Home Blog Page 225

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್​: ಮತ್ತಿಬ್ಬರ ಬಂಧನ

ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಇದೀಗ ಕಾನೂನು ಕ್ರಮದ ಹಂತ ತಲುಪಿದ್ದು, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದ ಬಳಸಿ ನಿಂದಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ನಾಗರಾಜ್ ತಳವಾರ ಮತ್ತು ಪ್ರಶಾಂತ್ ತಳವಾರ ಕ್ರಮವಾಗಿ ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ಮ್ಯಾನೇಜರ್ ಹಾಗೂ ಧಾರವಾಡದ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಚಂದ್ರು ಎಂಬ ಚಿಕ್ಕಬಾಣಾವರದ ಆಟೋ ಚಾಲಕ ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಗುರಿಯಾಗಿಸಿಕೊಂಡಿದ್ದವರ ವಿರುದ್ಧ ತನಿಖೆ ಮುಂದುವರಿದಿದೆ.

ಅಶ್ಲೀಲ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಬಳಿಕ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ನಂತರವೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಪ್ರಕರಣವು ಈ ಮೊದಲು ನಟಿ ರಮ್ಯಾ ವಿರುದ್ಧ ನಡೆದ ಸಾಮಾಜಿಕ ಜಾಲತಾಣದ ಅಶ್ಲೀಲ ಕಮೆಂಟ್ ಪ್ರಕರಣವನ್ನು ನೆನಪಿಸುವಂತಿದ್ದು, ಆ ವೇಳೆ ಕೂಡ ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದರು. ಈಗ ವಿಜಯಲಕ್ಷ್ಮಿ ದರ್ಶನ್ ಪ್ರಕರಣದಲ್ಲೂ ಸಿಸಿಬಿ ತನಿಖೆ ಚುರುಕುಗೊಂಡಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘Z’ ಶ್ರೇಣಿಯ ಭದ್ರತೆ ಕೋರಿ ಜನಾರ್ದನ್​ ರೆಡ್ಡಿ ಪತ್ರ ನನಗೆ ಬಂದಿಲ್ಲ: ಸಚಿವ ಪರಮೇಶ್ವರ್

0

ಬೆಂಗಳೂರು: ತಮಗೆ Z ಶ್ರೇಣಿಯ ಭದ್ರತೆ ನೀಡುವಂತೆ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬರೆದಿದ್ದಾರೆ ಎನ್ನಲಾದ ಪತ್ರ ನನಗೆ ಇನ್ನೂ ಬಂದಿಲ್ಲ. ಪತ್ರ ಬಂದರೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯಿಂದ Z ಶ್ರೇಣಿಯ ಭದ್ರತೆ ಕೋರಿ ಪತ್ರ ಬಂದಿಲ್ಲ. ಈಗಾಗಲೇ ಜನಾರ್ದನ ರೆಡ್ಡಿ ಹಾಗೂ ಒಬ್ಬ ಶಾಸಕ ದೂರು ನೀಡಿದ್ದಾರೆ. ಎರಡೂ ದೂರುಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಘಟನೆ ವೇಳೆ ಪೆಟ್ರೋಲ್ ಬಾಂಬ್ ಬಳಕೆಯಾಗಿದೆ ಎಂಬ ಜನಾರ್ದನ ರೆಡ್ಡಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಬಳಿಕ ಬಂದೂಕು, ಹ್ಯಾಂಡ್ ಗ್ರೆನೇಡ್ ಅಥವಾ ಪೆಟ್ರೋಲ್ ಬಾಂಬ್ ಬಳಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ನಡೆಯುತ್ತಿದೆ ಎಂದರು.

