Home Blog Page 3089

ರೈತರ ಪ್ರತಿಭಟನೆಯಲ್ಲಿ ನುಸುಳಿದ ಸಮಾಜಘಾತುಕರು:
ಬಯಲಾಯ್ತು ದೆಹಲಿ ದಂಗೆಯ ಅಸಲಿಯತ್ತು!

0

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕೈಗೊಂಡಿದ್ದ ಟ್ರ್ಯಾಕ್ಟರ್ ರ‌್ಯಾಲಿ ಹಿಂಸಾಚಾರಕ್ಕೆ ಸಮಾಜಘಾತಕ ಶಕ್ತಿಗಳೇ ಕಾರಣ ಎಂದು ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಟ್ರ್ಯಾಕ್ಟರ್ ರ‌್ಯಾಲಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರಿಗೂ ರೈತರ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲವರು ಪೂರ್ವಯೋಜಿತರಾಗಿ ಇಂತಹ ಕೃತ್ಯ ನಡೆಸಿದ್ದಾರೆ ಎಂದು ‌ಅವರು ಹೇಳಿದ್ದಾರೆ.

ನಿಗದಿಯಾಗಿದ್ದ ಮಾರ್ಗವನ್ನು ಬಿಟ್ಟು ಬೇರೆ ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ.

ಹಿಂಸಾಚಾರದ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ರೈತರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾದ ರೈತರಿಗೆ ಧನ್ಯವಾದ ಹೇಳಬಯಸುತ್ತೇವೆ. ಆದರೆ, ಇದೇ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ.

ದುಷ್ಕೃತ್ಯದಲ್ಲಿ ಭಾಗಿಯಾದವರಿಗೂ ರೈತ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆ ನೀಡಿದೆ.

ಶಾಂತಿಯೇ ನಮ್ಮ ಅತಿದೊಡ್ಡ ಶಕ್ತಿಯಾಗಿದೆ. ನಾವು ನಿಯಮ ಉಲ್ಲಂಘಿಸಿ ಹೋರಾಟ ನಡೆಸುವುದಾಗಿದ್ದರೆ ಎರಡು ತಿಂಗಳ ಕಾಲ ಮಳೆ, ಚಳಿಯಲ್ಲಿ ಶಾಂತಿಯುತ ಪ್ರತಿಭಟನೆ ಕೈಗೊಳ್ಳುತ್ತಿರಲಿಲ್ಲ.

ನಾವು ಶಿಸ್ತಿನ ಮಾರ್ಗದಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ.

ಪ್ರತಿಭಟನೆ ವೇಳೆ ಒಳನುಸುಳಿದ ಸಮಾಜಘಾತಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದೆ

ವರದಿ:ಡಾ. ಅಬ್ದುಲ್ ರಜಾಕ್

ರೈತರ ಪ್ರತಿಭಟನೆ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೆಸ್ ನವರು ಇದ್ದಾರೆ : ಸಚಿವ ಬಿ.ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಭಯೋತ್ಪಾದಕರ ರೀತಿಯಲ್ಲಿ ಭಯೋತ್ಪಾದನೆ ಮಾಡಿದಂತಹ ಭಯಾನಕ ಕೃತ್ಯ ಎಂದು ಸಚಿವ ಬಿ.ಸಿ ಪಾಟೀಲ್ ದೆಹಲಿ ದಂಗೆಯನ್ನು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕೊಪ್ಪಳದಲ್ಲಿ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ಇತಿಹಾಸದಲ್ಲಿಯೇ ಇಲ್ಲ. ಇದರ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೆಸ್ ನವರು ಇದ್ದಾರೆ. ಮೋದಿಯವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರವನ್ನು ಕೆಡವಲು ಆಗುವುದಿಲ್ಲ ಎಂದು ತಿಳಿದು, ಭಯೋತ್ಪಾದಕರಿಗೆ ರೈತರ ಪಟ್ಟ ಹಾಕಿ ದೆಹಲಿಯಲ್ಲಿ ಕೃತ್ಯ ನಡೆಸಲಾಗಿದೆ ಎಂದರು.

