Home Blog Page 3090

ಗ್ರಾ.ಪಂ.ಚುನಾವಣೆ: ರಾಜಕೀಯ ನಾಯಕರು ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗ್ರಾಮ ಪಂಚಾಯತಿ ಚುನಾವಣೆ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ತಳಮಟ್ಟದಲ್ಲಿ ಪಕ್ಷ ಬಲಪಡಿಸಲು ಸಹಕಾರಿಯಾಗಲಿದ್ದು, ಮುಂಬರುವ ವಿಧಾನಸಭಾ, ಲೋಕಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಸುಲಭವಾಗಿ ಗೆಲವು ಸಾಧಿಸಲು ಅನುಕೂಲವಾಗಲಿದೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಕಾರ್ಯಕರ್ತರನ್ನು ಗೆಲ್ಲಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಪರೋಕ್ಷವಾಗಿ ಕಾರ್ಯಕರ್ತರ ಪರವಾಗಿ ಪ್ರಚಾರ ಮಾಡುತ್ತಿವೆ. ಗ್ರಾ.ಪಂ. ಪಕ್ಷಾತೀತ ಚುನಾವಣೆಯಾಗಿದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಬೆಂಬಲಿಗರಾಗಿರುತ್ತಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದ್ದು, ರಾಜಕೀಯ ಪಕ್ಷಗಳ ನಿದ್ದೆಗೆಡೆಸಿದೆ.

ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುತ್ತಿದೆ. ಡಿ.22 ಹಾಗೂ 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟಾರೆ 5,762 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿವಿಧ ಕಾರಣಗಳಿಂದ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದು ಬೃಹತ್ ಚುನಾವಣೆಯಾಗಿದೆ. ಈಗಾಗಲೇ ಎರಡೂ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದಿದೆ.

ಮೊದಲ ಹಂತದಲ್ಲಿ ರಾಜ್ಯದ ಒಟ್ಟು 117 ತಾಲ್ಲೂಕುಗಳ 3,019 ಗ್ರಾ.ಪಂ. 48,048 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈಗಾಗಲೇ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿಯಾಗಿದ್ದಾರೆ. ಅಂತಿಮವಾಗಿ 1,17,387 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಚುನಾವಣಾ ಕಣ ರಂಗೇರಿದೆ. ಗದಗ ಜಿಲ್ಲೆಯೊಂದರಲ್ಲೇ ಮೂರು ತಾಲ್ಲೂಕುಗಳ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ‌.

ಇದು ಪಕ್ಷ ಆಧಾರ ರಹಿತ ಚುನಾವಣೆ

ಗ್ರಾ.ಪಂ.ಚುನಾವಣೆಯು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಪಕ್ಷ ಆಧಾರ ರಹಿತವಾಗಿ ನಡೆಸಲಾಗುತ್ತಿದೆ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ನೀಡುವುದಿಲ್ಲ. ಅದರ ಬದಲಿಗೆ ಸಾಮಾನ್ಯ ಚಿಹ್ನೆಗಳನ್ನು ಕೊಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚನೆ

ಗ್ರಾ.ಪಂ.ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ರಾಜಕೀಯ ನಾಯಕರ ಫೋಟೊಗಳಿರುವ ಕರಪತ್ರ ಹಂಚುವ ಮತ್ತು ಪಕ್ಷದ ಬವುಟ ಹಿಡಿದು ಪ್ರಚಾರ ಮಾಡುವ ಸಂಭವವಿದೆ. ಆ ಬಗ್ಗೆ ಗಮನಹರಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಪ್ರಚಾರದಲ್ಲಿ ಭಾಗವಹಿಸಿದರೆ ಕಾನೂನು ಕ್ರಮ

ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಮಾಡಿದೆ. ರಾಜಕೀಯ ನಾಯಕರು ಸಭೆಗಳನ್ನು ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವುದಕ್ಕೂ ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷ ರಾಜಕೀಯ ಸಲ್ಲದು. ಒಂದು ವೇಳೆ ರಾಜಕೀಯ ನಾಯಕರು ಯಾರಾದರೂ ಮಾಡಿದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಪ್ರಕರಣ ದಾಖಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

