Home Blog Page 235

ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕ: ಸಲೀಂ ಅಹ್ಮದ್

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ಗುರುವಾರ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲ ವರ್ಗದವರಿಗೆ ತಲುಪುತ್ತಿವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪುತ್ತಿವೆ. ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಈಗಾಗಲೇ 600 ಕೋಟಿಗೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಸಹ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನಿಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ ಸೇರಿದಂತೆ ಇತರರು ಹಾಜರಿದ್ದರು.

ಮರಳಿ ಬಾರದ ಲೋಕಕ್ಕೆ ಕಳಸಾಪುರಶೆಟ್ರು

ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಹಿರಿಯರಾದ ಎಸ್.ಎಸ್. ಕಳಸಾಪುರಶೆಟ್ರು ಅಕಾಲಿಕವಾಗಿ ತಮ್ಮ 73ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದು ಅವಳಿ ನಗರಕ್ಕೆ ಮತ್ತು ಉತ್ತರ ಕರ್ನಾಟಕದ ಅವರ ಅಭಿಮಾನಿಗಳಿಗೆ ತುಂಬಲಾರದ ಹಾನಿಯಾಗಿದೆ.

ಪ್ರಗತಿಪರ ವಿಚಾರವಾದಿಗಳು, ಚಿಂತಕರಾಗಿದ್ದ ಗದುಗಿನ ಶಿವರುದ್ರಪ್ಪ ಸಿದ್ದಲಿಂಗಪ್ಪ ಕಳಸಾಪೂರಶೆಟ್ಟರೆಂದರೆ ಗದಗ, ಧಾರವಾಡ ಜಿಲ್ಲೆಗೆ ಚಿರಪರಿಚಿತರು. ಇವರು ಎಡೆಯೂರು ಸ್ವಾಮಿ ಸಿದ್ಧಲಿಂಗೇಶ್ವರರ ಪರಮಭಕ್ತರಾಗಿದ್ದು, ಗದುಗಿನ ತೋಂಟದಾರ್ಯ ಶ್ರೀಗಳವರ ಖಾಸಾ ಭಕ್ತರಾಗಿದ್ದರು.

ಪೂಜ್ಯ ತೋಂಟದಾರ್ಯ ಜಗದ್ಗುರುಗಳವರು ಪ್ರತಿವರ್ಷ ತೋಂಟದಾರ್ಯ ಜಾತ್ರಾ ಮಹೋತ್ಸವದಂದು ಶ್ರೀ ಕಳಸಾಪೂರ ಶೆಟ್ಟರ ಮನೆಯಲ್ಲಿಯೇ ಪೂಜೆ-ಪ್ರಸಾದ ತೀರಿಸಿಕೊಂಡು ಶ್ರೀಮಠಕ್ಕೆ ಆಗಮಿಸಿದ ನಂತರ ಶ್ರೀಮಠದ ತೇರು ಸಾಗುವುದು. ಈ ಪದ್ಧತಿ ಕಳೆದ ಸುಮಾರು 250 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮನೆತನದವರು ಈ ಪರಂಪರೆಯನ್ನು ಬಹಳ ಭಕ್ತಿ-ಶ್ರದ್ಧೆ-ಅಭಿಮಾನದಿಂದ ನಡೆಸಿಕೊಂಡು ಬಂದಿದ್ದಾರೆ.

ಸೇವೆ ಮತ್ತು ತ್ಯಾಗಕ್ಕೆ ಹೆಸರಾದ ಶಿವರುದ್ರಪ್ಪನವರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು, ಜಾತ್ರಾ ಮಹೋತ್ಸವ ಇರಲಿ, ಶಿವರಾತ್ರಿ ಕಾರ್ಯಕ್ರಮ ಇರಲಿ, ದಸರಾ ಮಹೋತ್ಸವ ಇರಲಿ, ಪುರಾಣ ಪ್ರವಚನ ಇರಲಿ, ಶ್ರಾವಣ ಮಾಸದ ಕಾರ್ಯಕ್ರಮ ಇರಲಿ, ಯಾವುದೇ ಶ್ರೀಮಠದ ಶಿಕ್ಷಣ ಸಂಸ್ಥೆ ಕಾರ್ಯಕ್ರಮವಿರಲಿ ಅವುಗಳಲ್ಲಿ ಕ್ರಿಯಾಶೀಲರಾಗಿ ಬಹಳ ಅಭಿಮಾನದಿಂದ ಸೇವೆ ಸಲ್ಲಿಸಿದ್ದಾರೆ.