ಅಮಾನತುಗೊಂಡ ಬಳ್ಳಾರಿ ಎಸ್ಪಿ ಬೆಂಗಳೂರಿಗೆ ಬಂದಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಾನತು ಆದ ನಂತರ ಬೇಸರವಾಗುವುದು ಸಹಜ. ಅವರು ಬೆಂಗಳೂರಿಗೆ ಬರುವಾಗ ತಮ್ಮ ಸ್ನೇಹಿತರ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆದು ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಮುಂದೆ ಗನ್ ಲೈಸೆನ್ಸ್ ನೀಡುವ ನಿಯಮ ಬದಲಾವಣೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಗನ್ ಲೈಸೆನ್ಸ್ ನೀಡಲು ಕೇಂದ್ರ ಸರ್ಕಾರದ ಸ್ಪಷ್ಟ ಮಾನದಂಡಗಳಿವೆ. ಅದೇ ಮಾನದಂಡಗಳನ್ನು ರಾಜ್ಯ ಸರ್ಕಾರವೂ ಅನುಸರಿಸುತ್ತಿದೆ. ಇದು ರಾಜ್ಯದ ನಿಯಮವಲ್ಲ, ರಾಷ್ಟ್ರೀಯ ನೀತಿ. ಒಂದು ವೇಳೆ ನೀತಿ ಬದಲಾವಣೆ ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಅಮಾನವೀಯ ಘಟನೆ: ಮಗುವಿಗೆ ಜನ್ಮ ಸಂಬಂಧಿ ಕಾಯಿಲೆ ಅಂತ ವಿಷವುಣಿಸಿದ ತಂದೆ!

0

ಬೆಂಗಳೂರು: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಗುವಿಗೆ ಜನ್ಮ ಸಂಬಂಧಿ ಕಾಯಿಲೆ ಇದೆ ಎಂದು ತನ್ನ ತಂದೆ ವಿಷ ಉಣಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ(30) 2 ವರ್ಷದ ಮಗುವನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಡಿಸೆಂಬರ್ 22 ರಂದು ಮುನಿಕೃಷ್ಣ ತಮಿಳುನಾಡಿನ ಬಾಗ್ಲೂರಿನ ಅಜ್ಜಿ ಮನೆಗೆ ತೆರಳಿದ್ದಾಗ, ಮಗುವಿಗೆ ವಿಷವುಣಿಸಿದ್ದ. ಬಳಿಕ ಬಾಯಿ ತೊಳೆಯುತ್ತಿದ್ದ. ಮಗುವಿನ ತಾಯಿ ಮತ್ತು ಅಜ್ಜಿ ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿತ್ತು.

ಡಿಸೆಂಬರ್ 23 ರಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಬಳಿಕ ಮುನಿಕೃಷ್ಣನನ್ನು ವಿಚಾರಿಸಿದಾಗ, ಮಗುವಿಗೆ ಜನ್ಮ ಸಂಬಂಧಿ ಖಾಯಿಲೆ ಇದೆ. ಖರ್ಚು ಮಾಡಲಿಕ್ಕೆ ಹಣವಿಲ್ಲ ಎಂದು ವಿಷ ಉಣಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಂಬಂಧ ಸಿದ್ದಾಪುರ ಠಾಣೆಗೆ ಮಗುವಿನ ತಾಯಿ ದೂರು ನೀಡಿದ್ದಾಳೆ

ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ವಂಚನೆ! ದೂರು ದಾಖಲು

0

ಬೆಂಗಳೂರು: ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದ ವಶೀಕರಣ ಜಾಹೀರಾತನ್ನು ನಂಬಿದ ಯುವತಿಯೊಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಯುವಕನನ್ನು ವಶೀಕರಣ ಮೂಲಕ ಪಡೆಯಿಸಿಕೊಡುವುದಾಗಿ ನಂಬಿಸಿ ಆರೋಪಿಯು ಯುವತಿಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮೋಸಮಾಡಿದ್ದಾನೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ “ಕಷ್ಟಗಳಿಗೆ ಪರಿಹಾರ” ಎಂಬ ಶೀರ್ಷಿಕೆಯಲ್ಲಿ ಕೃಷ್ಣಮೂರ್ತಿ ಗುರೂಜಿ ಎಂಬ ಹೆಸರಿನ ಅಕೌಂಟ್ ಮೂಲಕ ಜಾಹೀರಾತು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ.

ಯುವತಿ ತನ್ನ ಪ್ರೀತಿಸಿದ ಯುವಕನ ಬಗ್ಗೆ ಮಾಹಿತಿ ನೀಡಿದ ಬಳಿಕ, ವಶೀಕರಣ ಮಾಡಿದರೆ ಮದುವೆ ಆಗುವುದು ಖಚಿತ, ಆದರೆ ಇದಕ್ಕೆ ಖರ್ಚು ಆಗುತ್ತದೆ ಎಂದು ಆರೋಪಿಯು ನಂಬಿಸಿದ್ದಾನೆ. ಈ ನಂಬಿಕೆಯಿಂದ ಯುವತಿ ಹಂತ ಹಂತವಾಗಿ ಆನ್‌ಲೈನ್ ಮೂಲಕ ಒಟ್ಟು 2.05 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾಳೆ.

