Home Blog Page 3028

ಬಿಟಿ ಹತ್ತಿಯಲ್ಲಿ ಗಾಂಜಾ ಬೆಳೆ; ಆರೋಪಿ ಅಂದರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಿಟಿ ಹತ್ತಿ ಬೆಳೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಯೊಬ್ಬನನ್ನು ಮುಳಗುಂದ ಪೊಲೀಸರು ಬಂಧಿಸಿದ್ದಾರೆ.

ಚನ್ನಪ್ಪ ನಾಗಪ್ಪ ಆರೇರ್ ಎಂಬಾತನೇ ಬಂಧಿತ ಆರೋಪಿ. ಮುಳಗುಂದ ಸಮೀಪದ ಯಲಿಶಿರುಂದ ರಸ್ತೆಯಲ್ಲಿ ಇರುವ ತನ್ನ ಜಮೀನಿನಲ್ಲಿ ಕಳೆದ ಹಲವು ದಿನಗಳಿಂದ ಬಿಟಿ ಹತ್ತಿ ಬೆಳೆಯ ಮಧ್ಯ ಈ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ‌ಪಡೆದ ಮುಳಗುಂದ ಪೊಲೀಸರು ದಾಳಿ ನಡೆಸಿ‌ 17 ಸಾವಿರ ರೂ ಮೌಲ್ಯದ ಗಾಂಜಾಗಿಡಗಳನ್ನು ಜಪ್ತಿ ಮಾಡಿದ್ದಾರೆ.

ಪಿಎಸ್ಐ ಸಚಿನ್ ಅಲಮೇಲಕರ್, ಎಎಸ್ ಐ ಎ ಕೆ ಮಾಳವಾಡ, ಸಿಬ್ಬಂದಿಗಳಾದ ಎಚ್ ಐ ಕಲ್ಲಣ್ಣವರ್, ಪ್ರಭಯ್ಯ ಕೊಡಬಾಳಮಠ, ಬಿ ಸಿ ಕೋಳಿವಾಡ, ಎನ್ ಎನ್ ದಳವಾಯಿ, ಡಿ ಐ ತಹಸೀಲ್ದಾರ ಈ ಕಾರ್ಯಾಚರಣೆಯಲ್ಲಿ ಇದ್ದರು.

ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸಿ; ಜಿಲ್ಲಾ ಮಂತ್ರಿ ನೇತೃತ್ವದಲ್ಲಿ ಕೊಪ್ಪಳ ಶಾಸಕ, ಸಂಸದರಿಂದ ಸಿಎಂಗೆ ಪ್ರಸ್ತಾವನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ವಿಶ್ವ‌ವಿದ್ಯಾಲಯ ಸ್ಥಾಪಿಸಬೇಕು ಎಂದು ಕೊಪ್ಪಳ‌ ಜಿ‌ಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಶಾಸಕ, ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದರು.

ಗಂಗಾವತಿ ತಾಲೂಕು ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ. ಅಲ್ಲದೇ ಜಿಲ್ಲೆಯ ಕೃಷಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ.

ಜಿಲ್ಲೆಯಲ್ಲಿ ಎರಡು ಕೃಷಿ ಸಂಶೋಧನಾ ಕೇಂದ್ರಗಳು, ಒಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಒಂದು ಕೃಷಿ ವಿಜ್ಞಾನ ಕೇಂದ್ರವಿದ್ದು, ಒಟ್ಟು 19 ವಿಜ್ಞಾನಿಗಳು ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕೃಷಿ‌ ವಿವಿ ಸ್ಥಾಪನೆಗೆ ಬೇಕಾದ ಎಲ್ಲಾ ಅನುಕೂಲತೆ ಇದೆ. ಕೃಷಿಗೆ ಪೂರಕವಾದ ವಾತಾವರಣವನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ‌ ವಿವಿ ಅಗತ್ಯವಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಪದವಿ ಹೊಂದಲು 140 ಕಿ.ಮೀ. ದೂರದ ರಾಯಚೂರು ಇಲ್ಲವೇ 220 ಕಿ.ಮೀ ದೂರದ ಧಾರವಾಡಕ್ಕೆ ಹೋಗಬೇಕಿದೆ. ಇದರಿಂದ ಕೃಷಿ ಪದವಿ ತಂತ್ರಜ್ಞಾನ ಸಂಬಂಧ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಕೊಪ್ಪಳದಲ್ಲಿಯೇ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿವಿ ಸ್ಥಾಪಿಸಲು ಬೇಕಾದ ಭೂಪ್ರದೇಶ ಹಾಗೂ ನೀರಾವರಿ ಸೌಲಭ್ಯವಿರುತ್ತದೆ. ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅಗತ್ಯವಾದ ಪ್ರಯೋಗಾಲಯಗಳು, ವಸತಿ ನಿಲಯ, ವಡ್ಡರಹಟ್ಟಿ ಕ್ಯಾಂಪ್ ಡಿಎಟಿಸಿಯಲ್ಲಿ ಲಭ್ಯವಿದ್ದು, ಇವುಗಳನ್ನು ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅವಶ್ಯಕತೆಯಿದ್ದಲ್ಲಿ ಬಳಸಿಕೊಳ್ಳಬಹುದಾಗಿದೆ.

