Home Blog Page 3016

ಕೊರೊನಾ: ಶುಭಸುದ್ದಿ ನೀಡಿದ ಭಾನುವಾರ, ಗುಣಮುಖರ ಸಂಖ್ಯೆ ಏರಿಕೆ, ಸೋಂಕಿತರ ಸಂಖ್ಯೆ ಇಳಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ನಿನ್ನೆಯಿಂದ ಇಳಿಮುಖವಾಗುತ್ತಿದೆ. ನಿನ್ನೆ ನಾಲ್ಕು ನೂರರ ಗಡಿ ದಾಟಿದ್ದ ಸೋಂಕಿನ ಸಂಖ್ಯೆಯಲ್ಲಿ ಇಂದು ಮೂನ್ನೂರರ ಗಡಿ ದಾಟಿದೆ. ಸೋಂಕಿತರಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರೇ ಹೆಚ್ಚು.

ಇಂದಿನ 371 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 21129 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -188, ಮುಂಡರಗಿ-23, ನರಗುಂದ-10, ರೋಣ-73, ಶಿರಹಟ್ಟಿ-65, ಹೊರಜಿಲ್ಲೆಯ-12 ಸೇರಿದಂತೆ 371 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 215 ಕ್ಕೇರಿದೆ.

ಗದಗ ಶಹರದ ‌ನಿವಾಸಿ
60 ವರ್ಷದ ವ್ಯಕ್ತಿ ಮೇ-11 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 19 ರಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಬೊಚನಹಳ್ಳಿ ನಿವಾಸಿ 65 ವರ್ಷದ ವ್ಯಕ್ತಿ ಮೇ -11 ಮುಂಡರಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 19 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಮುಳಗುಂದ ನಿವಾಸಿ ,60 ವರ್ಷದ ವ್ಯಕ್ತಿ ಮೇ 19 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 20 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಸೂಡಿ ನಿವಾಸಿ 74 ವರ್ಷದ ವ್ಯಕ್ತಿ ಮೇ 19 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 22 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕೂಡ ದಾಖಲೆಯ 421 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 17511 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3403 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಇದೇನು ಅಧಿಕಾರಿಗಳೇ? ಪತ್ರಕರ್ತರ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ…17 ಜನ ಒಂದೇ ಸಂಖ್ಯೆ ನೀಡಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೊರೊನಾದಿಂದಾಗಿ ಹೋಂ ಐಸೋಲೇಷನ್ ನಲ್ಲಿರುವ 17 ಜನರು ಒಂದೇ ಮೊಬೈಲ್ ಸಂಖ್ಯೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ, ಕೆಲವರು ತಮ್ಮ ಸಂಖ್ಯೆ ನೀಡದೆ ಪತ್ರಕರ್ತರ ಸಂಖ್ಯೆಯನ್ನು ಕೂಡ ನೀಡಿದ್ದಾರೆ. ಈ ಘಟನೆ ಜಿಲ್ಲೆಯ ಶಹಾಬಾದ್ ನಲ್ಲಿ ನಡೆದಿವೆ.

ಹೆಚ್ಚಿನ ಜನ ಸೋಂಕಿತರು ಬೇರೆಯವರ ಸಂಖ್ಯೆ ನೀಡಿರುವುದು ಕೂಡ ಬಯಲಿಗೆ ಬಂದಿದೆ. ಇದೆಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಡೆದಿದೆ ಎನ್ನಲಾಗಿದೆ.

ನಗರಸಭೆ ಸಿಬ್ಬಂದಿಗಳು ಬೇರೆಯವರ ಸಂಖ್ಯೆ ನೀಡಿದ್ದರಿಂದಾಗಿ ಅಧಿಕಾರಿಗಳು ಕರೆ ಮಾಡಿದರೆ ಅದು ಬೇರೆಯವರಿಗೆ ತೆರಳುತ್ತಿದೆ. ನಮಗೆ ಯಾವುದೇ ಲಕ್ಷಣವಿಲ್ಲ, ನಾವು ಇದೇ ಊರಲ್ಲಿದ್ದೇವೆ. ಆರಾಮವಾಗಿದ್ದೇವೆ ಎಂದು ಜನ ಅಧಿಕಾರಿಗಳ ಕರೆಗೆ ಸ್ಪಷ್ಟನೆ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.