50 ವರ್ಷಗಳ ಹಿಂದೆ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಉತ್ತರ ಕರ್ನಾಟಕದಿಂದ ಎಡೆಯೂರು ಸ್ವಾಮಿ ಸಿದ್ಧಲಿಂಗೇಶ್ವರರ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ವಿವಿಧ ಊರುಗಳಿಂದ ಪಾದಯಾತ್ರೆ ಪ್ರಾರಂಭಿಸಿದರು. ಗದುಗಿನ ಮಾರ್ಗವಾಗಿ ಎಡೆಯೂರಿಗೆ ಹೋಗುವಾಗ ಈ ಪಾದಯಾತ್ರಾ ಮಂಡಳಿಗೆ ಶ್ರೀ ಕಳಸಾಪುರ ಶೆಟ್ರು ಬಹಳ ಭಕ್ತಿಯಿಂದ ಸಹಾಯ ಮಾಡುತ್ತ, ಕೊನೆಗೆ ಪಾದಯಾತ್ರೆ ಮುಕ್ತಾಯದ ದಿನ ಎಡೆಯೂರು ಕ್ಷೇತ್ರಕ್ಕೆ ಕೂಡ ಹೋಗಿಬರುತ್ತಿದ್ದರು.

ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಎಸ್.ಎಂ. ಜಾಮದಾರ ಅವರ ಮಾರ್ಗದರ್ಶನದಲ್ಲಿ ಇವರು ಹಾಗೂ ಇವರ ಸಹೋದರ ಶೇಖಣ್ಣ ಇವರು ಒಳ್ಳೆಯ ಗುತ್ತಿಗೆದಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಶ್ರೀಯುತರು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೆಗೌಡರು, ಹಿಂದಿನ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಬಸವರಾಜ ಬೊಮ್ಮಾಯಿ, ಎಂ.ಪಿ. ಪ್ರಕಾಶ್ ಮತ್ತು ಇಂದಿನ ಪ್ರಗತಿಪರ ಚಿಂತನೆಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಆಪ್ತರು. ಆ ಕಾರಣಕ್ಕಾಗಿ ಎಸ್.ಆರ್. ಬೊಮ್ಮಾಯಿಯವರು ರಾಜ್ಯಸಭಾ ಸದಸ್ಯರಾಗಿದ್ದಾಗ 2000ನೇ ಇಸ್ವಿಯಲ್ಲಿ 5 ಲಕ್ಷ ರೂಪಾಯಿಗಳ ಅನುದಾನವನ್ನು ಶ್ರೀ ತೋಂಟದಾರ್ಯ ಶಿಕ್ಷಣ ಸಂಸ್ಥೆಗೆ ಕೊಡಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಆಳಂದದ ಇಂದಿನ ಶಾಸಕರಾದ ಬಿ.ಆರ್. ಪಾಟೀಲ, ಕುಷ್ಟಗಿ ಮಾಜಿ ಶಾಸಕರಾದ ಕೆ. ಶರಣಪ್ಪ, ಗದುಗಿನ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಸ್.ಎಸ್. ಕಡಪಟ್ಟಿ, ಮಾಜಿ ಸಂಸದರಾದ ಕೆ.ಎಸ್. ವೀರಭದ್ರಪ್ಪ, ಆರ್.ಎಸ್. ಪಾಟೀಲ, ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಹುಂಬರವಾಡಿ, ಶಲವಡಿ ಶಂಕರಗೌಡ್ರ, ಶ್ರೀಶೈಲಪ್ಪ ಬಿದರೂರ, ಸಭಾಪತಿಗಳಾದ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ, ಎಂ.ಆರ್. ಪಾಟೀಲ, ಹಿರೇಗೌಡ್ರ, ಲಕ್ಷ್ಮೇಶ್ವರದ ಟಿ.ಈಶ್ವರ, ನಾಡಿನ ಹಿರಿಯ ಸಂಶೋಧಕರಾದ ಡಾ. ಎಂ.ಎನ್. ಕಲಬುರ್ಗಿ ಹಾಗೂ ಅನೇಕ ಸಮಾಜಮುಖಿ ಗಣ್ಯರ ಆಪ್ತ ವಲಯದಲ್ಲಿ ಇದ್ದವರು.

