Home Blog Page 3026

ಆಸ್ಪತ್ರೆಗೆ ಸೇರಿದ್ದು ಕಾಲು ಮುರಿದಿದ್ದಕ್ಕೆ ಆದರೆ, ಸತ್ತಿದ್ದು ಕೊರೊನಾದಿಂದ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಜಿಲ್ಲೆಯ ನ್ಯಾಯವಾದಿಯೊಬ್ಬರು ಕಾಲು ಮುರಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾದಿಂದ ಅವರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೊರಟಗೆರೆಯ ನ್ಯಾಯವಾದಿ ಬಿ.‌ಕೆ. ನಾರಾಯಣ್(52) ಸೋಂಕಿಗೆ ಬಲಿಯಾದ ದುರ್ದೈವಿ. ಇವರು ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇತ್ತೀಚೆಗಷ್ಟೇ ವಕೀಲ ಬಿ.ಕೆ. ನಾರಾಯಣ್ ಅವರು ಬಾತ್ ರೂಂನಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿ ತೆರಳುತ್ತಿದ್ದಂತೆ ಅವರಲ್ಲಿ ಕೋವಿಡ್ ಕಂಡು ಬಂದಿದೆ. ಆ ನಂತರ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ 480 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ತನ್ನ ಅಟಾಟೋಪ ಮುಂದುವರೆಸಿದೆ. ಸೋಮವಾರವೂ ಸೋಂಕಿನ ಪ್ರಕರಣಗಳು ನಾಲ್ಕು ‌ನೂರರ ಗಡಿ ದಾಟಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 480 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 18287 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -208, ಮುಂಡರಗಿ-55, ನರಗುಂದ-19, ರೋಣ-72, ಶಿರಹಟ್ಟಿ-116 ಹೊರಜಿಲ್ಲೆಯ-10 ಸೇರಿದಂತೆ 480 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 187 ಕ್ಕೇರಿದೆ.

ಗದಗ ತಾಲೂಕಿನ ನಾಗಾವಿ ನಿವಾಸಿ 65 ವರ್ಷದ ವ್ಯಕ್ತಿ ಏ,25 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನಿವಾಸಿ 62 ವರ್ಷದ ಮಹಿಳೆ ಮೇ 12 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 14 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಸೂರಣಗಿ ನಿವಾಸಿ 75 ವರ್ಷದ ವ್ಯಕ್ತಿ ಮೇ 07 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನಿವಾಸಿ 70 ವರ್ಷದ ಮಹಿಳೆ ಮೇ 10 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 15 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 310 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15338 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2712 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 188 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ದಂಡ ಕೊಟ್ಟು ಕೈ ಮುಗಿದ ಎಎಸ್‌ಐ! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಪೊಲೀಸಪ್ಪನ ಮತ್ತೊಂದು ಮುಖ ಬಯಲು!

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ‌ ಎಎಸ್ಐ ಸಾಹೇಬರು ಕೊನೆಗೂ ಎರಡು ಲಕ್ಷ ರೂ. ದಂಡ ಕಟ್ಟಿದ್ದಾರೆ. ಕಳೆದ ಭಾನುವಾರ ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಎಎಸ್ಐ ಸಾಹೇಬರು ಬಾಲಕಿಯ ಪೋಷಕರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದರು. ತಾಂಡಾದ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯತಿ ನಡೆದಿತ್ತು. ಎರಡು ಲಕ್ಷ ದಂಡ ಕಟ್ಟಲು ಶುಕ್ರವಾರ ಡೆಡ್ ಲೈನ್ ಇತ್ತು.

ಇದನ್ನೂ ಓದಿ  ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

ಆ ತಾಂಡಾದಲ್ಲಿ ಇವತ್ತಿಗೂ ‌ಒಂದು ವ್ಯವಸ್ಥೆಯಿದೆ. ಇದೆ. ಯಾರೇ ಜಗಳ ಮಾಡಲಿ, ಹೊಡೆದಾಟ ಮಾಡಿಕೊಳ್ಳಲಿ, ಕುಟುಂಬ ಕಲಹ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದರೂ ಈ ವಿಷಯ ತಾಂಡಾದ ಹಿರಿಯರ ಕಿವಿಗೆ ಬೀಳದೆ ಠಾಣೆಯ ಮೆಟ್ಟಲು ಹತ್ತಲ್ಲ. ಹತ್ತಬಾರದು ಕೂಡ. ಒಂದು ವೇಳೆ ಹಿರಿಯರ ಮಾತು ಮೀರಿ ಠಾಣೆಗೆ ಬಂದವರಿಗೆ ಬಹಿಷ್ಕಾರ ಖಚಿತ. ಹೀಗಾಗಿ ಈ ಪೊಲೀಸಪ್ಪನ ಕಿತಾಪತಿ ಠಾಣೆಯ ಮೆಟ್ಟಲು ಏರಿಲ್ಲ.

