Home Blog Page 265

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ: ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸೋಲು ನಾಳೆಯ ಗೆಲವಿಗೆ ಮುನ್ನುಡಿಯಾಗುತ್ತದೆ. ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವದು ಮುಖ್ಯ ಎಂದು ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ ಹೇಳಿದರು.

ಅವರು ಗದುಗಿನ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಕೇಂದ್ರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪಠ್ಯದ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿಯೂ ಸಹ ಆಸಕ್ತಿ ಹೊಂದಬೇಕು. ಇದರಿಂದಾಗಿ ಬೌದ್ಧಿಕ ಬೆಳವಣಿಗೆಯೊಂದಿಗೆ ದೈಹಿಕ ಬೆಳವಣಿಗೆಯೂ ಆಗಿ ಆರೋಗ್ಯದಲ್ಲಿ ಸದೃಢತೆಯನ್ನು ಹೊಂದಬಹುದಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಕೆ ಜಗದಂಬಾ ಶಿಕ್ಷಣ ಕೇಂದ್ರದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ, ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭಾನ್ವಿತರಾಗಬೇಕು ಎಂದರು.

ವೇದಿಕೆಯ ಮೇಲೆ ಶಾಲೆಯ ಚೇರಮನ್ ಶ್ರೀನಿವಾಸ ಖಟವಟೆ, ಉಪಚೇರಮನ್ ವಿಶ್ವನಾಥ ಖಟವಟೆ, ಆಡಳಿತ ಮಂಡಳಿಯ ಸದಸ್ಯರಾದ ಮಾರುತಿ ಪವಾರ ಉಪಸ್ಥಿತರಿದ್ದರು.

ಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್; ಶನಿವಾರ, ಭಾನುವಾರ ಕರೆಂಟ್ ಇರಲ್ಲ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಶನಿವಾರ, ಭಾನುವಾರ ಪವರ್ ಸಮಸ್ಯೆ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಪವರ್ ಕಟ್ ಇರಲಿದೆ. ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 1ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಕ್ರಾಸ್, ಸ್ಲಮ್ ರಸ್ತೆ, ಅನು ಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಜನರಲ್ ಮೆಟಲ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, ವೈಷ್ಣವಿ ಮಾಲ್,

ಗೃಹಲಕ್ಷ್ಮಿ ಅಪಾರ್ಟ್‌ಮೆಂಟ್, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿ.ಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್‌.ಟಿ.ಟಿ.ಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡಾವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆ ಗ್ರಾಮ ಭಾಗಶಃ, ಪೀಣ್ಯ 4 ನೇ ಹಂತ, 4ನೇ ಮುಖ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.

ಆಸ್ಕರ್ ಕನಸಿನ ಮಧ್ಯೆ ದೊಡ್ಡ ಶಾಕ್: ‘ಹೋಮ್‌ಬೌಂಡ್’ ವಿರುದ್ಧ ಕೃತಿಚೌರ್ಯ ಆರೋಪ

ಆಸ್ಕರ್ ವೇದಿಕೆಯತ್ತ ಭರವಸೆಯ ಹೆಜ್ಜೆ ಇಟ್ಟಿದ್ದ ಹಿಂದಿ ಸಿನಿಮಾ ‘ಹೋಮ್‌ಬೌಂಡ್’ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಭಾರತದ ಅಧಿಕೃತ ಆಸ್ಕರ್ ಎಂಟ್ರಿಯಾಗಿ ಆಯ್ಕೆಯಾಗಿರುವ ಈ ಸಿನಿಮಾ, ಈಗಾಗಲೇ ಟಾಪ್ 15 ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದರೂ, ಕೃತಿಚೌರ್ಯ ಆರೋಪದಿಂದ ಸಂಕಷ್ಟ ಎದುರಿಸುತ್ತಿದೆ.