ಬಿಎಲ್ಒ ಮೂಲಕ ಮನೆ ಮನೆಗೆ ಓಟರ್ ಸ್ಲಿಪ್ ಹಂಚಿಕೆಗೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದಿಂದ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್ಓ ಮೂಲಕ ಮತದಾರರ ಮನೆ ಮನೆಗೆ ವೋಟರ ಸ್ಲಿಪ್ ಹಂಚಿಕೆ ಮಾಡಬೇಕು ಎಂದು ಗ್ರಾ.ಪಂ‌. ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಬಾಬರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋಬ್ಬ ಮತದಾರರ ಮನೆ ಮನೆಗೆ ಚುನಾವಣೆ ಆಯೋಗದಿಂದ ವೋಟರ್ ಸ್ಲಿಪ್ ಹಂಚಿಕೆ ಮಾಡಲಾಗಿತ್ತು. ಈಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಆಯೋಗ ಆಯಾ ಗ್ರಾಮದ ಬಿ ಎಲ್ ಓ ಮೂಲಕ ವೋಟರ್ ಸ್ಲಿಪ್ ಹಂಚುವದರಿಂದ ಅತಿ ಹೆಚ್ಚು ಮತದಾನ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರಿಂದ, ಮತದಾರರು ಮತಗಟ್ಟೆಗೆ ಹೋಗು ಮುನ್ನ ತಮ್ಮ ಮನೆಯಲ್ಲಿರುವ ವೋಟರ್ ಸ್ಲಿಪ್ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ, ಸ್ಲಿಪ್ ಬರೆದು ಕೊಡುವವರೆಗೂ ಕಾಯಬೇಕಾಗಿದ್ದು, ಜನಜಂಗುಳಿ ಉಂಟಾಗುವುದರಿಂದ ಸ್ಲಿಪ್ ಬೇಗ ಸಿಗದಿರುವ ಕಾರಣಕ್ಕೆ ಮಹಿಳಾ ಮತದಾರರು ನಿರಾಶೆಗೊಂಡು ಮರಳಿ ಮನೆಗೆ ಹೋಗುವ ಸಾಧ್ಯತೆ ಇದೆ.

ಯಲ್ಲಪ್ಪ ಬಾಬರಿ

ಗ್ರಾಮ ಪಂಚಾಯಿತಿ ಚುನಾವಣೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದರಿಂದ ಅನೇಕ ಜನ ಕೂಲಿ ಕಾರ್ಮಿಕರು, ರೈತರೇ ಹೆಚ್ಚಿದ್ದಾರೆ. ಹಾಗಾಗಿ ಕಡ್ಡಾಯ ಮತದಾನ ಮಾಡಲು ಗ್ರಾ.ಪಂ.ನಿಂದ ಡಂಗುರ ಸಾರಬೇಕು. ಧ್ವನಿವರ್ಧಕಗಳ ಮೂಲಕ ತಪ್ಪದೇ ಮತದಾನ ಮಾಡುವಂತೆ ಪ್ರಚಾರ ಮಾಡಬೇಕು. ಅಲ್ಲದೇ, ಚುನಾವಣಾ ದಿನದಂದು ಸರ್ಕಾರಿ ನೌಕರರಿಗೆ ಸಾರ್ವತ್ರಿಕ ರಜಿ ಪೋಷಿಸಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮನವಿ ಮಾಡಿದ್ದಾರೆ.

ದುರ್ಗಾದೇವಿ ಬೆಟ್ಟದಲ್ಲಿ ಚಿರತೆ ಸೆರೆ

0

ಫಲಿಸಿತೇ ವಿಶೇಷ ತಂಡದ ಪ್ಲ್ಯಾನ್?

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಆನೆಗೊಂದಿಯಲ್ಲಿ ಚಿರತೆಗಳ ಸುಳಿವಿಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಗೆ ಚಿರತೆಯೊಂದು ಸೆರೆ ಸಿಕ್ಕಿದೆ. ಆದರೆ ಸೆರೆ ಸಿಕ್ಕ ಚಿರತೆ ನರಭಕ್ಷಕವೊ? ಅಥವಾ ಬೇರೊಂದು ಚಿರತೆಯೋ? ಎಂಬುದಿನ್ನೂ ದೃಢಪಟ್ಟಿಲ್ಲ.