ಪೂಜ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳ ಕಾಲದಲ್ಲಿ ಮತ್ತು ಅವರು ಲಿಂಗೈಕ್ಯರಾದಾಗ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅದೇ ರೀತಿ ಇಂದಿನ ಪೂಜ್ಯರೊಂದಿಗೆ ಆಪ್ತವಾದ ಸಂಬಂಧವನ್ನು ಹೊಂದಿದ್ದರು. ಕಳೆದ ನಾಲ್ಕು ದಶಕಗಳಿಂದ ನನ್ನ ಜೊತೆ ಒಡನಾಟ ಹೊಂದಿದ ಇವರ ಅಗಲಿಕೆಯು ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಬಸವಾದಿ ಪ್ರಮಥರು ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

– ಪ್ರೊ. ಶಿವಾನಂದ ಎಸ್. ಪಟ್ಟಣಶೆಟ್ಟರ
ಕಾರ್ಯದರ್ಶಿಗಳು,
ಜಗದ್ಗುರು ತೋಂಟದಾರ್ಯ ವಿದ್ಯಾಸಂಸ್ಥೆ, ಗದಗ.

ಸಮಾಜ ಬಾಂಧವರು ಮಹಾಸಭಾಕ್ಕೆ ಶಕ್ತಿ ತುಂಬಿ: ಡಾ. ಶಂಕರ ಬಿದರಿ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜ ಬಾಂಧವರು, ರಾಜಕಾರಣಿಗಳು, ಮಠಾಧೀಶರು ಈ ಸಮಾಜ ಬಾಂಧವರಲ್ಲಿ ಇನ್ನಷ್ಟು ಒಗ್ಗಟ್ಟನ್ನು ಮೂಡಿಸಿ ಬಲಪಡಿಸುವ ಕಾರ್ಯ ಮಾಡಬೇಕೆಂದು ನಿವೃತ್ತ ಡಿಜಿ-ಐಜಿಪಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಶಂಕರ ಬಿದರಿ ಮನವಿ ಮಾಡಿಕೊಂಡರು.

ಅವರು ಗದುಗಿನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಗದಗ ಜಿಲ್ಲಾ ಕೆಪಿಟಿಸಿಎಲ್- ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘ ಏರ್ಪಡಿಸಿದ್ದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಒಗ್ಗಟ್ಟು ಮತ್ತು ಸಂಘಟನೆ ಇಲ್ಲದ ಸಮಾಜ ಬಾಂಧವರನ್ನು ಮಹಾಸಭಾ ಈಗಾಗಲೇ ವೀರಶೈವ ಮತ್ತು ಲಿಂಗಾಯತ ಸಮಾಜಬಾಂಧವರಲ್ಲಿ ಒಗ್ಗಟ್ಟು ಮೂಡಿಸಿ ಅವರನ್ನು ಮಹಾಸಭಾದ ಮೂಲಕ ಸಂಘಟನೆಗೆ ಒಳಪಡಿಸಿ ಸಮಾಜವನ್ನು ಬಲಪಡಿಸುವ ಮಹಾನ್ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ವಿಷಯವಾಗಿ ಇತ್ತೀಚೆಗೆ ನಮ್ಮನ್ನಗಲಿದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ರಾಜಕೀಯ ಮುತ್ಸದ್ಧಿ ಶಾಮನೂರ ಶಿವಶಂಕರಪ್ಪ ಅವರು ಮಾಡಿದ ಪ್ರಯತ್ನ, ಪರಿಶ್ರಮವನ್ನು ಸಮಾಜ ಎಂದೆಂದಿಗೂ ಮರೆಯುವುದಿಲ್ಲ ಎಂದರು.