ಅಲ್ಲದೇ ಗಂಗಾವತಿ ನಗರವು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರೈಲು ಹಾಗೂ ಸಾರಿಗೆ ಸಂಪರ್ಕವನ್ನೂ ಸಹ ಹೊಂದಿದೆ. ಇಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿ ಹಾಗೂ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಬಿ.ಸಿ.ಪಾಟೀಲರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಸ್ತಾವನೆ ಸಲ್ಲಿಕೆಗೂ ಮುನ್ನ ವಿಕಾಸಸೌಧದ ಕೃಷಿ ಮಂತ್ರಿಗಳ ಕಚೇರಿಯಲ್ಲಿ ಕೃಷಿ ವಿವಿ ಸ್ಥಾಪನೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೆಸುಗೂರ, ಪರಣ್ಣ ಮನವಳಿ ಇದ್ದರು.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ ಆರೋಪಿತರಿಗೆ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ರೈಲು ನಿಲ್ದಾಣದ ಹತ್ತಿರದ ರಸ್ತೆ ಮೇಲೆ ನಿಂತುಕೊಂಡಿದ್ದ ಗಂಗಾವತಿ ನಿವಾಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ(ಪೋಕ್ಸೋ) ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2014 ರ ನವೆಂಬರ್ 18 ರಂದು ಸಂಜೆ 6 ಗಂಟೆಗೆ ಕೊಪ್ಪಳ ರೈಲು ನಿಲ್ದಾಣದ ಮುಂದೆ ರಸ್ತೆ ಮೇಲೆ ನಿಂತಿದ್ದ ಅಪ್ರಾಪ್ತ ಬಾಲಕಿಯನ್ನು ಆಂಧ್ರಪ್ರದೇಶದ ಪರವೀನ್ ಗಂ.ಜಯರಾಮ ಎಂಬ ಮಹಿಳೆ ಅಪಹರಿಸಿ, ಆಂಧ್ರಪ್ರದೇಶದ ಪೆನಗೊಂಡ ನಗರದಲ್ಲಿನ ತನ್ನ ಮನೆಗೆ ಕರೆದೊಯ್ದು, ಬಾಲಕಿಯನ್ನು ಕೂಡಿ ಹಾಕಿ ರಾಮು ತಂ. ಬಾಬು ಮತ್ತು ಇತರರಿಂದ ಹಣ ಪಡೆದು ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಆರೋಪಿತರ ಮೇಲಿನ ಆರೋಪಗಳು ಸಾಬೀತಾಗಿದ್ದು, ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದ ಆರೋಪಕ್ಕಾಗಿ ಪರವೀನ್ ಗಂ.ಜಯರಾಮ ಎಂಬ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 45,000 ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ರಾಮು ತಂ. ಬಾಬು ಎಂಬ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ಗಳ ದಂಡವನ್ನು ವಿಧಿಸಿ ಶಂಕರ ಎಂ.ಜಾಲವಾದಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು(ಪೋಕ್ಸೋ), ಕೊಪ್ಪಳ ಇವರು ತೀರ್ಪು ಹೊರಡಿಸಿರುತ್ತಾರೆ.

ಸರ್ಕಾರದ ಪರವಾಗಿ ಎಂ.ಎ ಪಾಟೀಲ, ಕೆ. ನಾಗರಾಜ ಆಚಾರ್, ಸವಿತಾ ಎಂ.ಶಿಗ್ಲಿ ಹಾಗೂ ಅಂಬಣ್ಣ ಸರ್ಕಾರಿ ಅಭಿಯೋಜಕರು ಕೊಪ್ಪಳ ಇವರು ಪ್ರಕರಣ ನಡೆಸಿದ್ದು, ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣ ಮನೋಹರ ಇವರು ವಾದ ಮಂಡಿಸಿದ್ದರು ಎಂದು ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.