ಪತ್ರಕರ್ತೆ ಹಾಗೂ ಲೇಖಕಿ ಪೂಜಾ ಚಂಗೋಯ್ವಾಲ ಅವರು, ‘ಹೋಮ್‌ಬೌಂಡ್’ ಸಿನಿಮಾ ತಮ್ಮ ಕಥೆಯನ್ನು ಅನುಮತಿ ಇಲ್ಲದೆ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಧರ್ಮಾ ಪ್ರೊಡಕ್ಷನ್ಸ್ ಹಾಗೂ ನೆಟ್‌ಫ್ಲಿಕ್ಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಅವರು, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

2021ರಲ್ಲಿ ಪೂಜಾ ಬರೆದಿದ್ದ ‘ಹೋಮ್‌ಬೌಂಡ್’ ಕಥೆಯೇ ಈಗ ಸಿನಿಮಾರೂಪ ಪಡೆದಿದೆ ಎಂದು ಅವರು ಹೇಳುತ್ತಾರೆ. ಕಥೆಯ ಹೆಸರು ಮಾತ್ರವಲ್ಲದೆ, ಕೋವಿಡ್ ಹಿನ್ನೆಲೆ, ಪಾತ್ರಗಳ ಸ್ವರೂಪ, ಸನ್ನಿವೇಶಗಳು ಮತ್ತು ಘಟನೆಗಳೂ ಸಿನಿಮಾದಲ್ಲಿ ಹೋಲಿಕೆಯಾಗಿವೆ ಎಂಬುದು ಅವರ ಆರೋಪ.

ಆಸ್ಕರ್ ರೇಸಿನಲ್ಲಿ ಸಿನಿಮಾ ಮುನ್ನುಗ್ಗುತ್ತಿರುವ ಈ ಹೊತ್ತಿನಲ್ಲಿ ಉದ್ಭವಿಸಿರುವ ಈ ವಿವಾದ ಚಿತ್ರತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಆದರೆ ಧರ್ಮಾ ಪ್ರೊಡಕ್ಷನ್ಸ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ‘ಈ ಸಿನಿಮಾ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಬಷರತ್ ಪೀರ್ ಅವರ ಲೇಖನವನ್ನು ಆಧರಿಸಿದೆ. ಅದರ ಬಳಕೆಗೆ ಅಗತ್ಯ ಕಾನೂನು ಅನುಮತಿಗಳನ್ನು ಪಡೆದಿದ್ದೇವೆ’ ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.

ಆಸ್ಕರ್ ಪಯಣದ ನಡುವೆ ‘ಹೋಮ್‌ಬೌಂಡ್’ ಎದುರಿಸುತ್ತಿರುವ ಈ ಕಾನೂನು ಸಮರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಇದೀಗ ಸಿನಿ ವಲಯದ ಕುತೂಹಲವಾಗಿದೆ.

‘ಅಣ್ತಮ್ಮ ಜೋಡೆತ್ತು ಕಣೋ..’ ಹಾಡಿನಲ್ಲೇ ಸರ್ಪ್ರೈಸ್: ಧ್ರುವ ಸರ್ಜಾ ‘ಕೆಡಿ’ ಸಿನಿಮಾ ರಿಲೀಸ್ ಡೇ ರಿವೀಲ್

ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾಗೆ ಸೈಲೆಂಟ್ ಪ್ರಮೋಷನ್ ಶುರುಮಾಡಿದ್ದಾರೆ ಅನ್ನೋ ಮಾತು ಈಗ ನಿಜವಾಗಿದೆ. ಹೊಸ ವರ್ಷದ ಸಂದರ್ಭದಲ್ಲೇ ‘ಅಣ್ತಮ್ಮ ಜೋಡೆತ್ತು ಕಣೋ..’ ಹಾಡನ್ನು ಬಿಡುಗಡೆ ಮಾಡಿ, ಅದರ ಕೊನೆಯಲ್ಲಿ ಸಿನಿಮಾ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ 2026ರ ಏಪ್ರಿಲ್ 30ರಂದು ತೆರೆಗೆ ಬರಲಿದೆ. ‘ಮಾರ್ಟಿನ್’ ಬಳಿಕ ಧ್ರುವ ನಟನೆಯ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಶೂಟಿಂಗ್‌ಗೆ ಸಾಕಷ್ಟು ಸಮಯ ಕೊಟ್ಟಿರುವ ಪ್ರೇಮ್, ಚಿತ್ರವನ್ನು ಪರ್ಫೆಕ್ಷನ್‌ನೊಂದಿಗೆ ರೂಪಿಸುತ್ತಿದ್ದಾರೆ.