ಇನ್ನು ನನ್ನ ಈ ಮಾತುಗಳಿಗೂ ಈಗಲೂ ಬದ್ಧನಾಗಿದ್ದು, ಸಂವಿಧಾನದಲ್ಲಿ ಹಾಗೂ ದೇಶದ ಹಿರಿಮೆಯಲ್ಲಿ ಕೆಂಪು ಕೋಟೆಗೆ ತನ್ನದೇ ಆದ ಗೌರವ ಇದೆ. ಕೆಂಪು ಕೋಟೆಯ ಮೇಲೆ ಭಾರತದ ಧ್ವಜ ಬಿಟ್ಟು, ಬೇರೆ ಧ್ವಜಗಳಿಗೂ ಕನಸಿನಲ್ಲೂ ಅವಕಾಶವಿಲ್ಲ. ಇಂತಹ ಸಂಧರ್ಭದಲ್ಲಿ ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸ್ತಾರೆ ಅಂದ್ರೆ ಅವರನ್ನು ಭಯೋತ್ಪಾದಕರನ್ನದೇ ಮತ್ತೇನೆಂದು ಕರೆಯಬೇಕು. ಇವರಿಲ್ಲೇರಿಗೂ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ವಾಗ್ದಾಳಿ ನಡೆಸಿದರು.

ಹೆಚ್.ಕೆ ಪಾಟೀಲ್ರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ..?

ದೆಹಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ರೈತರ ಬಣ್ಣ ಕಟ್ಟುತ್ತಿರುವ ಹೆಚ್.ಕೆ ಪಾಟೀಲರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ, ಅಥವಾ ಹೊಲದಲ್ಲಿ ಒಂದು ಹನಿ ಸುರಿಸಿ ಬಿತ್ತನೆ ಮಾಡಿದ್ದಾರಾ ಮೊದಲು ಹೇಳಲಿ.‌ಇಂತಹ ಕೃತ್ಯಕ್ಕೆ ಬೆಂಬಲಿಸುವ ಅವರು, ಮತ್ತು ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ನಿಜವಾದ ರೈತರು ಯಾರೂ ಸಹ ಪ್ರತಿಭಟನೆ ಮಾಡ್ತಾ ಇಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇರೋ ಎಲ್ಲಾರು ಭಯೋತ್ಪಾದಕರು ಎಂದರು.

ರೈತರ ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ: ಶಾಸಕ ಎಚ್.ಕೆ.ಪಾಟೀಲ್ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಅನ್ನದಾತರನ್ನು ಕಡೆಗಣಿಸಲಾಗಿದೆ.
ರೈತರ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ ಎಂದು ಶಾಸಕ ಎಚ್.ಕೆ.ಪಾಟೀಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್ ಕುರಿತು‌ ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರಗಳು ರೈತರನ್ನ ಕಡೆಗಣಿಸುತ್ತಿವೆ.
ರೈತರ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಸರ್ಕಾರ ರೈತರ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದರು.

ರೈತರು ಟ್ರ್ಯಾಕ್ಟರ್ ರ‌್ಯಾಲಿ ಬಗ್ಗೆ ತಿಂಗಳಿನಿಂದ ತಿಳಿಸುತ್ತಾ ಬಂದಿದ್ದಾರೆ. ಇಂದು ರೈತರ ಪ್ರಯತ್ನಕ್ಕೆ ಅಡ್ಡಿಪಡಿಸುವ ಮೂಲಕ ಗಣರಾಜ್ಯೋತ್ಸವದ‌ ಮಹತ್ವ ಹಾಗೂ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದರು.

ರೈತರ ಹೋರಾಟಕ್ಕೆ ಎಲ್ಲ ಪಕ್ಷದವರ ಬೆಂಬಲವೂ ಇದೆ. ಕಾಂಗ್ರೆಸ್ ಕೂಡ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ‌ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