ಗುರು-ವಿರಕ್ತರು ಸಮಾಜವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕಾರ್ಯ ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ಭಾವನೆಯನ್ನು ಸಮಾಜ ಬಾಂಧವರಲ್ಲಿ ಗಟ್ಟಿಯಾಗಿ ಮೂಡಿಸಬೇಕಿದೆ. ಈ ಪ್ರಯತ್ನವನ್ನು ಮಹಾಸಭಾ ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಇದಕ್ಕೆ ನಾಡಿನ ಎಲ್ಲ ಮಠಾಧೀಶರೂ ಕೃಪೆ ಮಾಡಿ ಸಾಥ್ ನೀಡಬೇಕೆಂದು ಮನವಿ ಮಾಡಿಕೊಂಡರು.

ಮುಖ್ಯ ಅತಿಥಿ ಅ.ಭಾ.ವೀ ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಸಮಾಜ ಮತ್ತು ಸಂಘಟನೆ ಕುರಿತು ಮಾತನಾಡಿದರು. ಪ್ರೊ. ಅನಿಲ ವೈದ್ಯ ಅವರಿಂದ ವಿಶೇಷ ಉಪನ್ಯಾಸ ಜರುಗಿತು.

ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯ ಚನ್ನವೀರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ ಕಲ್ಯಾಣಶೆಟ್ಟರ್ ವಹಿಸಿದ್ದರು. ಗಣ್ಯರಾದ ಗಂಗಾಧರ ಗಡ್ಡಿ, ಚನ್ನವೀರಪ್ಪ ಹುಣಶೀಕಟ್ಟಿ, ಮುರುಘರಾಜೇಂದ್ರ ಬಡ್ನಿ, ಉದಯರವಿ ಗುಡಿಮನಿ ಸೇರಿದಂತೆ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಮಹಾಸಭಾ ಯಾರನ್ನೂ ಟೀಕಿಸುವುದಿಲ್ಲ, ಯಾರ ವಿರುದ್ಧವೂ ಅಲ್ಲ. ವೀರಶೈವ ಲಿಂಗಾಯತರ ಅವರವರ ವೃತ್ತಿ, ಆಚರಣೆ ಏನೇ ಇದ್ದರೂ ಅದು ಅವರ ವೈಯುಕ್ತಿಕ. ಆದರೆ ಧರ್ಮ-ಸಮಾಜ ಎಂದು ಬಂದಾಗ ನಾವೆಲ್ಲರೂ ಒಂದು ಎಂಬ ಸದ್ಭಾವನೆ ಬರಬೇಕು. ಶತಶತಮಾನಗಳಿಂದ ಒಂದಾಗಿ ಬಂದಿರುವ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಜವಾಬ್ದಾರಿಯುತ ಕಾರ್ಯಕ್ಕೆ ಮಹಾಸಭಾ ಮುಂದಾಗಿದ್ದು, ಮಹಾಸಭಾಕ್ಕೆ ಆಜೀವ ಸದಸ್ಯರಾಗುವ ಮೂಲಕ ಮಹಾಸಭಾಕ್ಕೆ ಮಹಾಬಲ ನೀಡಬೇಕೆಂದು ಶಂಕರ ಬಿದರಿ ಸಮಾಜಬಾಂಧವರಲ್ಲಿ ಅರಿಕೆ ಮಾಡಿಕೊಂಡರು.

ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ

0

ಲಕ್ಷೇಶ್ವರ: ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಮರ ಶಿಲ್ಪಿ ಜಕಣಾಚಾರಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಲಾ ಪ್ರತಿಭೆಗಳ ಹಬ್ಬ ಪ್ರತಿಭಾ ಕಾರಂಜಿ

0

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಬಿಇಓ ಎಚ್. ನಾಣಕೀ ನಾಯ್ಕ ಹೇಳಿದರು.