ನಂತರ ಆರೋಪಿಯು ಮತ್ತಷ್ಟು 4 ಲಕ್ಷ ರೂಪಾಯಿ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದ್ದಾಳೆ. ಇದಕ್ಕೆ ಆರೋಪಿಯು “ಏನು ಮಾಡ್ತಿಯೋ ಮಾಡಿಕೋ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಕುರಿತು ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅಪ್ರಾಪ್ತರಿಂದ ಅತ್ಯಾಚಾರ! 

0

ಹುಬ್ಬಳ್ಳಿ: ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಬಳಿಕ ನಡೆದ ಎನ್‌ಕೌಂಟರ್ ಪ್ರಕರಣದಿಂದ ದೇಶದ ಗಮನ ಸೆಳೆದಿದ್ದ ಹುಬ್ಬಳ್ಳಿಯಲ್ಲಿ ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ನಗರದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಅತ್ಯಾಚಾರ ಮಾಡಿದಷ್ಟೇ ಅಲ್ಲದೆ, ಕೃತ್ಯವನ್ನು ವೀಡಿಯೋ ಮಾಡಿಕೊಂಡು ಬಾಲಕಿಯನ್ನು ಬೆದರಿಸಿದ್ದ ಆರೋಪವೂ ಕೇಳಿಬಂದಿದೆ.

ಈ ಘಟನೆ ಹುಬ್ಬಳ್ಳಿ ನಗರದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮತ್ತು ಮೂವರು ಆರೋಪಿಗಳು ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿಯನ್ನು ಕರೆದುಕೊಂಡು ಹೋಗಿ ಮೊದಲ ಬಾರಿ ಅತ್ಯಾಚಾರ ಮಾಡಿದ್ದು,

ಅದರ ವೀಡಿಯೋ ಮಾಡಿಕೊಂಡಿದ್ದಾನೆ. ನಂತರ ಈ ವಿಷಯವನ್ನು ತನ್ನ ಸ್ನೇಹಿತನಿಗೆ ಹೇಳಿದ್ದು, ಆತ ಮಾರನೇ ದಿನ ಬಾಲಕಿಯನ್ನು ಬೆದರಿಸಿ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಮೂರನೇ ಬಾಲಕನಿಗೂ ವಿಷಯ ತಿಳಿಸಿದ್ದು, ಅವನು ಕೂಡ ಮತ್ತೊಂದು ದಿನ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.

ಮೂವರು ಆರೋಪಿಗಳು ವೀಡಿಯೋ ಇದೆ ಎಂದು ಬೆದರಿಕೆ ಹಾಕಿದ್ದರಿಂದ, ಬಾಲಕಿ ಈ ವಿಷಯವನ್ನು ಮನೆಯವರಿಗೆ ತಿಳಿಸಲು ಭಯಪಟ್ಟಿದ್ದಾಳೆ. ಆದರೆ ನಿನ್ನೆ ಬಾಲಕಿಗೆ ಹೊಟ್ಟೆ ನೋವು ಸೇರಿದಂತೆ ದೈಹಿಕ ತೊಂದರೆ ಕಾಣಿಸಿಕೊಂಡಾಗ ತಾಯಿ ವಿಚಾರಿಸಿದ್ದು, ಆಗ ನಡೆದ ಘಟನೆಯ ಬಗ್ಗೆ ಬಾಲಕಿ ವಿವರಿಸಿದ್ದಾಳೆ. ಇದರ ಹಿನ್ನೆಲೆ ಇಂದು ಬಾಲಕಿ ಮತ್ತು ಆಕೆಯ ತಾಯಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂವರು ಆರೋಪಿಗಳು 14 ರಿಂದ 15 ವರ್ಷದ ಅಪ್ರಾಪ್ತ ಬಾಲಕರಾಗಿದ್ದು, ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಆಕೆ ಗುಣಮುಖಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ವೇಳೆ, ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿಗೆ ಅಪ್ರಾಪ್ತರು ಕಿರುಕುಳ ನೀಡಿ ಹಲ್ಲೆ ಮಾಡಿದ ಮತ್ತೊಂದು ಪ್ರತ್ಯೇಕ ಪ್ರಕರಣವೂ ವರದಿಯಾಗಿದ್ದು, ಎರಡು ಪ್ರಕರಣಗಳಲ್ಲೂ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿರುವುದು ನಗರದಲ್ಲಿ ಆತಂಕ ಮೂಡಿಸಿದೆ.

ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: ಕೊನೆಗೂ ರಾಜಶೇಖರ್​​ʼಗೆ ತಗುಲಿದ್ದ ಬುಲೆಟ್​​ ಸತ್ಯ ರಿವೀಲ್​​

0

ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಮಾರಾಮಾರಿಯಲ್ಲಿ ಬುಲೆಟ್ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಫೈರಿಂಗ್ ಮಾಡಿದ್ದ ಬಂದೂಕಿನ ಗುಂಡು ತಗುಲಿಯೇ ರಾಜಶೇಖರ್ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ.

 12 ಎಂಎಂ ಬುಲೆಟ್‌ನಿಂದ ರಾಜಶೇಖರ್ ಜೀವ ಕಳೆದುಕೊಂಡಿದ್ದು, ಇದೇ ಮಾದರಿಯ ಗನ್ ಅನ್ನು ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಬಳಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್ ಪೇಟೆ ಪೊಲೀಸರು ಈಗಾಗಲೇ 5 ಗನ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಓರ್ವ ಗನ್‌ಮ್ಯಾನ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ.

ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಗುಂಪುಗಳ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, 50ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಾಹ್ನದೊಳಗೆ ಪ್ರಮುಖ ಆರೋಪಿಗಳು ಸೇರಿದಂತೆ ಹಲವರ ಬಂಧನ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಾಟೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಬಂಧನವೂ ಸಂಭವಿಸಬಹುದು ಎನ್ನಲಾಗಿದೆ.

 ಸತೀಶ್ ರೆಡ್ಡಿ ಸ್ಥಳಕ್ಕೆ ಬಂದ ನಂತರವೇ ಗಲಾಟೆ ತೀವ್ರಗೊಂಡಿದ್ದು, ಜನಾರ್ದನ ರೆಡ್ಡಿ ಬೆಂಬಲಿಗರು ಸತೀಶ್ ರೆಡ್ಡಿ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್ ನಡೆಸಿದ್ದರು ಎಂದು ತಿಳಿದುಬಂದಿದೆ. ಈ ಪ್ರಕರಣದ ಪರಿಣಾಮವಾಗಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಲಾಟೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟಾರೆ 6 ಪ್ರಕರಣಗಳು ದಾಖಲಾಗಿವೆ.

ಮದುವೆಗೆ ನಿರಾಕರಿಸಿದ್ದ ವಿವಾಹಿತ ಮಹಿಳೆಯ ಕೊಲೆ ಮಾಡಿದ್ದ ರಫೀಕ್‌ ಆತ್ಮಹತ್ಯೆ

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಪ್ರೇಮ ಸಂಬಂಧ ಭೀಕರ ಅಂತ್ಯ ಕಂಡಿದೆ. ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪದಿದ್ದ ಕಾರಣ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ, ಕೊಲೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಲ್ಲಾಪುರ ನಿವಾಸಿ ರಫೀಕ್ ಎಂಬ ಯುವಕ, ತನ್ನ ಪ್ರೇಯಸಿ ರಂಜಿತಾ ಮಲ್ಲಪ್ಪ ಬನ್ಸೋಡೆಯನ್ನು ಶನಿವಾರ ನಡು ರಸ್ತೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಿದ್ದ. ಬಳಿಕ ಪರಾರಿಯಾಗಿದ್ದ ಆತ, ನಿಸರ್ಗ ಮನೆಯ ಹಿಂಭಾಗದ ಕಾಜಲ್‌ವಾಡ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಂಜಿತಾ 10 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದು, ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು. ಐದು ವರ್ಷದ ಮಗುವಿನ ಜವಾಬ್ದಾರಿಯೊಂದಿಗೆ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.