ಮಾಸಾಶನ, ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಯ ಅನುದಾನಕ್ಕೆ ಮಹಾಮಂಡಳ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ವಿವಿಧ ಕಾರ್ಯಕ್ರಮಗಳಿಗೆ ಮತ್ತು ಬಂಡವಾಳ ಹೂಡಿಕೆಗೆ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮೆಕ್ಯಾನಿಕ್, ಕಾರ್ಪೆಂಟರ್, ಹಣ್ಣು ಮತ್ತು ತರಕಾರಿ ಮಾರಾಟ, ಬೇಕರಿ, ಪಂಚರ್ ಮತ್ತು ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ರಿಪೇರಿ ಇತ್ಯಾದಿ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಬ್ಸಿಡಿ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ್ ಪಾಟೀಲ್‍ಗೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸರಕು ವಾಹನ, ಪ್ರಯಾಣಿಕ ಆಟೋ ಮತ್ತು ಸರಕು ಆಟೋ ಖರೀದಿಗೆ 1 ಲಕ್ಷ ರೂ,ಸಬ್ಸಿಡಿ ಮತ್ತು ಕಾರ್, ಜೀಪ್ ಖರೀದಿಗೆ 3 ಲಕ್ಷ ರೂ.ಸಬ್ಸಿಡಿ ಆಧಾರಿತ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ, ವಿಧವೆ, ವಿಚ್ಛೇದಿತ ಮತ್ತು ಏಕ ಮಹಿಳೆಯರಿಗೆ ನವೋದ್ಯಮ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಒದಗಿಸಲು, ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅನುದಾನ ಒದಗಿಸಲು ಅವರು ಆಗ್ರಹ ಮಾಡಿದ್ದಾರೆ.

ಇನ್ನೂ ಉರ್ದು ಅಕಾಡಮಿಯಲ್ಲಿ 70 ವರ್ಷ ಮೀರಿದ ಪ್ರತಿಷ್ಠಿತ ಉರ್ದು ಸಾಹಿತಿಗಳಿಗೆ ಮಾಸಾಶನ ಮತ್ತು ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ ಧನ ಸಹಾಯ ನೀಡುವ ಹೊಸ ಯೋಜನೆಗೆ, ಉರ್ದು ಅಕಾಡಮಿಯ ವಿವಿಧ ಕಾರ್ಯಕ್ರಮಗಳಿಗೆ ಅವಶ್ಯಕತೆ ಇರುವ ವಾರ್ಷಿಕ ಅನುದಾನ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಿ ಇದನ್ನು ಕಾರ್ಯರೂಪಕ್ಕೆ ತರುವಂತೆ ಅವರು ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಗಣರಾಜ್ಯೋತ್ಸವ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಜಾಗಿರ್ದಾರ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ತಲತ್ ಯಾಸ್ಮಿನ್, ಆಸಿಫ್ , ಸೈಯದ್, ಫಸಲ್, ಇರ್ಫಾನ್ ರೋಣ, ಅಬ್ದುಲ್ ಸಲಾಂ ಕಾರ್ಯಕ್ರಮದಲ್ಲಿ ಇದ್ದರು.

ಗದುಗಿನ ಗದ್ದುಗೆಗಾಗಿ ಕೈ-ಕಮಲ ಗುದ್ದಾಟ: ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಗಾಗಿ ಬಿಗ್ ಫೈಟ್!

ಹೊಂಬಳ, ಅಂತೂರ- ಬೆಂತೂರ ಬಿಜೆಪಿ ಬೆಂಬಲಿಗರ ತೆಕ್ಕೆಗೆ?
ಸಮಬಲ ಸಾಧಿಸಿರುವ ಬಿಂಕದಕಟ್ಟಿ ಮೇಲೆ ಕೈ-ಕಮಲ ಕಣ್ಣು

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ನಾಲ್ಕು ತಾಲ್ಲೂಕುಗಳ 55 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹಿರಿದಾಗಿದೆ.
ಮೀಸಲಾತಿಯ ಮೇಲೆ ಕಣ್ಣಿಟ್ಟಿದ್ದ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಗ್ರಾ.ಪಂ. ಸದಸ್ಯರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರೂ ಅಧಿಕಾರಕ್ಕಾಗಿ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸದಸ್ಯರ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟವೂ ನಡೆದಿದೆ.

ಕಾಂಗ್ರೆಸ್, ಬಿಜೆಪಿಗಳು ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಸದಸ್ಯರೊಂದಿಗ ಸಾಲು ಸಾಲು ಸಭೆ ನಡೆಸಿ, ಅಭಿಪ್ರಾಯ ಕಲೆ ಹಾಕುತ್ತಿದ್ದಾರೆ.

ಹೊಂಬಳ ಗ್ರಾಪಂ ಬಿಜೆಪಿ ಬೆಂಬಲಿಗರ ತೆಕ್ಕೆಗೆ?

ಹೊಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರಸ್ವತಿ ಬಸವರಾಜ ಬಳ್ಳಾರಿ ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಪಂಚಾಯತಿಗೆ ಎಸ್.ಟಿ. ಮೀಸಲಾತಿ ಸಿಕ್ಕಿದ್ದು, ಹೊಂಬಳದಲ್ಲಿ ಬಹುತೇಕ ಬಿಜೆಪಿಗೆ ಅಧಿಕಾರ ಸಿಗಲಿದೆ. ಅಂತೂರ-ಬೆಂತೂರ ಗ್ರಾ.ಪಂ.ನ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಯಲ್ಲವ್ವ ದುರಗಪ್ಪ ಹೊಸಮನಿ ಜಯಭೇರಿ ಬಾರಿಸಿದ್ದು, ಪಂಚಾಯತಿಗೆ ಎಸ್ಸಿ ಮಹಿಳಾ ಮೀಸಲಾತಿಯೂ ಬಂದಿದೆ. ಈ ಗ್ರಾ.ಪಂ. ಕಮಲದ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದಲ್ಲಿ ಗದಗ ತಾಲ್ಲೂಕಿನ 2 ಗ್ರಾ.ಪಂ.ಗಳಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಂತಾಗಲಿದೆ.

ಗ್ರಾ.ಪಂ. ಸದಸ್ಯರ ಲೆಕ್ಕಾಚಾರ:
ಗ್ರಾ.ಪಂ. ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅಧ್ಯಕ್ಷ ಪಟ್ಟ ಕೊಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಬಹುಮತ ತೋರಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಸದಸ್ಯರು ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ ಸದಸ್ಯರಲ್ಲಿ ಅಸಮಾಧಾನ ಉಂಟಾಗದಂತೆ ನೋಡಿಕೊಳ್ಳಲು 50-50 ಅಧಿಕಾರ ಹಂಚಿಕೆ ಸೂತ್ರಕ್ಕೂ ಮುಂದಾಗಿದ್ದಾರೆ.

ಟೊಂಕಕಟ್ಟಿ ನಿಂತ ಕೈ-ಕಮಲ:
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಗದಗ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಜಿತಗೊಂಡಿತ್ತು. ಹಾಗಾಗಿ ಪಕ್ಷ ಬಲವರ್ಧನೆಗೆ ಕಮಲ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂಡೆದೆ, ಕಾಂಗ್ರೆಸ್ ನಾಯಕರು ಕ್ಷೇತ್ರ ತಮ್ಮ ಕೈ ತಪ್ಪಿ ಹೋಗಬಾರದೆಂದು ಪಣ ತೊಟ್ಟಿದ್ದಾರೆ. ಹಾಗಾಗಿ, ಗದಗ ತಾಲ್ಲೂಕಿನ ಮೀಸಲಾತಿ ಪಟ್ಟಿ ಸೋಮವಾರ ಪ್ರಕಟವಾಗುತ್ತಿದ್ದಂತೆ, ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯರ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಂಕದಕಟ್ಟಿ ಮೇಲೆ ಬಿಜೆಪಿ ಕಣ್ಣು

ಈ ಹಿಂದೆ ಕಾಂಗ್ರೆಸ್ ಪ್ರಬಲವಾಗಿದ್ದ ಬಿಂಕದಕಟ್ಟಿ ಗ್ರಾಮದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ.14 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಶ್ರೀನಿವಾಸ್ ತಮ್ಮನಗೌಡ್ರ ಅವರ ಧರ್ಮಪತ್ನಿ ಅಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಗಾದಿಗೆ ಡಿ.ಬಿ. ಕರಿಗೌಡ್ರ ಲಾಬಿ ನಡೆಸಿದ್ದಾರೆ. ಸಮಬಲ ಸಾಧಿಸಿರುವುದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಕಮಲದತ್ತ ಸೆಳೆಯಲು ನಾಯಕರು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾಗದಂತೆ ಕಾಂಗ್ರೆಸ್ ನಾಯಕರು ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕುದುರೆ ವ್ಯಾಪಾರ ಜೋರು?