ಹಾಡಿನ ಬಗ್ಗೆ ಮಾತನಾಡುವುದಾದರೆ, ‘ಅಣ್ತಮ್ಮ ಜೋಡೆತ್ತು ಕಣೋ..’ ಪಕ್ಕಾ ಫ್ರೆಂಡ್‌ಶಿಪ್ ಫೀಲ್ ಇರುವ ಹಾಡಾಗಿದೆ. ಜೋಗಿ ಪ್ರೇಮ್ ಅವರೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಹಾಗೂ ಬಿಎಸ್ ಮಂಜುನಾಥ್ ಅವರ ಸಾಹಿತ್ಯ ಹಾಡಿಗೆ ಮತ್ತಷ್ಟು ಎನರ್ಜಿ ತುಂಬಿದೆ. ಧ್ರುವ ಸರ್ಜಾ ಜೊತೆಗೆ ರಮೇಶ್ ಅರವಿಂದ್ ಮತ್ತು ಸಂಜಯ್ ದತ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಕರ್ಷಣೆ.

ಏಪ್ರಿಲ್ ತಿಂಗಳಲ್ಲಿ ದೊಡ್ಡ ಸಿನಿಮಾಗಳ ಕ್ಲ್ಯಾಶ್ ಇಲ್ಲದಿರುವುದು ‘ಕೆಡಿ’ಗೆ ಪ್ಲಸ್ ಪಾಯಿಂಟ್ ಆಗಿದೆ. ಐಪಿಎಲ್ ಪಂದ್ಯಗಳು ಒಂದಷ್ಟು ಸ್ಪರ್ಧೆ ನೀಡಬಹುದಾದರೂ, ಶಾಲಾ ರಜೆಗಳು ಸಿನಿಮಾಗೆ ಒಳ್ಳೆಯ ಬೂಸ್ಟ್ ಕೊಡಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಅಬ್ಬರ ಮಾಡುವ ನಿರೀಕ್ಷೆ ಮೂಡಿಸಿದೆ.

BJP ಮಾಜಿ ಎಂಎಲ್​​ಸಿಯ 30 ಕೋಟಿ ರೂ ಆಸ್ತಿ ಲಪಟಾಯಿಸಲು ಯತ್ನ!

0

ಮೈಸೂರು: ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಭೂಗಳ್ಳರು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ಸಾವಿರ ರೂಪಾಯಿ ವೆಚ್ಚದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 30 ಕೋಟಿ ರೂಪಾಯಿ ಮೌಲ್ಯದ 22 ನಿವೇಶನಗಳನ್ನು ಜಿಪಿಎ ಮೂಲಕ ಬರೆಸಿಕೊಳ್ಳಲು ಖದೀಮರು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಘಟನೆ ಮೈಸೂರಿನ ಪಶ್ಚಿಮ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಡಿಸೆಂಬರ್ 23ರಂದು ನಡೆದಿದೆ. ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೇರ್ಗಳ್ಳಿ ಗ್ರಾಮ ಹಾಗೂ ಚಾಮುಂಡಿ ಸೂರು ನಗರ ಬಡಾವಣೆಯಲ್ಲಿ ಸಿದ್ದರಾಜು ಅವರಿಗೆ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 22 ನಿವೇಶನಗಳಿವೆ ಎಂದು ತಿಳಿದುಬಂದಿದೆ.