ಜಸ್ಟಿಸ್ ಫಾರ್ ಮನಿಷಾ ವಾಲ್ಮೀಕಿ ಅಭಿಯಾನ: ಕೊಪ್ಪಳದಲ್ಲಿ ಕಾಂಗ್ರೆಸ್‌ ಎಸ್ಸಿ ಘಟಕದ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಅತ್ಯಾಚಾರಕ್ಕೆ ಒಳಗಾಗಿ ದಾರುಣವಾಗಿ ಪ್ರಾಣ ತ್ಯಾಗ ಮಾಡಿದ ಮನಿಷಾ ವಾಲ್ಮೀಕಿ ಹತ್ಯೆಗೈದ ವಿಕೃತ ಕಾಮಿ ಕೋಮುವಾದಿ ಕಿಡಿಗೇಡಿಗಳನ್ನು ಗಲ್ಲಿಗೇರಿಸಲಿ ಅಥವಾ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಕೊಪ್ಪಳದಲ್ಲಿಂದು ಕಾಂಗ್ರೆಸ್‌ನ ಎಸ್ಸಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಅಶೋಕ ಸರ್ಕಲ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಗೈದವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಾವಿಗೀಡಾದ ಮನಿಷಾ ವಾಲ್ಮೀಕಿ ಕುಟುಂಬಕ್ಕೆ ಪರಿಹಾರ ಕೊಡಬೇಕು. ಮತ್ತು ಕೇಂದ್ರ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿಗಳ ಮೊತ್ತದ ಪರಿಹಾರವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಭಾರದ ಹಾಗೇ ಸಂವಿಧಾನಾತ್ಮಕವಾಗಿ ಇಚ್ಛಾಶಕ್ತಿಯನ್ನು ಗೌರವಾನ್ವಿತ ರಾಷ್ಟ್ರಪತಿಗಳು ಎತ್ತಿ ಹಿಡಿಯಬೇಕೆಂದು JUSTICE FOR MANISHA VALMIKI “ ಎಂಬ ಅಭಿಯಾನದ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ್ ಹಿಟ್ನಾಳ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಕಾಟನ್ ಪಾಷಾ , ಸಲಿಂ ಅಳವಂಡಿ, ಶಿವಕುಮಾರ ಶೆಟ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಳೆಗೆ ಕುಸಿದ ಮನೆ, ವೃದ್ಧೆ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ.

ಶಂಕ್ರವ್ವ ನಿಂಗನಗೌಡ ಭೀಮನಗೌಡ್ರೆ(70) ಮೃತ ದುರ್ದೈವಿಯಾಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಗೆ ಹಳೆಯ ಮನೆ ಕುಸಿದಿದೆ.

ನಸುಕಿನ ವೇಳೆ ಮನೆ ಕುಸಿದ ಪರಿಣಾಮ ವೃದ್ಧೆ ಬಚಾವಾಗಲು ಸಾಧ್ಯವಾಗಿಲ್ಲ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿರಹಟ್ಟಿಯಲ್ಲಿ ಖರೀದಿ ನೊಂದಣಿಗೆ ಒಂದು ತಿಂಗಳು ಬೇಕಂತೆ…?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಕೊವಿಡ್-19ನಿಂದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸರಕಾರ ಖರೀದಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉತ್ತೇಜಿಸುತ್ತಿರುವುದರಿಂದ ಸರಕಾರಕ್ಕೂ ಕೂಡಾ ಆದಾಯ ಸಹಜವಾಗಿಯೇ ಬರಲಿದೆ. ಆದರೆ ಇದಕ್ಕೆ ತದ್ವಿರುದ್ದವೆಂಬಂತೆ ಶಿರಹಟ್ಟಿ ತಾಲೂಕಿನಲ್ಲಿ ಮಾತ್ರ ಉಪನೊಂದಣಿ ಅಧಿಕಾರಿ ಕಚೇರಿಯಲ್ಲಿ ಖರೀದಿ ನೊಂದಣಿ ಮಾಡಬೇಕಿದ್ದರೆ ಬರೋಬ್ಬರಿ ಒಂದು ತಿಂಗಳು ಬೇಕಂತೆ… ಹೀಗೆ ಅರ್ಜಿದಾರರು ನೀಡಿದಂತಹ ಅರ್ಜಿಯಲ್ಲಿ ದಿನಾಂಕ ನಮೂದಿಸಿ ಕೊಡುತ್ತಿದ್ದಾರೆ.
ಪರದಾಡುತ್ತಿರುವ ಗ್ರಾಮೀಣ ಪ್ರದೇಶದ ಜನತೆ : ನೊಂದಣಿ ಪ್ರಕ್ರಿಯೆ ಒಂದು ತಿಂಗಳು ಗಟ್ಟಲೇ ವಿಳಂಬವಾಗುತ್ತಿರುವುದರಿಂದ ಸತತ ಬರಗಾಲ ಹಾಗೂ ಅತೀವೃಷ್ಟಿಯಿಂದ ಕಂಗೆಟ್ಟಿರುವಂತಹ ಬಡ ರೈತರು ಹಾಗೂ ಸಾರ್ವಜನಿಕರು ನಿತ್ಯವೂ ಕಚೇರಿಗೆ ಪರದಾಡುವುದು ತಪ್ಪುತ್ತಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುವುದರ ಜೊತೆಗೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವಂತಹ ಜನತೆಯು ಇಲ್ಲಿಯ ಆಡಳಿತ ವ್ಯವಸ್ಥೆಗೆ ನಿತ್ಯವೂ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ.