ಅವರು ಬುಧವಾರ ಪಟ್ಟಣದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ. 1ರಲ್ಲಿ ಹಮ್ಮಿಕೊಂಡಿದ್ದ ಲಕ್ಷೇಶ್ವರ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕವನ ವಾಚನ, ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆ, ಕ್ಲೇ ಮಾಡೆಲಿಂಗ್ ಇನ್ನೂ ಅನೇಕ ಕಲಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿರುವ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ, ಎಸ್‌ಡಿಎಮ್‌ಸಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಮುಖ್ಯ ಶಿಕ್ಷಕಿ ಅಂಬಿಕಾ ಕೆ.ಎಸ್, ಸದಸ್ಯರಾದ ದರವೇಶ ನಾಳಬಂದ, ಆದಮ್ ನಾಯಕ, ಅಬ್ದುಲ್ ಕೆ.ಗುಡಗೇರಿ, ಸಾಹೇಬಜಾನ ಹವಾಲ್ದಾರ, ರಾಘವೇಂದ್ರ ಜೋಶಿ, ಬಿ.ಎಸ್. ಹರ್ಲಾಪುರ, ಚಂದ್ರಕಾತ ನೇಕಾರ, ಬಿ.ಎಂ. ಯರಗುಪ್ಪಿ ಸೇರಿ ಕ್ಲಸ್ಟರಿನ ಶಿಕ್ಷಕರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು ಮತ್ತು ದಾನಿಗಳಾದ ಅಷ್ಪಾಕ್ ಮುಳಗುಂದ, ಇಸ್ಮಾಯಿಲ್ ಕಲ್ಬುರ್ಗಿ, ಸಲೀಂ ಕರೀಮಖಾನ್ ನವರ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಎನ್.ಎ. ಮುಲ್ಲಾ, ಎ.ಎ. ಪುಲ್ಲಿ, ಎ.ಐ. ಮಿಯಾನವರ ನಿರೂಪಿಸಿದರು.

ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ತಾಲೂಕಿನ ಪು.ಬಡ್ನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 4ನೇ ಬಾರಿಗೆ ಸತೀಶಗೌಡ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಮರಿಹೊಳಲಣ್ಣವರ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 12 ನಿರ್ದೇಶಕರ ಸ್ಥಾನಗಳೂ ಅವಿರೋಧ ಆಯ್ಕೆಯಾದವು.

ನಿರ್ದೇಶಕರಾಗಿ ದೇವಪ್ಪ ಕೊರಕನವರ, ಶಿವಪುತ್ರಪ್ಪ ಚೋಟಗಲ್, ಶೇಖಪ್ಪ ಕರೆಣ್ಣೆವರ, ಹಸನಸಾಬ ಭಾವಿಕಟ್ಟಿ, ದ್ರಾಕ್ಷಾಯಿಣವ್ವ ಅತ್ತಿಗೇರಿ, ಲಲಿತಾ ಹರದಗಟ್ಟೆ, ಹಾಲಪ್ಪ ಸೂರಣಗಿ, ಕುಮಾರಸ್ವಾಮಿ ಹಿರೇಮಠ, ಹನಮಂತಪ್ಪ ಮಾದರ, ನಾಗಪ್ಪ ಮಸೂತಿ ಅವರು ಅವಿರೋಧ ಆಯ್ಕೆಯಾದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವಿ. ಪಾಟೀಲ ಇದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಿಡಗುಂದಿ ಕಾರ್ಯ ನಿರ್ವಹಿಸಿದರು.

