Home Blog Page 3040

ಕಷ್ಟ ಕಾಲದಲ್ಲಿ ಹಿರಿಯ ಜೀವಗಳ ಕೈ ಹಿಡಿದ ರಿಯಲ್ ಸ್ಟಾರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಹೀಗಾಗಿ ಹಿರಿಯರಷ್ಟೇ ಇರುವ ಮನೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳಿಗೆ ಉಪೇಂದ್ರ ಅವರೇ ಮನೆಯ ಮಗನಾಗಿದ್ದಾನೆ.

ಪ್ರತಿ ದಿನ ಸಿನಿಮಾ ಚಟುವಟಿಕೆಗಳನ್ನೇ ನಂಬಿಕೊಂಡಿದ್ದ ಬಡ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಕೆಲವು ಹಿರಿಯ ಕಲಾವಿದರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ನೆರವಿಗೆ ಉಪೇಂದ್ರ ಧಾವಿಸಿದ್ದಾರೆ.

ಸಿನಿಮಾವನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಡಿದ್ದ ಹಿರಿಯ ಕಲಾವಿದರಿಗೆ ಇಂದು ಚಿತ್ರ ರಂಗದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಲಾಕ್‍ ಡೌನ್ ಸಂದರ್ಭದಲ್ಲಿ ಅಂಥವರ ಕಷ್ಟ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಅರಿತ ನಟ ಉಪೇಂದ್ರ ಅವರು ಹಿರಿಯ ನಟ – ನಟಿಯರ ಮನೆಯ ಮಗನಾಗಿದ್ದಾರೆ. ಅಂತಹ ಕುಟುಂಬಗಳಿಗೆ ಅವಶ್ಯವಿರುವ ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಮೋಹನ್ ಜುನೇಜಾ, ಶ್ರೀಲಲಿತಾ, ಕಾಮಿನಿಧರನ್, ಬೆಂಗಳೂರು ನಾಗೇಶ್, ಎಟಿ ರಘು, ಉಮೇಶ್ ಮುಂತಾದವರ ಮನೆಗೆ ಉಪೇಂದ್ರ ಅವರು ದಿನಸಿ ಕಿಟ್ಗಾಳನ್ನು ಕಳುಹಿಸಿದ್ದಾರೆ.
ಈ ಹಿರಿಯ ಜೀವಗಳು ಉಪೇಂದ್ರ ಅವರಿಗೆ ಮನಸಾರೆ ಆಶೀರ್ವಾದಿಸಿದ್ದಾರೆ.

ಪೆಟ್ರೋಲ್ ಟ್ಯಾಂಕರ್ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು!

ವಿಜಯಸಾಕ್ಷಿ ಸುದ್ದಿ, ಗದಗ

ಪೆಟ್ರೋಲ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಜಿಲ್ಲಾಡಳಿತ ಭವನದ ಎದುರಿಗೆ ಈ ದುರ್ಘಟನೆ ನಡೆದಿದೆ.

ಮೃತನನ್ನು ಒಕ್ಕಲಗೇರಿ ಓಣಿಯ ಮಹಾದೇವಪ್ಪ ಹುಚ್ಚಪ್ಪ ಕುಂಬಾರ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಕೊಪ್ಪಳ ಮಾರ್ಗವಾಗಿ ಹೊರಟಿತ್ತು.