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಒಳ್ಳೇಯ ಬೆಳವಣಿಗೆಯಲ್ಲ, ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಬಾರದು. ನಿಯಮಾನುಸಾರ ಖರೀದಿ ನೊಂದಣಿಯಾಗಬೇಕು. ಇಲ್ಲದೇ ಹೋದಲ್ಲಿ ಇಲ್ಲಿಯ ಅವ್ಯವಸ್ಥೆಯ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
ತಿಪ್ಪಣ್ಣ ಕೊಂಚಿಗೇರಿ, ತಾಪಂ ಸದಸ್ಯ.


ಮಧ್ಯವರ್ತಿಗಳ ದಾರಿ ಸುಗಮ : ನೊಂದಣಿ ಕಚೇರಿಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದನ್ನು ಇದನ್ನು ಸರಿಪಡಿಸಿಕೊಳ್ಳಬೇಕೆಂದು ಇತ್ತೀಚೆಗೆ ತಾಲೂಕ ಪಂಚಾಯತನಲ್ಲಿ ಜರುಗಿದಂತಹ ಸಭೆಯಲ್ಲಿ ಸದಸ್ಯರು ಉಪನೊಂದಣಾಧಿಕಾರಿಗೆ ಸೂಚನೆ ನೀಡಿದ್ದರೂ ಸಹ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿರುವುದಿಲ್ಲ. ಹೀಗಾಗಿ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಹಿಡಿದುಕೊಂಡು ಹೋಗಿ ಹಣ ನೀಡಿದರೆ ಖರೀದಿ ಸುಲಭವಾಗಿಯೇ ಆಗುತ್ತಿದೆ ಎನ್ನುವ ಆರೋಪಗಳು ಸಹ ಇಲ್ಲಿ ಕೇಳಿ ಬರುತ್ತಿವೆ.

ಆಸರೆ, ಮಾರ್ಟಗೇಜ್ ಜಾಸ್ತಿ ಇರುವುದರಿಂದ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಎಂ.ವಿ.ಪತ್ತಾರ, ಉಪನೊಂದಣಾಧಿಕಾರಿ.

ತಹಸೀಲ್ದಾರ/ತಾಪಂ ಇಓ ಗಮನ ಹರಿಸಿ :ಕಂದಾಯ ಇಲಾಖೆಯ ಕಚೇರಿಗಳ ಸಂಕೀರ್ಣದಲ್ಲಿಯೇ ಇರುವ ಉಪನೊಂದಣಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಇದ್ದು ಮಧ್ಯವರ್ತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಹಸೀಲ್ದಾರ ಇತ್ತ ಕಡೆ ಗಮನ ಹರಿಸಿ ಇಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವ ಅವಶ್ಯವಿದೆ. ಇಲಾಖೆಗಳ ಪ್ರಗತಿಪರಿಶೀಲನೆ ನಡೆಸುವ ತಾಲೂಕ ಪಂಚಾಯತ ಕಾರ‍್ಯನಿರ್ವಾಹಕ ಅಧಿಕಾರಿ ಕೇವಲ ಸಭೆಗಳಲ್ಲಿ ಮಾತ್ರ ನಿರ್ದೇಶನ ನೀಡದೇ ವಾಸ್ತವಾಂಶ ತಿಳಿಯಲು ಹಾಗೂ ಬಡ ಜನತೆಗೆ ಅನುಕೂಲ ಕಲ್ಪಿಸುವುದಕ್ಕಾಗಿ ಇಲ್ಲಿ ಭೇಟಿ ನೀಡಿ ಪರಿಶೀಲಿಸಿ ಯೋಗ್ಯ ಕ್ರಮ ವಹಿ ಅವಶ್ಯವಿದೆ.