ಮರ್ಯಾದಾ ಹತ್ಯೆ ನಾಗರಿಕ ಸಮಾಜಕ್ಕೆ ಶಾಪ: ಅಶೋಕ ಬರಗುಂಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರ ರಾಜಕೀಯ ಸೋಗಲಾಡಿತನ ಬಿಟ್ಟು ಸಮಾಜದಲ್ಲಿ ಮರ್ಯಾದಾ ಹತ್ಯೆಯಂತಹ ಘೋರ ಕೃತ್ಯಗಳನ್ನು ತಡೆಯಲು ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಒತ್ತಾಯಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರ್ಯಾದಾ ಹತ್ಯೆಗಳು ನಾಗರಿಕ ಸಮಾಜಕ್ಕೆ ಶಾಪವಾಗಿವೆ. ಇಂತಹ ಪ್ರಮಾದಗಳು ಮರುಕಳಿಸದಂತೆ ತಡೆಯುವುದೇ ನಾವು ಮಾನವೀಯತೆಗೆ ನೀಡುವ ನಿಜವಾದ ಗೌರವ. ಕೊಲೆ ಮಾಡಿದವರು ಮಾತ್ರವಲ್ಲದೆ, ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡಿದವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಈ ನಾಡಿನ ಲಿಂಗಾಯತ ಸಮುದಾಯಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಪರಿಸರವನ್ನು ಜಾಗೃತವಾಗಿರಿಸಿಕೊಂಡು, ನಾಡನ್ನು ಶಾಂತಿಯ ತೋಟವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲ ಭೇದ-ಭಾವಗಳನ್ನು ಸುಡುವ ಶಕ್ತಿ ಇರುವುದು ಕೇವಲ ಪ್ರೀತಿ ಎಂಬ ಮಂತ್ರಕ್ಕೆ ಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಯುವತಿಯ ಮರ್ಯಾದಾ ಹತ್ಯೆ ಖಂಡಿಸಿ, ಜಾಗತಿಕ ಲಿಂಗಾಯತ ಮಹಾಸಭಾ, ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಜ. 2ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ವೃತ್ತದಲ್ಲಿ ಪ್ರಾಯಶ್ಚಿತ್ತ ದಿನ ಆಚರಿಸಲಾಗುವುದು. ಈ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಲಾಗುವುದು ಎಂದು ಬರಗುಂಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಚಟ್ಟಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಶ್ರೀದೇವಿ ಶೆಟ್ಟರ್, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ, ಮಾರ್ತಾಂಡ ಹಾದಿಮನಿ ಉಪಸ್ಥಿತರಿದ್ದರು.

ನೋಡಬನ್ನಿ ಬನಶಂಕರಿ ತಾಯಿಯ ಜಾತ್ರೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿಯೇ ಪ್ರಸಿದ್ಧವಾಗಿದೆ. ಬಾದಾಮಿ ಚಾಲುಕ್ಯ ಅರಸರ ನೆಚ್ಚಿನ ದೇವತೆ ಶ್ರೀ ಬನಶಂಕರಿ ದೇವಿ ಆಗಿದ್ದಳು. ಈ ಜಾತ್ರೆಯು ಪ್ರತಿ ವರ್ಷ ಬನದ ಹುಣ್ಣಿಮೆಯ ದಿವಸ ಜನವರಿ ತಿಂಗಳಲ್ಲಿ ಬರುತ್ತದೆ. ಇದರ ರಥೋತ್ಸವವು ಈ ವರ್ಷ ಜ. 03ರಂದು ಜರುಗಲಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಈ ಬನಶಂಕರಿ ದೇವಿಯ ಜಾತ್ರೆಗೆ ಬರುವರು. ದೇವಿ ಮಂದಿರ, ಸರಸ್ವತಿ ಹಳ್ಳದ ಹಾಗೂ ಬನ ತೋಟಗಳ ಮಧ್ಯದ ಭಾಗದಲ್ಲಿ ಬನದೇವಿಯು ನೆಲೆ ನಿಂತಿದ್ದಾಳೆ. ಬಾಳೆ, ತೆಂಗು, ಎಲೆ ಬಳ್ಳಿ, ಅನೇಕ ಸಸ್ಯಗಳೊಂದಿಗೆ ಈ ಪ್ರದೇಶವು ಕಂಗೊಳಿಸುತ್ತಿದೆ. ಈ ಮೊದಲು ಬಿಜಾಪೂರ ಜಿಲ್ಲೆಗೆ ಒಳಪಡುತ್ತಿದ್ದು, ನಂತರ ಬಾಗಲಕೋಟ ಹೊಸ ಜಿಲ್ಲೆ ಆದ ನಂತರ ಇದರ ಆಡಳಿತಕ್ಕೆ ಬಂದಿದೆ.

