Home Blog Page 236

ಪರೀಕ್ಷೆಗೆ ಧೈರ್ಯದಿಂದ ಸಿದ್ಧರಾಗಿ: ಎಂ.ಸಿ. ಭಜಂತ್ರಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಎಫ್.ಎಂ. ಡಬಾಲಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರ ವಿಷಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕು. ಹೊಸ ಪ್ರಶ್ನೆಪತ್ರಿಕೆಯ ಮಾದರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಸಫಲತೆಯನ್ನು ಪಡೆಯಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಗದುಗಿನ ಎಚ್‌ಸಿಇಎಸ್ ಪದವಿಪೂರ್ವ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಸುನಂದಾ ಪವಾರ್ ಮಾತನಾಡುತ್ತಾ, ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಎಫ್.ಎಂ. ಡಬಾಲಿ ಕಾಲೇಜಿನ ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ವಿಷಯಗಳ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಂಕ ಗಳಿಕೆಯೊಂದೇ ಮುಖ್ಯವಲ್ಲ. ಅಂಕಗಳ ಜೊತೆಗೆ ನೈತಿಕ ಮೌಲ್ಯಗಳು ಜೀವನದಲ್ಲಿ ಅನ್ವಯವಾಗಬೇಕು. ಎಲ್ಲ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಅಧ್ಯಯನಶೀಲರಾಗಿ, ಆತಂಕವಿಲ್ಲದೆ ಪರೀಕ್ಷೆಯನ್ನು ಬರೆಯಬೇಕು ಎಂದರು.

ಕಾಲೇಜಿನ ಉಪನ್ಯಾಸಕರಾದ ಎನ್. ಹನುಮರೆಡ್ಡಿ, ವಾಯ್.ಎಸ್. ಪಂಗಣ್ಣವರ್, ಪಿ.ಎನ್. ಕುಲಕರ್ಣಿ, ಎಂ.ಎನ್. ನದಾಫ್, ಎಫ್.ಎ. ಬಾಬುಖಾನವರ, ಪಿ.ವಿ. ಹೊಸೂರ್ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ್ ಶಿರುಂದ ವಂದಿಸಿದರು. ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಭಜಂತ್ರಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುನಂದಾ ಪವಾರ್ ಅವರನ್ನು ಗೌರವಿಸಲಾಯಿತು.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾ ದಾಸೋಹಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಜ. 5ರಂದು ಜರುಗಲಿದ್ದು, ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಬುಧವಾರ ಸಂಜೆ ಬಿಜಕಲ್‌ನ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳವರು ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್. ಅರಸಿದ್ಧಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 6 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುವುದು ವಿಶೇಷತೆಯಾಗಿದೆ.

ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ಹಾಗೂ ಪ್ರಸಾದ ಸ್ವೀಕರಿಸಲು ಹೆಚ್ಚು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಸುಮಾರು 76 ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕೊಠಡಿಗಳಿವೆ.

ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ 04 ಪ್ರವೇಶ ದ್ವಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೊಲೀಸರು ಇರುತ್ತಾರೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಾತ್ರಾ ಮಹೋತ್ಸವ ಪ್ರಾರಂಭದಿಂದ ಮುಕ್ತಾಯದವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು. ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು 15ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.

ಕೋಗಿಲು ಪ್ರಕರಣದಲ್ಲಿ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು: ಎಸ್.ಆರ್.ವಿಶ್ವನಾಥ್

0

ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು- ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂಪಾಯ ದುಡ್ಡು ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ; ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು.