ಆಡಳಿತ ರಚಿಸುವಲ್ಲಿ ಪಕ್ಷೇತರ ಸದಸ್ಯರು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅಂತಹ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಸದಸ್ಯ ಬಲ ಹೆಚ್ಚಿಸಿಕೊಳ್ಳಲು ಹಾಗೂ ತಮ್ಮ ಸದಸ್ಯರನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ರೆಸಾರ್ಟ್ ನತ್ತ ಮೊರೆ ಹೋಗಿದ್ದಾರೆ. ಅಲ್ಲದೇ, ತಮ್ಮ ಸದಸ್ಯರನ್ನು ಗೋವಾ ಮತ್ತು ಧರ್ಮಸ್ಥಳದತ್ತ ಕರೆದೊಯ್ಯುವ ಯೋಜನೆ ರೂಪಿಸುತ್ತಿದ್ದಾರೆ. ಆಸೆ, ಆಮಿಷಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಕೆಲವು ಸದಸ್ಯರನ್ನು ರೆಸಾರ್ಟ್‌ಗಳಲ್ಲಿ ಕೂಡಿ ಹಾಕಿದ್ದಾರೆ. ಕುದುರೆ ವ್ಯಾಪಾರವೂ ಜೋರಾಗಿದೆ.

ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದು, ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.

ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು

ಜಿಲ್ಲೆಯ 117 ಗ್ರಾ.ಪಂ.ಗಳ ಪೈಕಿ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಶೇ. 75 ಗ್ರಾ.ಪಂ.ಗಳು ಕಾಂಗ್ರೆಸ್ ಪಕ್ಷದ ಪಾಲಾಗಲಿವೆ.

ಜಿ ಎಸ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಉತ್ಸವದಂದೇ ಕಪ್ಪತಗುಡ್ಡಕ್ಕೆ ಬೆಂಕಿ: ಅಪಾರ ಸಸ್ಯ ಸಂಪತ್ತು ನಾಶ

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರದಂದು (ಜ.24) ಗದಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆ ಕಪ್ಪತ ಉತ್ಸವ-2021 ನಡೆಸುತ್ತಿತ್ತು. ಮತ್ತೊಂದೆಡೆ ಅಂದೇ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದದ್ದು ವಿಪರ್ಯಾಸ.

ಸೋಮವಾರವೂ ಅಗ್ನಿದೇವನ ಅಟ್ಟಹಾಸ ಮುಂದುವರೆದಿದೆ. ಡೋಣಿ ಮತ್ತು ಡಂಬಳ ಗ್ರಾಮದ ಮಧ್ಯೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ನೆಡುತೋಪು ಬೆಂಕಿ ಬಿದ್ದು ಭಾಗಶಃ ಸುಟ್ಟು ಹೋಗಿದೆ. ಬೆಳಗ್ಗೆ 11 ಗಂಟೆಗೆ ಹೊತ್ತಿಕೊಂಡ ಬೆಂಕಿ ರಾತ್ರಿ 8 ಗಂಟೆಯವರೆಗೂ ಕಾವಲುಗಾರರು ಬೆಂಕಿ ನಂದಿಸಿದ್ದಾರೆ. ಅದರಂತೆ ಶನಿವಾರ ಹಿರೇವಡ್ಡಟ್ಟಿ ಭಾಗದಲ್ಲಿ ಬೆಂಕಿ ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.

ಕಪ್ಪತಗುಡ್ಡದ ಸೆರಗಂಚಿನ ಡಂಬಳ, ಹಿರೇವಡ್ಡಟ್ಟಿ ಚಿಕ್ಕವಡ್ಡಟ್ಟಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧಿ ಸಸ್ಯಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ 8 ಗಂಟೆವರೆಗೆ ಬೆಂಕಿ ಹೊತ್ತಿ ಉರಿಯುತ್ತಿರುವದು ದಾರಿ ಹೋಕರಿಗೆ ಕಾಣಿಸಿದೆ. ಇದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಕಪ್ಪತ್ತಗುಡ್ಡಕ್ಕೆ ಬೆಂಕಿ ಕಾಟ ಶುರುವಾಗಿರುವುದು ಆಘಾತವನ್ನುಂಟು ಮಾಡಿದೆ.

ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದ ಬಗ್ಗೆ ವಿಜಯಸಾಕ್ಷಿಗೆ ಗೊತ್ತಾಗುತ್ತಿದ್ದಂತೆಯೇ ಮಾಹಿತಿಗಾಗಿ ಗದಗ ಉಪ ಅರಣ್ಯ ಸಂರಕ್ಷಾಧಿಕಾರಿ ಸೂರ್ಯಸೇನಾ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಡಿಎಫ್‌ಒ ಅವರ ಉತ್ತರ ಮಾತ್ರ ಅಚ್ಚರಿ ಮೂಡಿಸುವ ರೀತಿಯಲ್ಲಿ ಇತ್ತು.

