ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಿದಲ್ಲಿ ಆ ಕಾರ್ಯಗಳು ಯಶಸ್ವಿಗೊಳ್ಳುವವು ಎಂಬುದಕ್ಕೆ ಗದುಗಿನ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘವೇ ಉದಾಹರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗುರುವಾರ ಗದುಗಿನ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘ ಕಳಸಾಪೂರ, ಪಂಚವಟಿ ನಾಗರಕಟ್ಟೆ ಹತ್ತಿರ ಗದಗ ನಗರಸಭೆಯ ವಾರ್ಡ್ ನಂ. 34ರಲ್ಲಿ ಸಿ.ಸಿ ರಸ್ತೆ ಒಳಚರಂಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ನಂತರ ಜರುಗಿದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಇಂಡೋರ್ ಸ್ಟೇಡಿಯಂ ಬಡಾವಣೆಯ ಉದ್ಯಾನವನದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕಾರಣ ನಗರದ ಸರ್ವ ಪದಾಧಿಕಾರಿಗಳು ಪಂಚವಟಿ ನಾಗರಕಟ್ಟೆ ಉದ್ಯಾನವನ ಗದಗ ನಗರದಲ್ಲಿಯೇ ಮಾದರಿಯಾಗಿ ನಿರ್ಮಾಣ ಮಾಡಲು ನಗರಸಭೆಯೊಂದಿಗೆ ಕೈಜೋಡಿಸಿ ಕಾಮಗಾರಿ ಮಾಡಿಸಿಕೊಳ್ಳಲು ಹೇಳಿದರು.
ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಮಾತನಾಡಿ, ನಮ್ಮ ಸಂಘದ ಉದ್ಘಾಟನೆಯ ಸಂದರ್ಭದಲ್ಲಿ ಸಚಿವರು ಹೇಳಿದಂತೆ ಇಂಡೋರ್ ಸ್ಟೇಡಿಯಂ ಬಡಾವಣೆಯ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸಿದ ನಂತರವೇ ಸಂಘದ ನಾಗರಿಕರ ಸನ್ಮಾನ ಸ್ವೀಕರಿಸುವುದಾಗಿ ಹೇಳಿದ್ದರು. ಅದರಂತೆ ಎರಡು ಕಾಮಗಾರಿಗಳನ್ನು ಕೈಗೊಂಡಿದ್ದು, ಅವರು ನಮ್ಮೆಲ್ಲರ ಅಭಿಮಾನದ ದ್ಯೋತಕವಾಗಿ ಸನ್ಮಾನ ಸ್ವೀಕರಿಸಿದ್ದು ಸಂಘಕ್ಕೆ ಹಾಗೂ ಬಡಾವಣೆಯ ನಾಗರಿಕರಿಗೆ ಸಂತೋಷವನ್ನುಂಟುಮಾಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರಾದ ವಿದ್ಯಾವತಿ ಗಡಗಿ ವಹಿಸಿದ್ದರು. ಗದಗ ತಾಲುಕಾ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಮಂದಾಲಿ, ನಗರಸಭೆಯ ಮುಖ್ಯ ಅಭಿಯಂತರ ಲಕ್ಷ್ಮಣ ಜೋಗದಂಡಕರ, ಸಂಘದ ಉಪಾಧ್ಯಕ್ಷ ಶಿವಾನಂದ ಪಲ್ಲೇದ, ಡಾ. ಡಿ.ಬಿ. ಚೆನ್ನಶೆಟ್ಟರ, ಜಗದೀಶ್, ವೀರಯ್ಯ ಹಿರೇಮಠ, ವಿ.ಎಸ್. ಶಿವಕಾಳಿಮಠ, ರಾಚಯ್ಯ ಕರವೀರಮಠ, ಅಮರನಾಥ ಗಡಗಿ, ಎಸ್.ವೈ. ಯಾಳಗಿಶೆಟ್ರು, ಡಾ. ರವಿ, ನಂದಿ, ಬಸವರಾಜ ಬೇಲೇರಿ, ಮಂಜುನಾಥ ಗಜಾಕೊಶ, ಶ್ರೀನಿವಾಸ, ಬಸವಂತಪ್ಪ ಕವಲೂರ, ಹಬೀಬ, ಡಿ.ಎಸ್. ಕಮತರ, ಮಂಜುನಾಥ ಚಿಕ್ಕನಗೌಡ್ರ, ಸಿದ್ದರಾಮೇಶ ಹಿರೇಮಠ, ಅನಿಲ್ ಗೌಳಿ, ಸುಭಾಸ್ ಗಡಾದ, ಶಿವಕುಮಾರ ರಾಠೋಡ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ ಸೇರಿದಂತೆ ನಗರದ ಸಮಸ್ತ ನಾಗರಿಕರು ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಹೆಚ್.ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ನಂದಿ ಸ್ವಾಗತಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಅಶೋಕ ಮಾಳೆಕೊಪ್ಪ ವಂದಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಈ ಬಡಾವಣೆಯಲ್ಲಿ ವಿದ್ಯಾವಂತರು, ಸರ್ಕಾರಿ ನೌಕರರು, ಪ್ರಜ್ಞಾವಂತರು ಹೆಚ್ಚಾಗಿ ವಾಸವಾಗಿದ್ದು, ಇವರೆಲ್ಲರೂ ಸಂಘಟಿತರಾಗಿ ಒಂದು ಸಂಘಟನೆಯ ಮೂಲಕ ಸಮಾಜಮುಖಿ, ಜನಮುಖಿ ಕಾರ್ಯ ಕೈಗೊಂಡಿರುವುದು ಅಭಿನಂದನೀಯ. ಈ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸುವ ಮೂಲಕ ಜನಪರ ಕಾರ್ಯಗಳನ್ನು ಬೆಂಬಲಿಸಬೇಕು ಎಂದರು.