ಇವನಿಗೆ ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ, ಅಲ್ಪಸಂಖ್ಯಾತ ಇಲಾಖೆಯಿಂದ ಎರಡೂವರೆ ಲಕ್ಷ ರೂಪಾಯಿ, ಇವೆಲ್ಲವನ್ನು ಕೊಟ್ಟು ಕೇವಲ ಎರಡೂವರೆÀ ಲಕ್ಷದಲ್ಲಿ ಮನೆ ಕೊಡ್ತೀವಿ ಅಂದರೆ, ದ್ರೆ ಈಗ ಏನು ಒಂದು ಲಕ್ಷ ಮನೆಗಳನ್ನ ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತು ಮುತ್ತಲು 45 ಸಾವಿರÀ ಮನೆಗಳು ಆಗುತ್ತಿವೆ. ಅವರು ಯಾರು ಕೂಡ ದುಡ್ಡು ಕಟ್ಟಲ್ಲ. ಅವರೆಲ್ಲ 2.5 ಲಕ್ಷಕ್ಕೇ ಸ್ಟಿಕ್ ಆನ್ ಆಗುತ್ತಾರೆ. ಇದು ಸರ್ಕಾರಕ್ಕೆ ದೊಡ್ಡ ಮುಜುಗರ ಆಗಲಿದೆ. ದೊಡ್ಡ ಹೊಡೆತ ಕೊಡಲಿದೆ. ಇದಕ್ಕೂ ಮೀರಿ ಏನಾದ್ರೂ ಮನೆಗಳನ್ನು ಕೊಟ್ಟರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಕೂಡ ಸಂಗ್ರಹ ಮಾಡುತ್ತಿದ್ದಾರೆ ಎಂದರು.

ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ ಮಾನ್ಯ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ ಎಂದರು. ನಾಳೇನೇ ಮನೆಗಳ ಹಂಚಿಕೆ ಮಾಡ್ಲಿಕ್ಕೆ ಪ್ಲಾನ್ ಮಾಡ್ಕೊಂಡಿದ್ದೀರಾ? ಅದು ಸಾಧ್ಯ ಇಲ್ಲ. ಸುಮ್ನೆ ಅವರು ಹೇಳಿರಬಹುದು ಅಷ್ಟೆ. ಇವತ್ತು ಅವರು ಇಲ್ಲಿ ವಾಸ ಆಗಿರೋದಕ್ಕೆ ಐದು ವರ್ಷ ಇದ್ದಾರೆ ಅನ್ನೋದಕ್ಕೆ ದಾಖಲೆಗಳನ್ನು ಕೊಡಬೇಕು. 18 ದಾಖಲೆಗಳನ್ನು ಕೇಳಿದ್ದಾರೆ ಅವನ್ನು ಕೊಡಬೇಕು. ಯಾವ ವಿಶೇಷ ಪ್ರಕರಣ? ಹಾಗೆಲ್ಲ ಮಾಡಲು ಆಗೋದಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಕೇರಳದ ಮುಖ್ಯಮಂತ್ರಿ ಹೇಳಿದರು. ಪಾಕಿಸ್ತಾನದವರು ಹೇಳಿದರು. ಅಂದ ತಕ್ಷಣ ನೀವು ತರ ಕೊಡುತ್ತೀರಿ. ಪಾಕಿಸ್ತಾನ, ಬಾಂಗ್ಲಾÀ್ಲದಿಂದ ಬಂದಿರುವ ಹಿಂದೂ ಕ್ರಿಶ್ಚಿಯನ್ ಸಿಕ್ಖರು ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಕೂಡ ಯಾವ ಸರ್ಕಾರಗಳು ಇಲ್ಲಿವರೆಗೂ ಮನೆ ಕೊಟ್ಟಿಲ್ಲ. ಅವರಿಗೆ ಅವರಿಗೆ ಪೌರತ್ವ ಕೊಡಬೇಕು ಅಂತಂದ್ರೆ ಇದೇ ಕಾಂಗ್ರೆಸ್ ನವರು, ಇದೇ ಕಮ್ಯುನಿಸ್ಟ್ ಪಕ್ಷದವರು ದೊಡ್ಡ ಹೋರಾಟ ಮಾಡುತ್ತಾರೆ. ಆದರೆ ಇವತ್ತು ಬೇರೆ ದೇಶದಿಂದ ಬಂದಿರುವವರಿಗೆ ತುರ್ತು ಏನಿದೆ ಎಂದು ಕೇಳಿದರು.

2026 ಟಿ20 ವಿಶ್ವಕಪ್‌ʼಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಮಿಚೆಲ್ ಓವನ್ ಔಟ್, ಕೂಪರ್ ಕಾನೊಲಿ ಇನ್

0

ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ನಾಯಕ ಮಿಚೆಲ್ ಮಾರ್ಷ್ ನೇತೃತ್ವದಲ್ಲಿ ಆಯ್ಕೆಯಾದ ಈ ತಂಡದಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳು ಗಮನ ಸೆಳೆದಿವೆ.