ಖದೀಮರು ಸಿದ್ದರಾಜು ಅವರ ನಕಲಿ ಫೋಟೋ ಬಳಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಸೃಷ್ಟಿಸಿದ್ದರು. ಅಲ್ಲದೆ ಮನೆ ವಿಳಾಸ ಬದಲಿಸಿ ಬೋಗಾದಿ ಪಟ್ಟಣ ಪಂಚಾಯ್ತಿಯಿಂದ ಇ-ಖಾತಾ ಪಡೆದು, ಅದರ ಆಧಾರದ ಮೇಲೆ 22 ನಿವೇಶನಗಳನ್ನು ಜಿಪಿಎ ಮೂಲಕ ನೊಂದಣಿ ಮಾಡಿಸಲು ಮುಂದಾಗಿದ್ದರು.

ಡಿ.23ರಂದು ಉಪ ನೋಂದಣಾಧಿಕಾರಿ ಕಚೇರಿಗೆ ನಿವೇಶನ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದ ಕಚೇರಿ ಸಿಬ್ಬಂದಿಯೊಬ್ಬರು ಅನುಮಾನ ವ್ಯಕ್ತಪಡಿಸಿ, ಮಾಜಿ ಎಂಎಲ್‌ಸಿ ಸಿದ್ದರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ಸಿದ್ದರಾಜು ಅವರು ಬೆಂಬಲಿಗರೊಂದಿಗೆ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಂತೆ,

ಭೂಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ನಿವೇಶನ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳ ವಿರುದ್ಧ ಸಿಸಿಟಿವಿ ದೃಶ್ಯಾವಳಿ ಹಾಗೂ ದಾಖಲೆಗಳ ಪ್ರತಿ ನೀಡುವಂತೆ ಸಿದ್ದರಾಜು ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರಿಗೆ ದೂರು ನೀಡಲಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಸಿದ್ದರಾಜು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ “ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ” ಪುರಸ್ಕಾರ!

0

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬಿಹಾರದ 14 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಸಾಧಿಸಿದ ಅಪಾರ ಸಾಧನೆಯನ್ನು ಗುರುತಿಸಿ, ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೈಭವ್ ಸೂರ್ಯವಂಶಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು.

ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ಆವಿಷ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಹಾಗೂ ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ವೈಭವ್ ಸೂರ್ಯವಂಶಿ ಕ್ರೀಡಾ ವಿಭಾಗದಲ್ಲಿ ಈ ಗೌರವವನ್ನು ಪಡೆದುಕೊಂಡಿದ್ದಾರೆ.

ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಕ್ರಿಕೆಟಿಗ ಎಂಬ ವಿಶೇಷ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಯುವ ಕ್ರಿಕೆಟಿಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ದೇಶೀಯ ಟೂರ್ನಿಯಲ್ಲಿ ವೈಭವ್ ಅಬ್ಬರ

ದೇಶೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಒಂದರ ಮೇಲೊಂದು ದಾಖಲೆಗಳನ್ನು ಬರೆಯುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 84 ಎಸೆತಗಳಲ್ಲಿ 190 ರನ್‌ಗಳ ಭರ್ಜರಿ ಇನ್ನಿಂಗ್ಸ್‌ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದವು.

ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಬಿಹಾರ ತಂಡ 50 ಓವರ್‌ಗಳಲ್ಲಿ 574 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿತು. ವಿಶೇಷವಾಗಿ ವೈಭವ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದ್ದು, ಲಿಸ್ಟ್–ಎ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ.

ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ: ಟೆಸ್ಟ್ ರಿಪೋರ್ಟ್ ಸೇಫ್ – ದಿನೇಶ್ ಗುಂಡೂರಾವ್

0

ಬೆಂಗಳೂರು: ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ. ಲ್ಯಾಬ್ ಪರೀಕ್ಷಾ ವರದಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ರವಾನೆ ಮಾಡಲಾಗಿತ್ತು. ಇದೀಗ ವರದಿ ಲಭ್ಯವಾಗಿದ್ದು, ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿಲ್ಲ.