ಚಿರತೆ ಪತ್ತೆಗಾಗಿ ನಾಲ್ವರ ವಿಶೇಷ ವನ್ಯ ಜೀವಿ ತಜ್ಞರ ತಂಡ ಭೇಟಿ ನೀಡಿತ್ತು. ತಂಡಕ್ಕೆ ಕೈ ಜೋಡಿಸಿದ ವೈಲ್ಡ್ ಲೈಫ್ ಎಸ್ ಎಸ್ ಓ ಸಂಸ್ಥೆ, ಈ ಹಿಂದೆ ಬಂಡಿಪುರ, ಬನ್ನೇರುಘಟ್ಟ, ನಾಗರಹೊಳೆ ಸೇರಿ ವಿವಿಧಡೆ ಪ್ರಾಣಿಗಳ ಸಂಶೋಧಿಸಿದೆ.

ಪ್ರಾಣಿಗಳ ಜೀವನ ಹಾಗೂ ಮಾನವ ಪ್ರಾಣಿಗಳ ಸಂಘರ್ಷದ ಕುರಿತು ಅಧ್ಯಯನ ಮಾಡುವ ವೈಲ್ಡ್ ಲೈಫ್ ಎಸ್ ಎಸ್ ಓ, ಚಿರತೆಗಳ‌ ಚಲವಲನ, ವಾಸವಿರುವ ಸ್ಥಳ, ಆಹಾರ ಪದ್ಧತಿ, ಬೇಟೆಯಾಡುವ ವಿಧಾನ, ಹೆಜ್ಜೆಗುರುತು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿತ್ತು.

ವಿಶೇಷ ತಂಡದ ಕಾರ್ಯಾಚರಣೆಯಿಂದ ಒಂದು ಚಿರತೆ ಸೆರೆ ಸಿಕ್ಕಿದೆ. ನಿನ್ನೆಯಿಂದ ಚಲನವಲನ ಗುರುತಿಸಿ ಚಿರತೆ ಸೆರೆ ಹಿಡಿಯುವಲ್ಲಿ ವಿಶೇಷ ತಂಡವು ಯಶಸ್ವಿಯಾಗಿದೆ.

ಸೆರೆ ಸಿಕ್ಕಿರುವ ಚಿರತೆ ಈ ಹಿಂದೆ ಪೂಜಾರಿಯನ್ನು ಕೊಂದು ತಿಂದ ಚಿರತೆಯಾ? ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ‌ ಎಂದು ಡಿಎಫ್‌ಓ ಹರ್ಷಭಾನು ಮಾಹಿತಿ ನೀಡಿದ್ದಾರೆ.

ಬೋನ್‌ಗಳ ಇರಿಸುವಿಕೆಗೆ ಸೂಕ್ತ ಸ್ಥಳಗಳ ಆಯ್ಕೆಯ ಕಾರ್ಯಾಚರಣೆ ನಡೆದಿದ್ದು,
ಅತಿ ಹೆಚ್ಚು ಚಿರತೆಗಳು ಓಡಾಡುವ ಸ್ಥಳಗಳ ಮಾಹಿತಿಗಾಗಿ ಆನೆಗೊಂದಿ‌ ಸುತ್ತಮುತ್ತ ತಂಡಗಳು ಶೋಧನೆ ನಡೆಸುತ್ತಿವೆ.

ಆನೆಗೊಂದಿಯ ಚಿರತೆಗಳ ಚಲನವಲನ ಪತ್ತೆಗೆ 8 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಮೂರ್ನಾಲ್ಕು ಚಿರತೆಗಳು ಬೆಟ್ಟದ ಸುತ್ತ ಮುತ್ತ ಬೀಡು ಬಿಟ್ಟಿದ್ದು ಸಾರ್ವಜನಿಕರು ಸಂಜೆ 5ರ ಮೇಲೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ‌ ನೀಡಿದೆ.