ಕೃಷಿ ಸಚಿವ ಕೌರವನ ವಿರುದ್ಧ ಕಿಡಿ ಕಾರಿದ ನೌಕರರು!

0

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪೊಲೀಸ್ ಇಲಾಖೆಯಿಂದ ಸಿನಿಮಾ, ಸಿನಿಮಾದಿಂದ ರಾಜಕೀಯಕ್ಕೆ ಬಂದು, ರಾಜಕೀಯದಲ್ಲೂ ಜೆಡಿಎಸ್, ಕಾಂಗ್ರೆಸ್ ಇನ್ನಿಂಗ್ಸ್ ಮುಗಿಸಿ ಇದೀಗ ಬಿಜೆಪಿ ಸರಕಾರದಲ್ಲಿ ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ ಅಕ್ಷರಶಃ ಇಲಾಖೆಯ ನೌಕರರ ಪಾಲಿಗೆ “ಕೌರವ” ಎನಿಸಿದ್ದಾರೆ.
2020ರ ಜುಲೈ 1ರಂದು ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ವಿನೋದ್.ಆರ್.ಪಿ ಎಂಬುವವರು ನೇರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದ ಪ್ರತಿಗಳು ಇದೀಗ ವೈರಲ್ ಆಗಿದ್ದು, ಸಚಿವ ಬಿ.ಸಿ.ಪಾಟೀಲ್ ನಡೆ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ.
ಜೂನ್ 26, 2020ರ ಸರಕಾರದ ಆದೇಶದಲ್ಲಿ ಜುಲೈ10ರವರೆಗೆ ಇಲಾಖೆಯ ಗ್ರೂಪ್-ಬಿ, ಗ್ರೂಪ್-ಸಿ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿತ್ತು.

ಈ ವಿಷಯದಲ್ಲಿ ಅಧಿಕಾರಿಗಳ, ನೌಕರರ ಹಿತ ಕಾಪಾಡಬೇಕಾದ ಕೃಷಿ ಸಚಿವ ಬಿ.ಸಿ.ಪಾಟೀಲ್, ತಮ್ಮ ಇಲಾಖೆಯ ನೌಕರರು ವರ್ಗಾವಣೆ ಬಯಸಿದರೂ ಸರಿ, ಇದ್ದ ಸ್ಥಳದಲ್ಲೇ ಮುಂದುವರಿಯಲು ಇಚ್ಛಿಸಿದರೂ ಸರಿ ಲಕ್ಷಾಂತರ ರೂಪಾಯಿ ಕಡ್ಡಾಯವಾಗಿ ನೀಡಬೇಕು ಎಂದು ಮೌಖಿಕವಾಗಿ ಆದೇಶಿಸಿದ್ದಾರೆ ಎಂಬ ಗಂಭೀರ ಆರೋಪ ಸ್ವತಃ ಕೃಷಿ ಇಲಾಖೆಯ ನೌಕರರೇ ಮಾಡಿದ್ದಾರೆ.

ನಾನು ಯಾವತ್ತೂ ಗಾಳಿಯಲ್ಲಿ ಗುಂಡು ಹೊಡೆಯಲ್ಲ. ಸತ್ಯವನ್ನೇ ಹೇಳ್ತಿನಿ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಪದೇ ಪದೇ ಜಿಲ್ಲೆಗೆ ಬರುವುದು ವಸೂಲಿ ಮಾಡಿ ಸೂಟ್‌ಕೇಸ್ ತುಂಬಿಸಿಕೊಂಡು ಹೋಗೋಕೆ ಅಂತ ಸುಮಾರು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಈಗ ಆ ಸತ್ಯ ನೌಕರರಿಂದಲೇ ಹೊರ ಬಂದಿದಂತಾಗಿದೆ.
-ಶಿವರಾಜ ತಂಗಡಗಿ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೊಪ್ಪಳ.

