Home Blog Page 3029

ಅಲ್ಲು ಸಿರೀಶ್‌ ಬರ್ತ್‌ಡೇ ಗೆ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್‌ ಲುಕ್‌ ರಿಲೀಸ್

ಫಸ್ಟ್‌ ಲುಕ್ ರಿಲೀಸ್‌ನೊಂದಿಗೆ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪೇಮ ಕಾದಂಟʼ

ಟಾಲಿವುಡ್‌ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪ್ರೇಮ ಕಾದಂಟʼ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಅಲ್ಲು ಸಿರೀಶ್ ಅಭಿನಯದ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್ ಲುಕ್‌ ಗಳನ್ನ ಒಂದೇ ದಿನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಟಾಲಿವುಡ್ನಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ. ಅಲ್ಲು ಸಿರೀಶ್‌ ಬರ್ತ್‌ ಡೇ ದಿನವೇ ಈ ಚಿತ್ರದ ಫಸ್ಟ್‌ ಲುಕ್ ರಿಲೀಸ್‌ ಮಾಡಿರೋದು ವಿಶೇಷ. ಇದೇ ಚಿತ್ರದ ಎರಡು ಪ್ರೀ-ಲುಕ್‌ ಗಳನ್ನ ರಿಲೀಸ್‌ ಮಾಡೋ ಮೂಲಕ ಹೊಸ ಟ್ರೆಂಡ್‌ ಸೆಟ್‌ ಮಾಡಿತ್ತು.

ಇದೀಗ ಒಂದೇ ದಿನ ಎರಡು ಫಸ್ಟ್ ಲುಕ್‌ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ʻಪ್ರೇಮ ಕಾದಂಟ’ ಚಿತ್ರದ ಫಸ್ಟ್‌ ಲುಕ್‌ ಗಳಲ್ಲಿ ಒಂದರಲ್ಲಿ ನವಯುಗದ ಪ್ರೇಮ ಜೋಡಿಯ ಚಿತ್ರವಿದೆ. ಮತ್ತೊಂದರಲ್ಲಿ ಪ್ರೇಮಿಗಳು ರೋಮ್ಯಾಂಟಿಕ್‌ ಆಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಾಣಿಸುತ್ತದೆ. ಫಸ್ಟ್‌ ಲುಕ್ಸ್‌ ಈಗಾಗಲೇ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿವೆ.

ಅಲ್ಲು ಅರವಿಂದ್ ಅರ್ಪಿಸುವ, ಜಿಎ 2 ಪಿಕ್ಚರ್ಸ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು ಸಿರೀಶ್‌, ಅನು ಎಮಾನ್ಯುಯಲ್‌ ಅಭಿನಯಿಸುತ್ತಿದ್ದು ರಾಕೇಶ್‌ ಶಶಿ ನಿರ್ದೇಶನ ಮಾಡುತ್ತಿದ್ದಾರೆ.

ಇದು ಕಣ್ಣೀರ ಕಥೆ!! ತಾಯಿಯ ಶವದ ಮುಂದೆ ತಾಳಿ ಕಟ್ಟಿದ ಮಗ!

ವಿಜಯಸಾಕ್ಷಿ ಸುದ್ದಿ, ಹೈದರಾಬಾದ್

ಮದುವೆ ಎಂದರೆ ಹೆತ್ತವರ ಮುಂದೆ, ಆಶೀರ್ವಾದ ಪಡೆದು ಆಗುವುದು ಶೋಭೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾಯಿಯ ಶವದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನಕಲುಕುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣ ರಾಜ್ಯದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ಪೇಟ್ ನಲ್ಲಿ ನಡೆದಿದೆ.

ಮದುವೆಯಾಗುವುದಕ್ಕಾಗಿ ಅಮೆರಿಕದಿಂದ ರಾಕೇಶ್ ಆಗಮಿಸಿದ್ದ. ಮೇ. 21ರಂದು ಮದುವೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿಯೇ ಆತನ ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ತಾಯಿ ಪಾಲ್ಪಾನೂರಿ ರೇಣುಕಾ(49) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನೊಂದೆಡೆ ತಾಯಿಯ ಸಹೋದರ ಮಹಾಮಾರಿಗೆ ಬಲಿಯಾಗಿದ್ದ. ಹೀಗಾಗಿ ಮದುವೆಯನ್ನು ಮುಂದೂಡಲಾಗಿತ್ತು. ಆದರೆ, ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿಗೆ ಬಲಿಯಾಗಿದ್ದು, ಆಸ್ಪತ್ರೆಯಿಂದ ಗ್ರಾಮಕ್ಕೆ ಮೃತ ದೇಹ ಕರೆ ತರಲಾಯಿತು. ಇನ್ನೊಂದೆಡೆ ಮಗನ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮಗ ಭಾರವಾದ ಮನಸ್ಸಿನಿಂದ ತಾಯಿಯ ಶವದ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.