2025ರಲ್ಲಿ ಟಿ20 ಮಾದರಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಟಗಾರನನ್ನು ಆಯ್ಕೆ ಮಂಡಳಿ ಕೈಬಿಟ್ಟಿದ್ದರೆ, ಇತ್ತ ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ತಂಡದ ಹೊರಗಿದ್ದ ಆಟಗಾರನಿಗೆ ವಿಶ್ವಕಪ್ ಅವಕಾಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

2026ರ ಟಿ20 ವಿಶ್ವಕಪ್ ತಂಡದಲ್ಲಿ ಮಿಚೆಲ್ ಓವನ್ ಅವರನ್ನು ಕೈಬಿಡಲಾಗಿದೆ. ಕಳೆದ ವರ್ಷ ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ವಿರುದ್ಧ ಹೋಬಾರ್ಟ್ ಹರಿಕೇನ್ಸ್ ಪರ ಅವರು ಕೇವಲ 42 ಎಸೆತಗಳಲ್ಲಿ 11 ಸಿಕ್ಸರ್‌ಗಳೊಂದಿಗೆ 108 ರನ್‌ಗಳ ಸ್ಫೋಟಕ ಶತಕ ಬಾರಿಸಿ ಭಾರೀ ಗಮನ ಸೆಳೆದಿದ್ದರು. ಆದರೆ ಈ ಪ್ರದರ್ಶನವೂ ಅವರಿಗೆ ವಿಶ್ವಕಪ್ ಸ್ಥಾನ ಒದಗಿಸಲು ಸಾಕಾಗಿಲ್ಲ.

ಇನ್ನೊಂದು ಅಚ್ಚರಿಯ ನಿರ್ಧಾರವಾಗಿ, ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದಿದ್ದ ಕೂಪರ್ ಕಾನೊಲಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಲಾಗಿದೆ. ಅವರ ಜೊತೆಗೆ ಮ್ಯಾಥ್ಯೂ ಶಾರ್ಟ್, ಮ್ಯಾಟ್ ಕುನ್ಹೆಮನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು ಕೂಡ ತಂಡದಲ್ಲಿ ಸೇರಿಸಲಾಗಿದೆ. ಈ ನಾಲ್ವರು ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಲಿದೆ.

ಆಸ್ಟ್ರೇಲಿಯಾ ತಂಡವು ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಂತಹ ಅನುಭವೀ ಆಟಗಾರರನ್ನು ಹೊಂದಿದೆ. ಇನ್ನು ಸ್ಪಿನ್ ವಿಭಾಗವನ್ನು ಆಡಮ್ ಜಂಪಾ ಮುನ್ನಡೆಸಲಿದ್ದು, ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಈ ತಂಡದ ಆಯ್ಕೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಸ್ಟ್ರೇಲಿಯಾದ ವಿಶ್ವಕಪ್ ತಯಾರಿಯಲ್ಲಿ ಹೊಸ ತಂತ್ರದ ಸುಳಿವು ನೀಡುತ್ತಿದೆ.

2026 ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹೇಜಲ್‌ವುಡ್, ನಾಥನ್ ಎಲ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ವೇಡ್, ಕೂಪರ್ ಕಾನೊಲಿ, ಆಡಮ್ ಜಂಪಾ, ಮ್ಯಾಟ್ ಕುನ್ಹೆಮನ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.

ಕೋಗಿಲು ಲೇಔಟ್ ಅಕ್ರಮ ಮನೆ ವಿಚಾರ: ಸಚಿವ ಜಮೀರ್ ವಿರುದ್ಧ ಯತ್ನಾಳ್ ತೀವ್ರ ವಾಗ್ದಾಳಿ

0

ಬೆಂಗಳೂರು: ಕೋಗಿಲು ಲೇಔಟ್‌ನ ಅಕ್ರಮ ನಿವಾಸಿಗಳಿಗೆ ಸರ್ಕಾರ ವಸತಿ ಒದಗಿಸುವ ವಿಚಾರಕ್ಕೆ ಸಂಬಂಧಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, “ಜಮೀರ್‌ಗೆ ದೇಶವೂ ಬೇಡ, ರಾಜ್ಯವೂ ಬೇಡ. ತಮ್ಮ ಜನಸಂಖ್ಯೆ ಮತ್ತು ಮತದಾರರು ಹೆಚ್ಚಾಗಬೇಕು ಎಂಬ ಉದ್ದೇಶದಿಂದಲೇ ಮನೆಗಳನ್ನು ನೀಡಲಾಗುತ್ತಿದೆ” ಎಂದು ಆರೋಪಿಸಿದರು.