ಕೃಷಿ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಸನ್ನಿವೇಶ ಸೃಷ್ಟಿಯಾಗಿರುವುದು ಅಸಹ್ಯಕರ ಮತ್ತು ದುರದೃಷ್ಟಕರ. ಇಲಾಖೆಯ ಗ್ರೂಪ್ ಬಿ ಮತ್ತು ಸಿ ನೌಕರರಿಗೆ ಇರುವ ವೇತನವಾದರೂ ಎಷ್ಟು? ಹೊರಗಿನಿಂದ ಅವರಿಗೆ ಏನಾದರೂ ಆದಾಯ ಸಿಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ನೋ ರೆಸ್ಪಾನ್ಸ್
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಸಂಪರ್ಕಿಸಲು ಹಲವು ಸಲ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಈ ಕುರಿತು ಮಾತನಾಡಿರುವ ಸಾಕ್ಷ್ಯಗಳು ನಮ್ಮ ಬಳಿ ಇದ್ದು, ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವವನ್ನು ಪರಿಶೀಲಿಸಲು ಕೋರಿರುವ ನೌಕರರು, ಆರೋಪ ಸಾಬೀತಾದರೆ ತಕ್ಷಣವೇ ಬಿ.ಸಿ.ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು, ಈ ಪ್ರಕರಣದಲ್ಲಿ ಭಾಗಿಯಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಮಗಾಗುತ್ತಿರುವ ಅನ್ಯಾಯವನ್ನು ಒಂದು ವೇಳೆ ತಮ್ಮ ಹಂತದಲ್ಲಿ ಸರಿಪಡಿಸದಿದ್ದರೆ ಪ್ರಧಾನ ಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಗಮನಕ್ಕೂ ವಿಷಯ ತರುವುದಾಗಿಯೂ, ಮತ್ತು ಇಲಾಖೆಯ ನೌಕರರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿಯೂ ಅಳಲು ತೋಡಿಕೊಂಡಿದ್ದಾರೆ.
                                                              ಏಜೆಂಟರ ಮೂಲಕ ಎತ್ತುವಳಿ?
ಸಚಿವರು ನೌಕರರಿಂದ ವಂತಿಗೆ ವಸೂಲಿ ಮಾಡಲು ಕೆಲ ಏಜೆಂಟರನ್ನು ಕಳಿಸುತ್ತಾರೆ. ಯಾವುದೇ ಕೆಲಸಕ್ಕೆ ಬಾರದ ಏಜೆಂಟರು ಅಧಿಕಾರಗಳೊಂದಿಗೆ ದರ್ಪದಿಂದ ವರ್ತಿಸುತ್ತಾರೆ. ತಾವೇ ಸಚಿವರು ಎಂಬಂತೆ ದೌರ್ಜನ್ಯ ಮೆರೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಸರಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಗೌರವಧನ ನೀಡಬೇಕು 

