Home Blog Page 263

ಟಿಕೆಟ್ ದರದಲ್ಲಿ ಏಕರೂಪತೆ ತರಲು ಆಂಧ್ರ ಸರ್ಕಾರ ನಿರ್ಧಾರ

ಹೊಸ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರ ಏರಿಕೆಗೆ ಜನ ಬೇಸರ ವ್ಯಕ್ತಪಡಿಸುತ್ತಿದ್ದರು. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡಲು ಆದೇಶ ಬಂದರೂ, ನ್ಯಾಯಾಲಯ ಅದಕ್ಕೆ ತಡೆ ನೀಡಿತು. ಇದೀಗ ಆಂಧ್ರ ಪ್ರದೇಶದಲ್ಲಿ ಕೂಡ ಇದೇ ಸಮಸ್ಯೆ ಗಮನಕ್ಕೆ ಬಂದಿದೆ.

ಪ್ರತಿ ದೊಡ್ಡ ಬಜೆಟ್ ಚಿತ್ರ ಬಿಡುಗಡೆ ವೇಳೆಗೆ ಟಿಕೆಟ್ ದರ ಏರಿಕೆ ಆಗುತ್ತಿತ್ತು. ಆದರೆ ಈ ಕ್ರಮವು ಸಣ್ಣ ಚಿತ್ರಗಳಿಗೆ ಹಾನಿ ಉಂಟುಮಾಡುತ್ತಿತ್ತು, ಮತ್ತು ಸಿನಿಮಾಪ್ರೇಮಿಗಳು ಮಾತ್ರವಲ್ಲ, ಚಿತ್ರರಂಗದ ಕೆಲವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರು.

ಆಂಧ್ರ ಸಿನಿಮಾ ಸಚಿವ ಕಂಡುಲ ದುರ್ಗೇಶ್ ಸಭೆ ನಡೆಸಿ ಪ್ರಮುಖ ಅಧಿಕಾರಿಗಳು ಮತ್ತು ತೆಲುಗು ಚಿತ್ರರಂಗದ ಕೆಲವು ಪ್ರತಿನಿಧಿಗಳನ್ನು ಭೇಟಿಯಾಗಿ, ಟಿಕೆಟ್ ದರಗಳನ್ನು ಪ್ರೇಕ್ಷಕರಿಗೂ ಮತ್ತು ಚಿತ್ರರಂಗಕ್ಕೂ ಸಮನ್ವಯವಾಗಿ ನೋಡಿಕೊಳ್ಳುವಂತೆ ನಿರ್ಧರಿಸಿದ್ದಾರೆ.

ಈ ನಿರ್ಧಾರವು ಸಣ್ಣ ಚಿತ್ರಗಳಿಗೆ ನ್ಯಾಯ ನೀಡಲು, ಟಿಕೆಟ್ ದರದ ಹೆಚ್ಚಳದ ಅಸಮತೋಲನವನ್ನು ತಡೆಯಲು, ಮತ್ತು ಎಲ್ಲಾ ಸಿನಿಮಾಗಳಿಗೆ ಸಮಾನ ಅವಕಾಶ ನೀಡಲು ಸಹಾಯ ಮಾಡಲಿದೆ.

ಫಾಕ್ಸ್‌ಕಾನ್ ಹೂಡಿಕೆಗಳೇ ಮೇಕ್ ಇನ್ ಇಂಡಿಯಾ ಯಶಸ್ಸಿನ ಸಾಕ್ಷಿ: ಪ್ರಲ್ಹಾದ್ ಜೋಶಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಕಿಡಿಕಾರಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲಿ ಫಾಕ್ಸ್‌ಕಾನ್‌ನಂತಹ ಜಾಗತಿಕ ಮಟ್ಟದ ಕಂಪನಿಗಳು ಹೂಡಿಕೆ ಮಾಡುತ್ತಿರುವುದು ಯೋಜನೆಯ ಯಶಸ್ಸಿಗೆ ಸ್ಪಷ್ಟ ಸಾಕ್ಷಿ ಎಂದರು.

ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಘಟಕ ಸ್ಥಾಪನೆಗಾಗಿ ಭೂಮಿ ಹಂಚಿಕೆಯಾಗಿದ್ದದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿದ್ದು, ಈ ಸತ್ಯವನ್ನು ಕಾಂಗ್ರೆಸ್ ಮರೆತಿದೆ. ಪ್ರಧಾನಿ ಮೋದಿ ಪರಿಚಯಿಸಿದ ಪಿಎಲ್‌ಐ (PLI) ಯೋಜನೆಯ ನೇರ ಲಾಭ ಪಡೆದಿರುವ ಕಂಪನಿಗಳಲ್ಲಿ ಫಾಕ್ಸ್‌ಕಾನ್ ಪ್ರಮುಖವಾಗಿದೆ. ಈ ಯೋಜನೆಯಡಿ 14,065 ಕೋಟಿ ರೂ. ಹೂಡಿಕೆ ಆಕರ್ಷಿಸಲ್ಪಟ್ಟಿದ್ದು, ಅಕ್ಟೋಬರ್ 2025ರ ವೇಳೆಗೆ 1.32 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಜೋಶಿ ತಿಳಿಸಿದ್ದಾರೆ.

ಭಾರತ ಈಗ ದೇಶೀಯವಾಗಿ ಚಿಪ್‌ಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪ-ಮಾಡ್ಯೂಲ್‌ಗಳ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. 2014-15ರಲ್ಲಿ ಕೇವಲ 0.18 ಲಕ್ಷ ಕೋಟಿ ರೂ. ಇದ್ದ ಮೊಬೈಲ್ ಫೋನ್ ಉತ್ಪಾದನೆ ಇಂದು 5.5 ಲಕ್ಷ ಕೋಟಿ ರೂ.ಗೆ ಏರಿದ್ದು, ಇದು 28 ಪಟ್ಟು ಹೆಚ್ಚಳವಾಗಿದೆ. ರಫ್ತು ಕೂಡ 0.01 ಲಕ್ಷ ಕೋಟಿ ರೂ.ನಿಂದ 2 ಲಕ್ಷ ಕೋಟಿ ರೂ.ಗೆ ಬೆಳೆಯಿದ್ದು, 127 ಪಟ್ಟು ಏರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಹಿಂದೆ ಭಾರತದಲ್ಲಿ ಫೋನ್‌ಗಳನ್ನು “ತಯಾರಿಸಲಾಗುವುದಿಲ್ಲ, ಕೇವಲ ಜೋಡಿಸಲಾಗುತ್ತದೆ” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಇಂದು ದೇಶದ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕಗಳೇ ತಕ್ಕ ಉತ್ತರ ನೀಡಿವೆ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸುಧಾರಣೆಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ಮಾತ್ರ ತೋರಿಸುತ್ತದೆ. ಭಾರತದ ಉತ್ಪಾದನಾ ಬೆಳವಣಿಗೆ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದ್ದು, ಇದು ಮೇಕ್ ಇನ್ ಇಂಡಿಯಾ ಯೋಜನೆಯ ಸ್ಪಷ್ಟ ಸಾಧನೆಯೇ ಆಗಿದೆ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಮೈಸೂರು ಸ್ಫೋಟ ಪ್ರಕರಣ: ಮತ್ತೋರ್ವ ಮಹಿಳೆ ಸಾವು, ಮೃತರ ಸಂಖ್ಯೆ ಮೂರಕ್ಕೆ ಏರಿಕೆ!

0

ಮೈಸೂರು: ಮೈಸೂರು ಅರಮನೆ ಬಳಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಲಕ್ಷ್ಮೀ ಅವರು ಕುಟುಂಬದವರೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಲಕ್ಷ್ಮೀ ಅವರ ಪುತ್ರಿ ಡಿಂಪಲ್ ಬದುಕುಳಿದಿದ್ದು, ತಾಯಿ ಸಾವಿನ ಸುದ್ದಿ ತಿಳಿದು ಕಣ್ಣೀರಿಟ್ಟಿದ್ದಾರೆ.

ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದ ಸಮಯದಲ್ಲೇ ಈ ಘಟನೆ ನಡೆದಿದೆ. ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಉತ್ತರ ಪ್ರದೇಶ ಮೂಲದ ಸಲೀಂ ಎಂಬವರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದರು. ಬಲೂನ್‌ಗೆ ಗ್ಯಾಸ್ ತುಂಬಿಸುವ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು, ಸಲೀಂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಸ್ಫೋಟದಲ್ಲಿ ನಾಲ್ಕೈದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡವರಲ್ಲಿ ನಂಜನಗೂಡಿನ ಮಂಜುಳ ಅವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮಂಜುಳ ಅವರು ಮೈಸೂರಿನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ತೆರಳುತ್ತಿದ್ದ ವೇಳೆ ಈ ದುರಂತಕ್ಕೆ ಬಲಿಯಾಗಿದ್ದಾರೆ.

ಮೃತ ಸಲೀಂ ಅವರು ಕೇವಲ 15 ದಿನಗಳ ಹಿಂದಷ್ಟೇ ಮೈಸೂರಿಗೆ ಆಗಮಿಸಿ, ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದರು. ಮೂವರು ಸ್ನೇಹಿತರೊಂದಿಗೆ ಬಲೂನ್ ಮಾರಾಟ ಮಾಡುತ್ತಿದ್ದರೂ, ಘಟನೆ ನಡೆದ ರಾತ್ರಿ ಸಲೀಂ ಒಬ್ಬರೇ ಮಾರಾಟ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ರಿಸ್‌ಮಸ್ ಸಮಯದಲ್ಲೇ ಈ ಸ್ಫೋಟ ಸಂಭವಿಸಿದ್ದರಿಂದ ಎನ್‌ಐಎಗೂ ಮಾಹಿತಿ ನೀಡಲಾಗಿದೆ. ಸಲೀಂ ಜೊತೆಯಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜನವರಿ 10, 12 ರಂದು ನಿಗದಿಯಾಗಿದ್ದ KEA ಪರೀಕ್ಷೆಗಳು 18ಕ್ಕೆ ಮುಂದೂಡಿಕೆ!

0

ಬೆಂಗಳೂರು: ಕೆಎಸ್‌ಡಿಎಲ್ ಹಾಗೂ ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆಗಳ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬದಲಾಯಿಸಿದೆ.

ಈ ಕುರಿತು ಮಾಹಿತಿ ನೀಡಿರುವ KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು, ಜನವರಿ 10 ಮತ್ತು 12ರಂದು ನಡೆಯಬೇಕಿದ್ದ ಪರೀಕ್ಷೆಗಳು ಇದೀಗ ಜನವರಿ 18ರಂದು ನಡೆಯಲಿವೆ. ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಯ ಪರೀಕ್ಷೆಯನ್ನು ಜನವರಿ 10ರಂದು ನಡೆಸಲು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನ ಕಿರಿಯ ಅಧಿಕಾರಿ ಹಾಗೂ ಕಿರಿಯ ಅಧಿಕಾರಿ ಹುದ್ದೆಗಳ ಪರೀಕ್ಷೆಯನ್ನು ಜನವರಿ 12ರಂದು ನಡೆಸಲು ನಿರ್ಧರಿಸಲಾಗಿತ್ತು.

ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಎರಡು ಪರೀಕ್ಷೆಗಳನ್ನೂ ಒಂದೇ ದಿನವಾದ ಜನವರಿ 18ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಜನವರಿ 19ಕ್ಕೆ ನಿಗದಿಯಾಗಿರುವ ಇತರೆ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್‌ನ್ನು ಪರಿಶೀಲಿಸಬೇಕು ಎಂದು KEA ಕೋರಿದೆ.