ಜಾತ್ರೆಯು ಬನದ ಹುಣ್ಣಿಮೆಯ ದಿವಸ ಪ್ರಾರಂಭವಾಗಿ ಬರುವ ಹುಣ್ಣಿಮೆಯ ತನಕ ಜರಗುತ್ತದೆ. ಬನಶಂಕರಿ ದೇವಿ ದೇವಸ್ಥಾನಕ್ಕೆ ದೀಪಾಲಂಕಾರ, ಹೂವಿನ ಶೃಂಗಾರ ಮಾಡಿರುತ್ತಾರೆ. ಬಾದಾಮಿ ಕಡೆಯಿಂದ ಬರುವ ರಸ್ತೆಗೆ ಎಡ ಬದಿ ಹಾಗೂ ಬಲ ಬದಿಯ ಪ್ರಾರಂಭದಲ್ಲಿ ಕಟ್ಟಿಗೆ ಎಳೆ ಅಡ್ಡೆ, ಚಿತ್ತಾರದ ಬಾಗಿಲು, ಕಿಡಕಿ, ಸಂದಕ, ಗಣಪತಿಯ ಬಾಗಿಲು ಮಾರುವ ಅಡ್ಡೆ, ಬಿದಿರು ಮಾರುವ ಮ್ಯಾದರ ಅಡ್ಡೆ, ಮಾವಿನ ಬೇವಿನ ಹಲಗೆ ಮಾರುವ ಅಡ್ಡೆ, ನಾಟಕ ಕಂಪನಿಗಳ ಸಾಲು, ಅದರ ಪಕ್ಕ ಸೋಡಾದ ಅಂಗಡಿಗಳು, ಚಹಾದ ಅಂಗಡಿಗಳು, ಕಬ್ಬಿನ ಅಂಗಡಿ, ರೈತರ ಸಲಕರಣೆ, ಮನೆಯ ಸಾಮಾನು, ಬಟ್ಟೆ ಅಂಗಡಿಗಳ ಸಾಲು ಮತ್ತು ಒಂದು ಸಾಲು ಕಿರಾಣಿ ಅಂಗಡಿ, ಬಳೆ ಅಂಗಡಿಗಳ ಸಾಲು, ಮಧ್ಯದಲ್ಲಿ ಸಂಚಾರಿ ಪೊಲೀಸ್ ಠಾಣೆ, ಮತ್ತು ಮಿಠಾಯಿ ಅಂಗಡಿ ಸಾಲು, ಅಮೀನಗಡದ ಗೋಕಾಕದ ಕರದಂಟನ ಅಂಗಡಿ, ಖಾನಾವಳಿಗಳು, ಫೋಟೊ ಅಂಗಡಿಗಳು, ಸಿನಿಮಾ ಟೆಂಟ್‌ಗಳು, ಮೊಜೀನ ಆಟಗಳ ಅಂಗಡಿಗಳು ಗುಡಿಯ ಮುಂದೆ ಹೊಂಡ ಹೊಂಡದ ಸುತ್ತ ಕುಂಕುಮ ವಿಭೂತಿ ಅಂಗಡಿಗಳು, ಸರ್ಕಸ್ ಕಂಪನಿ ಹಾಗೂ ಹೊಸ ಹೊಸ ಕಂಪನಿ ಪ್ರಚಾರಕ ಅಂಗಡಿಗಳು ಸಾಲು ಹಚ್ಚುತ್ತವೆ.