ಘಟನೆಯ ಮಾಹಿತಿ ತಿಳಿದ ಜಿಲ್ಲಾವರಿಷ್ಠಾಧಿಕಾರಿ ಯತೀಶ್ ಎನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಸೈಕಲ್ ಮೇಲೆ ಕಟ್ಟಿಗೆ ಒಯ್ಯುತ್ತಿದ್ದ ವ್ಯಕ್ತಿಯು ಮನೆ ಕಡೆ ಹೊರಟಿದ್ದಾಗ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೌಖ್ತೆ ಚಂಡಮಾರುತ – ಸಾವಿನ ಸಂಖ್ಯೆ 66ಕ್ಕೆ ಏರಿಕೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಇತ್ತೀಚೆಗಷ್ಟೇ ತೌಖ್ತೆ ಚಂಡಮಾರುತ ಬೀಸಿದ್ದ ಸಂದರ್ಭದಲ್ಲಿ ಮುಳುಗಿದ್ದ ಬಾರ್ಜ್ ಪಿ 305 ಸಮುದ್ರದ ತಳದಲ್ಲಿ ಕಂಡು ಬಂದಿದೆ. ಎರಡು ಹಡಗುಗಳಿಂದ ಕಾಣೆಯಾದ 20 ಸಿಬ್ಬಂದಿಗಳ ಹುಡುಕಾಟ ಮುಂದುವರಿದಿದೆ ಎಂದು ನೌಕಾಪಡೆ ಹೇಳಿದೆ. ಬಾರ್ಜ್‌ನಿಂದ ಒಂಭತ್ತು ಜನ ಹಾಗೂ ಟಗ್ ಬೋಟ್ ದಿಂದ ನಾಪತ್ತೆಯಾಗಿರುವ 11 ಜನರ ಕುರುಹು ಇನ್ನೂ ಕಂಡು ಬಂದಿಲ್ಲ. ಆದರೆ, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (ಎಸ್‌ಎಆರ್) ಹೆಚ್ಚಿಸಲು ನೌಕಾಪಡೆಯು ವಿಶೇಷ ಡೈವಿಂಗ್ ತಂಡಗಳನ್ನು ನಿಯೋಜಿಸಿತ್ತು. ಇಲ್ಲಿಯವರೆಗೆ 66 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಬಾರ್ಜ್ ಪಿ 305 ರಲ್ಲಿದ್ದ 261 ಸಿಬ್ಬಂದಿಯಲ್ಲಿ 186 ಜನರನ್ನು ಈವರೆಗೆ ರಕ್ಷಿಸಲಾಗಿದೆ. 66 ಜನ ಸಾವನ್ನಪ್ಪಿದ್ದಾರೆ ಹಾಗೂ ಒಂಭತ್ತು ಜನ ನಾಪತ್ತೆಯಾಗಿದ್ದಾರೆ ಎಂದು ಸೇನಾಪಡೆ ತಿಳಿಸಿದೆ.

ಈಗಾಗಲೇ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ 41 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.

ಬಾರ್ಜ್ ಪಿ 305, ಸೋಮವಾರ ಸಂಜೆ ಮುಂಬಯಿಯ ಕರಾವಳಿಯಲ್ಲಿ ಚಂಡಮಾರುತದ ಸಮಯದಲ್ಲಿ ಮುಳುಗಿತ್ತು. ಕೆಲವು ದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಹಲವು ದೇಹಗಳಿಗೆ ಹೆಚ್ಚಿನ ಗಾಯಗಳಾಗಿವೆ. ಹೀಗಾಗಿ ಅವರುಗಳನ್ನು ಗುರುತಿಸಲು ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೀಡಾದವರಿಗೆ ಕೊವಿಡ್ ಸೋಂಕು ಇದೆಯೇ ಎಂದು ಕಂಡುಹಿಡಿಯಲು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಪ್ರಕ್ಷುಬ್ಧ ಪ್ರದೇಶದಲ್ಲಿ ಬಾರ್ಜ್ ಏಕೆ ಅಲ್ಲೇ ಉಳಿದಿದೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಟ್ಟಿದ ಮಗುವಿನ ಮುಖ ನೋಡಲೂ ಬಿಡದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಹುಟ್ಟಿದ ಮಗುವಿನ ಮುಖ ನೋಡುವ ಮುನ್ನವೇ ಮಹಾಮಾರಿ ತಂದೆಯನ್ನು ಬಲಿ ಪಡೆದಿದೆ. ಜಿಲ್ಲೆಯ ಅಫಜಲಪುರ ನಿವಾಸಿ ಸುಭಾಷ್ ತಾವರಖೇಡ(32) ಅವರಿಗೆ ವಾರದ ಹಿಂದೆ ಕೊರೋನಾ ಸೋಂಕು ದೃಢವಾಗಿತ್ತು. ಹಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವೆಂಟಿಲೇಟರ್ ನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೇ ಸುಭಾಷ್ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಮುಖ ನೋಡುವ ಮುನ್ನವೇ ತಂದೆ ಮಹಾಮಾರಿಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಾಯಿ ಕಳೆದುಕೊಂಡ ಬಾಲಕಿಯ ಪತ್ರ ಓದಿದವರ ಕರುಳು ಹಿಂಡಿದಂತಾಗುತ್ತಿದೆ!