ಮೊಟ್ಟೆ ಸೇವನೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕುರಿತು ಎಫ್‌ಎಸ್‌ಎಸ್‌ಎಐ ಸಹ ಸ್ಪಷ್ಟನೆ ನೀಡಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ತಿಳಿಸಿದ್ದಾರೆ. ಇದೇ ವೇಳೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸೇವೆ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,

ಕಡಿಮೆ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವ ಕೇಂದ್ರಗಳಿಂದ ವೈದ್ಯರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು. ಸ್ಪೆಷಲಿಸ್ಟ್ ವೈದ್ಯರನ್ನು ಶಿಫ್ಟ್ ಮಾಡಿ, ಅವರ ಬದಲು ಇಬ್ಬರು ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲಾಗುತ್ತದೆ. ಯಾವುದೇ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಸ್ಪೆಷಲಿಸ್ಟ್ ವೈದ್ಯರ ವರ್ಗಾವಣೆ ನಂತರವೂ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ಆರೋಗ್ಯ ಸೇವೆ ಮುಂದುವರಿಯಲಿದೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಮೈಸೂರಿನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ: ತನಿಖೆಗೆ ಸೂಚನೆ ನೀಡಿದ್ದೇನೆ – ಸಚಿವ ಪರಮೇಶ್ವರ್

0

ಬೆಂಗಳೂರು: ಮೈಸೂರು ಅರಮನೆಯ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಲೂನು ಮಾರುತ್ತಿದ್ದ ವ್ಯಕ್ತಿಯ ಬಳಿ ಹೀಲಿಯಂ ಸಿಲಿಂಡರ್ ಇತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದರು. ಮೃತ ವ್ಯಕ್ತಿ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಘಟನೆಯ ಬಗ್ಗೆ ವರದಿ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ನಾನು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮೈಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಸುರಕ್ಷತೆಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ನಡೆದ ಘಟನೆ ನಮಗೆಲ್ಲಾ ತಿಳಿದಿದೆ. ಹಾಗಾಗಿ ಕೆ ಸೂಕ್ಷ್ಮವಾಗಿ ಇರುವಂತೆ ಹೇಳಿದ್ದೇನೆ ಎಂದರು.

ಇಂತಹ ಅಪಾಯಕಾರಿ ಸಿಲಿಂಡರ್ ಜನನಿಬಿಡ ಪ್ರದೇಶಗಳಲ್ಲಿ ಬಳಕೆ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ, ಅವನಿಗೆ ಸಿಲಿಂಡರ್ ಹೇಗೆ ಸಿಗ್ತು? ಹೀಲಿಯಂ ಹೇಗೆ ಸಿಕ್ಕಿದೆ ಎಂಬ ಬಗ್ಗೆ ವರದಿ ಕೇಳಿದ್ದೇನೆ. ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಐಜಿಗೂ ಸೂಚನೆ ನೀಡದ್ದೇನೆ. ಅವರು ಏನು ವರದಿ ನೀಡುತ್ತಾರೆ ನೋಡೋಣ ಎಂದರು.

ಜಗದ್ಗುರುಗಳ ಜೊತೆ ನಟಿ ಪಲ್ಲವಿ ಮತ್ತಿಘಟ್ಟ 1 ಗಂಟೆ ಮಾತುಕತೆ ಸುಳ್ಳು: ಮಠ ಕೊಟ್ಟ ಸ್ಪಷ್ಟನೆ ಏನು?