ಈ ಮನಕಲಕುವ ಘಟನೆಗೆ ಸಾಕ್ಷಿಯಾಗಿ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ಅಮ್ಮನ ಸಮ್ಮುಖದಲ್ಲಿಯೇ ಮದುವೆಯಾಗಬೇಕೆಂಬ ಕನಸನ್ನು ಮಗ ಕಂಡಿದ್ದ. ಆದರೆ, ತಾಯಿ ಮಾತ್ರ ಮಗನ ಮದುವೆ ದಿನ ಬದುಕಿರಲಿಲ್ಲ. ಮಗ ತಾಯಿಯ ಶವದ ಮುಂದೆಯೇ ಮದುವೆಯಾಗಿದ್ದಾನೆ.

ಈ ರಾಜ್ಯಗಳಲ್ಲಿ ಮತ್ತೆ ವಿಸ್ತರಣೆಯಾದ ಲಾಕ್ ಡೌನ್

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೆಹಲಿಯಲ್ಲಿ ಕೊರೊನಾ ತಕ್ಕ ಮಟ್ಟಿಗೆ ಹತೋಟಿಗೆ ಬಂದರೂ ಕರ್ಫ್ಯೂ ವಿಸ್ತರಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಅನಾವಶ್ಯಕ ಓಡಾಟವನ್ನು ಜೂ. 7ರ ಬೆಳಿಗ್ಗೆ 5ರ ವರೆಗೆ ನಿಷೇಧಿಸಲಾಗಿದೆ.

ಕೈಗಾರಿಕಾ ಪ್ರದೇಶಗಳ ಉತ್ಪಾದನಾ ಘಟಕಗಳಲ್ಲಿ ಹಾಗೂ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಕರ್ಫ್ಯೂ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ.

ಇನ್ನೊಂದೆಡೆ ಕೇರಳ ಸರರ್ಕಾರ ಕೂಡ ಜೂ. 9ರ ವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಕ್ಷೀಣಿಸುತ್ತಿದ್ದರೂ, ನಿರ್ಬಧಗಳನ್ನು ತೆಗೆದುಹಾಕುವ ಹಂತಕ್ಕೆ ರಾಜ್ಯ ಇನ್ನೂ ತಲುಪಿಲ್ಲ. ಮೇ. 31ರಿಂದ ಜೂ. 9ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ಈ ಪೊಲೀಸರಿಗೆ ಕಚೇರಿಯೇ ಬಾರ್!

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಸರ್ಕಾರಿ ಕಚೇರಿ ಆವರಣವನ್ನೇ ಇಲ್ಲಿಯ ಸಿಬ್ಬಂದಿ ಬಾರ್ ಆಂಡ್ ರೆಸ್ಟೋರೆಂಟ್ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಅಗ್ನಿಶಾಮಕ ದಳದ ಠಾಣೆಯಲ್ಲಿ ನಡೆದಿದೆ.

ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಠಾಣೆಯ ಆವರಣದಲ್ಲಿಯೇ ಹಾಡಹಗಲೆ ಅದೂ ಕರ್ತವ್ಯದ ಸಮಯದಲ್ಲಿಯೇ ಗುಂಡು -ತುಂಡಿನ ಮೋಜು ಮಸ್ತಿಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ, ಇದ್ಯಾವುದು ಅಥಣಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮದವರು ಚಿತ್ರೀಕರಣಕ್ಕೆ ಮುಂದಾದಾಗ ತುಂಡು ಬಿಟ್ಟು, ಗುಂಡು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಊಟ ಮಾತ್ರ ಮಾಡುತ್ತಿದ್ದೇವೆ ಎಂಬ ಸಬೂಬ ನೀಡಿದ್ದಾರೆ.
ಅಥಣಿ ತಾಲೂಕಿನಲ್ಲಿ ಆಕಸ್ಮಿಕವಾಗಿ ಏನಾದರು ಅಗ್ನಿ ಅವಘಡ ಸಂಭವಿಸಿದ್ದರೆ, ಮಾತ್ರ ಇವರಿಗೆ ಕೆಲಸ ಇಲ್ಲವಾದರೆ, ಕಚೇರಿಯಲ್ಲಿಯೇ ಈ ರೀತಿ ಮಜಾ. ಆದರೆ, ಇವರು ಎಣ್ಣೆ ಹೊಡೆದ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಈ ಸಿಬ್ಬಂದಿ ಜೀವ, ಆಸ್ತಿ – ಪಾಸ್ತಿ ಕಾಪಾಡುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಹಿಂಗಾದ್ರ ಹೆಂಗರೀ…ಲಾಕ್ ಡೌನ್ ಮುಗ್ಯಾಕ್ ಬಂದಂಗ ಬಂದಂಗ್ ಹಳ್ಳಿ ಹೋಗಾಕತ್ತೈತಿ ಆ ಹೆಮ್ಮಾರಿ!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಮಹಾಮಾರಿ ಹಳ್ಳಿ – ಹಳ್ಳಿಗೂ ಎಂಟ್ರಿ ಕೊಟ್ಟಿದೆ. ಇಲ್ಲಿಯವರೆಗೆ ನಗರ ಪ್ರದೇಶದಲ್ಲಿ ಮಾತ್ರ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸೋಂಕು, ಇದೀಗ ಹಳ್ಳಿ ಹೊಕ್ಕು ಬಿಟ್ಟಿದೆ. ಜಿಲ್ಲೆಯ ಒಂದೇ ಗ್ರಾಮದಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 28 ಕೇಸ್ ಗಳು ಪತ್ತೆಯಾಗಿವೆ.
ತಾಲೂಕಿನ ಜರೀಕಟ್ಟೆ ಗ್ರಾಮದಲ್ಲಿ ಒಂದೇ ದಿನದಲ್ಲಿ 28 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಗ್ರಾಮದ 94 ಜನರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಂಗ್ರಹಿಸಿತ್ತು. 94 ಜನರ ಪೈಕಿ 28 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸದ್ಯ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಲಾಗಿದ್ದು, ಆರೋಗ್ಯ ಇಲಾಖೆಯಿಂದ ಕೋವಿಡ್ ಪರೀಕ್ಷೆ ಮುಂದುವರೆದಿದೆ. ಗ್ರಾಮದಲ್ಲಿ ಪೊಲೀಸರಿಂದ ಕೊರೊನಾ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಹಾಗೂ ಸ್ಯಾನಿಟೇಜರ್ ವಿತರಣೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಹ ಹಳ್ಳಿಗಳ ಮೇಲೆ ತೀವ್ರ ನಿಗಾ ಇಟ್ಟು ಕೆಲಸ ಮಾಡುತ್ತಿದೆ. ಆದರೂ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಸಾಗಿದೆ.

ಈ ಸ್ವಾಮೀಜಿ ಕೊರೊನಾ ಗೆದ್ದಿರುವುದು ಪವಾಡವೇ ಸರಿ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಮನೋಬಲ, ಆತ್ಮಸ್ಥೈರ್ಯ ಒಂದಿದ್ದರೆ ಕೊರೊನಾ ಮಹಾಮಾರಿ ಜಯಿಸಬಹುದು ಎಂಬುವುದಕ್ಕೆ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಶ್ರೀಗಳು ನಿದರ್ಶನವಾಗಿದ್ದು, ಆಕ್ಸಿಜನ್ ಮಟ್ಟ 60ಕ್ಕೆ ಇಳಿದಿದ್ದರೂ ಈಗ ಕೋವಿಡ್ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.