ಬೆಂಕಿ ಬಿದ್ದಿದೆ ಎಂದು ನಿಮಗೆ ಯಾರು ಹೇಳುತ್ತಿದ್ದಾರೆ? ಫೋಟೋ ಸಿಕ್ಕರೆ ಹಂಚಿಕೊಳ್ಳಿ. ನಮಗೆ ಸ್ಯಾಟ್‌ಲೈಟ್ ಮೂಲಕ ಅಥವಾ ನಮ್ಮ ಸಿಬ್ಬಂದಿಯಿಂದಲೂ ಮಾಹಿತಿ ಬಂದಿಲ್ಲ. ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೋ ಅವರೇ ಬೆಂಕಿ ಹಚ್ಚುತ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗುತ್ತಿದೆ ಎಂದರು.

ವಿಜಯಸಾಕ್ಷಿ ಪತ್ರಿಕೆಯ ಸುದ್ದಿಯ ಮೇಲೆ ಆಗಾಗ ನಿಗಾವಹಿಸುತ್ತಿದ್ದು, ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆಯೋ ಅವರ ಮೇಲೂ ನಿಗಾವಹಿಸುತ್ತಿದ್ದೇವೆ. ಸಿಡಿಯ ಡೇಟಾ ತೆಗೆಯುತ್ತಿದ್ದೇವೆ. ಬೇಗನೆ ಅವರು ಯಾರೆಂದು ಗುರುತಿಸಿ ಹಿಡಿಯುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಈ ರೀತಿಯ ಸುಳ್ಳು ಮಾಹಿತಿ ಕೊಡಬಾರದು. ನಮ್ಮ ಹತ್ತಿರ ಎಲ್ಲಾ ಮಾಹಿತಿ ಇದೆ. ಸ್ಯಾಟ್‌ಲೈಟ್ ಮೂಲಕ ನಮಗೆ ಎಚ್ಚರಿಕೆ ಬರುತ್ತದೆ. ಇವತ್ತು (ಸೋಮವಾರ) ಬೆಂಕಿ ಬಿದ್ದಿದೆ. ಆದರೆ, ಡಂಬಳ, ಹಿರೇವಡ್ಡಟ್ಟಿಯಲ್ಲಿ ಅಲ್ಲ. ಡೋಣಿ ಪಶ್ಚಿಮದಲ್ಲಿ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲಾಗಿದೆ. ಯಾರು ಹಚ್ಚಿದ್ದಾರಂತೆಯೂ ಗೊತ್ತಾಗುತ್ತಿದೆ ಎಂದ ಡಿಎಫ್ಒ ಅವರು, ಪತ್ರಿಕೆಯ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಬೆಂಕಿ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಸಾಕ್ಷಿ ಬೇಕು. ಅರಣ್ಯದಲ್ಲಿ ಇವರೇ ಹಚ್ಚಿದ್ದಾರೆಂಬ ಮಾಹಿತಿ ಸಿಗುವುದಿಲ್ಲ. ನೀವು ನಮಗೆ ಸಹಾಯ ಮಾಡಬೇಕು. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಆದರೆ, ಎರಡೂ ಕಡೆ ಮಾಡಬೇಕು. ತಪ್ಪು ಮಾಡಿದವರನ್ನು ಬೆಳೆಸಬಾರದು. ನೀವು ಯಾರ ಕಡೆಯಿಂದ ಮಾಹಿತಿ ತೆಗದುಕೊಂಡಿದ್ದಿರಲ್ಲಾ ಅವರೇ ಮೂರ್ನಾಲ್ಕು ವರ್ಷದಿಂದ ಆ ಜಾಗದಲ್ಲಿ ಬೆಳೆಯುತ್ತಾ ಬರುತ್ತಿದ್ದಾರೆ ಎಂದು ಹೇಳಿದರು. ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದಿದೆ ಎಂದು ಜನರು ಮಾಧ್ಯಮಕ್ಕೆ ಮಾಹಿತಿ ನೀಡುವುದು ತಪ್ಪೇ? ಎಂಬ ಪ್ರಶ್ನೆ ಪರಿಸರವಾದಿಗಳಲ್ಲಿ ಮೂಡಿದೆ. ಇನ್ನೊಂದೆಡೆ, ಮಾಹಿತಿದಾರರ ಮೇಲೆ ಅರಣ್ಯ ಇಲಾಖೆ ಕಣ್ಗಾವಲಿರಿಸಿದೆ ಎನ್ನುವ ರೀತಿಯಲ್ಲಿ ಬೆದರಿಕೆ ತಂತ್ರ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆ ಈ ಮೇಲಿನ ಹೇಳಿಕೆ ಗಮನಿಸಿದಾಗ ಮೂಡುತ್ತದೆ.