ಸೋಮವಾರ ತಾಂಡಾದಲ್ಲಿ ಸಭೆ ಸೇರಿದ್ದ ಹಿರಿಯರು, ದಂಡ ಪಾವತಿಸುವಂತೆ ಎಎಸ್ಐ ಸಾಹೇಬರಿಗೆ ತಾಕೀತು ಮಾಡಿದ್ದರು. ಅದಕ್ಕೆ ಶುಕ್ರವಾರದ ಗಡುವನ್ನೂ ಮೀರಲಾಗಿತ್ತು. ಮೀರಿದರೆ ದ್ವಿಗುಣ (4,01,000 ರೂ.) ದಂಡ ಪಾವತಿಸಬೇಕಿತ್ತು. ಅಲ್ಲದೆ, ತಾಂಡಾಕ್ಕೆ ಕಾಲಿಡದಂತೆ ಬಹಿಷ್ಕಾರದ ಎಚ್ಚರಿಕೆಯೂ ಕೊಡಲಾಗಿತ್ತು.

ಹಿರಿಯರ ಸಭೆಯಲ್ಲಿ ‌ಕಣ್ಣೀರು ಕೋಡಿ ಹರಿಸಿದ್ದ ಸಾಹೇಬರು, ಶಹರ ಠಾಣೆಯ ಸಿಬ್ಬಂದಿ ಮುಂದೆ, ನಾ ಏನೂ ಮಾಡೇ ಇಲ್ಲ..ಇನ್ನು ದಂಡ ಯಾಕ ಕಟ್ಲೀ ಅಂತ ಬಿಲ್ಡ್ ಅಪ್ ಕೊಟ್ಟಿದ್ದರು.
ಶುಕ್ರವಾರ ಸಾಹೇಬರು ಸೀದಾ ಸಮೀಪದ ಗೋವಾವನ್ನೇ ನೆನಪಿಸುವ, ಈಗ ಮುಚ್ಚಿರುವ ಹೋಟೆಲ್‌ಗೆ ಪತ್ನಿ ಸಮೇತ ಹೋಗಿ ಹಿರಿಯರ ಕೈಯಲ್ಲಿ 2 ಲಕ್ಷ ರೂ. ಕೊಟ್ಟು, ಎಸ್ಪಿ ಸಾಹೇಬರ ಗಮನಕ್ಕೆ ಈ ವಿಷಯ ಹೋಗಬಾರದು ಅಂತ ಮನವಿ ಮಾಡಿ, ಕೈ ಮುಗಿದು ಕಾಲ್ಕಿತ್ತಿದ್ದಾರೆ.

ಇದೇನೂ ಹೊಸದಲ್ಲ ಇವರಿಗೆ

ಈ ಪ್ರಕರಣ ‌ಮಾತ್ರ ಬಯಲಿಗೆ ಬಂದಿದೆ. ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳು ಈ ಸಾಹೇಬರ ಲಿಸ್ಟ್ ನಲ್ಲಿವೆ. ಇವರಿಗೆ ಪ್ರತಿ ವಾರವೂ ಒಂದು ವೈರಟಿ ಬೇಕೇ ಬೇಕು. ಯಾವ ಡ್ಯೂಟಿ ಇದ್ದರೂ ಈ ಡ್ಯೂಟಿಯನ್ನು ಸಾಹೇಬರು ತಪ್ಪಿಸುವುದಿಲ್ಲವಂತೆ!
ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವುದು ಇವರ ಮೇಲಿನ ಮತ್ತೊಂದು ಆರೋಪ. ಜನತಾ ಕರ್ಫ್ಯೂ ಇದ್ದಾಗಲೂ ಇವರು ಎಣ್ಣೆ ತಪ್ಪಿಸಿಲ್ಲ ಎಂದು ಕೆಲವು ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ. ಎಎಸ್ಐ ಸಾಹೇಬರಿಗೆ ಠಾಣೆಯ ಮೇಲಧಿಕಾರಿಗಳಾದ ಪಿಎಸ್ಐ, ಸಿಪಿಐ ಮುಂತಾದವರೆಲ್ಲ ಲೆಕ್ಕಕ್ಕೇ ಇಲ್ಲ. ಈ‌ ಕಚ್ಚೆ ಹರಕು ಎಎಸ್ಐ ಬಗ್ಗೆ ಯಾರ ಮುಂದೆ ಹೇಳಬೇಕು ಅನ್ನೋ ಗೊಂದಲ ಹಿರಿಯ ಅಧಿಕಾರಿಗಳಲ್ಲಿದೆ.