ಕೋಗಿಲು ಲೇಔಟ್ ಅಕ್ರಮ ನಿವಾಸಿಗಳ ಬಗ್ಗೆ “ಅವರೆಲ್ಲ ಮುಸ್ಲಿಮರು” ಎಂದು ಜಮೀರ್ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ನಿರ್ಧಾರವು ಮತಬ್ಯಾಂಕ್ ರಾಜಕಾರಣದ ಭಾಗವಾಗಿದೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಉಲ್ಲೇಖಿಸಿದ ಯತ್ನಾಳ್,

“ಜಾತ್ಯಾತೀತತೆ ಎಂಬ ಹೆಸರಿನಲ್ಲಿ ಮುಸ್ಲಿಂ ತುಷ್ಟೀಕರಣ ನಡೆಯುತ್ತಿದೆ. ನಿಜವಾದ ಕನ್ನಡಿಗರು ಹಾಗೂ ಮೂಲ ನಿವಾಸಿಗಳಿಗೆ ವಸತಿ ನೀಡುವ ಬದಲು, ಕಾಂಗ್ರೆಸ್ ಹೈಕಮಾಂಡ್ ಒತ್ತಡದಿಂದ ಸ್ಥಳೀಯರಲ್ಲದವರಿಗೆ ಮನೆ ಕೊಡಲಾಗುತ್ತಿದೆ” ಎಂದು ಆರೋಪಿಸಿದರು.

ಇನ್ನೂ, “ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆಗೆ ತಲುಪಿದೆ. ಯಾವ ದೇಶದವರು ಎಂಬುದನ್ನು ಸರಿಯಾಗಿ ತನಿಖೆ ಮಾಡದೇ, ಕೇವಲ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ನೀಡಲು ಮುಂದಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ಯತ್ನಾಳ್ ಹೇಳಿದರು. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು ಹಾಗೂ ರೋಹಿಂಗ್ಯಾಗಳು ಇದ್ದಾರೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ, ಬಳಿಕವೇ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಖಾಕಿ ಪ್ರಕರಣ ಭೇದಿಸಿದ್ದೇ ರೋಚಕ

0

ಚಿಕ್ಕೋಡಿ: ಆಸ್ತಿ ವಿವಾದಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಂದು, ಅದು ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಖತರ್ನಾಕ್ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ. ಮೃತನನ್ನು ಬಸಲಿಂಗ ರಾಮಾಪುರೆ (38) ಎಂದು ಗುರುತಿಸಲಾಗಿದ್ದು, ಆತನ ಸಹೋದರ ಸಿದ್ದಪ್ಪ ರಾಮಾಪುರೆಯೇ ಕೊಲೆ ಆರೋಪಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಡಿಸೆಂಬರ್ 18ರಂದು ಬಸಲಿಂಗ ರಾಮಾಪುರೆ ಮೃತಪಟ್ಟಿದ್ದರು. ಹಂಚು ಹಾಕುವ ವೇಳೆ ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣವೇ ಸಾವಿಗೆ ಕಾರಣ ಎಂದು ವರದಿ ನೀಡಿದರು. ಇದರಿಂದ ಪ್ರಕರಣದಲ್ಲಿ ಕೊಲೆ ಶಂಕೆ ಗಟ್ಟಿಯಾಗಿದ್ದು, ಪೊಲೀಸರು ಬಸಲಿಂಗ ಕುಟುಂಬಸ್ಥರನ್ನು ಮತ್ತೊಮ್ಮೆ ವಿಚಾರಣೆ ನಡೆಸಿದರು.

ನಾಲ್ಕು ಎಕರೆ ಜಮೀನಿಗಾಗಿ ಬಸಲಿಂಗ ಮತ್ತು ಸಿದ್ದಪ್ಪ ನಡುವೆ ಗಲಾಟೆ ನಡೆದಿತ್ತು. ಆಸ್ತಿ ಬಗ್ಗೆ ತಮ್ಮ ಬಸಲಿಂಗ ಅಣ್ಣನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಆತನ ಮೇಲೆ ಸಿದ್ದಪ್ಪ ಹಲ್ಲೆ ನಡೆಸಿದ್ದ. ಕಟ್ಟಿಗೆ ಮತ್ತು ಕಲ್ಲಿನಿಂದ ದಾಳಿ ನಡೆಸಿದ ಪರಿಣಾಮ ಬಸಲಿಂಗ ಮೃತಪಟ್ಟಿದ್ದ.