ಕೊವಿಡ್-19: ಗದಗ ಜಿಲ್ಲೆಯ ಗುರುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 17 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 151387 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 156825 ಮಾದರಿಗಳಲ್ಲಿ 145606 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 370 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 06 (ಗದಗ-04, ಮುಂಡರಗಿ-01, ಶಿರಹಟ್ಟಿ-01) ಪ್ರಕರಣಗಳು ಸೇರಿದಂತೆ ಒಟ್ಟು 10849 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 14 ಜನ ಸೇರಿದಂತೆ ಒಟ್ಟು 10679 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 29 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಲವ್ ಜಿಹಾದ್ ಕಾಯ್ದೆ‌ ಜಾರಿಯಾಗಲೇಬೇಕು; ಸಚಿವ ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಹಾವೇರಿ

ಲವ್ ಜಿಹಾದ್ ಕಾಯ್ದೆ ದೇಶದಲ್ಲಿ ಬರಲೇಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು,
ವಿಧಾನ ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಪರಿಷತ್ತಿನಲ್ಲಿ ಮೊನ್ನೆ ನಡೆದ ಘಟನೆ ಅಮಾನವೀಯ. ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಗೂಂಡಾಗಿರಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಒಬ್ಬ ಉಪಸಭಾಪತಿಯನ್ನೇ ಎಳೆದು ಹಾಕ್ತಾರಂದ್ರೆ ಅವರು ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಅದರ ಮೇಲೆ‌ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭಾಶಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಪಿ, ಅದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ. ಜನ್ಮದಿನದ ದಿನ ಶುಭಾಶಯ ಕೋರುವುದು ಮಾನವೀಯತೆ.
ರಾಜಕೀಯ ವೈರಿಗಳಾಗಿ ಇರುತ್ತೇವೆ. ಆದರೆ ಮದುವೆ, ಜನ್ಮದಿನದ ಸಮಯದಲ್ಲಿ ಶುಭಾಶಯ ಕೋರುವುದರಲ್ಲಿ ತಪ್ಪೇನಿದೆ ಎಂದ ಅವರು, ನಾನೂ ಸಹ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ಶುಭಾಶಯ ಕೋರಿದರು.

ಜೆಡಿಎಸ್ ಪಕ್ಷ ಮಿಠಾಯಿ ಕೊಟ್ಟವರ ಬಳಿ ಹೋಗುತ್ತೆ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರು ಅದೇ ಪಕ್ಷದವರಾಗಿದ್ದವರು. ಹಾಗಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಗ್ರಾ.ಪಂ.ಚುನಾವಣೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಮತ್ತು ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಬೆಂಗಳೂರು ಮಾದರಿಯಲ್ಲೇ ಮೈಸೂರಿನಲ್ಲೂ ಗುಂಪು ಮನೆ ನಿರ್ಮಾಣ; ಸೋಮಶೇಖರ್ ಭರವಸೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮೈಸೂರಿನಲ್ಲೂ ಬೆಂಗಳೂರು ಮಾದರಿಯಲ್ಲಿ ಸಿಂಗಲ್ ಬೆಡ್, ಡಬಲ್ ಬೆಡ್, ತ್ರಿಬಲ್ ಬೆಡ್ ಗಳ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಮೈಸೂರಿನ ಮೊದಲ ಟೌನ್ ಶಿಪ್ ಗೆ ಈಗಾಗಲೇ ಭೂಮಿ ಗೊತ್ತುಪಡಿಸಿದ್ದೇವೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸದ ಸಚಿವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ 22 ಎಕರೆಯಲ್ಲಿ 2500 ಸೈಟ್ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಜೊತೆ ಮಾತನಾಡಿದ್ದೇನೆ. ಬಿಡಿಎ ಮಾದರಿಯಲ್ಲಿ ಮುಡಾದಿಂದಲೂ ಜನರಿಗೆ ಅನುಕೂಲವಾಗುವಂತೆ ಗುಂಪುಮನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಮೈಸೂರು ಮುಡಾವನ್ನು ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ‌ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಅಧಿಕಾರಿ ದಲ್ಲಾಳಿಯನ್ನು ಸಂಪರ್ಕಿಸುವಂತೆ ಹೇಳಿದರೆ ತಕ್ಷಣ ಅಧ್ಯಕ್ಷರಿಗೆ, ಆಯುಕ್ತರಿಗೆ ದೂರು ನೀಡಿ. ಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕೊರೋನಾ ನಿಯಮ ಎಲ್ಲರಿಗೂ ಒಂದೇ, ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ಹಾಕಿ; ಸೋಮಶೇಖರ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಪರಿಷತ್ ಒಳಗೆ ಮಾಸ್ಕ್ ಹಾಕದವರಿಗೆ,
ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ, ದಂಡ ಹಾಕಬೇಕು. ಸಭಾಪತಿಗಳೇ ಈ ನಿರ್ಣಯ ಕೈಗೊಳ್ಳಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಗ್ರಹಿಸಿದರು.