ವಿಜಯಸಾಕ್ಷಿ ಸುದ್ದಿ, ಕೊಡಗು

ಕೊರೊನಾದಿಂದ ಸಾವನ್ನಪ್ಪಿದ ತನ್ನ ತಾಯಿಯ ತಾಯಿಯ ಮೊಬೈಲ್ ಕೊಡುವಂತೆ ಪುಟ್ಟ ಬಾಲಕಿಯೊಬ್ಬಳು ಮನವಿ ಮಾಡಿರುವ ಮನ ಮಿಡಿಯುವ ಘಟನೆ ನಡೆದಿದೆ.

ಜಿಲ್ಲೆಯ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಹೃತಿಕ್ಷಾ ಎಂಬ ಬಾಲಕಿಯೇ ಈ ರೀತಿ ಮನವಿ ಮಾಡಿದ್ದಾಳೆ. ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿವೆ. ದಯಾಮಾಡಿ ಆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ತಾಯಿಯ ಮೊಬೈಲ್ ಗಾಗಿ ಈ ಬಾಲಕಿ, ಶಾಸಕರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾಲಕಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೇ. 16ರಂದು ಸಾವನ್ನಪ್ಪಿದ್ದಳು.

ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕಿ, ನನ್ನ ತಾಯಿಯೊಂದಿಗೆ ಮೊಬೈಲ್ ಕೂಡ ಮರೆಯಾಗಿದೆ. ಮೊಬೈಲ್ ತೆಗೆದುಕೊಂಡವರು ಅಥವಾ ಸಿಕ್ಕವರು ದಯವಿಟ್ಟು ಮರಳಿ ಕೊಡಿ. ತಾಯಿಯನ್ನು ಕಳೆದುಕೊಂಡ ಈ ತಬ್ಬಲಿಗೆ ಮೊಬೈಲ್ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ.

ಈ ಬಾಲಕಿಯ ಪತ್ರ ಓದಿದ ಪ್ರತಿಯೊಬ್ಬ ಓದುಗರ ಕರುಳು ಹಿಂಡಿದಂತಾಗುತ್ತಿದೆ. ಹೀಗಾಗಿ ಹೃತಿಕ್ಷಾಳ ತಾಯಿಯ ಮೊಬೈಲ್ ಇದ್ದವರು ಕೂಡಲೇ ಕೊಡಬೇಕೆಂಬುವುದು ವಿಜಯಸಾಕ್ಷಿ ಪತ್ರಿಕೆ, ವೆಬ್ ಹಾಗೂ ಓದುಗರ ಮನವಿಯಾಗಿದೆ.

ಉಗ್ರರ ಹೆಡೆಮೂರಿ ಕಟ್ಟಿದ ಸೇನೆ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿ(ಡಿಎನ್ಎಲ್ಎ) ನಡುವೆ ಗುಂಡಿನ ಚಕಮಕಿ ನಡೆದಿದ್ದು, 6 ಜನ ಉಗ್ರರ ಹೆಡೆಮೂರಿ ಕಟ್ಟಲಾಗಿದೆ.

ಡಿಎನ್ ಎಲ್ ಎ ಸಂಘಟನೆಯ 6 ಜನ ಉಗ್ರರನ್ನು ಸೇನೆ ಬಲಿ ಪಡೆದಿದೆ. ಅಸ್ಸಾಂ ರೈಫಲ್ಸ್ ಪರ್ಸನಲ್ ಮತ್ತು ಪೊಲೀಸರು ಪಶ್ಚಿಮ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಹೆಣ ಉರುಳಿಸಿದ್ದಾರೆ.

ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಲಾ ತಿಳಿಸಿದ್ದಾರೆ. ಅಲ್ಲದೇ, ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿಗೆ ಸೇರಿದ ಮೃತ 6 ಜನ ಉಗ್ರರ ಬಳಿಯಿದ್ದ ನಾಲ್ಕು ಎಕೆ – 47 ರೈಫಲ್ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಲ್ಲದೇ, ಮಿಚಿಬೈಲಂಗ್ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಅನುಮಾನ ವ್ಯಕ್ತವಾಗಿದ್ದು, ಸೇನಾ ಕಾರ್ಯಾರಣೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಂದೆಯ ಶವ ಬೇಡ..ಹಣ ಬೇಕು ಎಂದ ಪಾಪಿ ಮಗ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿಯಿಂದ ತಂದೆ ಸತ್ತರೆ, ಹೆಣ ನೋಡಲು ಬಾರದ ಪಾಪಿ ಮಗ, ಶವ ನೀವೆ ಸುಡಿ ಹಣ ತಂದು ಕೊಡಿ ಎಂದು ಹೇಳಿರುವ ಅಮಾನವೀಯ ಘಟನೆ ನಡೆದಿದೆ.

ನಗರದ ಹೆಬ್ಬಾಳದ ಸೂರ್ಯ ಬೇಕರಿ ಹತ್ತಿರ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ತಂದೆ ಮೃತಪಟ್ಟಿರುವ ಕುರಿತು ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದರು. ಆದರೆ, ಇದಕ್ಕೆ ದುಃಖ ವ್ಯಕ್ತಪಡಿಸಬೇಕಾಗಿದ್ದ ಮಗ, ಏನೂ ಆಗದವರಂತೆ ವರ್ತಿಸಿದ್ದಾನೆ. ಅಲ್ಲದೇ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ತಂದೆಯ ಬಳಿ ಇರುವ ರೂ. 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ತೆಗೆದುಕೊಂಡು ಬಂದು ಎಲ್ಲ ಕೊಟ್ಟು ಬಿಡಿ ಎಂದು ಹೇಳಿದ್ದಾನೆ.

ಆ ಪಾಪಿ ಇಷ್ಟು ಹೇಳಿದ್ದೆ ತಡ ಪಾಲಿಕೆಯ ಸದಸ್ಯ ಶ್ರೀಧರ್, ಆತನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇವಲ 15 ದಿನಗಳಲ್ಲಿ ಒಂದೇ ಹಳ್ಳಿಯ 60 ಜನರ ನಿಗೂಢ ಸಾವು!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಕೇವಲ 15 ದಿನಗಳಲ್ಲಿಯೇ ಬರೋಬ್ಬರಿ 60 ಜನ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಗಾಗಲೇ ಕೋವಿಡ್ ನಿಂದ 6 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಇನ್ನುಳಿದವರು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಹೀಗಾಗಿ ಆತಂಕ ಮನೆ ಮಾಡಿದೆ.

ಈ ಗ್ರಾಮದಲ್ಲಿ ಪ್ರತಿದಿನ ಸುಮಾರು 2 ರಿಂದ ನಾಲ್ಕು ಜನ ಸಾವನ್ನಪ್ಪುತ್ತಿದ್ದಾರೆ. ಸದ್ಯ ಈ ಗ್ರಾಮದಲ್ಲಿನ ಬಹುತೇಕ ಜನರಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ.
ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯಾಧಿಕಾರಿಗಳು ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಜನ ನಮ್ಮ ಪಾಲಿಕೆ ಸರ್ಕಾರವೇ ಇಲ್ಲ, ಅದು ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸಾಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಜನ ಸಾಯುತ್ತಿದ್ದರು ಯಾರು ಕೂಡ ಬಂದು ನಮ್ಮ ಗೋಳು ಕೇಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಸೋಂಕಿಗೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನ ಸೋಂಕಿಗೆ ಭಯಪಟ್ಟ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕದಡಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ಭಯಪಟ್ಟ 45 ವರ್ಷದ ಮಹಿಳೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ 15 ದಿನಗಳಿಂದ ಈ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಮನವಿ ಮಾಡಿದ್ದರು. ಇದರಿಂದಾಗಿ ನನಗೆ ಕೊರೊನಾ ಬಂದಿದೆ ಎಂದು ಹೆದರಿದ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಲ್ಲೆಗೆ ಎಂಟ್ರಿ ಕೊಟ್ಟ ರೆಮ್ಡಿಸಿವರ್ ಕರಾಳ ದಂಧೆ; ನಾಲ್ಕು ಜನ ಅರೆಸ್ಟ್