ಈ ಪೊಲೀಸಪ್ಪನಿಗೆ ಸಾರ್ವಜನಿಕರೇ ಪೊರಕೆ ಹಿಡಿಯುವ ಮುನ್ನ ಸೌಮ್ಯ ಸ್ವಭಾವದ ಎಸ್ಪಿ ಸಾಹೇಬರು ಗಮನ ಹರಿಸುವುದು ಒಳ್ಳೆಯದು. ಇಂತಹ ಪೊಲೀಸರಿಂದ ಇಲಾಖೆಯ ಮಾನ ಹರಾಜು ಆಗುವ ಮೊದಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಎಸ್ಪಿ ಸಾಹೇಬರೇ ತಾಂಡಾದ ಈ ಹೋರಿಗೆ ಮೂಗುದಾರ ಯಾವಾಗ? ಎಂದು ಜನರು ಕೇಳುತ್ತಿದ್ದಾರೆ.

ಕಳಪೆ ವೆಂಟಿಲೇಟರ್ ವಿತರಿಸಿ, ಜನರ ಪ್ರಾಣ ತೆಗೆಯಲಾಗಿದೆ; ಸಿಬಿಐ ತನಿಖೆಗೆ ಎಚ್ಕೆ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಮರ್ಪಕವಲ್ಲದ ವೆಂಟಿಲೇಟರ್ ಗಳನ್ನು ಸರಬರಾಜು ಮಾಡಲಾಗಿದ್ದು, ಕಳೆದ ಒಂದು ವಾರವಾದರೂ ಸೇವೆಗೆ ಸಿಗುತ್ತಿಲ್ಲ. ಅಲ್ಲದೇ, ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಸರಿಯಾದ ಕನೆಕ್ಟರ್ ಇಲ್ಲ, ಆಕ್ಸಿಜನ್ ಸೆನ್ಸಾರ್ ಇಲ್ಲ. ಹೀಗಾಗಿ ಡಬ್ಬಾ ವೆಂಟಿಲೇಟರ್ ಗಳು ಹಾಗೆಯೇ ಬಿದ್ದಿವೆ. ಇಂತಹ ವೆಂಟಿಲೇಟರ್ ಗಳನ್ನು ಇಟ್ಟುಕೊಂಡ ಸಂದರ್ಭದಲ್ಲಿ ಸೋಂಕಿತರು ಹೆಚ್ಚಾಗಿ ದಾಖಲಾದರೆ ಪರಿಸ್ಥಿತಿ ತೀರಾ ಹದಗೆಡುತ್ತದ ಎಂದು ಕಿಡಿಕಾರಿದ್ದಾರೆ.

ಕಳಪೆ ಗುಣಮಟ್ಟದ ವೆಂಟಿಲೇಟರ್ ಖಾಲಿ ಡಬ್ಬಿಗಳಾಗಿವೆ. ಇವುಗಳಿಂದಲೇ ರಾಜ್ಯದಲ್ಲಿ ನೂರಾರು ಜನ ಸಾಯುತ್ತಿದ್ದಾರೆ. ಪಿಎಂ ಕೇರ್ ಮುಖಾಂತರ ಡಬ್ಬಾ ವೆಂಟಿಲೇಟರ್ ಖರೀದಿ‌ ಮಾಡಲಾಗಿದೆ. ಇಂತಹ ಕಳಪೆ ವೆಂಟಿಲೇಟರ್ ನೀಡಿ ಜನರ ಜೀವ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ರೀತಿಯಾಗಿ ಅಮಾನವೀಯ ಭ್ರಷ್ಟಾಚಾರ ನಡೆದಿದೆ. ಇಂತಹ ಭ್ರಷ್ಟಾಚಾರದ ಮೂಲಕ ಜನರ ಜೀವ ಬಲಿ ಪಡೆಯಲಾಗುತ್ತಿದೆ. ಇದು ಸರ್ಕಾರದ ಕೊಲೆ. ಜನರ ಪ್ರತಿಯೊಂದು ಸಾವಿಗೂ ಸರ್ಕಾರವೇ ನೇರ ಹೊಣೆ. ಕೂಡಲೇ ಕಳಪೆ ವೆಂಟಿಲೇಟರ್ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ದೇಶ ವ್ಯಾಪಿ ವೆಂಟಿಲೇಟರ್ ನಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ಉಚ್ಛ ನ್ಯಾಯಾಲಯ‌ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಎಂದು ಎಚ್ ಕೆ ಪಾಟೀಲ್ ಒತ್ತಾಯ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರು, ಪ್ರಭು ಬುರಬುರೆ, ಅಶೋಕ್ ಮಂದಾಲಿ, ಸಿದ್ದಲಿಂಗೇಶ್ವರ ಪಾಟೀಲ್, ಬಸವರಾಜ್ ಕಡೆಮನಿ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಬಬರ್ಚಿ ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.