ರೈಲು ಪ್ರಯಾಣ ದರ ಹೆಚ್ಚಳವನ್ನು ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ: ಸಿ ಎಂ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶುಕ್ರವಾರ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 4 ಮಹಿಳೆಯರು, ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಸಿ.ಸಿ ಚರಂಡಿ ಕಾಮಗಾರಿಗೆ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪಂಚವಟಿ ನಾಗರಕಟ್ಟಿ ಸಮೀಪ ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂ. 34ರಲ್ಲಿ ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ನಗರಸಭಾ ಸದಸ್ಯೆ ವಿದ್ಯಾವತಿ ಗಡಗಿ ಸೇರಿದಂತೆ ಗಣ್ಯರು, ಹಿರಿಯರು ಹಾಜರಿದ್ದರು.

ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸಿ:  ಮಂಜುನಾಥ ಅಂತರವಳ್ಳಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯಕವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತಂತೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.

ಅವರು ಮಂಗಳವಾರ ಬೆಳಿಗ್ಗೆ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಲಾಭವನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ನಮ್ಮಲ್ಲಿ ಪ್ರಚಲಿತವಿರುವ ಸಜ್ಜೆ, ನವಣೆ, ಸಾವೆ, ರಾಗಿ, ಹಾರಕ, ಬರಗು, ಕೊರಲೆ, ಊದಲು ಮುಂತಾದ ಸಿರಿಧಾನ್ಯಗಳು ನಾರಿನಂಶ ಮತ್ತು ಇತರೆ ಆರೋಗ್ಯ ಸಂಬಂಧಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಸದೃಢ ಆರೋಗ್ಯಕ್ಕಾಗಿ ಇವುಗಳ ಬಳಕೆಯ ಅವಶ್ಯಕತೆ ಇದೆ. ಸಿರಿಧಾನ್ಯಗಳನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲದೆ ಬೆಳೆಯಬಹುದಾಗಿದ್ದು, ಇನ್ನಿತರ ಪರಿಕರಗಳ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕಡಿಮೆ ಖರ್ಚಿನಲ್ಲಿ ಸುಲಭ ನಿರ್ವಹಣೆಯೊಂದಿಗೆ ಬೆಳೆಯಬಹುದಾದ ಸಿರಿಧಾನ್ಯಗಳು ಪ್ರಸ್ತುತ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಳಗೊಂಡಂತೆ ರೈತ ಸಮೂದಾಯಕ್ಕೆ ವರದಾನವಾಗಿವೆ. ಇವುಗಳ ವಿಸ್ತೀರ್ಣವನ್ನು ಹೆಚ್ಚಿಸುವುದರೊಂದಿಗೆ ಗ್ರಾಹಕರ ಬಳಕೆಗೆ ಸೂಕ್ತವಾಗುವಂತೆ ಸಂಸ್ಕರಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಈ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಧಾರವಾಡ ಶಹರದಲ್ಲಿ ಕೃಷಿ ಇಲಾಖೆಯಿಂದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

`ಬೆಳೆ ಉತ್ಪಾದನೆಯಾಚೆಗಿನ ಕೃಷಿ-ರೈತರ ಸಬಲೀಕರಣ’ ಎಂಬ ವಾಕ್ಯದೊಂದಿಗೆ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ನಡಿಗೆಯ ಜಾಥಾ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಿಂದ ಕೆ.ಸಿ.ಡಿ ವೃತ್ತದವರೆಗೆ ಆಯೋಜಿಸಲಾಗಿತ್ತು.

ಜನಜಾಗೃತಿ ಜಾಥಾ ನಡಿಗೆಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ, ಉಪ ಕೃಷಿ ನಿರ್ದೇಶಕರಾದ ನಟರಾಜ ಟಿ.ಹೆಚ್, ಸಂದೀಪ ಜಿ.ಆರ್ ಸೇರಿದಂತೆ ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳು ಹಾಗೂ ವಿವಿಧ ಕೃಷಿಯೇತರ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿದ್ದರು.

