Home Blog Page 25

ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ: ದೇಹವನ್ನೇ ಸುಟ್ಟು ಹಾಕಿದ ದುಷ್ಕರ್ಮಿಗಳು!

0

ಹಾಸನ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕು ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ವರುಣ್ ಕೆ.ಎಂ (22) ಎಂದು ಗುರುತಿಸಲಾಗಿದೆ. ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟ ಹಿಂಭಾಗದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿರುವುದು ತಿಳಿದುಬಂದಿದೆ.

ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಶವವನ್ನು ಸುಟ್ಟುಹಾಕಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಾರ್ಚ್ 15ರಂದು ಗಂಡಸಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ವರುಣ್ ಸ್ನೇಹಿತ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಹತ್ಯೆಯ ಸುಳಿವು ಸಿಕ್ಕಿದೆ. ಪ್ರಸ್ತುತ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹೊಸತೊಡಕು ಸಂಭ್ರಮ: ಮಟನ್ ಬೆಲೆ 1500 ರೂ. ತಲುಪಿದ್ರೂ ಕಮ್ಮಿ ಆಗಿಲ್ಲ ಜನಸಾಗರ

ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿ. ಹಬ್ಬವನ್ನು ರಾಜ್ಯದ ಜನತೆಗೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಹಬ್ಬದ ದಿನ ಬೇವು-ಬೆಲ್ಲದ ಸಿಹಿ ಮತ್ತು ಕಹಿ ಸವಿದ ಜನ, ಮಾರನೇ ದಿನ ಖಾರದ ಊಟ ಮಾಡುತ್ತಾರೆ. ‘ಹೊಸತೊಡಕು’ ಮಾಂಸಾಹಾರ ಪ್ರಿಯರಿಗೆ ಸುಗ್ಗಿಯಿದ್ದಂತೆ.

ಹೌದು ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ.

ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ ಖರೀದಿಸುತ್ತಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಹೊಸತೊಡಕಿಗೆ ಮಾಂಸದ ಬೇಡಿಕೆ ಹೆಚ್ಚಿದ್ದು, ಜನರು ಸಂಭ್ರಮದಿಂದ ಖರೀದಿಯಲ್ಲಿ ನಿರತರಾಗಿದ್ದಾರೆ.

 

ವಿಚಾರಣೆಗೆ ಕರೆತಂದ ವ್ಯಕ್ತಿ ಸಾವು: ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ, ಠಾಣೆಯಲ್ಲಿ ಪ್ರತಿಭಟನೆ

0

ತುಮಕೂರು: ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತರಲಾಗಿದ್ದ ವ್ಯಕ್ತಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯೊಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಯಳನಾಡು ಗ್ರಾಮದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಹುಳಿಯಾರು ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಸಿದ್ಧರಾಮೇಶ್ವರ ದೇವಸ್ಥಾನದ ಗುಡಿಗೌಡರಾದ ಕಾಂತರಾಜು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿತ್ತು. ವಿಚಾರಣೆ ವೇಳೆ ಕಾಂತರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಮೃತನ ಸ್ನೇಹಿತರು ಮತ್ತು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ, ಶವವನ್ನು ಠಾಣೆಯೊಳಗೇ ಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸರ ಪ್ರಕಾರ, ಸಂಜೆ 5 ಗಂಟೆಗೆ ಆರು ಮಂದಿಯನ್ನು ಠಾಣೆಗೆ ಕರೆತರಲಾಗಿದ್ದು, ರಾತ್ರಿ 8:30ಕ್ಕೆ ವಿಚಾರಣೆ ಮುಗಿಸಿ ಕಳುಹಿಸಲಾಗಿದೆ. ಠಾಣೆಯಿಂದ ಹೊರಬಂದ ಬಳಿಕ ಕಾಂತರಾಜು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಮೃತರ ಕುಟುಂಬಸ್ಥರಿಂದ ದೂರು ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.

ಬಿಸಿಲಿನ ಕಾಟ ಹೆಚ್ಚಳ: ಬೆಂಗಳೂರಿನಲ್ಲಿ ಹೆಚ್ಚಿದ ಸೆಕೆ, ಉತ್ತರದಲ್ಲಿ ಸೂರ್ಯನ ಕಾಟ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬೇಸಿಗೆಯ ತಾಪಮಾನ ಜನರನ್ನು ಕಂಗಾಲಾಗಿಸಿದೆ.