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ  
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 5 ಲಕ್ಷ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರ ಮಾಸಿಕ 5 ಸಾವಿರದಿಂದ 10 ಸಾವಿರ ರೂ.ವರೆಗೆ ಶಾಲೆ ಆರಂಭವಾಗುವವರೆಗೂ ಪ್ರತಿ ತಿಂಗಳೂ ಗೌರವಧನ ನೀಡಬೇಕು ಮತ್ತು ವಿದ್ಯಾಗಮ ಯೋಜನೆ ಅಡಿಯಲ್ಲಿ ಪಾಠ ಮಾಡಲು ಹೋಗಿ 100 ಕ್ಕೂ ಹೆಚ್ಚು ಮೃತಪಟ್ಟ ಶಿಕ್ಷಕರಿಗೆ ಕೊವಿಡ್-19 ವಾರಿಯರ‍್ಸ್‌ಗೆ  ನೀಡುವ ಪರಿಹಾರ ನೀಡಬೇಕು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯ ಕಾರ್ಯದರ್ಶಿ ಶಶಿಧರ ದಿಂಡೂರ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಶಾಲಾ ಪ್ರಾರಂಭಿಸಲು ಗೊಂದಲದ ಹೇಳಿಕೆ ನೀಡುವ ಮೂಲಕ ಶಿಕ್ಷಣ ಕ್ರಮವನ್ನು ಹಳಿ ತಪ್ಪಿಸುತ್ತಿರುವುದರಿಂದ ಪಾಲಕರು, ಮಕ್ಕಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿವೆ. ಶಾಲಾ ಪ್ರಾರಂಭದ ಬಗ್ಗೆ ಸರಕಾರ ಸ್ಪಷ್ಟ ನಿರ್ದೇಶನ ನೀಡಬೇಕು.
2020-21 ನೇ ಸಾಲಿನ ವಾರ್ಷಿಕ ಪಠ್ಯಕ್ರಮ  ಮತ್ತು ವೇಳಾ ಪಟ್ಟಿಯನ್ನು  ನಿಗಧಿ ಪಡೆಸಬೇಕು. ಶಾಲೆಗಳಲ್ಲಿ ಶುಲ್ಕ ಪಡೆಯುವ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು. ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರಬಾರದು. 2018-19 ಹಾಗೂ 2019-20 ಸಾಲಿನ ಆರ್‌ಟಿಇ ಬಾಕಿ ಶುಲ್ಕವನ್ನು ಮಂಜೂರು ಮಾಡಬೇಕು. ಆನ್‌ಲೈನ್ ಕ್ಲಾಸ್‌ಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲಾ ಪುನಾರಂಭಕ್ಕೂ ಮುನ್ನ ಪಾಲಕರ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಒಳಗೊಂಡ ಸಮಿತಿಯಲ್ಲಿ ಚರ್ಚಿಸಿ ರೂಪರೇಶ ನಿರ್ದೇರಿಸಬೇಕೆಂದು ಶಶಿಧರ ದಿಂಡೂರ ಸರಕಾರಕ್ಕೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಜಯದೇವ ಮೆಣಸಗಿ ಮಾತನಾಡಿ, ಕಳೆದ 6-7 ತಿಂಗಳಿಂದ ಪಾಲಕರು, ಮಕ್ಕಳು ಸರಕಾರದ ಗೊಂದಲದ ನೀತಿಗಳಿಂದ ಒತ್ತಡದಲ್ಲಿದ್ದಾರೆ. ಸಚಿವರು ತಮ್ಮದೇ ಆದ ಗೊತ್ತುವಳಿ, ನಿರ್ದೇಶನ ಮೂಲಕ ಮಕ್ಕಳಿಗೆ, ಪಾಲಕರಿಗೆ ಹಾಗೂ ಶಾಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಕ್ರಮ ಅಳವಡಿಸಬೇಕು. ಸರಕಾರ ತಾರತಮ್ಯ ಮಾಡದೇ ಎಲ್ಲ ಶಾಲೆಗಳಿಗೂ ಒಂದೇರೀತಿ ದಿಕ್ಸೂಚಿ ಸೂಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ.ಸೂನಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾನೂನು ಕುರಿತು ಅರಿವು ಮೂಡಿಸುವುದು ಅಗತ್ಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಗು ಭ್ರೂಣದಲ್ಲಿ ಇರುವಾಗ ಜಾರಿಯಾಗುವ ಕಾನೂನು, ಮರಣದವರೆಗೆ ಅನ್ವಯವಾಗಿರುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ಪಾಟೀಲ ಅವರು ನುಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ, ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರೋಟರಿ ಗದಗ ಸೆಂಟ್ರಲ್ ಇವರ ಸಹಯೋದಲ್ಲಿ ಜರುಗಿದ ಅರೆ ಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಕುರಿತು ಅರಿವು ಮೂಡಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗಾಗಿ ಜಾರಿಯಲ್ಲಿರುವ ಯೋಜನೆ ಹಾಗೂ ಕಾನೂನುಗಳ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅರೆ ಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು ವಿವಿಧ ಕಾನೂನುಗಳ ಕುರಿತು ಮಾಹಿತಿ ಪಡೆದು ಆರ್ಥಿಕವಾಗಿ ದುರ್ಬಲ ಹಾಗೂ ಶೋಷಿತರಿಗೆ ಇವುಗಳ ಅರಿವು ಮೂಡಿಸುವದರ ಜೊತೆಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಮುಂದಾಗುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಾರ್ವಜನಿಕರಲ್ಲಿ ಕಾನೂನಿನ ನೆರವು ಅರಿವು ಕುರಿತು ಜಾಗೃತಿ ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾನೂನುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅರೆ ಕಾಲಿಕ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು ಆಯ್ಕೆಯಾದ ಸ್ವಯಂ ಸೇವಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವಂತೆ ತಿಳಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಶಿಂಸಾ ಎಂ.ವಿ., ಜಿ.ಪಂ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ರೋಟರಿ ಗದಗ ಸೆಂಟ್ರಲ್ ಅದ್ಯಕ್ಷ ರಾಜು ಕಂಟಿಗೊಣ್ಣವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳಾದ ಜೆ.ಸಿ.ರಶ್ಮಿ, ಕು.ಸಾವಿತ್ರಿ ಕಬಾಡಿ ವಿವಿಧ ಕಾನೂನುಗಳ ಕುರಿತು ಅರೆ ಕಾಲಿಕ ಸ್ವಯಂ ಸೇವಕರಿಗೆ ಉಪನ್ಯಾಸ ನೀಡಿದರು. ಶ್ರೀಮತಿ ಉಷಾ ನಾಲ್ವಾಡ ಪ್ರಾರ್ಥಿಸಿದರು. ಕು. ಪ್ರಭಾವತಿ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.