ತಾಯಿ ರತ್ನವ್ವ ಮತ್ತು ಬಸಲಿಂಗನ ಪತ್ನಿ ವೀಣಾ ಎದುರೇ ಈ ಘಟನೆ ನಡೆದಿತ್ತು. ಬಳಿಕ ವೀಣಾಗೆ ಜೀವ ಬೆದರಿಕೆ ಹಾಕುವ ಮೂಲಕ ಸಿದ್ದಪ್ಪ ಪ್ರಕರಣ ಮುಚ್ಚಿಹಾಕಿದ್ದ. ಆದರೆ ಆತನ ತಾಯಿಯೇ ಈಗ ಮಗನ ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.ರತ್ನವ್ವ ನೀಡಿದ ಮಾಹಿತಿಯ ಆಧಾರದಲ್ಲಿ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಸುಗಮ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟನೆ: ಡಿ.ಕೆ.ಶಿವಕುಮಾರ್

0

ಬೆಂಗಳೂರು: ಜಿಬಿಎ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಹಾಗೂ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹೊಸ ವರ್ಷದ ಸಂಕಲ್ಪದ ಬಗ್ಗೆ ಕೇಳಿದಾಗ, “2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರ ವರ್ಷದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಟೆಕ್ ಸಮ್ಮೇಳನ ಮೂಲಕ ನಾವು ಕರ್ನಾಟಕವನ್ನು ಮುನ್ನಡೆಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ” ಎಂದರು.

“ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಯುಕೆಪಿ, ತುಂಗಾಭದ್ರ ಯೋಜನೆಯಲ್ಲಿ ನಾವು ಕೈಗೊಂಡ ತೀರ್ಮಾನ, ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ನನ್ನ 35 ವರ್ಷಗಳ ರಾಜಕಾರಣದಲ್ಲಿ ಬೆಂಗಳೂರಿಗೆ ಇಷ್ಟು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಪ್ರಧಾನಮಂತ್ರಿಗಳು ಕೂಡ ಬೆಂಗಳೂರಿಗೆ ಬಂದಾಗ ಈ ನಗರವನ್ನು ಕೊಂಡಾಡಿದರು. ಅವರು ನಮ್ಮ ನಗರಕ್ಕೆ ಅನುದಾನ ನೀಡದಿದ್ದರೂ ನಾವು ಈ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

“ಗೃಹ ಇಲಾಖೆ ಭದ್ರತೆಯಿಂದ ಬೆಂಗಳೂರಿನಲ್ಲಿ ಜನ 2025ಕ್ಕೆ ಬೀಳ್ಕೊಡುಗೆ ನೀಡಿ, 2026ರ ವರ್ಷವನ್ನು ಸ್ವಾಗತಿಸಿದೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡ ಗೃಹ ಸಚಿವ ಪರಮೇಶ್ವರ್ ಅವರ ನೇತೃತ್ವದ ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಸುಗಮ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟನೆ

“ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ ಐವತ್ತನೇ ವಸಂತಕ್ಕೆ ಕಾಲಿಟ್ಟಿದ್ದು, ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. 120 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಅನ್ನು ಕಾರ್ಯರೂಪಕ್ಕೆ ತರಲು ರೈತರ ಬಳಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ 35% ವಾಣಿಜ್ಯ ಭೂಮಿಯನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ.

ಜತೆಗೆ ಸಣ್ಣ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದೂವರೇ ಕಿ.ಮೀ ಟನಲ್ ರಸ್ತೆ ಬರಲಿದೆ. ಮೇಕ್ರಿ ವೃತ್ತದ ಬಳಿ ಮೇಲ್ಸೇತುವೆ ಸಾಗಲಿದೆ. ಇದನ್ನು ಮೂರು ಭಾಗವಾಗಿ ಕಟ್ಟಲಾಗುವುದು. ಇನ್ನು ತುಮಕೂರು ರಸ್ತೆಯಿಂದ ಕೆ.ಆರ್ ಪುರದ ವರೆಗೆ ಮೇಲ್ಸೇತುವೆ ಮೂಲಕ ಹೊರ ವರ್ತುಲ ರಸ್ತೆ (ಒಆರ್ ಆರ್) ಮಾಡಲು ಮುಂದಾಗಿದ್ದೇವೆ” ಎಂದು ವಿವರಿಸಿದರು.