ವಿಧಾನ ಪರಿಷತ್ ನಲ್ಲಿ ಗದ್ದಲ ಮಾಡುವ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,
ನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ ಎಂದರು.

ಜನ ಸಾಮಾನ್ಯರು ಈ ವಿಚಾರದಲ್ಲಿ ಎತ್ತಿರುವ ಧ್ವನಿ ನ್ಯಾಯಸಮ್ಮತ. ನಾನು ಆ ಪಕ್ಷ ಈ ಪಕ್ಷ ಎಂದು ಮಾತಾನಾಡುತ್ತಿಲ್ಲ. ಎಲ್ಲರಿಗು ಒಂದೇ ನಿಯಮ ಅನ್ವಯ ಆಗಲಿ ಎಂದಷ್ಟೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಮೇಲ್ಮನೆ ರದ್ದತಿ ಮಾಡಿ ಎಂಬ ಚರ್ಚೆಯ ಬಗ್ಗೆ ಉತ್ತರಿಸಿ, ಅಂತಹ ಯಾವುದೇ ಚರ್ಚೆಗಳು ಇಲ್ಲ.
ಆಗಿರುವ ತಪ್ಪಿನ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳುತ್ತಾರೆ‌.ಈ ಬಗ್ಗೆ ಹೆಚ್ಚಿನ ಚರ್ಚೆಯೂ ಬೇಡ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಮಾತಿಗೆ ತೆರೆ ಎಳೆದರು.

ಗದಗಗಿಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಪರಿಸರ ಲೇಔಟ್ ನಲ್ಲಿ ನೂತನ ಬಿಜೆಪಿ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದು, ನಗರವು ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೇಕ್ಸ್, ಬ್ಯಾನರ್ ಅಳವಡಿಸಿ ತೆಂಗಿನಗರಿ ಕಟ್ಟಿ ಸಿಂಗಾರಗೊಳಿಸಿದ್ದಾರೆ. ಅಲ್ಲಲ್ಲಿ ಬಿಜೆಪಿ ಭಾವುಟ ರಾರಾಜಿಸುತ್ತಿವೆ. ನಗರದ ಜಿಲ್ಲಾಧಿಕಾರಿ ಭವನದ ಹತ್ತಿರವಿರುವ ಪರಿಸರ ಲೇಔಟ್ ನಲ್ಲಿ ವೇದಿಕೆ ಸಿದ್ಧಗೊಳಿಸಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ ಹೊಸ್ತಿಲ್ಲಲ್ಲಿ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಭೇಟಿ ನೀಡುತ್ತಿದ್ದು, ಚುನಾವಣಾ ಕಣದಲ್ಲಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬಲ ತಂದುಕೊಟ್ಟರೆ, ನಾಯಕರಿಗೆ ಹುರುಪು ನೀಡಲಿದೆ ಎನ್ನಲಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಗ್ರಾ.ಪಂ.ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಶಿಲಾನ್ಯಾಸ ನೆಪದಲ್ಲಿ ನಳೀನ್ ಕುಮಾರ್ ಅವರನ್ನು ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಗೋ ಪೂಜೆ ಮಾಡುವ ಮೂಲಕ ನೂತನ ಬಿಜೆಪಿ ಜಿಲ್ಲಾ ಕಚೇರಿಯ ಭೂಮಿಪೂಜೆ ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರಿದ್ದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹಲವು ಸಚಿವರು, ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ.