ಮಹದೇಶ್ವರ ಬೆಟ್ಟದ ಸಾಲೂರು ಬೃಹ್ನಮಠದ ಹಿರಿಯ ಗುರುಸ್ವಾಮಿಗಳಿಗೆ 65 ವರ್ಷ ವಯಸ್ಸಾಗಿತ್ತು. ಹೃದ್ರೋಗ ಸಮಸ್ಯೆಯ ಹಿನ್ನೆಲೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಮಾಡಿ 3 ಸ್ಟಂಟ್‌ ಗಳನ್ನು ಅಳವಡಿಸಲಾಗಿತ್ತು. ಎರಡೂ ಕಿಡ್ನಿಗಳ ಫಂಕ್ಷನಿಂಗ್ ಕಡಿಮೆ ಇದ್ದು, ಒಂದು ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದರು.
ಇದರೊಂದಿಗೆ ಅಧಿಕ ಮಧುಮೇಹ, ರಕ್ತದೊತ್ತಡ ಅವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಶ್ರೀಗಳಿಗೆ ಕೋವಿಡ್ ವಕ್ಕರಿಸಿತ್ತು. ಬಳಿಕ ಆಕ್ಸಿಜನ್ ನೆರವಿನಿಂದಲೇ ಉಸಿರಾಡಬೇಕಾದ ಪರಿಸ್ಥಿತಿಯೂ ಬಂದಿತ್ತು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದ್ದರೂ ಹಿರಿಯ ಶ್ರೀಗಳು ಕೊರೊನಾ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಮೈಸೂರಿನ ಜೆಎಸ್ಸೆಸ್ ಆಸ್ಪತ್ರೆಗೆ ಶ್ರೀಗಳು ತೆರಳಿದ್ದರು. ಆಗ ಅವರಲ್ಲಿ ಸೋಂಕು ಕಂಡು ಬಂದಿತ್ತು. ಆ ನಂತರ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆಕ್ಸಿಜನ್ ಮಟ್ಟ 50ರಿಂದ 60ಕ್ಕೆ ಇಳಿದಿತ್ತು. ಜೆಎಸ್ಸೆಸ್ ಆಸ್ಪತ್ರೆಯಲ್ಲಿಯೇ ಅವರು ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರು. ಆನಂತರ ಮೈಸೂರಿನ ಆಲನಹಳ್ಳಿಯ ಸಾಲೂರು ಶಾಖಾ ಮಠದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಶ್ರೀಗಳ ಉಸಿರಾಟದ ಮಟ್ಟ ಕ್ಷೀಣಿಸಿ, ಊಟ, ತಿಂಡಿ ಕೂಡ ಬಿಟ್ಟಿದ್ದರು. ಆ ನಂತರ ಚೇತರಿಸಿಕೊಳ್ಳುತ್ತ ಗುಣಮುಖರಾಗಿದ್ದಾರೆ.

ಈಗ ಸ್ವಲ್ಪ ಆಹಾರ ಸೇವಿಸುತ್ತಿದ್ದಾರೆ. ಕಡಿಮೆ ಆಕ್ಸಿಜನ್ ಬಳಸುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಶಿವಪೂಜೆ ಮಾಡುತ್ತಾ, ವಿಶ್ರಾಂತಿ ಪಡೆಯುತ್ತಿದ್ದಾರೆ. ಶ್ರೀಗಳು ಪವಾಡ ಎಂಬಂತೆ ಬದುಕಿ ಬಂದಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾದಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಸಾಲೂರು ಶ್ರೀಗಳು ಧೈರ್ಯ, ನಂಬಿಕೆಗಳಿಂದ ಗಂಭೀರ ಕಾಯಿಲೆಗಳ ನಡುವೆಯೂ ಕೊರೊನಾ ಜಯಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ತಿಕ್ಕಾಟ; ತೇಜೋವಧೆ ಹುಚ್ಚಾಟ!

ವಿಜಯಸಾಕ್ಷಿ ಸುದ್ದಿ, ಗದಗ

ಆಡಳಿತಾರೂಢ ಬಿಜೆಪಿಯಲ್ಲಿ ಈಗ ನಾಯಕತ್ವದ ತಿಕ್ಕಾಟ ಶುರುವಾಗಿದೆ. ಈ ತಿಕ್ಕಾಟ ರಾಜ್ಯ ರಾಜಕಾರಣದಲ್ಲಿ ಅಲ್ಲ, ಗದಗ ಶಹರದಲ್ಲಿ. ಕಳೆದ ವಿಧಾನಸಭೆ ಚುನಾವಣೆಯಿಂದ ಗದಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಅನಿಲ ಮೆಣಸಿನಕಾಯಿ ಅವರದು ಒಂದು ಗ್ರೂಪ್ ಆದರೆ, ರಾಜು ಕುರಡಗಿ, ಮೋಹನ್ ಮಾಳಶೆಟ್ಟಿ ಅವರದು ಒಂದೊಂದು ಗ್ರೂಪ್. ಮನೆ ಒಂದು ಮೂರು ಬಾಗಿಲು ಅನ್ನೋಹಾಗೆ ಸದಾ ಕಾಲು ಜಗ್ಗುವ ಆಟಗಳೇ ನಡೆಯೋದು.