ರಾಜಧಾನಿ ಬೆಂಗಳೂರುನಲ್ಲಿ ಇಂದು ಗರಿಷ್ಠ ತಾಪಮಾನ 34°C ರಿಂದ 35°C ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಉಷ್ಣಾಂಶದಲ್ಲಿ ಹೆಚ್ಚು ಇಳಿಕೆ ಕಾಣುವ ಲಕ್ಷಣಗಳಿಲ್ಲ.

ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ತಾಪಮಾನ 40°C ಗಡಿ ದಾಟುತ್ತಿದೆ. ಈ ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗಡೆ ಹೋಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗಗಳಾದ ಮಂಗಳೂರು ಮತ್ತು ಉಡುಪಿಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆ ಹೆಚ್ಚಾಗಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಗರಿಷ್ಠ ತಾಪಮಾನ ಸುಮಾರು 36°C ದಾಖಲಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಲೆನಾಡು ಪ್ರದೇಶಗಳಾದ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಸಂಜೆ ವೇಳೆಗೆ ತುಂತುರು ಮಳೆಯ ಸಾಧ್ಯತೆ ಇದ್ದರೂ ಅದು ಅತಿ ವಿರಳವಾಗಿದೆ.

ಇನ್ನು ಗದಗನಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 39°C ಹಾಗೂ ಕನಿಷ್ಠ 24°C ಇರಲಿದೆ. ಮೋಡಗಳ ಸುಳಿವಿಲ್ಲದೆ ತೀವ್ರ ಬಿಸಿಲು ಕಾಡಲಿದೆ.

ಹಾವೇರಿಯಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 23°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಕಡಿಮೆ ಇರುವುದರಿಂದ ಸೆಕೆ ಹೆಚ್ಚಾಗಿ ಅನುಭವವಾಗಲಿದೆ.

ಚಿಕ್ಕಮಗಳೂರುನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 19°C ತಾಪಮಾನ ಇರಲಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ಹಾಸನದಲ್ಲಿ ಸಾಮಾನ್ಯ ಬಿಸಿಲು ಮತ್ತು ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ 34°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮಳೆಯ ಯಾವುದೇ ಸೂಚನೆ ಇಲ್ಲ.

“ಸರ್ಸೆ ಸೆರಗ ಸರ್ಸೆ” ಹಾಡು ವಿವಾದ: ಇದು ಉದ್ದೇಶಪೂರ್ವಕವಲ್ಲ.. ಕ್ಷಮಿಸಿ ಎಂದ ಗಾಯಕಿ ಮಂಗ್ಲಿ

ಕೆಡಿ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ವಿವಾದಕ್ಕೆ ಗಾಯಕಿ ಮಂಗ್ಲಿ ಕ್ಷಮೆಯಾಚಿಸಿದ್ದಾರೆ. ಈ ಹಾಡನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದ ಮಂಗ್ಲಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, “ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ. ಇದು ಉದ್ದೇಶಪೂರ್ವಕವಲ್ಲ. ಕ್ಷಮಿಸಿ. ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ” ಎಂದು ತಿಳಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಹಾಡನ್ನು ಈಗಾಗಲೇ ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ಚಿತ್ರತಂಡದ ಪರವಾಗಿ ಕೂಡ ಕ್ಷಮೆಯಾಚಿಸಿರುವ ಅವರು, ಹೊಸದಾಗಿ ಹಾಡನ್ನು ರೆಕಾರ್ಡ್ ಮಾಡಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈ ನಡುವೆ, ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ. ಈ ಸಂಬಂಧ ನಿರ್ದೇಶಕ ಪ್ರೇಮ್, ಕೆವಿಎನ್ ಗ್ರೂಪ್, ನಟಿ ನೋರಾ ಫತೇಹಿ, ರಕೀಬ್ ಆಲಂ ಹಾಗೂ ನಟ ಸಂಜಯ್ ದತ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ರೀಲ್ಸ್ʼಗಾಗಿ ಸ್ಟಂಟ್: ಹುಬ್ಬಳ್ಳಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ಸಾವು!

0

ಧಾರವಾಡ: ರೀಲ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅಪಾಯಕರ ಸ್ಟಂಟ್ ಮಾಡಲು ಹೋಗಿ 15 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೈಸೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕನಾಗಿದ್ದು, ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶೇಜವಾಡಕ್ಕರ್ ಪ್ಲಾಟ್ ಪ್ರದೇಶಕ್ಕೆ ರೀಲ್ಸ್ ಚಿತ್ರೀಕರಣಕ್ಕಾಗಿ ತೆರಳಿದ್ದಾನೆ.