ಭಾನುವಾರವೂ ಬೆಂಬಿಡದ ಭೂತ; ಜಿಲ್ಲೆಯಲ್ಲಿ 448 ಜನರಿಗೆ ಸೋಂಕು, ಮತ್ತೆ ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಅದ್ಯಾಕೋ ಸೋಂಕು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇವತ್ತು ಭಾನುವಾರವೂ ಸೋಂಕಿನ ಪ್ರಕರಣಗಳು ನಾಲ್ಕು ‌ನೂರರ ಗಡಿ ದಾಟಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 448 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 17807ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -181, ಮುಂಡರಗಿ-61, ನರಗುಂದ-20, ರೋಣ-72, ಶಿರಹಟ್ಟಿ-98 ಹೊರಜಿಲ್ಲೆಯ-16 ಸೇರಿದಂತೆ 448 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 183 ಕ್ಕೇರಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ನಿವಾಸಿ 45 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಕಕ್ಕೂರತಾಂಡಾ‌ ನಿವಾಸಿ 65 ವರ್ಷದ ವ್ಯಕ್ತಿ ಮೇ 11 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 13 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ನಿವಾಸಿ 36 ವರ್ಷದ ಯುವಕ ಮೇ 07 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ 63 ವರ್ಷದ ವ್ಯಕ್ತಿ ಮೇ 10 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 309 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15078 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2546 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 190 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರೈತರಿಂದ ಟೊಮೆಟೋ ಖರೀದಿಸಿ ಅಗತ್ಯವಿದ್ದವರಿಗೆ ಮಾರಿದ ನಟ ಉಪೇಂದ್ರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಬಡವರಿಗೆ ಹಾಗೂ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುತ್ತಿದ್ದ ನಟ ಉಪೇಂದ್ರ ಅವರು ಈಗ ರೈತರಿಗೆ ಬೆಳಕಾಗಲು ನಿಂತಿದ್ದಾರೆ.
ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಉಪೇಂದ್ರ ಅವರು ಈಗಾಗಲೇ 3 ಸಾವಿರ ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಈಗ ರೈತರಿಗೆ ಆಸರೆಯಾಗಲು ಮುಂದಾಗಿದ್ದಾರೆ.

ಕೊರೊನಾ ಲಾಕ್‍ ಡೌನ್ ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‍ ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ. ಹೀಗಾಗಿ ರೈತರಿಂದ ನೇರವಾಗಿ ಟೊಮೆಟೋ ಖರೀದಿಸಿದ್ದಾರೆ. ಸದ್ಯ ಅಗತ್ಯ ಇರುವವರಿಗೆ ಹಂಚಿಕೆ ಮಾಡಿದ್ದಾರೆ.

ಟೊಮೆಟೋ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ, ರೈತರು ರಸ್ತೆಯ ಮಧ್ಯೆಯೇ ಎಸೆದು ಹೋಗುತ್ತಿದ್ದರು. ಒಂದೆಡೆ ಕೊರೊನಾ, ಇನ್ನೊಂದೆಡೆ ಬೆಲೆ ಕುಸಿತ ರೈತರನ್ನು ಬೀದಿಗೆ ತಂದು ನಿಲ್ಲಿಸಿತ್ತು. ಇದನ್ನು ಗಮನಿಸಿದ ನಟ ಉಪೇಂದ್ರ ಅವರು ರೈತರಿಂದ ನೇರವಾಗಿ ಖರೀದಿಸುವುದಾಗಿ ತಿಳಿಸಿದ್ದರು. ಸದ್ಯ ಆ ಕಾಯಕ ಮಾಡಿದ್ದಾರೆ.