ಮುಂಡರಗಿ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಮುಂಡರಗಿ ತಾಲ್ಲೂಕಿನ 19 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ಮೇವುಂಡಿ ಗ್ರಾ.ಪಂ. ಹಾಗೂ ಬಿಡನಾಳ ಗ್ರಾ.ಪಂ.ಅಧ್ಯಕ್ಷ -ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಡೋಣಿ ಗ್ರಾ.ಪಂ.ಅಧ್ಯಕ್ಷ – ಹಿಂದುಳಿದ ‘ಬ’ ವರ್ಗ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಆಲೂರು ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹಿರೇವಡ್ಡಟ್ಟಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ

ಕೊರ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹಾರೋಗೇರಿ ಗ್ರಾ.ಪಂ. ಹಾಗೂ ಶಿವಾಜಿನಗರ ಗ್ರಾ.ಪಂ.ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ

ಕದಂಪೂರ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ

ಬಾಗೇವಾಡಿ ಗ್ರಾ.ಪಂ., ಬಿದರಳ್ಳಿ ಗ್ರಾ.ಪಂ., ಹೆಸರೂರು ಗ್ರಾ.ಪಂ. ಹಾಗೂ ಸಿಂಗಟಾಲೂರು ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಕಲಕೇರಿ ಗ್ರಾ.ಪಂ.ಅಧ್ಯಕ್ಷ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಹಿಂದುಳಿದ ‘ಬ’ ವರ್ಗ

ಹಮ್ಮಿಗಿ ಗ್ರಾ.ಪಂ.ಅಧ್ಯಕ್ಷ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಡಂಬಳ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಜಂತ್ಲಿಶಿರೂರ ಗ್ರಾ.ಪಂ. ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಮುರುಡಿ/ಮುರುಡಿ ತಾಂಡಾ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಹಳ್ಳಿಕೇರಿ ಗ್ರಾ.ಪಂ. ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ, ಓನ್ಲಿ ಇಂಡಸ್ಟ್ರಿಯಲ್ ಎಂದ ಸಚಿವ ಆನಂದ್ ಸಿಂಗ್

ವಿಜಯಸಾಕ್ಷಿ ಸುದ್ದಿ, ಹೊಸಪೇಟೆ

ಪ್ರವಾಸೋದ್ಯಮ ಸಚಿವರಾದ ವಿಷಯ ಕೇಳಿ ಖುಷಿಯಾಯಿತು ನಿಮ್ಮನ್ನು ಅಭಿನಂದಿಸಲು ಬಂದಿರುವೆ’ ಎಂದು ಉದ್ಯಮಿ ರಾಜು ಭೂರಟ್‌ ಅವರು ಸಚಿವ ಆನಂದ್‌ ಸಿಂಗ್‌ ಅವರಿಗೆ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌, ‘ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ (ಪ್ರವಾಸೋದ್ಯಮ ಖಾತೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ). ಕೈಗಾರಿಕೆ ಖಾತೆ ಸಿಗಬಹುದು. ನೀವು ಕೈಗಾರಿಕೆ ಆರಂಭಿಸಿ’ ಎಂದಾಗ ರಾಜು ಅವರು ಅಚ್ಚರಿ ವ್ಯಕ್ತಪಡಿಸಿದರು.

ನಾಳೆ ಸಚಿವ ಸ್ಥಾನಕ್ಕೆ ಮಾಧುಸ್ವಾಮಿ ರಾಜೀನಾಮೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಪದೇ ಪದೇ ಖಾತೆ ಅದಲು-ಬದಲು ಮಾಡುತ್ತಿರುವುದರಿಂದ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ, ನಾಳೆ ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಜನವರಿ 26ರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ, ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತೇನೆ.

ಅದನ್ನು ಅಂಗೀಕರಿಸೋದು, ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಬಿಟ್ಟದ್ದು ಎಂಬುದಾಗಿ ತಿಳಿಸಿದ್ದಾರೆ.

ವರದಿ:ಡಾ. ಅಬ್ದುಲ್ ರಜಾಕ್

error: Content is protected !!