ಕಳೆದ ಲಾಕ್ ಡೌನ್ ಅವಧಿಯಲ್ಲಿ ಬಿಜೆಪಿಯ ಯುವ ಮುಖಂಡ ಅನಿಲ ಮೆಣಸಿನಕಾಯಿ ಭಿಕ್ಷೆ ಭೇಡಿ ಜನರಿಗೆ ಸಹಾಯ ಹಸ್ತ ಚಾಚಿದ್ದರು. ಗದಗ- ಬೆಟಗೇರಿ ಸೇರಿದಂತೆ ಹಳ್ಳಿಗಳಿಂದ ಜೋಳ, ಗೋದಿ, ಸೇರಿ ಆಹಾರ‌ ಧಾನ್ಯಗಳನ್ನು‌ ಭಿಕ್ಸೆ ಬೇಡಿ ನೊಂದವರಿಗೆ, ಬಡವರಿಗೆ ಹಂಚಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದರು. ಆದರೆ ಈಗ ಗದಗದತ್ತ ಅವರು ಸುಳಿದಿಲ್ಲ. ಕಾರಣ ಅವರಿಗೆ ಎರಡು ಸಲ ಕೋವಿಡ್ ಅಟ್ಯಾಕ್ ಆಗಿ ನೋವು ಅನುಭವಿಸಿ ಇನ್ನೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ಗದಗ ನಗರಕ್ಕೆ ಬರುವುದು ಸಾಧ್ಯವಾಗಿಲ್ಲ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ಈಗ ರಾಜು ಕುರಡಗಿ ಹಾಗೂ ಅವರ ಸ್ನೇಹಿತರು ಸೇರಿ ಲಾಕ್ ಡೌನ್ ನಿಂದ ನೊಂದವರಿಗೆ ಸಹಾಯ, ಆಹಾರದ ಕಿಟ್ ನೀಡುತ್ತಿದ್ದಾರೆ. ಆದರೆ ಅಸಲಿ ವಿಷಯ ಅದಲ್ಲ. ರಾಜು ಕುರಡಗಿ ತಮ್ಮ ಹಿಂಬಾಲಕರ ಮೂಲಕ ಅನಿಲ ಮೆಣಸಿನಕಾಯಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅನಿಲ್ ಸೋಂಕಿತರ ಬಗ್ಗೆ ಮಾತನಾಡುತ್ತಿಲ್ಲ. ಗದಗಕ್ಕೆ ಐದು ವರ್ಷಕ್ಕೊಮ್ಮೆ ಕ್ರಿಕೆಟ್ ಆಡಲು, ಡ್ಯಾನ್ಸ್ ಮಾಡಲು ಬರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಜತೆಗೆ ಗದಗ ಎಪಿಎಂಸಿಯ ಶಿವು ಅವರು ಜನ ಕೇಳುವ ಮೊದಲೇ ಗುರುತಿಸಿ ಸಹಾಯ ಮಾಡುತ್ತಿದ್ದಾರೆ ಎಂಬ ಸಂದೇಶವೂ ಹರಿದಾಡುತ್ತಿದೆ.

ಏನಿದೆ ಸಂದೇಶದಲ್ಲಿ?

ಸೋಶಿಯಲ್ ‌ಮೀಡಿಯಾದಲ್ಲಿ ಅನಿಲ ಮೆಣಸಿನಕಾಯಿಗೆ ಕೋವಿಡ್ ಆಗಿತ್ತು. ಗುಣಮುಖ ಆಗಿದ್ದಾರೆ ಅದಾವ…? ಗೊತ್ತಿಲ್ಲ….. ಐದು ವರ್ಷಕ್ಕೆ ಒಂದು ಸಲ ಗದಗಗೆ ತಪ್ಪದೆ ಬರುತ್ತಾನೆ…. ಇಲ್ಲದಿದ್ದರೆ cricket ಆಡಲು ಬರುತ್ತಾನೆ…….ಬೇಜಾರ ಆದಾಗ ಬಂದು ಹೋಗಲು ಗದಗ ಒಂದು Resort ಅಲ್ಲ…..