ತೌಖ್ತೆ ಚಂಡಮಾರುತ – 9 ಜನ ಮೀನುಗಾರರು ನಾಪತ್ತೆ

ವಿಜಯಸಾಕ್ಷಿ ಸುದ್ದಿ, ನಾಗಪಟ್ಟಿಣಂ

ಕರಾವಳಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಚೌಖ್ತೆ ಚಂಡಮಾರುತದ ಹಾವಳಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ನಾಗಪಟ್ಟಿಣಂ ಜಿಲ್ಲೆಯ 7 ಜನ ಸೇರಿದಂತೆ 9 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ.

ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮರಳಿ ಬರುವ ಸಮಯಕ್ಕೆ ಚಂಡಮಾರುತದ ಗಾಳಿಯ ರಭಸಕ್ಕೆ ಸಿಲುಕಿ ದೋಣಿ ಮಗುಚಿಬಿದ್ದು ಸಮುದ್ರ ಪಾಲಾಗಿದ್ದಾರೆ ಎನ್ನಲಾಗಿದೆ.
ತೌಖ್ತೆ ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಕೂಡಲೇ ಮೀನುಗಾರರು ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ದೋಣಿ ಮಗುಚಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನಾಪತ್ತೆಯಾದವರ ರಕ್ಷಣೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಮಂತಪೆಟ್ಟೈಯ ಮೀನುಗಾರರ ಪ್ರತಿನಿಧಿ ಇ ವಿಜಯನ್ ತಿಳಿಸಿದ್ದಾರೆ. ದೋಣಿ ಕೊಚ್ಚಿನ್ ಮೀನುಗಾರಿಕೆ ಬಂದರಿನಿಂದ ಕಳೆದ ಏ. 29ರಂದು ಹೊರಟಿತ್ತು. ತಂಡದಲ್ಲಿ, ಐ ಮಣಿಕಂದನ್ (25), ಅವರ ಸಹೋದರ ಮಣಿವೆಲ್ (23), ಮತ್ತು ಅವರ ತಂದೆ ಎಡುಂಬನ್ ಇದ್ದು (55) ಎಲ್ಲರೂ ಸಮಂತಂಪೆಟ್ಟೈ ಮೂಲದವರಾಗಿದ್ದಾರೆ. ಅಲ್ಲದೇ, ನಾಗೋರ್‌ನ ಬಿ ದಿನೇಶ್ (33), ಮೂವಲೂರಿನ ಸಿ ಎಲಾಂಚೆಜಿಯಾನ್ (26), ಅಕ್ಕರೈಪೆಟ್ಟೆಯ ಕೆ ಪ್ರವೀಣ್ (35), ವನಗಿರಿ ಮೂಲದ ಮೂರ್ತಿ (30) ಇದ್ದರು. ಕಡಲೂರು ಜಿಲ್ಲೆಯ ಕಿಲ್ಲೈನ ಸಿ ಮುರುಗನ್ (40) ಸೇರಿದಂತೆ ಇನ್ನಿಬ್ಬರು ಮೀನುಗಾರರು ಇದ್ದರು ಎಂದು ತಿಳಿದು ಬಂದಿದೆ.

ಸೋಂಕು ಇದ್ದ ಅಣ್ಣ ಮನೆಗೆ; ಕೊಲೆ ಮಾಡಿದ ತಮ್ಮ ಜೈಲಿಗೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಮನೆಗೆ ಬಂದಿದ್ದ ಸೋಂಕಿತ ಅಣ್ಣನನ್ನೇ ಸಹೋದರ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ. ಮಹಾವೀರ (45) ಕೊಲೆಯಾದ ವ್ಯಕ್ತಿ. ಮೃತನ ಸಹೋದರನೇ ಆಗಿರುವ ಪಾರ್ಶ್ವನಾಥ್ ಕೊಲೆ ಮಾಡಿರುವ ವ್ಯಕ್ತಿ.

ಕೊಲೆಯಾಗಿರುವ ಮಹಾವೀರ ಸೋಂಕಿನಿಂದ ಗುಣಮುಖನಾಗದಿದ್ದರೂ ಮನೆಗೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ಹೀಗೆ ಸೋಂಕಿನಿಂದ ಗುಣಮುಖನಾಗದಿದ್ದರೂ ಬಂದಿರುವುದಕ್ಕೆ ತಮ್ಮ ಪ್ರಶ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಕೋಪಗೊಂಡ ತಮ್ಮ, ಅಣ್ಣನ ಕೊಲೆ ಮಾಡಿದ್ದಾನೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣವಾಗಿರುವ ತಮ್ಮನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಒಂದೇ ಆಸ್ಪತ್ರೆಯ ಇಷ್ಟೊಂದು ಜನ ಸಿಬ್ಬಂದಿಯಲ್ಲಿ ಸೋಂಕು? ಹಾಗಾದರೆ ಚಿಕಿತ್ಸೆ ನೀಡುವವರು ಯಾರು?

