಿಂಗ್ ಕಾರಣದಿಂದ ಪವನ್ ಅಮಾನತುಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ಕೈಗೊಳ್ಳಲಾಗಿಲ್ಲ? ನಿನ್ನೆ ಮುಖ್ಯಮಂತ್ರಿ ಅವರನ್ನು ಭರತ್ ರೆಡ್ಡಿ ಭೇಟಿ ಮಾಡಿದ್ದಾರೆ, ಮತ್ತು ಎಫ್ಐಆರ್ ದಾಖಲಾಗಿರುವ ಭರತ್ ರೆಡ್ಡಿಯೊಂದಿಗೆ ಸಿಎಂ ಯಾಕೆ ಕುಳಿತು ಮಾತಾಡಿದರು? ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆಯೇ ಎಂಬುದು ಸ್ಪಷ್ಟವಲ್ಲ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ..
“ಎಸ್ಪಿ ಯಾಕೆ ಆತ್ಮಹತ್ಯೆಗೆ ಯತ್ನಿಸಿದರು? ಯಾಕೆ ಅಮಾನತು ಮಾಡಲಾಯಿತು? ಜಮೀರ್ ಅವರು ಬಳ್ಳಾರಿ ಎಸ್ಪಿ ಹುದ್ದೆಗೆ ಎಷ್ಟು ಬಿಡ್ ಮಾಡಿದ್ದಾರೆ? ಡೆತ್ ನೋಟ್ನಲ್ಲಿ ಹಿರಿಯ ಅಧಿಕಾರಿಗಳ ಹೆಸರುಗಳಿವೆ ಎಂದು ಮಾಹಿತಿ ಲಭ್ಯವಿದೆ. ಆ ಡೆತ್ ನೋಟ್ ಯಾಕೆ ಮುಚ್ಚಿಡಲಾಗಿದೆ? ಎಂದರು.
ಡೆತ್ ನೋಟ್ನಲ್ಲಿ ಏನಿದೆ, ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ, ಫಾರ್ಮ್ ಹೌಸ್ನಲ್ಲಿ ಏನಾಗುತ್ತಿದೆ, ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ಪಡೆದರು ಮತ್ತು ಅವರ ತಂದೆಯಿಂದ ಪ್ರೆಸ್ ರಿಲೀಸ್ ಯಾಕೆ ಹೊರಬಂದಿದೆ ಎಂಬ ಪ್ರಶ್ನೆಗಳನ್ನೂ ಅವರು ಒತ್ತಿಹೇಳಿದರು. “ನಿಮ್ಮ ಗೂಂಡಾ ಶಾಸಕರನ್ನು ರಕ್ಷಿಸಲು ಹೊರಟಿದ್ದೀರಾ? ಪವನ್ ನೆಜ್ಜೂರಿಗೆ ನ್ಯಾಯ ಬೇಕಾಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಮನೆ ಕೊಡಲು ಬಿಡ್ಡಿಂಗ್ ನಡೆಯುತ್ತಿದೆ. ಪವನ್ ಅಮಾನತು ಮತ್ತು ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ನೀಡಬೇಕು” ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