ನಡುರಸ್ತೆಯಲ್ಲೇ ವಾಮಾಚಾರ: ನ್ಯೂ ಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್!

0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ತಡರಾತ್ರಿ ಭಯಾನಕ ಘಟನೆಯೊಂದು ನಡೆದಿದೆ. ಗ್ರಾಮದ ಮಧ್ಯಭಾಗದ ರಸ್ತೆಯಲ್ಲಿ ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹೊಸ ವರ್ಷದ ಸಂಭ್ರಮದಲ್ಲಿದ್ದ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.

ರಸ್ತೆಯ ಮೇಲೆ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಗೂ ದೀಪಗಳನ್ನು ಇಟ್ಟು ಪೂಜೆ ಮಾಡಿದಂತೆ ಕಂಡುಬಂದಿದೆ. ಈ ಕೃತ್ಯವನ್ನು ತಮಾಷೆಗೆ ಮಾಡಲಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಆದರೆ ಇಂತಹ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಹಲವರು ಗಾಬರಿಗೊಂಡಿದ್ದಾರೆ. ವಿಶೇಷವಾಗಿ ಹೊಸ ವರ್ಷದ ಸಂಭ್ರಮದ ನಡುವೆ ಈ ರೀತಿಯ ಘಟನೆ ಸಂಭವಿಸಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕು ಎಂಬ ಒತ್ತಾಯಿಸಿದ್ದು, ಈ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸುವ ಸಾಧ್ಯತೆ ಇದೆ.

ʻನನ್ನ ದೇಹ ಚರ್ಚೆಯ ವಸ್ತುವಲ್ಲʼ: ಸಾನ್ವಿ ಮಾತಿಗೆ ಬೆಂಬಲ ನೀಡಿದ ಕಿಚ್ಚ ಸುದೀಪ್

‘ಮಾರ್ಕ್’ ಸಿನಿಮಾ ಬಿಡುಗಡೆಯ ಬಳಿಕ ಆರಂಭವಾದ ಫ್ಯಾನ್ಸ್‌ವಾರ್ ಇದೀಗ ಸುದೀಪ್ ಕುಟುಂಬದವರೆಗೂ ತಲುಪಿದ್ದು, ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಗುರಿಯಾಗಿದ್ದಾರೆ. ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಹಾಗೂ ಅವಮಾನಕಾರಿ ಕಾಮೆಂಟ್ಸ್ ಮಾಡಿದ್ದು, ಇದಕ್ಕೆ ಸಾನ್ವಿ ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ʻನನ್ನ ದೇಹ ಇನ್ಯಾರದ್ದೋ ಚರ್ಚೆಯ ವಿಷಯವಲ್ಲ. ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನು ಕೇಳುತ್ತೇನೆʼ ಎಂದು ಸಾನ್ವಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದು ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. ಈ ಹೇಳಿಕೆ ಭಾರೀ ವೈರಲ್ ಆಗಿತ್ತು.

ಈಗ ಈ ವಿಷಯದ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್, ತಮ್ಮ ಮಗಳ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,
“ನನ್ನ ಮಗಳು ಮಾತನಾಡಿದ್ದು ತಪ್ಪಾ? ಯಾವ ಹೆಣ್ಣುಮಕ್ಕಳಾದ್ರೂ ಈ ರೀತಿ ಮಾತನಾಡ್ತಾರೆ. ಹೆಣ್ಣಾಗಿ ಏನ್ ಮಾಡ್ಬೇಕೋ ಅದನ್ನೇ ನನ್ನ ಮಗಳು ಮಾಡಿದ್ದಾಳೆ” ಎಂದು ಹೇಳಿದ್ದಾರೆ.

ಮಾರ್ಕ್ ಸಿನಿಮಾ ಹಿಟ್ ಆದ ಬೆನ್ನಲ್ಲೇ ಫ್ಯಾನ್ಸ್‌ವಾರ್ ಉಗ್ರವಾಗಿದ್ದು, ಅದರಲ್ಲಿ ಕುಟುಂಬವನ್ನೇ ಎಳೆತಂದ ಕಿಡಿಗೇಡಿಗಳ ವಿರುದ್ಧ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳು ನನಗಿಂತ ಹೆಚ್ಚು ಧೈರ್ಯವಂತಳು” ಎಂದು ಹೇಳುವ ಮೂಲಕ ಸಾನ್ವಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಈ ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಮಹಿಳೆಯರ ಗೌರವ ಮತ್ತು ಟ್ರೋಲಿಂಗ್ ಕುರಿತ ಚರ್ಚೆಗೆ ಕಾರಣವಾಗಿದೆ.