ಜಾತ್ರೆಗೆ ವಿವಿಧ ನಾಟಕ ಕಂಪನಿ, ಕಿರುತೆರೆ ನಟ-ನಟಿಯರು ಬಂದು ನಡೆಸುವ ನಾಟಕ ಪ್ರದರ್ಶನ ನೋಡುವುದೇ ಒಂದು ಖುಷಿ. ಜಾತ್ರೆಗೆ ಎತ್ತಿನ ಗಾಡಿ, ರಿಕ್ಷಾ, ಮೋಟಾರು ಸೈಕಲ್, ಕಾರು, ಬಸ್ ಸಂಚಾರದೊಂದಿಗೆ ಹಗಲು-ರಾತ್ರಿ ಬನಶಂಕರಿ ತಾಯಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಈ ಜಾತ್ರೆ ನೋಡುವ ಭಾಗ್ಯ ನಿಮ್ಮದಾಗಬೇಕು. ಜಾತ್ರೆಯ ದಿವಸ ಮಾಡಲಗೇರಿ ಗ್ರಾಮದಿಂದ ತೇರಿನ ಹಗ್ಗವು ಕೋಲಾರದ ಹಳ್ಳಿ ಬಂಡಿಯಲ್ಲಿ ಸಿಂಗರಿಸಿಕೊಂಡು ಜನರು ಹುರುಪಿನಿಂದ ಬರುತ್ತಾರೆ. ದಾರಿಯುದ್ದಕ್ಕೂ ಜಯಘೋಷ ಮಾಡುತ್ತಾ ಮಧ್ಯಾಹ್ನ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಬರುತ್ತಾರೆ.

ತೇರಿನ ಹಗ್ಗ ತೇರಿಗೆ ಕಟ್ಟಿ ಪೂಜೆ ಮಾಡಿ ಸಂಭ್ರಮದಿಂದ ಪುರೋಹಿತರು ಹಾಗೂ ಜಾತ್ರಾ ಕಮಿಟಿಯವರು ಜನಪ್ರತಿನಿಧಿಗಳ ಅಪಾರ ಭಕ್ತ ಸಮೂಹದಲ್ಲಿ ಸಾಯಂಕಾಲ 5 ಗಂಟೆಗೆ ರಥೋತ್ಸವ ಜರುಗುವುದು. ನಂತರ ಎಲ್ಲರೂ ದೇವಿ ದರ್ಶನ ಪಡೆದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಮತ್ತೇಕೆ ತಡ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಜಾತ್ರೆಯ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಿ.

  • ಎಸ್.ಎಫ್. ಜಾಲಿಹಾಳ.
    ಗದಗ.

ಪ್ರತಿಭಾ ಕಾರಂಜಿಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ, ವಿರೋಧ ಪಕ್ಷದ ಮಾಜಿ ನಾಯಕ, ಎಪಿಎಂಸಿ ಮಾಜಿ ಸದಸ್ಯ ಹೇಮಗಿರೀಶ ಗು.ಹಾವಿನಾಳ ಹೇಳಿದರು.

ತಾಲೂಕಿನ ಕಕ್ಕೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕಕ್ಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತಹ ವೇದಿಕೆಗಳು ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಅಣ್ಣಿಗೇರಿ, ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಮಾತನಾಡಿದರು.

ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ, ನೃತ್ಯ, ಗಾಯನ ಸೇರಿದಂತೆ ಹಲವಾರು ಸ್ಪರ್ಧೆಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ಶಾಲಾ ಗುರುಗಳು, ಗುರುಮಾತೆಯರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಗುರು-ಹಿರಿಯರು ಇದ್ದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರರಿಂದ ಆರೋಗ್ಯ ಇಲಾಖೆ ನವೀಕೃತ ಕಚೇರಿ ಉದ್ಘಾಟನೆ

0

ಗದಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನವೀಕೃತ ಆಡಳಿತ ಕಚೇರಿಯನ್ನು ಗುರುವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್., ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ, ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಡಿಆರ್‌ಡಿಎ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ನಿರ್ಮಿತಿ ಕೇಂದ್ರದ ಜಿ.ವಿ. ಶಿರೋಳ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!