ಆಡಿ ಕಾರು ಮತ್ತು ಬೈಕ್ ಬಳಸಿ ವೇಗದ ಸ್ಟಂಟ್ ಹಾಗೂ ಕ್ರ್ಯಾಶ್ ದೃಶ್ಯ ಚಿತ್ರೀಕರಿಸಲು ಈ ಇಬ್ಬರು ಬಾಲಕರು ಯೋಜನೆ ಮಾಡಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ ಸವಾರನಾಗಿದ್ದ ನಮೀಷ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ಬಳಿಕ ಸ್ಥಳೀಯರು ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, “ನಾನು ಕಾರು ನಿಲ್ಲಿಸಿದ್ದೆ, ಅವನೇ ವೇಗವಾಗಿ ಬಂದು ಡಿಕ್ಕಿ ಹೊಡೆದನು” ಎಂದು ಆತ ಹೇಳಿಕೊಂಡಿದ್ದಾನೆ. ಕಾರು ತನ್ನ ತಂದೆಯದ್ದೇ ಎಂದು ಕೂಡ ತಿಳಿಸಿದ್ದಾನೆ.

ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರನಾಗಿದ್ದ ನಮೀಷ್ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿಯಲ್ಲಿ ತಂದೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಂದೆ ಹತ್ಯೆಗೆ ಮಗನ ಪ್ಲ್ಯಾನ್! ಯಾಕೆ ಗೊತ್ತಾ..?

0

ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಗನೇ ತಂದೆಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಾರ್ಚ್ 12ರ ರಾತ್ರಿ 74 ವರ್ಷದ ಹಂಪಣ್ಣ ಸಜ್ಜನ ಹತ್ಯೆಯಾಗಿತ್ತು. ಘಟನೆಯ ಬಳಿಕ ಅವರ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟಪಟ್ಟರು. ಆದರೆ ನಾಲ್ಕು ದಿನಗಳ ಬಳಿಕ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರಕರಣದ ಹಿನ್ನಲೆ ಬೆಳಕಿಗೆ ಬಂದಿದೆ. ತಿರುಪತಿ ಮೂಲದ ಈ ನಾಲ್ವರು ಹತ್ಯೆ ನಡೆಸಿದರೆ, ಹತ್ಯೆಗೆ ಸುಪಾರಿ ನೀಡಿದ್ದವರು ಮೃತನ ಪುತ್ರ ನರಸರೆಡ್ಡಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಮೊದಲು ಆಸ್ತಿ ವಿಚಾರವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತನ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹಿಳೆಯರೊಂದಿಗೆ ತೆಗೆದಿರುವ ಫೋಟೋಗಳು ಪತ್ತೆಯಾಗಿದ್ದು, ಅನೈತಿಕ ಸಂಬಂಧಗಳ ವಿಚಾರ ಹೊರಬಂದಿದೆ.

ಹಂಪಣ್ಣ ಸಜ್ಜನ ಗ್ರಾಮದಲ್ಲಿ ಕುಟುಂಬದಿಂದ ದೂರವಾಗಿ ಹೊಲದಲ್ಲೇ ವಾಸಿಸುತ್ತಿದ್ದರು. ಪತ್ನಿ ಸಾವಿನ ನಂತರ ಏಕಾಂಗಿಯಾಗಿ ಬದುಕುತ್ತಿದ್ದ ಅವರು, ಮದ್ಯಪಾನ ವ್ಯಸನಕ್ಕೂ ಒಳಗಾಗಿದ್ದರು. ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹಣದ ಆಮಿಷ ನೀಡಿ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದೇ ಕಾರಣದಿಂದ ಕುಟುಂಬದಲ್ಲೂ ಅಸಮಾಧಾನ ಉಂಟಾಗಿದ್ದು, ವಿಶೇಷವಾಗಿ ಮಗನ ಪತ್ನಿಯೊಂದಿಗೆ ಸಹ ಅನೈತಿಕ ವರ್ತನೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ನರಸರೆಡ್ಡಿ ಕೋಪಗೊಂಡು, ನಾಲ್ವರಿಗೆ ಸುಮಾರು ₹2 ಲಕ್ಷ ನೀಡಿ ತಂದೆಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಅನೈತಿಕ ಸಂಬಂಧಗಳ ಹಿನ್ನೆಲೆಯೇ ಈ ಹತ್ಯೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಇದೀಗ ಸ್ಪಷ್ಟತೆ ಸಿಕ್ಕಿದೆ.

ಕರಾವಳಿಯಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬ ಸಂಭ್ರಮ

ಮಂಗಳೂರು: ಕರಾವಳಿ ಭಾಗದಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುವಂತೆ ದಕ್ಷಿಣ ಕನ್ನಡ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಕರೆ ನೀಡಿದ್ದಾರೆ.

ಶವ್ವಾಲ್ ಮಾಸದ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಈದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಸಮುದಾಯದವರು ರಮಝಾನ್ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿದ್ದರು. ಇಂದು ಚಂದ್ರದರ್ಶನವಾದ ಹಿನ್ನೆಲೆ ಉಪವಾಸ ವ್ರತಕ್ಕೆ ತೆರೆ ಬಿದ್ದು, ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಈದ್ ಹಬ್ಬದ ಸಂಭ್ರಮ ಈಗಲೇ ಕಳೆಗಟ್ಟಿದೆ.

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಆಕ್ಷೇಪ

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಬೆಸ್ಕಾಂ ಎಇ ಚೇತನ್ ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗ್ರೂಪ್ ಬಿ ಮತ್ತು ಸಿ ವರ್ಗದ ನೌಕರರ ವರ್ಗಾವಣೆಯಲ್ಲಿ ಸಿಎಂ ಕಚೇರಿಯ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಯಂತಹ ವಿಷಯಗಳಿಗಿಂತ ಮಹತ್ವದ ಆಡಳಿತಾತ್ಮಕ ಕೆಲಸಗಳಿದ್ದು, ಈ ರೀತಿಯ ವಿಷಯಗಳನ್ನು ಸಂಬಂಧಿತ ಇಲಾಖೆಗಳಿಗೇ ಬಿಟ್ಟುಕೊಡಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಒಳಗೊಂಡ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಮುಖ್ಯಮಂತ್ರಿ ಕಚೇರಿ ವರ್ಗಾವಣೆ ಮನವಿಗಳನ್ನು ಸ್ವೀಕರಿಸಬಾರದು ಹಾಗೂ ಇಂತಹ ವಿಚಾರಗಳಿಗೆ ಸಮಯ ವಿನಿಯೋಗಿಸಬಾರದು ಎಂದು ಸೂಚಿಸಿದ ನ್ಯಾಯಾಲಯ, ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ನಿರ್ದೇಶನ ನೀಡಿದೆ.

ಇದೇ ವೇಳೆ, ಸಿಎಂ ಕಚೇರಿಯಿಂದ ನೀಡುವ ವರ್ಗಾವಣೆ ಪತ್ರಗಳ ಕುರಿತು ಹೈಕೋರ್ಟ್ ಮುಖ್ಯ ಕಾರ್ಯದರ್ಶಿಯ ನಿಲುವನ್ನು ಕೇಳಿತ್ತು. ಪ್ರತಿಯಾಗಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮವಾಗಿ ಸಂಬಂಧಪಟ್ಟ ಇಲಾಖೆವೇ ವರ್ಗಾವಣೆ ಆದೇಶ ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ವಿಮಾನಯಾನದಲ್ಲಿ ಗೊಂದಲ, ಪ್ರಯಾಣ ವೆಚ್ಚ ಭಾರೀ ಏರಿಕೆ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ವಿಧಿಸಲಾಗಿರುವ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಮತ್ತು ಅಚಾನಕ್ ಹಾರಾಟ ರದ್ದುಪಡಿಸುವ ಘಟನೆಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಅನೇಕ ಮಾರ್ಗಗಳಲ್ಲಿ ಪ್ರಯಾಣ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.

ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದೇಶದಿಂದ ವಿವಿಧ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಬಹುತೇಕವಾಗಿ ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಂಚರಿಸುತ್ತವೆ.

ಈ ಮಾರ್ಗಗಳಲ್ಲಿ ಉಂಟಾದ ವ್ಯತ್ಯಯಗಳಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಹೆಚ್ಚಿದ ಪ್ರಯಾಣ ವೆಚ್ಚದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಪಡಿಸಲು ಮುಂದಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಪ್ರತಿದಿನ ಸುಮಾರು 25 ರಿಂದ 30 ವಿಮಾನಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಆದರೆ, ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದ ಅನೇಕ ವಿಮಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ.

ಈ ಬೆಳವಣಿಗೆಯಿಂದ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40%ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರಗಳಿಗೆ ಇದು ನೇರ ಹೊಡೆತ ನೀಡಿದೆ.

error: Content is protected !!