ಮತ ಮಾರಿಕೊಳ್ಳಬೇಡಿ; ಸೂಕ್ತ ನಾಯಕನನ್ನು ಆಯ್ದುಕೊಳ್ಳಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಸುಮಾರು ದಿನಗಳಿಂದ ಕಾಯುತ್ತಾ ಕುಳಿತಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಪಡಿಸುತ್ತ್ತಿದ್ದಂತೆ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಆಯೋಗವು ಎರಡು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಅದರಂತೆ ಡಿ.೨೨ ಹಾಗೂ ೨೭ ರಂದು ಮತದಾನ ನಡೆಯಲಿದ್ದು, ಡಿ.೩೦ ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಗ್ರಾ.ಪಂ.ಚುನಾವಣೆಗಳನ್ನು ಹಲವರು ಹಲವಾರು ರೀತಿ ಬಣ್ಣಿಸಿದ್ದಾರೆ. ಕೆಲವರು ಒಂದೇ ಕುಟುಂಬದಂತಿರುವ ಹಳ್ಳಿಯ ಜನರನ್ನು ಬೇರೆ ಬೇರೆಯಾಗಿಸಲು ಬರುವುದು. ಪ್ರತಿ ಗ್ರಾಮವು ತನ್ನ ಜನಪ್ರತಿನಿಧಿಗಳನ್ನು ತಾವೇ ಆಯ್ದುಕೊಂಡು ಗ್ರಾಮದ ಅಭಿವೃದ್ದಿಗೊಳಿಸಲಿಕ್ಕಾಗಿ ಜಾರಿಗೊಳಿಸಿರುವ ಯೋಜನೆಯೇ ಗ್ರಾಮ ಸ್ವರಾಜ್‌ಗೆ ಸಂಬಂದಿಸಿದ್ದಾಗಿದೆ ಎಂದು ಬಣ್ಣಿಸುತ್ತಾರೆ.ಅದೇನೇ ಇರಲಿ ಸಹಜವಾಗಿ ಅಭಿಪ್ರಾಯಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ, ಒಂದಂತೂ ಸತ್ಯ ಪ್ರತಿ ಗ್ರಾಮದಿಂದ ಒಬ್ಬ ನಾಯಕ ಹುಟ್ಟುತ್ತಾನೆ. ಆಯ್ಕೆಯಾದ ನಾಯಕ ಗ್ರಾಮಸ್ಥರ ನಂಬಿಕೆಗೆ ಅರ್ಹರೇ? ಗ್ರಾಮದ ಅಭಿವೃದ್ದಿ ಬಯಸುವರೆ? ಜನರ ಸಂಕಷ್ಟಗಳಿಗೆ ಸ್ಪಂದಿಸುವರೆ? ಕ್ಷೇತ್ರ ಜನರಿಗೆ ಸಕಾಲದಲ್ಲಿ ದೊರೆಯುವವರೆ? ಎಂಬ ಅಂಶಗಳ ಕುರಿತು ಯೋಚಿಸಿ ನಾಯಕನನ್ನು ನಿರ್ಧರಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಈಗಾಗಲೇ ಬದುಕು ಸಾಕಷ್ಟು ಅನುಭವ ನೀಡಿದೆ. ಪ್ರಕೃತಿ ವಿಕೋಪಗಳಿಂದಾದ ಹಾನಿಯಲ್ಲಿ ನಾಯಕರು ನಿಮಗಾಸರೆ ಆಗಿದ್ದಾರೆಯೇ? ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ, ದಿನ ಕಳೆದಂತೆ ದುಸ್ತರವಾಗುತ್ತಿರುವ ಜನರ ಬದುಕು ಪ್ರತಿಯೊಂದನ್ನೂ ಗಮನದಲ್ಲಿರಿಸಿಕೊಂಡು ಸೂಕ್ತವಾದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಹಣ, ಹೆಂಡ, ಸೀರೆ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತ ಮಾರಿಕೊಳ್ಳಬೇಡಿ, ಆಸೆ, ಆಮಿಷಗಳಿಗೆ ಬಲಿಯಾದರೆ ಸಮಸ್ಯೆಗಳು ಉದ್ಭವಿಸಿದಾಗ ನಾಯಕರನ್ನು ಪ್ರಶ್ನಿಸುವ ಹಕ್ಕ ಕಳೆದುಕೊಂಡಂತಾಗುತ್ತದೆ. ಗ್ರಾಮಸ್ಥರ ಅಭಿಪ್ರಾಯ, ಸಲಹೆ ಸ್ವೀಕರಿಸುವ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಿರಿಯರು ಯುವಕರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಪಣತೊಡಬೇಕು. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ, ಹಳ್ಳಿಯ ಜನರ ಬದುಕು ಹಸನಾಗಲಿ, ಪ್ರತಿಯೊಂದು ಹಳ್ಳಿ ಆದರ್ಶವಾಗಲಿ.

ಮುಂಬರುವ ಐದು ವರ್ಷದ ನಿಮ್ಮ ಯೋಜನೆಗಳೇನು.? ಹಿಂದಿನ ಬಾರಿಯ ನಿಮ್ಮ ಸಾಧನೆಗಳೇನು?