ಒಂದೇ ಮೊಬೈಲ್‌ ಸಂಖ್ಯೆ 17 ಜನರ ಹೆಸರಲ್ಲಿದೆ. ಇನ್ನೊಂದು ಮೊಬೈಲ್‌ ಸಂಖ್ಯೆಯನ್ನು 22 ಜನರು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೋಮ್‌ ಐಸೋಲೇಷನ್‌ ಇದ್ದವರ ಹೆಸರು ರಿಜಿಸ್ಟರ್‌ ಆದ ನಂತರ ಅವರ ಮೊಬೈಲ್‌ ಗೆ ಓಟಿಪಿ ಸಂಖ್ಯೆ ಬರುತ್ತದೆ. ಅದು ಹೇಗೆ? 17 ಜನ ಒಂದೇ ಸಂಖ್ಯೆ ನೀಡಿದ್ದಾರೆ. ಅಲ್ಲದೇ, ಅಧಿಕಾರಿಗಳು ಓಟಿಪಿ ಹೇಗೆ ಪಡೆದಿದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.

ಅಧಿಕಾರಿಗಳು ಒಂದೇ ಸಂಖ್ಯೆಯಿಂದ 17 ಜನರನ್ನು ಸಂಪರ್ಕಿಸಿ ಕಿಟ್‌ ನೀಡಿದ್ದಾದರೂ ಹೇಗೆ? ಎಂಬ ಪ್ರಶ್ನೆ ಸದ್ಯ ಮೂಡುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು? ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾವೈದ್ಯಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಲೂಕು ವೈದ್ಯಾಧಿಕಾರಿಗಳಿಂದ ತನಿಖೆ ನಡೆಸುತ್ತೇನೆ. ಎಲ್ಲಿ, ಯಾರಿಂದ ತಪ್ಪಾಗಿದೆ ಎಂದು ವಿಚಾರಣೆ ನಡೆಸಲಾಗುವುದು ಎಂದು ವೈದ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದ್ಧಾರೆ. ಇಂತಹ ಘಟನೆಗಳು ರಾಜ್ಯದಲ್ಲಿಯೂ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಸ್ಕಿ ಹೊಡಿಸಿದ ಲೇಡಿ ಪೊಲೀಸ್!

ವಿಜಯಸಾಕ್ಷಿ ಸುದ್ದಿ, ಹಾವೇರಿ

ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಜನರು ಮಾತ್ರ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಎಎಸ್‍ ಐ ಒಬ್ಬರು ಹೀಗೆ ತಿರುಗಾಡುತ್ತಿದ್ದವರಿಗೆ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ನೀಡಿದೆ. ಅದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದವರಿಗೆ ಮಹಿಳಾ ಎಎಸ್‍ ಐ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.

ಕಿವಿ ಹಿಡಿಸಿ ಇಪ್ಪತ್ತೈದು ಬಸ್ಕಿ ಹೊಡೆಸಿ ಹಂಸಭಾವಿ ಮಹಿಳಾ ಎಎಸ್‍ ಐ ಎಂ.ಎ. ಅಸಾದಿ ಶಿಕ್ಷೆ ನೀಡಿ, ಜನರಿಗೆ ಬುದ್ಧಿ ಹೇಳಿದ್ದಾರೆ. ಈ ಗ್ರಾಮದಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ರೈತರು ಜಮೀನಿಗೆ ಹೋಗಲು ಮಾತ್ರ ಬಿಡುತ್ತಿದ್ದಾರೆ. ಕೆಲವು ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ. ಅಲ್ಲದೆ ಕೆಲವು ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

ಹೊಸ ಮರಳು ನೀತಿ ಜಾರಿಗೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜ್ಯದಲ್ಲಿ ಮತ್ತೆ ಮರಳು ಮಾಫಿಯಾ ಸದ್ದು ಮಾಡುತ್ತಿದೆ. ಎಗ್ಗಿಲ್ಲದೆ ಮರಳು ಸಾಗಾಟವಾಗುತ್ತಿದೆ. ಉಳ್ಳವರು ಮರಳು ಮಾರಾಟ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಮರಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇನ್ನು ಮುಂದೆ ಬೈಕ್, ಎತ್ತಿನ ಗಾಡಿಯಲ್ಲಿ ಮರಳು ಸಾಗಿಸಿಕೊಳ್ಳಬಹುದು. ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶವಿದೆ. ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ಹಾಕಲ್ಲ. ಮರಳು ಮಾಫಿಯ ತಡೆಯಲು ಶೀಘ್ರದಲ್ಲಿಯೇ ಕಠಿಣ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್ ನಿರ್ವಹಣೆಗಾಗಿ ಶೇ. 30ರಷ್ಟು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