ಸಿರಿಧಾನ್ಯಗಳ ಸಾಗುವಳಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಗ್ರಾಹಕರ ಬಳಕೆ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಮತ್ತು ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯ ಉತ್ಪನ್ನಗಳ ಕುರಿತು ಉತ್ಪಾದಕರು ಮತ್ತು ಬಳಕೆದಾರರು ಇಬ್ಬರಲ್ಲೂ ಸಾಕಷ್ಟು ತಿಳುವಳಿಕೆ ಮೂಡಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ದೊರೆತಿದೆ. ಸಿರಿಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರದ ಬಹುಮುಖ್ಯ ಭಾಗವಾಗಿದ್ದು, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಹೊಸ ವಿಧದ ಖಾದ್ಯಗಳನ್ನು ತಯಾರಿಸುವದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದರು.

ಸರ್ವರಿಗೂ ಲೇಸನ್ನೇ ಬಯಸಿದವರು ಏಸು: ಡಾ. ಡ್ಯಾನಿಯಲ್

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೀವನದಲ್ಲಿ ತಾನು ಏನೆಲ್ಲ ತೊಂದರೆ ಎದುರಿಸಿದರೂ ಸರ್ವರಿಗೂ ಲೇಸನ್ನೇ ಬಯಸಿದವರು ಏಸುಕ್ರಿಸ್ತರು. ಅವರ ಜನ್ಮ ದಿನವಾದ ಇಂದು ಈ ಲೋಕದ ಎಲ್ಲ ಜನತೆಗೆ ಇನ್ನಷ್ಟು ಶಾಂತಿ, ನೆಮ್ಮದಿ ನೀಡೆಂದು ಅವರಲ್ಲಿ ಪ್ರಾರ್ಥಿಸೋಣ ಎಂದು ಡಾ. ಡ್ಯಾನಿಯಲ್ ಹೇಳಿದರು.

ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ವಿನ್ಸೆಂಟ್ ಮೆಮೋರಿಯಲ್ ಚರ್ಚ್ ನಲ್ಲಿ ಆಚರಿಸಲಾದ ಕ್ರಿಸ್‌ಮಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಏಸುವಿನ ಸಂದೇಶವು ಸರ್ವರ ಏಳಿಗೆಗಾಗಿ ಇದೆ. ಮಾನವ ಕಲ್ಯಾಣವನ್ನು ತನ್ನ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಏಸು, ಮಾನವರಲ್ಲಿನ ಸಣ್ಣತನದ ಗುಣಗಳನ್ನು ಕಳೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಬಾಳು, ಇತರರನ್ನು ಬಾಳಲು ಬಿಡು ಎಂಬುದು ಏಸುವಿನ ಮಹತ್ವದ ಸಂದೇಶಗಳಲ್ಲಿ ಒಂದಾಗಿದೆ. ಇದನ್ನು ಅರಿತು ನಾವೆಲ್ಲರೂ ನಡೆದರೆ ನಮ್ಮ ಬಾಳು ಬಂಗಾರವಾಗುತ್ತದೆ. ಯಾರನ್ನೂ ದ್ವೇಷಿಸದೆ, ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಬದುಕಿದ್ದೇ ಆದರೆ ಎಲ್ಲರ ಜೀವನವೂ ಪವಿತ್ರ ಜೀವನವಾಗುತ್ತದೆ ಎಂದು ಹೇಳಿದರು.

ಪ್ರೀತಿ, ತ್ಯಾಗ, ಸಹನೆ ಮತ್ತು ಶಾಂತಿಯ ಪ್ರತಿರೂಪ ಏಸುವಾಗಿದ್ದಾರೆ. ಅವರ ತತ್ವಗಳನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಜೀವನವನ್ನು ಸಾಗಿಸುವುದು ಅವಶ್ಯಕವಾಗಿದೆ. ದುಃಖದಲ್ಲಿದ್ದ ಜನರ ಮನದ ನೋವನ್ನು ಕಳೆಯಲೆಂದೇ ಏಸುವಿನ ಜನನವಾಗಿದೆ. ಇಂದು ಅವರು ಹುಟ್ಟಿದ ದಿನವನ್ನು ಆಚರಿಸುತ್ತಿರುವ ನಾವೆಲ್ಲ ಅವರನ್ನು ಸ್ತುತಿಸುವ, ಅವರ ಸಂದೇಶಗಳನ್ನು ಸಾರುವ ಬೈಬಲ್ ಓದಿ, ಅವರ ಸ್ಮರಣೆಯೊಂದಿಗೆ ಅವರನ್ನು ನೆನಸಿಕೊಂಡು ಪ್ರೀತಿಯಿಂದ ಬಾಳೋಣ ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ಕ್ರೆಸ್ತ ಬಾಂಧವರೆಲ್ಲರೂ ಉಪಸ್ಥಿತರಿದ್ದರು.

ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ!

0

ನೆಲಮಂಗಲ:- ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.

ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಹರೀಶ್(39) ಮತ್ತು ವೀರಭದ್ರ(80) ಮೃತರು. ಕಾರಿನಲ್ಲಿದ್ದ ಗೌರಮ್ಮ, ಮೈತ್ರಿ, ಸಿರಿ, ವಂದನಾಗೆ ಗಂಭೀರ ಗಾಯಗಳಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗುರುವಾರ ದಾಸರಹಳ್ಳಿಯಲ್ಲಿರುವ ಸ್ವಂತ ಮನೆಯಿಂದ ಕುಟುಂಬದೊಂದಿಗೆ ಹುಟ್ಟೂರು ಗೌರಿಬಿದನೂರಿಗೆ ತೆರಳಿದ್ದ ಹರೀಶ್, ಜಮೀನು ವಿಚಾರ ಮುಗಿಸಿಕೊಂಡು ಸಂಜೆ 6 ಗಂಟೆ ಸುಮಾರಿಗೆ ವಾಪಸ್ ಪ್ರಯಾಣ ಆರಂಭಿಸಿದ್ದರು. ರೈಲ್ವೆ ಗೊಲ್ಲಹಳ್ಳಿ–ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುವಾಗ, ತೋಟದ ಗುಡ್ಡದಹಳ್ಳಿ ಟರ್ನಿಂಗ್ ಬಳಿ ಲಾರಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಎದುರಿನಿಂದ ಬಂದ ಮತ್ತೊಂದು ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರನ್ನು ಬಲಭಾಗಕ್ಕೆ ತಿರುಗಿಸಿದ್ದಾರೆ.

ಸಂಜೆ 7.30ರ ಹೊತ್ತಿಗೆ ಕತ್ತಲಿನಲ್ಲೇ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹರೀಶ್ ಮತ್ತು ಅವರ ತಂದೆ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.

ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ: ನಮ್ಮ ಮೆಟ್ರೋದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ NCR ದಾಖಲು!

0

ಬೆಂಗಳೂರು:- ಕಾಮುಕನೊಬ್ಬ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ, ಖಾಸಗಿ ಅಂಗಾಗ ಮುಟ್ಟಿ ಕಿರುಕುಳ ನೀಡಿರುವ ಘಟನೆ ಮೆಜಸ್ಟಿಕ್‌ನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಜರುಗಿದೆ.

ಸಂತ್ರಸ್ತೆ ಯುವತಿ ಮೆಟ್ರೋದಲ್ಲಿ ವಿಧಾನಸೌಧದಿಂದ ಸಂಚರಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ. ಇಷ್ಟೇ ಅಲ್ಲದೇ ಏನೂ ತಿಳಿದೇ ಇಲ್ಲ ಎನ್ನುವಂತೆ ಆಕೆಯ ಮುಂದೆಯೇ ನಿಂತು ಕೆಟ್ಟದಾಗಿ ನಗುವ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ರೈಲು ಕೆಂಪೇಗೌಡ ನಿಲ್ದಾಣಕ್ಕೆ ತಲುಪಿದಾಗ ಯುವತಿಯು ಮುತ್ತಪ್ಪನ ಅಸಭ್ಯ ವರ್ತನೆ ಬಗ್ಗೆ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಭ್ಯ ವರ್ತನೆ ಅಡಿಯಲ್ಲಿ ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!