ಹೊರಟ್ಟಿ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಎಚ್.ಕೆ. ಪಾಟೀಲ ಮತ್ತು ತಮ್ಮ ಮಧ್ಯೆ ಹೊಂದಾಣಿಕೆ ಇತ್ತು ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಪ್ರತಿಕ್ರಿಯೆ ನೀಡಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಶಾಸಕ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಕೆ. ಪಾಟೀಲ ಅವರನ್ನು ತೇಜೋವಧೆ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಎಚ್.ಕೆ. ಪಾಟೀಲ ಅವರೊಂದಿಗೆ ವಿಷಯಾಧಾರಿತ ಒಪ್ಪಂದ ಇತ್ತು. ಆದರೆ ಈ ಬಾರಿ ಆ ರೀತಿ ಒಪ್ಪಂದ ಇಲ್ಲ. ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ಯಾವುದೇ ನಿಜಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ಇಂಥ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಯಾವುತ್ತೂ ಸಹಿಸುವುದಿಲ್ಲ. ಎಚ್.ಕೆ. ಪಾಟೀಲ ಅವರ ತೇಜೋವಧೆಗೆ ನೀಡಿರುವ ಇಂಥ ಹೇಳಿಕೆಯನ್ನು ಹೊರಟ್ಟಿ ಅವರು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಚಿತ್ರವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ನಾನಾ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಚ್.ಕೆ.ಪಾಟೀಲ, ಪ್ರಬುದ್ಧ ರಾಜಕಾರಣಿ ಎಂಬ ಖ್ಯಾತಿ ಹೊಂದಿದ್ದಾರೆ. ಅಂತಹ ನಾಯಕರ ವಿರುದ್ಧ ಇಂತಹ ಸಣ್ಣತನದ ಹೇಳಿಕೆ ನೀಡಿವುದು ಶೋಭೆಯಲ್ಲ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡಿದ್ದೆ ಆದಲ್ಲಿ 2008ರ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ ಸೋಲುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಟಿ.ಈಶ್ವರ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಆಗ ಹೊರಟ್ಟಿ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದು ಎಲ್ಲರಿಗೂ ಗೊತ್ತಿರುವುದೇ. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಒಳ ಒಪ್ಪಂದಗಳಿವೆ. ಇದೆಲ್ಲವನ್ನೂ ಅರಿತಿರುವ ಜೆಡಿಎಸ್ ವರಿಷ್ಟರು ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡದೇ, ಅಧಿಕಾರದಿಂದ ದೂರವಿರಿಸಿದರು ಎಂದು ದೂರಿದರು.
ಸಜ್ಜನ ರಾಜಕಾರಣಿ ಎಚ್.ಕೆ.ಪಾಟೀಲ ವಿರುದ್ಧ ಆರೋಪ ಕುರಿತು ನಾಲ್ಕು ದಿನಗಳಲ್ಲಿ ಬಸವರಾಜ ಹೊರಟ್ಟಿ ಅವರು ಕ್ಷಮೆ ಕೋರಬೇಕು. ಇಲ್ಲವೇ ಹೊರಟ್ಟಿಯ ಅವರ ರಾಜಕೀಯ ಒಳಒಪ್ಪಂದಗಳನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ ಉಪಸ್ಥಿತರಿದ್ದರು.

error: Content is protected !!