3ನೇ ಅಲೆಯ ಆತಂಕ – ಮೈಸೂರಿನಲ್ಲಿ ಈಗಿನಿಂದಲೇ ನಿಯಂತ್ರಣಕ್ಕೆ ಕ್ರಮ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆಯ ಆತಂಕ ಹೆಚ್ಚಾಗಿದ್ದು, ಈ ಅಲೆ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರಲಿದ್ದು, ಈಗಿನಿಂದಲೇ ನಿಯಂತ್ರಿಸಲು ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ಅಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಪೀಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ ನ್ನು ಆರಂಭ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ನಾಲ್ಕೈದು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಸ್ಥಿತಿ ಕೈ ಮೀರಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ 150 ಜನ ಮಕ್ಕಳ ತಜ್ಞರು ಇದ್ದಾರೆ. ಇದರೊಂದಿಗೆ ಮಕ್ಕಳಿಗೆ ಅಗತ್ಯವಿರುವ ಐಸಿಯು ಸೇರಿದಂತೆ ಇನ್ನಿತರ ಆರೋಗ್ಯ ಉಪಕರಣಗಳು ಎಷ್ಟಿವೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ದೊಡ್ಡವರಿಗೆ ನೀಡುವಂತೆ ಮಾತ್ರೆಗಳನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಪೀಡಿಯಾಟ್ರಿಕ್ ಮೆಡಿಕಲ್ ಕಿಟ್ ತಯಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಅವರಿಗೆ ಸೋಂಕು ತಗುಲಿದರೂ ಅಪಾಯದ ಮಟ್ಟ ತಲುಪಿಲ್ಲ. ಹೀಗಾಗಿಯೂ ಮುಂಜಾಗ್ರತೆ ತೆಗೆದುಕೊಳ್ಳದೆ ಇರುವಂತಿಲ್ಲ. ಈ ನಿಟ್ಟಿನಲ್ಲಿಯೇ ಈಗಿನಿಂದಲೇ ಮಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಸಿಎಂ!

ವಿಜಯಸಾಕ್ಷಿ ಸುದ್ದಿ, ರಾಯ್ ಪುರ

ಲಾಕ್ ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿ ಅಮಾನತು ಮಾಡಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ.

ಅಧಿಕಾರಿಗಳು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿತ್ತು.

ಕೊರೊನಾ ತಡೆಗೆ ಲಾಕ್ ಡೌನ್ ವಿಧಿಸಿರುವ ನಡುವೆಯೂ ಯುವಕನೊಬ್ಬ ಸಂಚರಿಸುತ್ತಿದ್ದ, ಇದನ್ನು ಅಧಿಕಾರಿಗಳು ಕಂಡೊಡನೆಯೇ ಆತ ತಾನು ಸಂಚರಿಸುತ್ತಿದ್ದದ್ದಕ್ಕೆ ಕಾರಣ ನೀಡಲು ಯತ್ನಿಸಿದ್ದ. ಆದರೆ, ಜಿಲ್ಲಾಧಿಕಾರಿ ಮಾತ್ರ ದರ್ಪ ಮೆರೆದಿದ್ದರು. ಮೊಬೈಲ್ ಹಾಗೂ ಯುವಕ ನೀಡುತ್ತಿದ್ದ ಕಾಗದವನ್ನು ಎಸೆದು ಕಾರಾಣ ಆಲಿಸದೆ ಅಧಿಕಾರಿಗಳು ಯುವಕನನ್ನು ಥಳಿಸಿದ್ದರು.

ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿಗಳನ್ನು ತೆಗೆದು ಹಾಕುವಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಬ್ಲ್ಯಾಕ್ ಫಂಗಸ್ ಬಗ್ಗೆ ತಜ್ಞರು ಹೇಳಿರುವ ಎಚ್ಚರಿಕೆ ಏನು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಒಂದೇ ಮಾಸ್ಕ್ ನ್ನು 2 ರಿಂದ 3 ವಾರಗಳ ಕಾಲ ನಿರಂತರವಾಗಿ ಬಳಕೆ ಮಾಡುತ್ತಿದ್ದರೂ ‘ಬ್ಲ್ಯಾಕ್ ಫಂಗಸ್’ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಮಾರಕ ಸೋಂಕಿನ ಅಬ್ಬರ ಜೋರಾಗಿದೆ. ಇತ್ತ ಬ್ಲ್ಯಾಕ್ ಫಂಗಸ್ ಸೋಂಕಿನ ಅಬ್ಬರ ಕೂಡ ಜೋರಾಗುತ್ತಿದೆ. ಇದರ ನಡುವೆಯೇ ಈ ಬ್ಲಾಕ್ ಫಂಗಸ್ ನ ಮೂಲಗಳ ಕುರಿತು ತಜ್ಞರು ಒಂದೊಂದೇ ಮಾಹಿತಿ ಹೊರ ಹಾಕುತ್ತಿದ್ದಾರೆ. ಸದ್ಯ ಒಂದೇ ಮಾಸ್ಕ್ ನ್ನು ಸತತವಾಗಿ ಬಳಕೆ ಮಾಡುವುದರಿಂದ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಏಮ್ಸ್ ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ, ಸತತ 2 ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆ ಎಂದು ಹೇಳಿದ್ದಾರೆ.

ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಬ್ಲ್ಯಾಕ್ ಫಂಗಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಹಿಂದೆಲ್ಲ ವರ್ಷಕ್ಕೆ 7 ಅಥವಾ 8 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಪ್ರತಿ ದಿನ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ.

ಮಧುಮೇಹ, ಬಿಪಿ, ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆಯಂತಹ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರಲ್ಲಿ ಕೂಡ ಸೋಕು ಬಹು ಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ

ಅಲ್ಲದೇ, ಗಡ್ಡ ಹೊಂದಿರುವ ಜನರಿಗೆ ಈ ಮಾಸ್ಕ್‌ ಧರಿಸುವುದು ಕಷ್ಟಕರವಾಗಬಹುದು. ಮಾಸ್ಕ್‌ ಮುಖದ ಮೇಲೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಮಾಸ್ಕ್ ಮುಖಕ್ಕೆ ಫಿಟ್ ಆಗಿ ಧರಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಕಷ್ಟ ಕಾಲದಲ್ಲಿ ಹಿರಿಯ ಜೀವಗಳ ಕೈ ಹಿಡಿದ ರಿಯಲ್ ಸ್ಟಾರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಹೀಗಾಗಿ ಹಿರಿಯರಷ್ಟೇ ಇರುವ ಮನೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳಿಗೆ ಉಪೇಂದ್ರ ಅವರೇ ಮನೆಯ ಮಗನಾಗಿದ್ದಾನೆ.

ಪ್ರತಿ ದಿನ ಸಿನಿಮಾ ಚಟುವಟಿಕೆಗಳನ್ನೇ ನಂಬಿಕೊಂಡಿದ್ದ ಬಡ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಕೆಲವು ಹಿರಿಯ ಕಲಾವಿದರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ನೆರವಿಗೆ ಉಪೇಂದ್ರ ಧಾವಿಸಿದ್ದಾರೆ.

ಸಿನಿಮಾವನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಡಿದ್ದ ಹಿರಿಯ ಕಲಾವಿದರಿಗೆ ಇಂದು ಚಿತ್ರ ರಂಗದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಲಾಕ್‍ ಡೌನ್ ಸಂದರ್ಭದಲ್ಲಿ ಅಂಥವರ ಕಷ್ಟ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಅರಿತ ನಟ ಉಪೇಂದ್ರ ಅವರು ಹಿರಿಯ ನಟ – ನಟಿಯರ ಮನೆಯ ಮಗನಾಗಿದ್ದಾರೆ. ಅಂತಹ ಕುಟುಂಬಗಳಿಗೆ ಅವಶ್ಯವಿರುವ ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಮೋಹನ್ ಜುನೇಜಾ, ಶ್ರೀಲಲಿತಾ, ಕಾಮಿನಿಧರನ್, ಬೆಂಗಳೂರು ನಾಗೇಶ್, ಎಟಿ ರಘು, ಉಮೇಶ್ ಮುಂತಾದವರ ಮನೆಗೆ ಉಪೇಂದ್ರ ಅವರು ದಿನಸಿ ಕಿಟ್ಗಾಳನ್ನು ಕಳುಹಿಸಿದ್ದಾರೆ.
ಈ ಹಿರಿಯ ಜೀವಗಳು ಉಪೇಂದ್ರ ಅವರಿಗೆ ಮನಸಾರೆ ಆಶೀರ್ವಾದಿಸಿದ್ದಾರೆ.

ಪೆಟ್ರೋಲ್ ಟ್ಯಾಂಕರ್ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು!

ವಿಜಯಸಾಕ್ಷಿ ಸುದ್ದಿ, ಗದಗ

ಪೆಟ್ರೋಲ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಜಿಲ್ಲಾಡಳಿತ ಭವನದ ಎದುರಿಗೆ ಈ ದುರ್ಘಟನೆ ನಡೆದಿದೆ.