ಪ್ರವೀಣ ಸಂಗಳದ ಶೆಟ್ಟರ್

ಪರಿಹಾರ ಕೊಡದಿದ್ರೆ ಚುನಾವಣೆ ಬಹಿಷ್ಕರಿಸ್ತೀವಿ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣೆಯ ಹೊಸ್ತಿಲ್ಲಲ್ಲಿ ಜಿಲ್ಲೆಯಲ್ಲಿ ಚುನಾವಣೆಯ ಬಹಿಷ್ಕಾರದ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಮೊನ್ನೆಯಷ್ಟೇ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ಚುನಾವಣೆ ಬಹಿಷ್ಕರಿಸಿರುವ ಬೆನ್ನಲ್ಲೇ ಕೊಣ್ಣೂರು ಗ್ರಾಮದಲ್ಲೂ ಚುನಾವಣಾ ಬಹಿಷ್ಕಾರದ ಧ್ವನಿ ಮೊಳಗುತ್ತಿದೆ.

ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಪ್ರವಾಹಪೀಡಿತ ಸಂತ್ರಸ್ತರು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಆಗಷ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದಿದ್ದರ ಪರಿಣಾಮವಾಗಿ ಕೊಣ್ಣೂರ ಗ್ರಾಮದೊಳಗೆ ನೀರು ನುಗ್ಗಿ ಸುಮಾರು 200 ಜನರು ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಆ ಪೈಕಿ ಸುಮಾರು 170 ಜನರನ್ನು ನೆರೆ ಸಂತ್ರಸ್ತರೆಂದು ಗುರುತಿಸಿ ಅಧಿಕಾರಿಗಳು ಎ,ಬಿ,ಸಿ ಹಾಗೂ ಡಿ ಗ್ರೇಡ್ ನಲ್ಲಿ ಸರ್ವೆ ಮಾಡಿ ಪರಿಹಾರ ಘೋಷಿಸಿದ್ದರು. ಅಲ್ಲದೇ, ಸಂತ್ರಸ್ತರಿಗೆ ಮನೆ ಬಾಡಿಗೆಗೆ ಅಂತಾ ಐದು ತಿಂಗಳ ಅವಧಿಯವರೆಗೆ ಸುಮಾರು 50 ಸಾವಿರ ರೂ. ಕೊಡುವ ಭರವಸೆ ನೀಡಿದ್ದರು. ಆದರೆ, ಇದರೊಳಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ.

ಸಂಪೂರ್ಣ ಮನೆ ಬೀಳದ ಕೆಲವರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ನೀಡಿದ್ದಾರೆ. ಪ್ರಭಾವಿಗಳಿಗಷ್ಟೇ ಮನೆ ಬಾಡಿಗೆ ಹಣ ಹಾಕಿದ್ದಾರೆ. ಇನ್ನುಳಿದವರಿಗೆ ಬಾಡಿಗೆ ಹಣ ಮತ್ತು ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು
ತಾರತಮ್ಯ ಮಾಡದೇ ಸಂತ್ರಸ್ತರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ಮತ್ತು ಮನೆ ಬಾಡಿಗೆಗೆ ಹಣ ನೀಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕೊಣ್ಣೂರ ಗ್ರಾಮದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಯಲ್ಲಪ್ಪ ಕುಂಬಾರ, ಸಿದ್ದಪ್ಪ ಕುಂಬಾರ, ಹನಮಂತ ಕುಂಬಾರ, ಗುರುಲಿಂಗಪ್ಪ ಕುಂಬಾರ, ಮಂಜುನಾಥ್ ಕುಂಬಾರ, ಮಲ್ಲಪ್ಪ ಕುಂಬಾರ, ವಿಜಯ್ ಕುಂಬಾರ, ದೊಡ್ಡಕ್ಕ ರಾಜನಾಳ, ಭೀಮಪ್ಪ ರಾಜನಾಳ, ಸುವರ್ಣ ದಿವಟರ, ಕೃಷ್ಣೇಗೌಡ ಮುಳಗುಂದ, ರಿಯಾಜ್ ಮನಿಯಾರ ಸೇರಿದಂತೆ ಹಲವಾರು ಸಂತ್ರಸ್ತರು ಇದ್ದರು.

error: Content is protected !!