0

ಚಿಕ್ಕಮಗಳೂರು: ಶೃಂಗೇರಿಗೆ ಭೇಟಿ ನೀಡಿದ್ದ ಕಿರುತೆರೆ ನಟಿಯೊಬ್ಬರು ಮಠದ ಹಿರಿಯ ಸ್ವಾಮೀಜಿಗಳೊಂದಿಗೆ ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದ ಸುದ್ದಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ನಟಿಯ ಫೋಟೋ ಸಹಿತ ಮುಖಪುಟದಲ್ಲೇ ಸುದ್ದಿ ಪ್ರಕಟವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನ್ನಡದ ಖ್ಯಾತ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ಆಶೀರ್ವಾದ ಪಡೆದಿದ್ದಾರೆ ಎಂಬ ಶೀರ್ಷಿಕೆಯಡಿ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿಯಲ್ಲಿ, ಕಳೆದ ಒಂದು ತಿಂಗಳಲ್ಲೇ ಇದು ನಟಿಯ ಎರಡನೇ ಶೃಂಗೇರಿ ಭೇಟಿ ಆಗಿದ್ದು, ಈ ಬಾರಿ ಮಠದಲ್ಲೇ ವಾಸ್ತವ್ಯ ಮಾಡಿಕೊಂಡು ಮರುದಿನ ಶೃಂಗೇರಿ ಮಠದ ಹಿರಿಯ ಸ್ವಾಮೀಜಿಗಳನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ. ಡಿಸೆಂಬರ್ 20, 2025ರಂದು ‘ಲೋಕ ಧ್ವನಿ’ ಎಂಬ ಇ-ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಮಠ ಪ್ರಕಟಣೆಯಲ್ಲಿ ತಿಳಿಸಿದೆ. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಯವರು ಇತ್ತೀಚಿನ ವರ್ಷಗಳಲ್ಲಿ ಭಕ್ತರಿಗೆ ಕೇವಲ ದರ್ಶನ ನೀಡುತ್ತಿದ್ದು, ಯಾರೊಂದಿಗೂ ದೀರ್ಘಕಾಲ ಮಾತುಕತೆ ನಡೆಸುತ್ತಿಲ್ಲ ಎಂದು ಮಠ ಸ್ಪಷ್ಟಪಡಿಸಿದೆ.

ಪಲ್ಲವಿ ಮತ್ತಿಘಟ್ಟ ಅವರು ಇತರ ಭಕ್ತರಂತೆ ದರ್ಶನ ಪಡೆದಿರಬಹುದೇ ವಿನಃ ಪತ್ರಿಕೆಯಲ್ಲಿ ಹೇಳಿರುವಂತೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಸತ್ಯವಲ್ಲ ಎಂದು ಮಠ ಹೇಳಿದೆ. ಮುಂದಿನ ದಿನಗಳಲ್ಲಿ ಮಠ ಹಾಗೂ ಜಗದ್ಗುರುಗಳ ಕುರಿತು ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಶೃಂಗೇರಿಗೆ ಪ್ರತಿದಿನ ಸಾವಿರಾರು ಭಕ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಚಿತ್ರರಂಗದವರು ಭೇಟಿ ನೀಡುತ್ತಾರೆ. ಹೀಗಿರುವಾಗ ಕಿರುತೆರೆ ನಟಿಯೊಬ್ಬರ ಭೇಟಿಯನ್ನು ಮಾತ್ರ ಈ ರೀತಿ ವೈಭವೀಕರಿಸಿ ಸುದ್ದಿ ಮಾಡಿರುವುದೇಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಹಿಂದೆ ಯಾವುದಾದರೂ ಉದ್ದೇಶ ಅಥವಾ ಷಡ್ಯಂತ್ರ ಇರಬಹುದೇ ಎಂಬ ಅನುಮಾನಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ: ರಾಜ್ಯದ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವುದಿಲ್ಲ-ಸಿಎಂ ಸಿದ್ದರಾಮಯ್ಯ

0

ದಾವಣಗೆರೆ: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಹಿರಿಯೂರು ಬಸ್ ಅಪಘಾತ: ತನಿಖೆ ನಡೆಸಲಾಗುವುದು

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಕಾಂಗ್ರೆಸ್ ನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಇಂದು ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

error: Content is protected !!