ರಫೀಕ್ ಮತ್ತು ರಂಜಿತಾಳ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಕಾರಣದಿಂದ ರಫೀಕ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದನೆಂದು ತಿಳಿದು ಬಂದಿದೆ. ಆದರೆ ಇತ್ತೀಚೆಗೆ ಮದುವೆಗೆ ಒತ್ತಾಯ ಆರಂಭಿಸಿದ ರಫೀಕ್‌ಗೆ ರಂಜಿತಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು.

ಶಾಲೆಯಿಂದ ಮನೆಗೆ ಹಿಂತಿರುಗುವ ವೇಳೆ ರಂಜಿತಾಳನ್ನು ಅಡ್ಡಗಟ್ಟಿ ಮದುವೆ ವಿಚಾರವಾಗಿ ಜಗಳ ಆರಂಭಿಸಿದ ರಫೀಕ್, ಆಕೆಯ ನಿರಾಕರಣೆಯಿಂದ ಕೋಪಗೊಂಡು ಸಾರ್ವಜನಿಕ ರಸ್ತೆಯಲ್ಲೇ ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.

ಆಶಿಷ್ ವಿದ್ಯಾರ್ಥಿ ದಂಪತಿಗೆ ಅಪಘಾತ: ಅತಿರಂಜಿತ ಸುದ್ದಿಗಳಿಗೆ ಬ್ರೇಕ್ ಹಾಕಿದ ನಟ

ರಸ್ತೆ ಅಪಘಾತದಲ್ಲಿ ನಟ ಆಶಿಷ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ, ನಟನೇ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಗುಹವಾಟಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಇನ್ಸ್ಟಾಗ್ರಾಮ್ ಲೈವ್ ಮೂಲಕ ಮಾತನಾಡಿದ ಅವರು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ಸಣ್ಣ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೂಪಾಲಿಗೆ ಕೆಲ ಸಮಯ ಪ್ರಜ್ಞೆ ತಪ್ಪಿದ್ದರೂ, ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಆಶಿಷ್ ವಿದ್ಯಾರ್ಥಿ ಮಾಹಿತಿ ನೀಡಿದ್ದಾರೆ.

“ಅಪಘಾತ ನಡೆದಿದ್ದು ನಿಜ. ಆದರೆ ಅದನ್ನು ಭಯಾನಕವಾಗಿ ಚಿತ್ರಿಸುವ ಅಗತ್ಯ ಇಲ್ಲ. ನಾವು ಆಸ್ಪತ್ರೆಯಲ್ಲಿ ಚೆನ್ನಾಗಿದ್ದೇವೆ. ರೂಪಾಲಿ ಸುರಕ್ಷಿತವಾಗಿದ್ದಾರೆ. ನನಗೂ ಯಾವುದೇ ಗಂಭೀರ ಗಾಯಗಳಿಲ್ಲ” ಎಂದು ಆಶಿಷ್ ವಿದ್ಯಾರ್ಥಿ ಹೇಳಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ಸ್ಥಿತಿಯ ಬಗ್ಗೆಯೂ ಮಾತನಾಡಿದ ಅವರು, “ಆತನಿಗೂ ಈಗ ಪ್ರಜ್ಞೆ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಕೋರಿದ್ದಾರೆ.

ಬಹುಭಾಷಾ ನಟನಾಗಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿರುವ ಆಶಿಷ್ ವಿದ್ಯಾರ್ಥಿ, ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮ ಪ್ರವಾಸ ಮತ್ತು ಆಹಾರ ಅನುಭವಗಳನ್ನು ಹಂಚಿಕೊಳ್ಳುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ: ಯಶ್ ತಾಯಿಗೆ ಶಾಕ್‌ ನೀಡಿದ ಕೋರ್ಟ್

ಹಾಸನ: ನಟ ಯಶ್ ತಾಯಿ ಪುಷ್ಪಾ ವಿರುದ್ಧದ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ಕಠಿಣ ತೀರ್ಪು ನೀಡಿದ್ದು, ವಿವಾದಿತ ಗೋಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಕೋರ್ಟ್ ಆದೇಶದಂತೆ ಹಾಸನ ನಗರದಲ್ಲಿ ಜೆಸಿಬಿ ಮೂಲಕ ಕಾಂಪೌಂಡ್ ಧ್ವಂಸಗೊಳಿಸಿದ ದೃಶ್ಯಗಳು ಗಮನ ಸೆಳೆದಿವೆ.