ಇದು ಇಷ್ಟಕ್ಕೆ ಮುಗಿಯಲ್ಲ… ಮುಂದುವರೆದು…
ಇಂತ ಕರೋನಾ ಸಂಕಷ್ಟದಲ್ಲಿ ಜನ ಸೇವೆ ಎಲ್ಲಿದೆ. ರೋಗಿಗಳ ಬಗ್ಗೆ ಒಂದು ಮಾತು ಇಲ್ಲಾ…ಒಂದು ಸ್ಟೇಟ್ಮೆಂಟ್ ಇಲ್ಲಾ….ಇಂತವರ ಜನ್ಮಕ್ಕೆ ದಿಕ್ಕಾರ ಇರಲಿ…..
ಸ್ಥಳೀಯ ಪರಿಚಯ ಇರುವ ಯುವಕರನ್ನು ಬೆಂಬಲಿಸುವುದು ಬಹಳ ಉತ್ತಮ…..
Well done Sir🙏 ಅಂತ ಇದೆ.

ಕೊರೊನಾ ಸಂದರ್ಭದಲ್ಲಿಯೂ ಇಂತಹ ಹುಚ್ಚಾಟ ಬೇಕಿತ್ತಾ ಅನ್ನೋದು ಅನಿಲ ಮೆಣಸಿನಕಾಯಿ ಅವರ ಅಭಿಮಾನಿಗಳ ಮಾತು. ಮೋಹನ್ ‌ಮಾಳಶೆಟ್ಟಿ ಅವರಿಗೂ ಅನಾರೋಗ್ಯ, ಅನಿಲ ಮೆಣಸಿನಕಾಯಿ ಅವರಿಗೂ ಅನಾರೋಗ್ಯ ಇದೆ ಅಂತೆ… ಅದನ್ನೇ ಬಂಡವಾಳ‌ ಮಾಡಿಕೊಂಡು ಜನಸೇವೆಯ ನಾಟಕ ಆಡುತ್ತಿದ್ದಾರೆ ಅನ್ನೋ‌ ಮಾತು ಬಿಜೆಪಿಯ ಕೆಲ ಕಾರ್ಯಕರ್ತರು ಹೇಳುತ್ತಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇರುವುದನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟವರು ಅದ್ಯಾವ ಸೀಮೆ ನಾಯಕರು ಅಂತ ಜನ ಆಡಿ ಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಕೋವಿಡ್ ಸಂದರ್ಭದಲ್ಲಿ ಇಂತಹ ಹುಚ್ಚಾಟ ಬೇಕಿರಲಿಲ್ಲ. ಇನ್ನಾದರೂ ನೊಂದವರ ಸೇವೆ ಪ್ರಾಮಾಣಿಕವಾಗಿ ಮಾಡಲಿ ಅನ್ನೋದು ನೊಂದ ಕಾರ್ಯಕರ್ತರ ಮಾತು.

ಶಹರ ಪೊಲೀಸರ ಕಾರ್ಯಚರಣೆ; ಬೈಕ ಕಳ್ಳನ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಮೇ‌ 1ರಂದು ಗದಗ ಶಹರದ ಡಂಬಳ ನಾಕಾ ಬಳಿಯ ರೇಣುಕಾ ಆಟೋಮೊಬೈಲ್ ಅಂಗಡಿಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಶಹರ ಠಾಣೆಯ ಪೊಲೀಸರು ಬಂಧಿಸಿ ಆತನಿಂದ ಬೈಕ್ ವಶಪಡಿಸಿಕೊಂಡಿದ್ದಾರೆ.

ಶನಿವಾರ ಸಂಜೆ ಲಕ್ಷ್ಮೇಶ್ವರ ರಸ್ತೆಯ ರಿಂಗ್ ರೋಡ್ ಬಳಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ನಂತರ ಕಳ್ಳತನ ಮಾಡಿದ್ದ ವಿಷಯ ಬಾಯಿಬಿಟ್ಟಿದ್ದಾನೆ. ಬಂಧಿತನನ್ನು ಮುಳಗುಂದ ಸಮೀಪದ ಸೀತಾಲಹರಿ ಗ್ರಾಮದ ಸೋಮು ಸಿದ್ದಪ್ಪ ಪೂಜಾರ ಎಂದು ಗುರುತಿಸಲಾಗಿದೆ.