‘ಧುರಂಧರ್’ಗೆ 90 ಕೋಟಿ ನಷ್ಟ! ಮಿಡಲ್ ಈಸ್ಟ್ ಬ್ಯಾನ್ ಕಾರಣವೇನು?

ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿರುವ ‘ಧುರಂಧರ್’ ಸಿನಿಮಾ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ ಈ ಚಿತ್ರ ವಿಶ್ವಾದ್ಯಂತ 1100 ಕೋಟಿ ರೂಪಾಯಿ ಗಳಿಸಿದ್ದು, ಬಾಲಿವುಡ್‌ನ ಬಿಗ್ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದೆ. ಆದರೆ ಈ ಮಹಾ ಯಶಸ್ಸಿನ ನಡುವೆಯೇ ಸಿನಿಮಾಗೆ ದೊಡ್ಡ ಮಾರುಕಟ್ಟೆಯೊಂದರಲ್ಲಿ ಪ್ರದರ್ಶನವೇ ಸಿಕ್ಕಿಲ್ಲ.

‘ಧುರಂಧರ್’ ಸಿನಿಮಾವನ್ನು ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಇದರ ಪರಿಣಾಮವಾಗಿ ನಿರ್ಮಾಪಕರು ಹಾಗೂ ವಿತರಕರು ಸುಮಾರು 90 ಕೋಟಿ ರೂಪಾಯಿ ಲಾಭವನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಚಿತ್ರದಲ್ಲಿ ಭಾರತ–ಪಾಕಿಸ್ತಾನ ಸಂಘರ್ಷವನ್ನು ಕೇಂದ್ರವಾಗಿ ಇಟ್ಟುಕೊಂಡು, ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದಕ ಕೃತ್ಯಗಳನ್ನು ವಿವರವಾಗಿ ತೋರಿಸಲಾಗಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹೇಗೆ ನಡೆಯುತ್ತಿದೆ ಎಂಬ ಅಂಶವನ್ನು ಚಿತ್ರ ಬಿಚ್ಚಿಟ್ಟಿದೆ. ಇದೇ ವಿಷಯ ಮಿಡಲ್ ಈಸ್ಟ್ ರಾಷ್ಟ್ರಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಲೆಬೆನಾನ್, ಸಿರಿಯಾ, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಯೆಮನ್, ಓಮನ್, ಬರ್ಹೇನ್, ಖತಾರ್, ಯುನೈಟೆಡ್ ಅರಬ್ ಎಮಿರೈಟ್ಸ್, ಕುವೈತ್, ಇರಾಕ್, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರಕ್ಕೆ ಪ್ರದರ್ಶನ ಅನುಮತಿ ನಿರಾಕರಿಸಲಾಗಿದೆ. ಪಾಕಿಸ್ತಾನದಲ್ಲೂ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಅಲ್ಲಿನ ಜನರು ಪೈರಸಿ ಮೂಲಕ ಸಿನಿಮಾ ವೀಕ್ಷಿಸಿರುವುದಾಗಿ ವರದಿಯಾಗಿದೆ.

ವಿಲನ್ ಪಾತ್ರದಲ್ಲಿದ್ದ ಅಕ್ಷಯ್ ಖನ್ನಾ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ನಾಯಕಿಯಾಗಿ ಸಾರಾ ಅರ್ಜುನ್ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಭಾರತೀಯ ಗುಪ್ತಚರ ಅಧಿಕಾರಿಯಾಗಿ ರಣವೀರ್ ಸಿಂಗ್ ಅಭಿನಯ ಶ್ಲಾಘನೀಯವಾಗಿದೆ. ಆದಿತ್ಯ ಧಾರ್ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಮಿಡಲ್ ಈಸ್ಟ್ ಬ್ಯಾನ್ ಆದರೂ ಸಹ, ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಇನ್ನೂ ಮುಂದುವರಿಸಿದೆ.

error: Content is protected !!