ವಿದ್ಯಾನಗರದಲ್ಲಿರುವ ಪುಷ್ಪಾ ಅವರ ಮನೆಯ ಸಮೀಪ ನಿರ್ಮಿಸಲಾಗಿದ್ದ ಕಾಂಪೌಂಡ್, ಬೇರೆಯವರ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಲಕ್ಷ್ಮಮ್ಮ ಎಂಬವರ ಹೆಸರಿನ ಜಾಗದಲ್ಲಿ ಸುಮಾರು 1,500 ಚದರ ಅಡಿ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಜಾಗದ ಮಾಲೀಕ ದೇವರಾಜು ಆರೋಪಿಸಿದ್ದಾರೆ.

ಈ ಕುರಿತು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ನಂತರ, ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಂಪೌಂಡ್ ತೆರವುಗೊಳಿಸಲು ಅನುಮತಿ ನೀಡಿತ್ತು. ಅದರಂತೆ ಜಿಪಿಎ ಹೋಲ್ಡರ್ ಮೂಲಕ ಇಂದು ಬೆಳ್ಳಂಬೆಳಗ್ಗೆ ಜೆಸಿಬಿ ಬಳಸಿ ಗೋಡೆ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ.

ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ ಎಂಬ ಆರೋಪವನ್ನು ಜಾಗದ ಮಾಲೀಕರು ಪುನರುಚ್ಚರಿಸಿದರೆ, ಇತ್ತ ಯಶ್ ತಾಯಿ ಪುಷ್ಪಾ ಅವರು ಆರೋಪಗಳನ್ನು ನಿರಾಕರಿಸಿ, ಕಾನೂನು ಹೋರಾಟ ನಡೆಸುವುದಾಗಿ ಮೂಲಗಳು ತಿಳಿಸಿವೆ.

ನಿಧಿಗಾಗಿ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಿಧಿ ಆಸೆಯಿಂದ ಮಗು ಬಲಿ ಕೊಡಲು ಯತ್ನಿಸಿದ ಘಟನೆ ನಡೆದಿದೆ. ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ 8 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ.

ಸೈಯದ್ ಇಮ್ರಾನ್ ಹಾಗೂ ಅವರ ಪತ್ನಿ, ನಿಧಿಗಾಗಿ ಪೂಜೆ ನಡೆಸುವ ಉದ್ದೇಶದಿಂದ ಮಗುವನ್ನು ಬಲಿ ಕೊಡಲು ಸಿದ್ಧರಾಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಿನ್ನೆ ಹುಣ್ಣಿಮೆ ಹಿನ್ನೆಲೆ ಈ ಪೂಜೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಯುತ್ತಿದ್ದುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ತನಿಖೆಯ ವೇಳೆ, ಸೈಯದ್ ಇಮ್ರಾನ್ ದಂಪತಿ 8 ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಮಗುವನ್ನು ದತ್ತು ಪಡೆದಿದ್ದರು ಎಂಬ ಮಾಹಿತಿ ಲಭಿಸಿದೆ. ದತ್ತು ಪಡೆದ ಬಳಿಕ ತಮ್ಮ ಹೆಸರಿನಲ್ಲಿ ನಕಲಿ ಜನನ ಪ್ರಮಾಣ ಪತ್ರ ಮಾಡಿಸಿಕೊಂಡಿರುವುದೂ ಬೆಳಕಿಗೆ ಬಂದಿದೆ. ದಾಳಿ ವೇಳೆ, ದಂಪತಿ ದತ್ತು ಸಂಬಂಧಿತ ಒಪ್ಪಂದ ಪತ್ರವೊಂದನ್ನು ಅಧಿಕಾರಿಗಳಿಗೆ ನೀಡಿದ್ದರು,

ಕಾನೂನುಬದ್ದವಾಗಿ ದತ್ತು ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ಮಗುವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಗು ಪ್ರಸ್ತುತ ಶಿಶು ಕೇಂದ್ರದಲ್ಲಿ ಸುರಕ್ಷಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!