ಮೇ‌ 1ರಂದು ಬೈಕ್ ಕಳೆದುಕೊಂಡಿದ್ದ ಗಂಗಾಧರ. ಶಿದ್ಲಿಂಗಪ್ಪ ಮಟ್ಟಿ‌ಅನ್ನೋರು ಶಹರ ಠಾಣೆಗೆ ದೂರು ನೀಡಿದ್ದರು.

ಗದಗ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಸರ್ಕಲ್ ಇನ್ಸ್‌ಪೆಕ್ಟರ್ ಪಿ ವ್ಹಿ ಸಾಲಿಮಠ ಮಾರ್ಗದರ್ಶನದಲ್ಲಿ, ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವ್ಹಿ ಎಸ್ ಶೆಟ್ಟಣ್ಣವರ್, ಎಸ್ ಎ ಗುಡ್ಡಿಮಠ, ಪಿ ಎಸ್ ಕಲ್ಲೂರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಬ್ಬಂದಿಗಳ ಈ ಕಾರ್ಯಕ್ಕೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜೈನ ಸಮಾಜ ವತಿಯಿಂದ ಆಹಾರದ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಜೈನ್ ಸಮಾಜದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೇರಿದಂತೆ ಅಗತ್ಯ ಚಿಕಿತ್ಸೆಗಾಗಿ ದಾಖಲಾದವರ ಸಂಬಂಧಿಕರು ಆಸ್ಪತ್ರೆಯ ಹೊರೆಗಿರುವ ಅವರ ಕುಟುಂಬಸ್ಥರಿಗೆ ಪಲಾವ್ ಪ್ಯಾಕೆಟ್ ವಿತರಿಸಲಾಯಿತು.

ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆ, ಜರ್ಮನಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಜೈನ ಸಮಾಜದ ಅಧ್ಯಕ್ಷ ಮನೋಜ ಭಾಫಣಾ ಸೇರಿ 8ರಿಂದ 10 ಜನರ ತಂಡ ಶನಿವಾರ 300 ಕಿಟ್‌ಗಳನ್ನು ವಿತರಣೆ ಮಾಡಿದೆ. ಮುಂದಿನ 7 ದಿನಗಳ ಕಾಲ ಅವಳಿ ನಗರದಾದ್ಯಂತ ಆಸ್ಪತ್ರೆಯ ಹೊರಗೆ ಆತಂಕದಲ್ಲಿ ಕಾಯುತ್ತಿರುವ ಕುಟುಂಬಸ್ಥರಿಗೆ ಆಹಾರದ ಪ್ಯಾಕೆಟ್ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಜೈನ ಸಮಾಜ ವತಿಯಿಂದ ಆಹಾರದ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಜೈನ್ ಸಮಾಜದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೇರಿದಂತೆ ಅಗತ್ಯ ಚಿಕಿತ್ಸೆಗಾಗಿ ದಾಖಲಾದವರ ಸಂಬಂಧಿಕರು ಆಸ್ಪತ್ರೆಯ ಹೊರೆಗಿರುವ ಅವರ ಕುಟುಂಬಸ್ಥರಿಗೆ ಪಲಾವ್ ಪ್ಯಾಕೆಟ್ ವಿತರಿಸಲಾಯಿತು.

ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆ, ಜರ್ಮನಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಜೈನ ಸಮಾಜದ ಅಧ್ಯಕ್ಷ ಮನೋಜ ಭಾಫಣಾ ಸೇರಿ ೮ರಿಂದ ೧೦ ಜನರ ತಂಡ ಶನಿವಾರ ೩೦೦ ಕಿಟ್‌ಗಳನ್ನು ವಿತರಣೆ ಮಾಡಿದೆ. ಮುಂದಿನ ೭ ದಿನಗಳ ಕಾಲ ಅವಳಿ ನಗರದಾದ್ಯಂತ ಆಸ್ಪತ್ರೆಯ ಹೊರಗೆ ಆತಂಕದಲ್ಲಿ ಕಾಯುತ್ತಿರುವ ಕುಟುಂಬಸ್ಥರಿಗೆ ಆಹಾರದ ಪ್ಯಾಕೆಟ್ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!