ಮೃತನನ್ನು ಒಕ್ಕಲಗೇರಿ ಓಣಿಯ ಮಹಾದೇವಪ್ಪ ಹುಚ್ಚಪ್ಪ ಕುಂಬಾರ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಕೊಪ್ಪಳ ಮಾರ್ಗವಾಗಿ ಹೊರಟಿತ್ತು.

ಘಟನೆಯ ಮಾಹಿತಿ ತಿಳಿದ ಜಿಲ್ಲಾವರಿಷ್ಠಾಧಿಕಾರಿ ಯತೀಶ್ ಎನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಸೈಕಲ್ ಮೇಲೆ ಕಟ್ಟಿಗೆ ಒಯ್ಯುತ್ತಿದ್ದ ವ್ಯಕ್ತಿಯು ಮನೆ ಕಡೆ ಹೊರಟಿದ್ದಾಗ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೌಖ್ತೆ ಚಂಡಮಾರುತ – ಸಾವಿನ ಸಂಖ್ಯೆ 66ಕ್ಕೆ ಏರಿಕೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಇತ್ತೀಚೆಗಷ್ಟೇ ತೌಖ್ತೆ ಚಂಡಮಾರುತ ಬೀಸಿದ್ದ ಸಂದರ್ಭದಲ್ಲಿ ಮುಳುಗಿದ್ದ ಬಾರ್ಜ್ ಪಿ 305 ಸಮುದ್ರದ ತಳದಲ್ಲಿ ಕಂಡು ಬಂದಿದೆ. ಎರಡು ಹಡಗುಗಳಿಂದ ಕಾಣೆಯಾದ 20 ಸಿಬ್ಬಂದಿಗಳ ಹುಡುಕಾಟ ಮುಂದುವರಿದಿದೆ ಎಂದು ನೌಕಾಪಡೆ ಹೇಳಿದೆ. ಬಾರ್ಜ್‌ನಿಂದ ಒಂಭತ್ತು ಜನ ಹಾಗೂ ಟಗ್ ಬೋಟ್ ದಿಂದ ನಾಪತ್ತೆಯಾಗಿರುವ 11 ಜನರ ಕುರುಹು ಇನ್ನೂ ಕಂಡು ಬಂದಿಲ್ಲ. ಆದರೆ, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (ಎಸ್‌ಎಆರ್) ಹೆಚ್ಚಿಸಲು ನೌಕಾಪಡೆಯು ವಿಶೇಷ ಡೈವಿಂಗ್ ತಂಡಗಳನ್ನು ನಿಯೋಜಿಸಿತ್ತು. ಇಲ್ಲಿಯವರೆಗೆ 66 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಬಾರ್ಜ್ ಪಿ 305 ರಲ್ಲಿದ್ದ 261 ಸಿಬ್ಬಂದಿಯಲ್ಲಿ 186 ಜನರನ್ನು ಈವರೆಗೆ ರಕ್ಷಿಸಲಾಗಿದೆ. 66 ಜನ ಸಾವನ್ನಪ್ಪಿದ್ದಾರೆ ಹಾಗೂ ಒಂಭತ್ತು ಜನ ನಾಪತ್ತೆಯಾಗಿದ್ದಾರೆ ಎಂದು ಸೇನಾಪಡೆ ತಿಳಿಸಿದೆ.

ಈಗಾಗಲೇ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ 41 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.

ಬಾರ್ಜ್ ಪಿ 305, ಸೋಮವಾರ ಸಂಜೆ ಮುಂಬಯಿಯ ಕರಾವಳಿಯಲ್ಲಿ ಚಂಡಮಾರುತದ ಸಮಯದಲ್ಲಿ ಮುಳುಗಿತ್ತು. ಕೆಲವು ದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಹಲವು ದೇಹಗಳಿಗೆ ಹೆಚ್ಚಿನ ಗಾಯಗಳಾಗಿವೆ. ಹೀಗಾಗಿ ಅವರುಗಳನ್ನು ಗುರುತಿಸಲು ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೀಡಾದವರಿಗೆ ಕೊವಿಡ್ ಸೋಂಕು ಇದೆಯೇ ಎಂದು ಕಂಡುಹಿಡಿಯಲು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಪ್ರಕ್ಷುಬ್ಧ ಪ್ರದೇಶದಲ್ಲಿ ಬಾರ್ಜ್ ಏಕೆ ಅಲ್ಲೇ ಉಳಿದಿದೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

error: Content is protected !!