ವಿಜಯಸಾಕ್ಷಿ ಸುದ್ದಿ, ಗದಗ

ರೆಮ್ಡಿಸಿವರ್ ನ್ನು ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಜಿಲ್ಲಾ ಸೈಬರ್ ವಿಭಾಗದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದ್ದಾರೆ. ಸದ್ಯ ನಾಲ್ವರ ಬಂಧನವಾಗಿದ್ದು, ಇನ್ನೊಬ್ಬ ಮಹಿಳಾ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಆರೋಪಿಗಳು ರೂ. 3 ಸಾವಿರದ ಔಷಧವನ್ನು ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಹೇಳಿದ್ದಾರೆ.

ಮಹ್ಮದ್ ಇಸ್ಮಾಯಿಲ್ ಓದೇಕಾರ, ಪಿರೋಜ್ ಖಾನ್ ಪಠಾಣ, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್ ಗವಿಸಿದ್ದಯ್ಯ ಹಿರೇಮಠ, ರಮೇಶ ಚವಟಗಿ, ನರ್ಸ್ ಜ್ಯೋತಿ ಲಮಾಣಿ ಆರೋಪಿತರು. ಸದ್ಯ ನಾಲ್ವರ ಬಂಧನವಾಗಿದ್ದು, ಜ್ಯೋತಿ ಲಮಾಣಿ ಅವರ ಬಂಧನವಾಗಬೇಕಿದೆ.

ಜೀವ ರಕ್ಷಕ ಇಂಜೆಕ್ಷನ್ ಔಷಧಿಯನ್ನು ಇವರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಲಾಗಿತ್ತು. ಸೈಬರ್ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಟಿ ಅವರ ನೇತೃತ್ವದ ತಂಡ, ಗದಗ – ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಹತ್ತಿರ ನಿಗದಿತ ಬೆಲೆಗಿಂತ ಹೆಚ್ಚು ಅಂದರೆ ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನೂ ಮೂವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಸದ್ಯ ಅವರಿಗಾಗಿ ಹುಡುಕಾಟ ನಡೆದಿದೆ. ಬಂಧಿತ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 409, 420 ಸಹ ಕಲಂ- 34, ಐಪಿಸಿ ಮತ್ತು ಕಲಂ – 4,5,6 ಮತ್ತು 13, ಡ್ರಗ್ಸ್ ಕಂಟ್ರೋಲ್ ಕಾಯ್ದೆ -1950ರ ಅಡಿ ಪ್ರಕರಣ ದಾಖಲಾಸಿಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ ವಶಪಡಿಸಿಕೊಂಡಿರುವ 14 ರೆಮಿಡಿಸಿವರ್ ನ ಸರ್ಕಾರ ನಿಗದಿಪಡಿಸಿದ ಮೌಲ್ಯ ರೂ. 48,860 ಇದೆ. ಆದರೆ, ಆರೋಪಿತರು ರೂ. 30 ಸಾವಿರದಂತೆ ರೂ. 4,20,000ನ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಸದ್ಯ ಬಂಧಿತರಿಂದ ರೂ. 2,500 ನಗದ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಈ ಪ್ರಕರಣದ ತನಿಖೆಯನ್ನು ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ ಮುಂದುವರೆಸಲಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.

error: Content is protected !!