ವಿಜಯಸಾಕ್ಷಿ ಸುದ್ದಿ, ಧಾರವಾಡ

ಸದ್ಯ ಕೊರೊನಾ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ವೈದ್ಯರು, ಸಿಬ್ಬಂದಿಯಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಅದರ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳ ಕಂಡು ಬರುತ್ತಿದ್ದು, ಹೀಗೆ ಮುಂದುವರೆದರೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಎಲ್ಲರೂ ಚಿಂತೆಗೆ ಈಡಾಗಿದ್ದಾರೆ.

ನಗರದಲ್ಲಿನ ಜಿಲ್ಲಾ ಆಸ್ಪತ್ರೆಯ 6 ಜನ ವೈದ್ಯರು ಸೇರಿದಂತೆ ಬರೋಬ್ಬರಿ 34 ಜನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 6 ಜನ ವೈದ್ಯರು, 15 ಜನ ಸ್ಟಾಫ್ ನರ್ಸ್, 3 ಜನ ಡಾಟಾ ಎಂಟ್ರಿ ಆಪರೇಟರ್, 4 ಜನ ಲ್ಯಾಬ್ ತಂತ್ರಜ್ಞರು, ತಲಾ ಇಬ್ಬರು ಫಿಸಿಯೋಥೆರಪಿಸ್ಟ್, ಕೌನ್ಸಿಲರ್ ಹಾಗೂ ಡಿ ಗ್ರೂಪ್ ನೌಕರರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಪೈಕಿ ಹಲವರು ಹೊಂ ಐಸೋಲೇಷನ್ ನಲ್ಲಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆ ತಾಂಡವಾಡುತ್ತಿದೆ. ಇದ್ದ ನರ್ಸ್‌ಗಳನ್ನ ಬಳಸಿಕೊಂಡು ಜಿಲ್ಲಾ ಆಸ್ಪತ್ರೆ ಕೆಲಸ ಮುಂದುವರೆಸಿದೆ. ಇದು ಹೀಗೆ ಮುಂದುವರೆದರೆ, ವೈದ್ಯರು ಹಾಗೂ ನರ್ಸ್ ಗಳ ಕೊರತೆ ಇನ್ನೂ ಹೆಚ್ಚಾಗಿ ರೋಗಿಗಳಿಗೆ ತೊಂದರೆಯಾಗಬಹುದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಮತ್ತೆ ಮುಂದುವರೆದ ಲಾಕ್ ಡೌನ್

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಲಾಕ್ ಡೌನ್ ನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹತೋಟಿಗೆ ಬರುತ್ತಿದ್ದು, ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗಿದೆ. ಹೀಗಾಗಿ ಮೇ. 24ರ ವರೆಗೆ ಜಾರಿಯಲ್ಲಿರಲಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ನಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉತ್ತಮ ಬೆಳವಣಿಗೆಗಳು ಕಂಡು ಬಂದಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಇಷ್ಟು ದಿನಗಳಲ್ಲಿ ನಾವು ಗಳಿಸಿದ ಲಾಭ ಕಳೆದುಕೊಳ್ಳಲು ಮನಸ್ಸು ಬರುತ್ತಿಲ್ಲ. ಇದನ್ನು ನಾವು ಬಯಸುವುದೂ ಇಲ್ಲ. ಹೀಗಾಗಿ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಿಸಲಾಗುತ್ತದೆ. ಮುಂಬರುವ ಸೋಮವಾರದ ಬೆಳಿಗ್ಗೆ 5ರ ವರೆಗೂ ಲಾಕ್ ಡೌನ್ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹತೋಟಿಗೆ ಬರುತ್ತಿದ್ದು, ಶುಕ್ರವಾರ 8,506 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬರೋಬ್ಬರಿ ಒಂದು ತಿಂಗಳ ನಂತರ ದೆಹಲಿಯಲ್ಲಿ 10 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ದಾಖಲಾಗಿವೆ. ಇದು ಲಾಕ್ ಡೌನ್ ನಿಂದ ಸಿಕ್ಕ ಲಾಭ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!